ಚಳಿಗಾಲದ ಅಧಿವೇಶನ ಮತ್ತು ಉತ್ತರ ಕರ್ನಾಟಕದ ಸಮಸ್ಯೆಗಳ ಮೂಲ

ಬೆಳಗಾವಿ ಮತ್ತು ಬೆಂಗಳೂರಿನಲ್ಲಿ ವಿಧಾನಸಭೆಯ ಚಳಿಗಾಲದ ಅಧಿವೇಶನ ಜರುಗಿದೆ. ಕಬ್ಬಿನ ಬೆಳೆಗಾರರ ಸಮಸ್ಯೆ, ಲೋಕಾಯುಕ್ತರ ಭ್ರಷ್ಟಾಚಾರದ ಪ್ರಕರಣ, ರೈತರ ಆತ್ಮಹತ್ಯೆಯಂತಹ ವಿಷಯಗಳು ಅಧಿವೇಶನದಲ್ಲಿ ಹೆಚ್ಚಿನ ಚರ್ಚೆಗೊಳಗಾದವು. ಜೊತೆಯಲ್ಲೇ, ಶಾಸಕ ನಡಹಳ್ಳಿಯವರು ಉತ್ತರ ಕರ್ನಾಟಕ ಪ್ರತ್ಯೇಕತೆ ಹೋರಾಟದ ಪರ ದನಿ ಎತ್ತಿದ್ದ ಹೊತ್ತಿನಲ್ಲೇ ನಡೆದ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗೆಗಿನ ಚರ್ಚೆ ಹೇಗಿತ್ತು, ಚರ್ಚೆಗಳಲ್ಲಿ ಏನಾಯಿತು ಅನ್ನುವುದು ಕುತೂಹಲದ ವಿಷಯಗಳಲ್ಲೊಂದಾಗಿತ್ತು. ಉತ್ತರ ಕರ್ನಾಟಕ ಪ್ರತ್ಯೇಕತೆಯ ಬಗ್ಗೆ ಮಾತನಾಡುವವರು ಎತ್ತುವ ಕೆಲವು ಅಂಶಗಳೆಂದರೆ ನಂಜುಂಡಪ್ಪ ವರದಿ ಅನುಷ್ಟಾನ, ಹೈದರಾಬಾದ್ ಕರ್ನಾಟಕದಲ್ಲಿ ಸಂವಿಧಾನದ 371 ಜೆ ಅನುಷ್ಟಾನ ಮತ್ತು ಕಳಸಾಬಂಡೂರಿ ಕುಡಿಯುವ ನೀರಿನ ಯೋಜನೆ. ಈ ಬಗ್ಗೆ ಅಧಿವೇಶನದ ಹೊತ್ತಿನಲ್ಲಿ ವಿಧಾನಸಭೆಯ ಒಳಗೆ ಮತ್ತು ಹೊರಗೆ ಏನು ಚರ್ಚೆಯಾಯಿತು ಅನ್ನುವುದನ್ನು ಗಮನಿಸಿದರೆ ಕಂಡಿದ್ದು ಹೀಗಿತ್ತು.

ಹೈ.ಕ ಮತ್ತು 371 ಜೆ ಅನುಷ್ಟಾನ

  1. ಹೈದರಾಬಾದ್ ಕರ್ನಾಟಕದ ಮೂಲದವರಿಗೆ ಅಲ್ಲಿನ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಕಲ್ಪಿಸಲಾಗಿದೆ. ಆದರೆ ಅಭ್ಯರ್ಥಿಗಳಿಗೆ ತಾವು ಅಲ್ಲಿಯವರು ಎಂದು ಸಾಧಿಸಲು ಬೇಕಿರುವ ಅರ್ಹತಾ ಪತ್ರ ಕೊಡುವಲ್ಲಿ ಅಧಿಕಾರಿಗಳು ಕಿರಿಕಿರಿಯುಂಟು ಮಾಡುತ್ತಿದ್ದಾರೆ.
  2. ಕರ್ನಾಟಕದ ಮಿಕ್ಕ ಭಾಗಗಳಲ್ಲಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಕೊಡಬೇಕಿರುವ 8% ಮೀಸಲಾತಿಯನ್ನು ಸರಿಯಾಗಿ ಕೊಡುತ್ತಿಲ್ಲ.
  3. ಹೈ.ಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿಗೆ ಬರುವ ಹಣ ಸರಿಯಾದ ಕ್ರಿಯಾ ಯೋಜನೆ ರೂಪುಗೊಳ್ಳದ ಕಾರಣ ಲ್ಯಾಪ್ಸ್ ಆಗುತ್ತಿದೆ, ಹೀಗೆ ಲ್ಯಾಪ್ಸ್ ಆಗಲು ರಾಜ್ಯಪಾಲರು ಸರಿಯಾದ ಸಮಯಕ್ಕೆ ಕ್ರಿಯಾಯೋಜನೆಗೆ ಅನುಮತಿ ಕೊಡದಿರುವುದು ಕಾರಣ ಅನ್ನುವ ಮಾತುಗಳು ಕೇಳಿ ಬಂದವು.

ಇವುಗಳಲ್ಲಿ ಮೊದಲೆರಡು ದೂರುಗಳಲ್ಲಿ ಎಷ್ಟರಮಟ್ಟಿಗೆ ಸತ್ಯಾಂಶವಿದೆ ಎಂದು ಗಮನಿಸಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಇನ್ನು ರಾಜ್ಯಪಾಲರು ಸೂಕ್ತಸಮಯಕ್ಕೆ ಕ್ರಿಯಾಯೋಜನೆಗೆ ಒಪ್ಪಿಗೆ ಕೊಡದಿರುವ ವಿಚಾರ ಗಮನಿಸಿದಾಗ 371 ಜೆ ಅನುಷ್ಟಾನದ ಸೂತ್ರ ಸಿದ್ಧಪಡಿಸುವಲ್ಲೇ ಎಡವಿರುವುದು ಸ್ಪಷ್ಟವಾಗುತ್ತೆ. ಜನರಿಂದ ಆಯ್ಕೆಯಾದ ಸರ್ಕಾರದ ಬದಲು ದೆಹಲಿಯಿಂದ ಹೇರಲ್ಪಡುವ, ಇಲ್ಲಿಯ ಸ್ಥಳೀಯ ಜನಜೀವನ, ಸಮಸ್ಯೆಗಳ ಬಗ್ಗೆ ಯಾವುದೇ ಅರಿವಿರದ ರಾಜ್ಯಪಾಲರ ಕೈಗೆ ಇದರ ಅನುಷ್ಟಾನದ ಹೊಣೆ ಕೊಟ್ಟಿರುವುದು ಒಂದು ದೊಡ್ಡ ಎಡವಟ್ಟೇ ಸರಿ. ಹಿಂದಿನ ಬಿಜೆಪಿ ಸರ್ಕಾರ ರಾಜ್ಯಪಾಲರ ಕೈಗೆ ಇದರ ಹೊಣೆಯನ್ನು ಕೊಡುವುದನ್ನು ವಿರೋಧಿಸಿತ್ತು, ಆದರೆ ದೆಹಲಿಯಲ್ಲಿ ಆಗ ಆಳ್ವಿಕೆಯಲ್ಲಿದ್ದ ಕಾಂಗ್ರೆಸ್ ಪಕ್ಷ ವಿಶೇಷ ಸ್ಥಾನಮಾನ ಜಾರಿಯ ಶ್ರೇಯಸ್ಸು ಆಗಿನ ರಾಜ್ಯ ಸರ್ಕಾರಕ್ಕೆ ದಕ್ಕಬಾರದು ಎಂದೇ ಇದನ್ನು ರಾಜ್ಯಪಾಲರ ತೆಕ್ಕೆಗೆ ಹಾಕಿತ್ತು ಅನ್ನುವ ಮಾತುಗಳು ಕೇಳಿ ಬಂದಿದ್ದವು. ಒಟ್ಟಿನಲ್ಲಿ ಬಿಜೆಪಿ ಮತ್ತು ಕಾಂಗ್ರೆಸಿನ ರಾಜಕೀಯ ಹಗ್ಗಜಗ್ಗಾಟದಲ್ಲಿ ವಿಶೇಷ ಸ್ಥಾನಮಾನದ ಲಾಭ ಆ ಭಾಗದ ಕನ್ನಡಿಗರಿಗೆ ಸಮಯಕ್ಕೆ ಸರಿಯಾಗಿ ಸಿಗದಂತೆ ಆಗಿರುವುದು ಕಾಣಿಸುತ್ತೆ.

ಕಳಸಾ ಬಂಡೂರಿ ಯೋಜನೆ

ಬೇಸಿಗೆಯಲ್ಲಿ ತಿಂಗಳಿಗೊಮ್ಮೆ ಕುಡಿಯುವ ನೀರು ನೋಡುವ ಸ್ಥಿತಿ ಹುಬ್ಬಳ್ಳಿ-ಧಾರವಾಡ ನಗರಗಳಿಗಿದೆ. ಇದಕ್ಕೆ ಪರಿಹಾರವಾಗಿ ಕಳಸಾಬಂಡೂರಿ ನಾಲೆ ಯೋಜನೆಯ ಮೂಲಕ ಬೆಳಗಾವಿ ವಿಭಾಗದ ಹತ್ತಕ್ಕೂ ಹೆಚ್ಚು ಊರುಗಳಿಗೆ ಕುಡಿಯುವ ನೀರು ಕಲ್ಪಿಸುವ ಯೋಜನೆಗೆ ಕರ್ನಾಟಕದ ಒಂದು ಜಿಲ್ಲೆಯ ಗಾತ್ರದ ಗೋವಾ ರಾಜ್ಯ ತಡೆ ಹಾಕಿದೆ. ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಗೋವಾದಲ್ಲೂ ಇದ್ದ ಬಿಜೆಪಿ ಸರ್ಕಾರದ ಜೊತೆ ಮಾತನಾಡಿ ಬಗೆಹರಿಸುವ ಜಾಣ್ಮೆ ತೋರದೆ ಅನವಶ್ಯಕವಾಗಿ ಈ ವಿವಾದ ಟ್ರಿಬುನಲ್ ಮೆಟ್ಟಿಲೇರುವ ಹಾಗಾಯಿತು. ಗೋವಾದಂತಹ ಚಿಕ್ಕ ರಾಜ್ಯ ಕರ್ನಾಟಕದಂತಹ ದೊಡ್ಡ ರಾಜ್ಯವನ್ನು ಆಟವಾಡಿಸುವುದನ್ನು ಕಂಡಾಗ ರಾಜಕೀಯವಾಗಿ ಕನ್ನಡಿಗರು ಎಷ್ಟು ಬಲಹೀನರಾಗಿದ್ದಾರೆ ಅನ್ನುವುದು ಕಾಣುತ್ತೆ. ಈಗಂತೂ ಈ ಯೋಜನೆ ಬಿಜೆಪಿ, ಕಾಂಗ್ರೆಸ್ ಇಬ್ಬರಿಗೂ ಒಬ್ಬರನ್ನೊಬ್ಬರು ಉತ್ತರ ಕರ್ನಾಟಕ ವಿರೋಧಿ ಎಂದು ತೋರಿಸಲಷ್ಟೇ ಬಳಕೆಯಾಗುತ್ತಿದೆ. ಈ ಬಾರಿಯ ಅಧಿವೇಶನದಲ್ಲಿ ಪ್ರಧಾನಿ ಬಳಿಗೆ ಸರ್ವಪಕ್ಷಗಳ ನಿಯೋಗವೊಂದನ್ನು ಒಯ್ಯಬೇಕು ಅನ್ನುವ ಮಾತಿಗೆ ಎಲ್ಲ ಪಕ್ಷಗಳೂ ಒಪ್ಪಿದ್ದನ್ನು ಬಿಟ್ಟರೆ ಈ ಯೋಜನೆಯ ನಿಟ್ಟಿನಲ್ಲಿ ಹೆಚ್ಚೇನು ಪ್ರಗತಿಯಾಗಿಲ್ಲ. ವಿವಾದ ಟ್ರಿಬುನಲ್ ಬಳಿ ಇರುವಾಗ ಪ್ರಧಾನಿ ಬಳಿ ಹೋಗಿ ದುಃಖ ತೋಡಿಕೊಂಡರೆ ಅದರಿಂದ ಏನಾಗುತ್ತೆ ಅನ್ನುವುದನ್ನು ತಾಯಿ ಭುವನೇಶ್ವರಿಯೇ ಹೇಳಬೇಕು.

ನಂಜುಂಡಪ್ಪ ವರದಿ ಅನುಷ್ಟಾನ

ನಂಜುಂಡಪ್ಪ ವರದಿ ಪ್ರಕಾರ ರಾಜ್ಯದ 114 ತಾಲೂಕುಗಳು ಹಿಂದುಳಿದಿವೆ, ಅದರಲ್ಲಿ ಹೆಚ್ಚಿನವು ಉತ್ತರ ಕರ್ನಾಟಕದಲ್ಲಿವೆ ಅನ್ನುವ ಮಾತನ್ನು ಶೆಟ್ಟರ್ ಅವರು ಆಡಿದ್ದಾರೆ. ಆದರೆ ವರದಿಯನ್ವಯ ರಾಜ್ಯದ ಎರಡೂ ಭಾಗದಲ್ಲೂ ಹೆಚ್ಚು ಕಡಿಮೆ ಸಮಾನ ಸಂಖ್ಯೆಯಲ್ಲೇ (59 ಉತ್ತರದಲ್ಲೂ ಮತ್ತು 55 ದಕ್ಷಿಣದಲ್ಲೂ) ಹಿಂದುಳಿದ ತಾಲೂಕುಗಳಿವೆ. ವರದಿಯ ಅನುಷ್ಟಾನಕ್ಕೆ 2007-08ರಿಂದ ಈಚೆಗೆ ಸರ್ಕಾರ ಒಟ್ಟಾರೆ 14,635 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದು, ಇದರಲ್ಲಿ 95% ಖರ್ಚಾಗಿದೆ ಅನ್ನುವ ಮಾಹಿತಿ ಸಿದ್ದರಾಮಯ್ಯನವರು ಕೊಟ್ಟಿದ್ದಾರೆ. ಇಷ್ಟಾದರೂ ಅಭಿವೃದ್ಧಿಯ ಅನುಭವ ಅಲ್ಲಿಯ ಜನತೆಗೆ ಆಗಿಲ್ಲ ಅನ್ನುವ ಮಾತು ಶೆಟ್ಟರ್ ಅವರದ್ದು. ಇನ್ನೂ ಐದು ವರ್ಷಗಳ ಕಾಲ ವರ್ಷಕ್ಕೆ 3,000 ಕೋಟಿಯಂತೆ 15,000 ಕೋಟಿ ರೂಪಾಯಿಯನ್ನು ವರದಿಯ ಅನುಷ್ಟಾನಕ್ಕೆ ಕೊಡುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. ಇನ್ನಷ್ಟು ಹಣ ಬಿಡುಗಡೆ ಮಾಡುವ ಮೊದಲು ಆಗಬೇಕಿರುವುದು ಈಗ ಖರ್ಚಾಗಿರುವ ಹಣದ ಲೆಕ್ಕ ಕೇಳುವ ಕೆಲಸ. ಜೆಡಿಎಸ್ಸಿನ ವೈ.ಎಸ್.ವಿ ದತ್ತಾ ಅವರು ಹೇಳಿರುವಂತೆ 1956ರಿಂದಲೂ ಉತ್ತರ ಮತ್ತು ದಕ್ಷಿಣ ಭಾಗಕ್ಕೆ ಹಣದ ಹಂಚಿಕೆ ಹೇಗಾಗಿದೆ, ಬಿಡುಗಡೆಯಾದ ಹಣ ಎಲ್ಲಿ ಹೋಗಿದೆ, ಆದ ಕೆಲಸಗಳೇನು ಅನ್ನುವ ಬಗ್ಗೆ ಒಂದು ವಸ್ತುನಿಷ್ಟ ವರದಿ ಹೊರತರಲು ಆಯೋಗ ರಚಿಸಿ ಅದರ ವರದಿ ಆಧಾರದ ಮೇಲೆ ಮುಂದುವರೆಯುವುದು ಸೂಕ್ತ. ಇದರಿಂದ ಅನ್ಯಾಯ ಆಗಿದೆ ಅನ್ನುವ ಕೂಗಿನಲ್ಲಿ ಎಷ್ಟು ನಿಜ, ಎಷ್ಟು ಪೊಳ್ಳು ಅನ್ನುವ ಸತ್ಯಾಂಶವೂ ಹೊರ ಬರುವುದು.

ಒಗ್ಗಟ್ಟಾಗಿಯೇ ಏಳಿಗೆ

ಉತ್ತರ ಕರ್ನಾಟಕಕ್ಕೆ ಸರ್ಕಾರಕ್ಕಿಂತ ಅಧಿಕಾರಿಗಳಿಂದಲೇ ಅನ್ಯಾಯವಾಗಿದೆ ಅನ್ನುವುದು ಕಾಂಗ್ರೆಸ್ಸಿನ ಬಸವರಾಜ ರಾಯರೆಡ್ಡಿಯವರ ಅನಿಸಿಕೆ. ಆದರೆ ಪ್ರಜಾಪ್ರಭುತ್ವದಲ್ಲಿ ಅಧಿಕಾರಿಗಳಿಂದ ಕೆಲಸ ತೆಗೆಸಬೇಕಾದವರು ಜನಪ್ರತಿನಿಧಿಗಳೇ ಅಲ್ಲವೇ? ಉತ್ತರ ಕರ್ನಾಟಕದ ಏಳಿಗೆಯ ಬಗ್ಗೆ ನಿಜವಾದ ಕಾಳಜಿ ಅಲ್ಲಿನ ಜನಪ್ರತಿನಿಧಿಗಳಿಗಿದ್ದರೆ ಅಲ್ಲಿನ ಸ್ಥಿತಿ ಇನ್ನಷ್ಟು ಉತ್ತಮವಾಗಿರುತ್ತಿತ್ತು. ಉತ್ತರ ಕರ್ನಾಟಕದ ಬಗ್ಗೆಯೇ ಚರ್ಚೆ ಏರ್ಪಟ್ಟ ದಿನ ಉತ್ತರದ 96 ಶಾಸಕರಲ್ಲಿ ಸದನದಲ್ಲಿ ಹಾಜರಿದ್ದದ್ದು ಕೇವಲ 30 ಜನ ಅನ್ನುವ ಮಾಹಿತಿಯಲ್ಲೇ ಅಲ್ಲಿನ ಸಮಸ್ಯೆಗಳ ಮೂಲ ಎಲ್ಲಿದೆ ಅನ್ನುವುದನ್ನು ತಿಳಿಯಬಹುದು. ಕೊನೆಯಲ್ಲಿ, ಸಿದ್ದರಾಮಯ್ಯನವರು ಏಳಿಗೆಯಲ್ಲಿ ಎಂತಹುದೇ ವ್ಯತ್ಯಾಸವಿರಲಿ, ಅದನ್ನು ಕೂಡಿ ಬಗೆಹರಿಸಿಕೊಳ್ಳೊಣ, ಆದರೆ ಪ್ರತ್ಯೇಕ ರಾಜ್ಯದ ಮಾತು ಆಡಬೇಡಿ ಎಂದು ಮನವಿ ಮಾಡಿದ್ದು ಈ ಅಧಿವೇಶನದಿಂದ ಹೊರ ಹೊಮ್ಮಿದ ಒಂದು ಒಳ್ಳೆಯ ಸಂದೇಶವೇ ಸರಿ.

This entry was posted in ಕನ್ನಡ, ಕರ್ನಾಟಕ. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s