ಭಾರತವೆಂದರೆ ಹಿಂದಿ ಮತ್ತು ಸಂಸ್ಕೃತ ಮಾತ್ರವೇ?

pv-aug22  hindustantimes-23aug

ಸಂಸ್ಕೃತ ನುಡಿಯನ್ನು ಕಲಿಯುವಂತೆ ಜಾಗೃತಿ ಮೂಡಿಸಲು ‘ಮನೆ ಮನೆಗೆ ಸಂಸ್ಕೃತ’ ಎಂಬ ರಾಷ್ಟ್ರಮಟ್ಟದ ಅಭಿಯಾನವನ್ನು ಸಂಸ್ಕೃತ ಭಾರತಿ ಹಮ್ಮಿಕೊಂಡಿರುವುದರ ಬಗ್ಗೆ ಕನ್ನಡದ ಪ್ರಮುಖ ಸುದ್ದಿಹಾಳೆಯೊಂದರಲ್ಲಿ ವರದಿಯಾಗಿದೆ ( ಪ್ರ.ವಾ ಆಗಸ್ಟ್ 22 ). ಈ ಅಭಿಯಾನದ ಅಂಗವಾಗಿ ಮನೆ ಮನೆಗೆ ತೆರಳಿ ಸಂಸ್ಕೃತದ ಬಗ್ಗೆ ಕರಪತ್ರವನ್ನು ನೀಡುವ ಮತ್ತು ಸಂಸ್ಕೃತದಲ್ಲಿ ಮಾತಾಡುವಂತೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸಗಳನ್ನು ಸಂಸ್ಕೃತ ಭಾರತಿ ಹಮ್ಮಿಕೊಂಡಿದೆ. ಮಧ್ಯಪ್ರದೇಶದಲ್ಲೂ ನಡೆಸಲಾದ ಈ ಅಭಿಯಾನದ ಕುರಿತಾಗಿ ಹಿಂದುಸ್ತಾನ್ ಟೈಮ್ಸ್ ಎಂಬ ಪತ್ರಿಕೆಯಲ್ಲಿಯೂ ಸುದ್ದಿ ಮೂಡಿಬಂದಿತ್ತು. “ಗೃಹಂ ಗೃಹಂ ಸಂಸ್ಕ್ರುತಂ” ಎಂಬ ಹೆಸರಿನಲ್ಲಿ ಮಧ್ಯಪ್ರದೇಶದಲ್ಲಿ ನಡೆಸಲಾದ ಅಭಿಯಾನದ ಉದ್ದೇಶಗಳನ್ನು ಪತ್ರಿಕೆಯ ವರದಿಯಲ್ಲಿ ಮೂಡಿಸಲಾಗಿದೆ. ಸಂಸ್ಕೃತಕ್ಕೆ ‘ರಾಜಭಾಷೆ’ಯ ಸ್ಥಾನಮಾನವನ್ನು ಕೊಡಿಸುವುದಲ್ಲದೇ ಭಾರತೀಯರ ನಡುವೆ ‘ಕೊಂಡಿ’ಯಾಗಿ ಸಂಸ್ಕೃತವನ್ನು ಮಾಡುವ ಬಯಕೆ ಸಂಸ್ಕೃತ ಭಾರತಿಯದ್ದಾಗಿದೆಯಂತೆ. ಆ ನಿಟ್ಟಿನಲ್ಲಿ ಶಾಲೆಗಳಲ್ಲಿ 9ನೇ ತರಗತಿಯಿಂದ ಸಂಸ್ಕೃತವನ್ನೇ ಕಲಿಕಾ ಮಾಧ್ಯಮವನ್ನಾಗಿ ಮಾಡಬೇಕೆಂಬ ಪ್ರಸ್ತಾವನೆಯನ್ನೂ ಕೇಂದ್ರ ಸರಕಾರಕ್ಕೆ ಸಂಸ್ಕೃತ ಭಾರತಿ ಸಲ್ಲಿಸುತ್ತಿದೆ. ಸಂಸ್ಕೃತ ಭಾಷೆಯನ್ನು ಉತ್ತೇಜಿಸುವುದಕ್ಕಾಗಿ ಕೇಂದ್ರ ಸರ್ಕಾರವು ಆಗಸ್ಟ್ 26 ರಿಂದ ಸೆಪ್ಟೆಂಬರ್ 1 ರ ವರೆಗೆ ಸಂಸ್ಕೃತ ಸಪ್ತಾಹವನ್ನು ಆಚರಿಸುತ್ತಿದ್ದು, ಅದಕ್ಕೆ ಹಿನ್ನೆಲೆಯಾಗಿ ಈ ಅಭಿಯಾನ ಎಂದು ಸಂಸ್ಕೃತ ಭಾರತಿ ಹೇಳುತ್ತದೆ.

ಗಮನಿಸಬೇಕಾದ ಅಂಶವೆಂದರೆ, ಕೇಂದ್ರ ಸರ್ಕಾರವು ತನ್ನ ಕಛೇರಿಗಳಲ್ಲಿ ಹಿಂದಿ ನುಡಿಯ ಬಳಕೆಯನ್ನು ಹೆಚ್ಚಿಸಲು ಸೆಪ್ಟಂಬರ್ ತಿಂಗಳನ್ನು ಅಧಿಕೃತವಾಗಿ ಬಳಸಿಕೊಳ್ಳುತ್ತದೆ. ಮೊದ ಮೊದಲು “ಒಂದು ದಿನ”ಕ್ಕೆ ಮೀಸಲು ಎಂದು ಶುರುವಾಗಿ (ಹಿಂದಿ ದಿವಸ್) ನಂತರ ಒಂದು ವಾರಕ್ಕೆ ವಿಸ್ತರಣೆಯಾಗಿ (ಹಿಂದಿ ಸಾಪ್ತಾಹ್) ಈಗ ಸೆಪ್ಟಂಬರ್ 3 – ಸೆಪ್ಟಂಬರ್ 15ರ ಎರಡು ವಾರಗಳ ಆಚರಣೆಯಾಗಿರುವುದು (ಹಿಂದಿ ಪಾಕ್ಷಿಕ) ನಮ್ಮ ಮುಂದೆಯೇ ಇದೆ. ಇಡೀ ದೇಶಕ್ಕೆ ಸಂಪರ್ಕ ನುಡಿಯಾಗಿ ಹಿಂದಿಯನ್ನು ಮಾಡುವುದೇ ಕೇಂದ್ರ ಸರ್ಕಾರದ ಉದ್ದೇಶವಾಗಿದೆ. ಹೀಗಿರುವಾಗ ‘ಹಿಂದಿ ಪಾಕ್ಷಿಕ’ದ ಮುಂಚಿನ ವಾರವನ್ನು ಸಂಸ್ಕೃತಕ್ಕೆ ಒತ್ತು ಕೊಡಲು ಬಳಸಿಕೊಳ್ಳುತ್ತಿರುವುದು, ಈಗಾಗಲೇ ಭಾರತದಲ್ಲಿ ಬೇರೆ ನುಡಿಗಳಿಗಾಗುತ್ತಿರುವ ಅನ್ಯಾಯದ ಗಾಯಕ್ಕೆ ಉಪ್ಪು ಸವರಿದಂತೆಯೇ ಸರಿ.

ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಅನೇಕ ವರ್ಷಗಳ ಹಿಂದಿನಿಂದಲೂ ಈ ನೆಲದಲ್ಲಿ ಹಲವಾರು ನುಡಿಗಳು ಮತ್ತು ನುಡಿಯಾಡುವವರು ಇದ್ದರು. ಬೇರೆ ಬೇರೆ ನುಡಿಯಾಡುಗರ ಸಂಸ್ಕೃತಿಯು ಅವರವರ ನುಡಿಯ ಜೊತೆ ಬೆಸೆದುಕೊಂಡಿದೆ. ಇಂತಾ ಹಲವಾರು ನುಡಿಗಳನ್ನು, ಆ ಮೂಲಕ ಆ ನುಡಿಯಾಡುಗರ ಆಚಾರ-ವಿಚಾರ-ಸಂಪ್ರದಾಯಗಳನ್ನು ರಕ್ಷಿಸಿ ಪೋಷಿಸಲೆಂದೇ ಸ್ವಾತಂತ್ರ್ಯ ಸಿಕ್ಕ ಮೇಲೆ, ಈ ದೇಶದಲ್ಲಿ ಭಾಷಾವಾರು ರಾಜ್ಯಗಳನ್ನು ಮಾಡಲಾಯಿತು. ಹೀಗೆ ಕರ್ನಾಟಕದ ಮುಖ್ಯವಾಹಿನಿಯಾಗಿ ಕನ್ನಡ ನುಡಿಯಿರುವಾಗ, ಕರ್ನಾಟಕದಲ್ಲಿ ಇಂತಹ ಬೇರೆ ನುಡಿಗಳ ಅಭಿಯಾನಗಳ ಉದ್ದೇಶವನ್ನು ಪ್ರಶ್ನಿಸಲೇಬೇಕು. ಕನ್ನಡಿಗರು ಕನ್ನಡ ಮಾತನಾಡುವುದನ್ನು ಬಿಟ್ಟು ಸಂಸ್ಕೃತ ಮಾತನಾಡುವ ಅಭ್ಯಾಸ ಯಾಕೆ ಮಾಡಿಕೊಳ್ಳಬೇಕು? ಕನ್ನಡಿಗರು ಕರ್ನಾಟಕದ ಕಚೇರಿಗಳಲ್ಲಿ ಹಿಂದಿಯಲ್ಲಿ ವ್ಯವಹರಿಸುವಂತೆ ಯಾಕೆ ಉತ್ತೇಜಿಸಬೇಕು? ಈ ನಡೆಗಳು ಕನ್ನಡವನ್ನು ತನ್ನ ತವರುಮನೆಯಿಂದಲೇ ಕಿತ್ತೊಗೆಯುವ ನಡೆಗಳೆಂದರೆ ತಪ್ಪಾಗಲಾರದು.

ಶಾಲೆಗಳಲ್ಲಿ ತಾಯ್ನುಡಿ ಮಾಧ್ಯಮದ ಕಲಿಕೆಯಿರಬೇಕಿರುವುದು ಸರಿಯಾದ ಏರ್ಪಾಡು ಮತ್ತು ಬಹಳಷ್ಟು ಶಾಲೆಗಳಲ್ಲಿ ಆ ಏರ್ಪಾಡೇ ಇದೆ. ಅಂತಾ ವ್ಯವಸ್ಥೆಯಲ್ಲಿ ತಾಯ್ನುಡಿಯನ್ನೇ ಬದಿಗೆ ತಳ್ಳಿ, ಬಳಕೆಯಲ್ಲೇ ಇರದ ಸಂಸ್ಕೃತವನ್ನು ಕಲಿಕಾ ಮಾಧ್ಯಮವಾಗಿ ಮಾಡಬೇಕೆನ್ನುವ ಉದ್ದೇಶವೇನು? ಹಿಂದಿಯನ್ನು ಹೇರುವ ಪ್ರಕ್ರಿಯೆಯಲ್ಲಿ ಸಂಸ್ಕೃತವನ್ನೂ ಸೇರಿಸಿ ಕನ್ನಡದ ಗುರುತನ್ನು ಅಳಿಸುವ ಕೆಲಸ ಚುರುಕುಗೊಳಿಸುವುದು ಬಿಟ್ಟು ಬೇರೇನೂ ಇರಲಾರದು. ಸಂಸ್ಕೃತ ಭಾರತಿ, ಶಾಲೆಗಳನ್ನು ನಡೆಸುತ್ತಿದ್ದರೆ ಅಲ್ಲಿ ಸಂಸ್ಕೃತವನ್ನು ಕಲಿಕಾ ಮಾಧ್ಯಮವನ್ನಾಗಿ ಮಾಡಿಕೊಳ್ಳಲಿ, ಅದಕ್ಕೆ ಯಾವ ತಕರಾರುಗಳೂ ಇಲ್ಲ. ಸಂಸ್ಕೃತ ಭಾಷೆಯ ಬಗ್ಗೆ ಒಲವು ಕಳಕಳಿಯುಳ್ಳ ಜನರು, ಬೇಕಿದ್ದರೆ ತಮ್ಮ ಮಕ್ಕಳನ್ನು ಸಂಸ್ಕೃತ ಮಾಧ್ಯಮ ಶಾಲೆಗಳಲ್ಲಿಯೇ ಓದಿಸಲಿ. ಹಾಗೆ ಮಾಡುವ ಎಲ್ಲಾ ಹಕ್ಕೂ ಅವರುಗಳಿಗಿದೆ. ಆದರೆ, ಎಲ್ಲಾ ಶಾಲೆಗಳಲ್ಲೂ ಸಂಸ್ಕೃತವೇ ಕಲಿಕಾ ಮಾಧ್ಯಮವಾಗಿರಬೇಕೆಂಬ ಅವರ ಪ್ರಸ್ತಾವನೆ ಒಪ್ಪಲಾಗದು. ರಾಜಕೀಯ ಬಲವನ್ನು ಬಳಸಿಕೊಂಡು, ಎಲ್ಲೆಡೆ ಸಂಸ್ಕೃತವನ್ನು ನೆಲೆಗೊಳಿಸಲು ಪ್ರಯತ್ನ ಪಡುವುದು ಹೇರಿಕೆಯೆಂದೇ ಕರೆಯಿಸಿಕೊಳ್ಳುತ್ತದೆ ಹಾಗೂ ಅದು ಪ್ರಜಾಪ್ರಭುತ್ವದಲ್ಲಿ ಒಪ್ಪುವ ನಡೆಯಲ್ಲ.

ಹಾಗೆಯೇ, ಎಲ್ಲ ನುಡಿಗಳನ್ನು ಸಮನಾಗಿ ಕಾಣಬೇಕಿರುವ ಕೇಂದ್ರ ಸರಕಾರ ಯಾವುದೋ ಒಂದೆರಡು ನುಡಿಗೆ ಮಾತ್ರ ಒತ್ತು ಕೊಟ್ಟು ಆ ನುಡಿಗಳ ಪ್ರಚಾರಕ್ಕೆ ಉಸ್ತುವಾರಿ ವಹಿಸುವುದು ಖಂಡಿತವಾಗಿಯೂ ಸರಿಯಾದ ನಡೆಯಲ್ಲ. ಆಚರಿಸುವುದಿದ್ದರೆ ಎಲ್ಲಾ ನುಡಿಗಳ ಸಪ್ತಾಹ/ಪಾಕ್ಷಿಕಗಳನ್ನು ಆಚರಿಸಲಿ, ಇಲ್ಲದಿದ್ದರೆ ಯಾವ ನುಡಿಗಳ ಆಚರಣೆಗಳನ್ನೂ ಕೇಂದ್ರ ಸರ್ಕಾರ ಮಾಡುವುದು ಬೇಡ. ಈಗಾಗಲೇ ಹಿಂದಿಯೇತರರ ತೆರಿಗೆ ಹಣವನ್ನು, ಹಿಂದಿಯೇತರರ ರಾಜ್ಯಗಳಲ್ಲಿ ಹಿಂದಿಯನ್ನು ಹರಡಲು-ಹೇರಲು ಬಳಸುತ್ತಿರುವ ಕೇಂದ್ರ ಸರ್ಕಾರ, ತನ್ನ ಹೇರಿಕೆಯ ಪಟ್ಟಿಗೆ ಸಂಸ್ಕೃತವನ್ನು ಸೇರಿಸುತ್ತಿರುವುದು, ‘ನುಡಿ ಸಮಾನತೆ’ ಯನ್ನು ಕಾಪಾಡಿಕೊಳ್ಳುವ ಇರಾದೆ ತನಗಿಲ್ಲ ಎಂದು ಸಾಬೀತು ಪಡಿಸುತ್ತಿದೆ. ಕೇಂದ್ರ ಸರ್ಕಾರಕ್ಕೆ ರಕ್ಷಣೆ-ಆಳ್ವಿಕೆ-ವಿದೇಶಾಂಗ ರೀತಿನೀತಿಗಳು ಎಂಬ ಅನೇಕ ಆದ್ಯತೆಗಳಿದ್ದು, ಅವುಗಳ ಕಡೆಯೇ ಹೆಚ್ಚು ಗಮನ ನೀಡುವುದು ಬಿಟ್ಟು ತೆರಿಗೆದಾರರ ಹಣವನ್ನು ಪೋಲು ಮಾಡುವ ಇಂತಹ ಭಾಷಾ ಹೇರಿಕೆ ಕೆಲಸಗಳನ್ನು ನಿಲ್ಲಿಸಲಿ.

ಕೊನೆ ನುಡಿ : ಹಲವಾರು ನುಡಿಯಾಡುಗರ ನಡುವೆ ‘ಕೊಂಡಿ’ ಅಥವಾ ‘ಸಂಪರ್ಕ’ ನುಡಿಯ ಅವಶ್ಯಕತೆ ಇದೆಯೇ? ಸಂಪರ್ಕ ನುಡಿಯ ಅವಶ್ಯಕತೆ ಇದ್ರೆ ಅದು ಯಾವ ನುಡಿಯಾಗಿರಬೇಕು? ಎಂಬುದನ್ನು ಜನರ ಆಯ್ಕೆಗೆ ಬಿಡುವುದು ಸರಿಯಾದ ನಡೆ. ಆದರೆ ಇಂತದ್ದೇ ನುಡಿಯನ್ನು ಸಂಪರ್ಕ ನುಡಿಯಾಗಿ ಬಳಸಿ ಎಂದು ಕೇಂದ್ರ ಸರ್ಕಾರ ‘ಅಧಿಕೃತವಾಗಿ’ ತೀರ್ಮಾನಿಸುವುದಾಗಲಿ ಅಥವಾ ಬೇರೆಯವರು ಕೇಂದ್ರ ಸರಕಾರವನ್ನು ಒತ್ತಾಯಿಸುವುದಾಗಲೀ ಸಲ್ಲದು. ‘ನುಡಿ ಸಮಾನತೆ’ಯನ್ನು ತೊಡೆದು ಹಾಕುವ ಈ ನಡೆಗಳು ನಿಲ್ಲಲಿ

This entry was posted in ಒಕ್ಕೂಟ ವ್ಯವಸ್ಥೆ, ಕನ್ನಡ, ಕಲಿಕೆ, ನುಡಿ, ಹಿಂದಿ ಹೇರಿಕೆ. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s