ಕಳೆದ ವರ್ಷ ಗಾಂಧಿಜಿಯವರ ಹುಟ್ಟು ಹಬ್ಬದ ದಿನ ಬಹಳ ಸದ್ದುಗದ್ದಲದೊಂದಿಗೆ ಜಾರಿಯಾದ ಪ್ರಧಾನಿ ಮೋದಿಯವರ ಕನಸಿನ ಯೋಜನೆ ಸ್ವಚ್ಛ ಭಾರತ ಅಭಿಯಾನ. ಶುರುವಾದ ಮೊದಲ ಕೆಲ ತಿಂಗಳು ಜನಪ್ರಿಯ ನಟರು, ಪ್ರಭಾವಿಗಳು ಈ ಯೋಜನೆಯ ರಾಯಭಾರಿಗಳಾಗಿ ಪೊರಕೆ ಹಿಡಿದು ನಿಂತಾಗ ಈ ಯೋಜನೆಯ ಬಗ್ಗೆ ಒಂದಿಷ್ಟು ಸುದ್ದಿಯಾಯಿತು. ಯೋಜನೆ ಜಾರಿಯಾದ ಕಳೆದ ಒಂದು ವರ್ಷದ ಅವಧಿಯಲ್ಲಿ ನಮ್ಮ ಊರು, ಪಟ್ಟಣಗಳೆಲ್ಲ ಸ್ವಚ್ಛವಾಗಿದೆಯೇ ಎಂದು ಕಂಡರೆ ಏನು ಕಾಣಿಸುತ್ತದೆ? ಎಲ್ಲವೂ ಈ ಹಿಂದೆ ಇದ್ದಂತೆಯೇ ಇದೆ, ಕಣ್ಣಿಗೆ ಕಾಣುವ ಬದಲಾವಣೆ ಹೆಚ್ಚಾಗಿ ಎಲ್ಲೂ ಕಾಣಿಸಿಲ್ಲ. ಇದರ ನಡುವೆ ಈಗ ಬಂದಿರುವ ಹೊಸ ಸುದ್ದಿಯೆಂದರೆ ಸ್ವಚ್ಛ ಭಾರತ ಅಭಿಯಾನಕ್ಕೆ ಹಣ ಹೊಂದಿಸಲು ಕೇಂದ್ರ ಸರ್ಕಾರ ನವೆಂಬರ್ 15ರಿಂದಲೇ ಜಾರಿಗೆ ಬರುವಂತೆ ಸೇವಾ ತೆರಿಗೆ ವ್ಯಾಪ್ತಿಗೆ ಬರುವ ಎಲ್ಲ ಸೇವೆಗಳ ಮೇಲೆ 0.5% ಸೆಸ್ ಅನ್ನು ವಿಧಿಸಿದೆ. ಆದರೆ ಇದು ನಿಜಕ್ಕೂ ಸ್ವಚ್ಛತೆಯ ವಿಷಯದಲ್ಲಿ ಅಂದುಕೊಂಡ ಗುರಿ ಸಾಧಿಸುವುದೇ ಅನ್ನುವ ಪ್ರಶ್ನೆ ಕೇಳಿಕೊಳ್ಳಬೇಕಿದೆ.
ಮೊದಲಿಗೆ, ಸ್ವಚ್ಛತೆಯ ವಿಷಯಕ್ಕೆ ಬಂದಾಗ ಇಲ್ಲಿ ಎರಡು ಮುಖ್ಯ ಸಮಸ್ಯೆಗಳಿವೆ. ಮೊದಲನೆಯದ್ದು, ಸ್ವಚ್ಛತೆಯ ಬಗ್ಗೆ ಜನರ ಮನಸ್ಥಿತಿಯದ್ದು, ಎರಡನೆಯದ್ದು ನಮ್ಮ ಊರು, ಪಟ್ಟಣಗಳ ಸ್ವಚ್ಛತೆಯ ಹೊಣೆ ಹೊತ್ತ ಸ್ಥಳೀಯ ಸಂಸ್ಥೆಗಳಿಗಿರುವ ಹಣಕಾಸಿನ ಮುಗ್ಗಟ್ಟಿನದ್ದು. ಅವರೆರಡರ ಬಗ್ಗೆ ನೋಡಿದ ನಂತರ ಮತ್ತೆ ಸೆಸ್ ವಿಚಾರಕ್ಕೆ ಹೋಗೊಣ.
ಜನರ ಮನಸ್ಥಿತಿ ಬದಲಾವಣೆ
ಸ್ವಚ್ಛತೆಯ ವಿಷಯದಲ್ಲಿ ಬರೀ ಸರ್ಕಾರವನ್ನೇ ದೂರುವಂತಿಲ್ಲ. ಜನಸಾಮಾನ್ಯರಲ್ಲೇ ಸ್ವಚ್ಛತೆಯ ಬಗ್ಗೆ ಒಂದು ಆಳವಾದ ಸಮಸ್ಯೆ ನಮ್ಮಲ್ಲಿದೆ. ರಸ್ತೆ ಬದಿಯಲ್ಲೇ ಉಚ್ಚೆ ಮಾಡುವುದು, ಕಂಡ ಕಂಡಲ್ಲಿ ಕಸ ಎಸೆಯುವುದು, ಹಸಿ ಮತ್ತು ಒಣ ಕಸ ಬೇರ್ಪಡಿಸದೇ ಹಾಗೆಯೇ ಎಸೆಯುವುದು, ಸ್ವಚ್ಛತೆ ಏನಿದ್ದರೂ ಸರ್ಕಾರದ ಕೆಲಸ ಅನ್ನುವ ಧೋರಣೆ ಹೊಂದಿರುವುದು ಹೀಗೆ ಜನರಲ್ಲೇ ಸಮಸ್ಯೆ ಮೂಲವಿದೆ. ಬೆಂಗಳೂರಿನಂತಹ ಊರಿನಲ್ಲಿ ಜಯನಗರ, ಜೆಪಿನಗರದಂತಹ ಪ್ರತಿಷ್ಟಿತ ಮೇಲ್ ಮಧ್ಯಮ ವರ್ಗ ವಾಸಿಸುವ ಸ್ಥಳದಲ್ಲೂ ಹೆಚ್ಚಿನ ರಸ್ತೆಯ ಮೂಲೆಯಲ್ಲಿ ಪ್ಲಾಸ್ಟಿಕ್ ಬ್ಯಾಗಿನಲ್ಲಿ ಕಸ ತುಂಬಿ ರಸ್ತೆಗೆ ಎಸೆದಿರುವುದನ್ನು ಕಾಣಬಹುದು. ಮಳೆಯಾದಾಗ ಈ ಕಸವೆಲ್ಲ ಮಳೆ ನೀರನ್ನು ಗಟಾರ್ ಸೇರದಂತೆ ತಡೆ ಹಿಡಿದು ರಸ್ತೆಗಳು ಗುಂಡಿ ಬೀಳುತ್ತಿರುವುದನ್ನು ಕಾಣಬಹುದು. ಹೀಗಿರುವಾಗ ಸ್ವಚ್ಛತೆಯ ವಿಷಯದಲ್ಲಿ ಮೊದಲು ಆಗಬೇಕಿರುವುದು ಮನಸ್ಥಿತಿಯ ಬದಲಾವಣೆ. ಸ್ವಚ್ಛ ಭಾರತದಂತಹ ಯೋಜನೆ ಈ ಅರಿವು ತುಂಬುವ ಕೆಲಸಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿತ್ತು. ಸೆಲೆಬ್ರಿಟಿಗಳನ್ನು ರಾಯಭಾರಿಗಳಾಗಿಸುವುದರ ಹಿಂದೆ ಈ ಅರಿವು ತುಂಬುವ ಒಳ್ಳೆಯ ಉದ್ದೇಶವಿರುವಂತೆ ಕಾಣುತ್ತದೆ, ಆದರೆ ಕೇಂದ್ರ ಸರ್ಕಾರಿ ಯೋಜನೆಗಳಿಗೆಲ್ಲ ಅಂಟಿರುವ ಹಿಂದಿ ಹೇರಿಕೆಯ ಖಾಯಿಲೆ ಈ ಅಭಿಯಾನ ಹಿಂದಿಯೇತರ ರಾಜ್ಯಗಳಲ್ಲಿ ದೊಡ್ಡ ಮಟ್ಟದಲ್ಲಿ ಜನರನ್ನು ತಲುಪದಂತೆ ಮಾಡಿವೆ ಅನ್ನಬಹುದು. ಸ್ವಚ್ಛಭಾರತದ ಬಗ್ಗೆ ಬೆಂಗಳೂರಿನ ಬೀದಿಗಳಲ್ಲಿ ಹಾಕಲಾಗಿದ್ದ ಬಹುಪಾಲು ಜಾಹೀರಾತು, ಎಫ್.ಎಮ್ ವಾಹಿನಿಗಳಲ್ಲಿನ ಸಂದೇಶವೆಲ್ಲವೂ ಹಿಂದಿಯಲ್ಲಿತ್ತು. ಕನ್ನಡಿಗರನ್ನು ಕನ್ನಡದಲ್ಲಿ ತಲುಪುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದರೆ ಮನಸ್ಥಿತಿ ಬದಲಾವಣೆಯ ನಿಟ್ಟಿನಲ್ಲಿ ಇನ್ನಷ್ಟು ಗೆಲುವು ಕಾಣಬಹುದಿತ್ತೆನೋ.
ಸ್ವಚ್ಛತೆಯ ಹೊಣೆ ರಾಜ್ಯ ಮತ್ತು ಸ್ಥಳೀಯ ಸಂಸ್ಥೆಗಳದ್ದು
ಭಾರತ ಒಂದು ಭಾಷಾವಾರು ಪ್ರಾಂತ್ಯಗಳ ಒಕ್ಕೂಟ. ಎಲ್ಲ ರಾಜ್ಯಗಳಿಗೂ ಒಂದು ಬಣ್ಣ ಕೊಟ್ಟರೆ ಮೂವತ್ತು ಬಣ್ಣಗಳ ಒಂದು ಚಿತ್ರಪಟ ಭಾರತ. ಇಲ್ಲಿ ಸ್ವಚ್ಛತೆಯ ವಿಷಯಕ್ಕೆ ಬಂದಾಗ ನಮ್ಮ ಊರು,ಪಟ್ಟಣಗಳ ಸ್ವಚ್ಛತೆಯ ನೇರ ಹೊಣೆ ರಾಜ್ಯ ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳದ್ದಾಗಿರುತ್ತದೆ. ಹೀಗಿರುವಾಗ ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಒಂದು ಯೋಜನೆ ರೂಪಿಸುವುದೇ ಒಂದು Structural ಆದ ಸಮಸ್ಯೆ ಅನ್ನಬಹುದು. ಸ್ವಚ್ಛ ಭಾರತ ಯೋಜನೆ ದೇಶವ್ಯಾಪಿ ಜನಜಾಗ್ರತಿಗೆ ಸೀಮಿತವಾದ ಯೋಜನೆಯಾದರೆ ಸಂತೋಷ. ಆದರೆ ಇದು ಅಷ್ಟಕ್ಕೆ ಸೀಮಿತವಾಗಿಲ್ಲ. ಹಳ್ಳಿಗಳಲ್ಲಿ ಟಾಯ್ಲೆಟ್, ಮೋರಿ ಕಟ್ಟುವುದರಿಂದ ಹಿಡಿದು ಪಟ್ಟಣಗಳಲ್ಲಿ ಸ್ವಚ್ಛತೆಯ ಸುತ್ತ ಹತ್ತಾರು ಅಂಶಗಳು ಈ ಯೋಜನೆಯಲ್ಲಿವೆ. ಸಹಜವಾಗಿಯೇ ಅನುಷ್ಟಾನದ ಯಾವ ಅಂಗವೂ ಇಲ್ಲದ ಕೇಂದ್ರ ಸರ್ಕಾರ ಇದೆಲ್ಲದಕ್ಕೂ ರಾಜ್ಯ ಸರ್ಕಾರವನ್ನೇ ನೆಚ್ಚಿಕೊಂಡಿದೆ. ಕರ್ನಾಟಕದಂತಹ ರಾಜ್ಯ ಟಾಯ್ಲೆಟ್ ಕಟ್ಟುವ ವಿಷಯದಲ್ಲಿ ತನ್ನದೇ ಯೋಜನೆಯನ್ನೂ ಹೊಂದಿದೆಯಲ್ಲದೇ ಕಳೆದ ವರ್ಷ ದೇಶದಲ್ಲೇ ಅತಿ ಹೆಚ್ಚು ಟಾಯ್ಲೆಟ್ ಕಟ್ಟಿರುವ ಖ್ಯಾತಿಯೂ ಅದಕ್ಕಿದೆ. ಹೀಗಿರುವಾಗ ಸ್ವಚ್ಛ ಭಾರತ ಅಭಿಯಾನಕ್ಕೆಂದು ಸೆಸ್ ರೂಪದಲ್ಲಿ ಕೇಂದ್ರ ಸಂಗ್ರಹಿಸುವ ಹೆಚ್ಚಿನ ಹಣ ಯಾರ ಕೈಗೆ ಸೇರಬೇಕಿತ್ತು, ರಾಜ್ಯದ ಕೈಗೋ, ಕೇಂದ್ರದ ಕೈಗೋ? ಇವತ್ತಿಗೂ ನಮ್ಮ ಪೌರ ಕಾರ್ಮಿಕರಿಗೆ ತಮ್ಮ ಆರೋಗ್ಯ ಕಾಪಾಡಿಕೊಂಡು ಸ್ವಚ್ಛತೆಯ ಕೆಲಸ ಮಾಡಲು ಬೇಕಿರುವ ಯಾವುದೇ ಉಪಕರಣಗಳೂ ಲಭ್ಯವಿಲ್ಲ. ಬರೀಗಾಲಲ್ಲಿ, ಬರೀಗೈಯಲ್ಲಿ ನಮ್ಮ ನಗರಗಳನ್ನು ಸ್ವಚ್ಛಗೊಳಿಸುತ್ತಿರುವ ಇವರಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸುವ ವಿಷಯ ಬಂದಾಗಲೆಲ್ಲ ಹಣವಿಲ್ಲ ಅನ್ನುವ ನೆಪ ಕೇಳಿ ಬರುತ್ತೆ. ಹೀಗಾಗಿ ಸ್ವಚ್ಛ ಭಾರತಕ್ಕಾಗಿ ಸಂಗ್ರಹಿಸುವ ಹಣ ನೇರವಾಗಿ ರಾಜ್ಯ ಮತ್ತು ರಾಜ್ಯದಲ್ಲಿನ ಸ್ಥಳೀಯ ಸಂಸ್ಥೆಗಳಿಗೆ ಸಿಗುವಂತಾಗಬೇಕಿದೆ.
ಸ್ವಚ್ಛ ಭಾರತ ಸೆಸ್ ಯಾಕೆ ಕೇಂದ್ರದ ಕೈಗೆ?
ಈಗ ಸೆಸ್ ವಿಚಾರಕ್ಕೆ ಬಂದರೆ ಇದೊಂದು ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸುವ ವಿಚಾರವಲ್ಲ ಎಂದು ಹೇಳಬಹುದು. ಮೋದಿಯವರ ಸರ್ಕಾರ ಬಂದಾಗಿನಿಂದಲೂ ಸಹಕಾರಿ ತತ್ವದ ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸುವತ್ತ ತಾವು ಬದ್ಧ ಅನ್ನುವ ಮಾತುಗಳನ್ನು ಮೋದಿಯವರು ಹೇಳುತ್ತ ಬಂದಿದ್ದಾರೆ. 14ನೇ ಹಣಕಾಸು ಆಯೋಗದ ಶಿಫಾರಸ್ಸುಗಳನ್ನು ಒಪ್ಪಿ ಕೇಂದ್ರದಿಂದ ರಾಜ್ಯಗಳಿಗೆ ಆಗುವ ನೇರ ತೆರಿಗೆ ಪಾಲನ್ನು 32%ದಿಂದ 42%ಕ್ಕೆ ಏರಿಸುವ ಮೂಲಕ ತಮ್ಮ ಬದ್ಧತೆ ತೋರಿದ್ದೇವೆ ಅನ್ನುತ್ತೆ ಕೇಂದ್ರ ಸರ್ಕಾರ.. ಇದನ್ನು ಎಲ್ಲರೂ ಸ್ವಾಗತಿಸಿದ್ದಾರೆ. ಆದರೆ ಸೂಕ್ಷ್ಮವಾಗಿ ಗಮನಿಸಿದರೆ ರಾಜ್ಯ ಸರ್ಕಾರಗಳು ಪಾಲೂ ಕೊಟ್ಟು, ಅನುಷ್ಟಾನದ ಹೊಣೆ ಹೊರುವ ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ಕೇಂದ್ರದ ಅನುದಾನ 26% ಕಡಿಮೆಯಾಗಿದೆ. ಇದರ ಜೊತೆ ಪೆಟ್ರೊಲಿಯಂ ಉತ್ಪನ್ನಗಳ ಮೇಲಿನ ಎಕ್ಸೈಸ್ ಡ್ಯೂಟಿ ಇಳಿಸಿರುವ ಕೇಂದ್ರದ ಕ್ರಮದಿಂದ ರಾಜ್ಯಗಳಿಗೆ ಬರುತ್ತಿದ್ದ ಆದಾಯದ ಪಾಲು ಕುಗ್ಗಿದೆ. ಈ ವರ್ಷದಿಂದ ಹೆಚ್ಚಿನ ಹಣವಂತರ ಆದಾಯ ತೆರಿಗೆಯ ಮೇಲೆ ವಿಧಿಸಲಾಗುತ್ತಿದ್ದ 2% ಸರ್ಚಾರ್ಜ್ ಮೂಲಕವೂ ಕೇಂದ್ರ ಸರ್ಕಾರ ವರ್ಷಕ್ಕೆ 9000 ಕೋಟಿ ಆದಾಯ ಗಳಿಸುತ್ತಿದೆ. ಹೆಚ್ಚಿನ ಹಣವಂತರು ಹುಟ್ಟಿಕೊಳ್ಳಲು ಪೂರಕ ವಾತಾವರಣ ಕಲ್ಪಿಸುವ ರಾಜ್ಯಸರ್ಕಾರಗಳಿಗೆ ಇದರಲ್ಲಿ ಪಾಲೇನಿಲ್ಲ. ಈಗಾಗಲೇ ಶಿಕ್ಷಣ, ಉನ್ನತ ಶಿಕ್ಷಣಕ್ಕೆ ಹಾಕಲಾಗುವ ಸೆಸ್ ಮೂಲಕ ವರ್ಷಕ್ಕೆ 30,000 ಕೋಟಿ, ರಸ್ತೆ ಸೆಸ್ ಮೂಲಕ ವರ್ಷಕ್ಕೆ 50,000 ಕೋಟಿ, ರಫ್ತು ಸೆಸ್, ಕ್ಲೀನ್ ಎನರ್ಜಿ ಸೆಸ್ ಮೂಲಕ ಇನ್ನೊಂದಿಷ್ಟು, ಹೀಗೆ ವರ್ಷವೊಂದಕ್ಕೆ ಕೇಂದ್ರ ಸೆಸ್ ಗಳ ಮೂಲಕವೇ 1.16 ಲಕ್ಷ ಕೋಟಿ ಸಂಪಾದಿಸುತ್ತಿದೆ. ಇದಾವುದನ್ನು ರಾಜ್ಯಗಳ ಜೊತೆ ನೇರವಾಗಿ ಹಂಚಿಕೊಳ್ಳಲಾಗುತ್ತಿಲ್ಲ. ಈಗ ಇದರೊಂದಿಗೆ ಸೇವಾ ತೆರಿಗೆಯನ್ನು 0.5% ಏರಿಸಿರುವುದರಿಂದ ಬರುವ ಹೆಚ್ಚಿನ ಆದಾಯವೂ ಕೇಂದ್ರದ ತೆಕ್ಕೆಗೆಯೇ ಸೇರಲಿದೆ. ಹೋಗಲಿ ಹೀಗೆ ಒಟ್ಟಾಗುವ ಹಣ ಯಾವ ಉದ್ದೇಶಕ್ಕಾಗಿ ಇದನ್ನು ಸಂಗ್ರಹಿಸಲಾಗುತ್ತಿದೆಯೋ ಅದೇ ಉದ್ದೇಶಕ್ಕೆ ಬಳಸಲಾಗುತ್ತಿದೆಯೇ ಹಾಗೂ ಬಳಕೆ ಪರಿಣಾಮಕಾರಿಯಾಗಿದೆಯೋ ಎನ್ನಲು ಸಾಕಷ್ಟು ಅಂಕಿಅಂಶಗಳೂ ಇಲ್ಲ. ಹಿಂದಿನ ಯು.ಪಿ.ಎ ಸರ್ಕಾರ ತಂದ ನ್ಯಾಶನಲ್ ರೂರಲ್ ಹೆಲ್ತ್ ಮಿಶನ್ ಅನ್ನುವ ಯೋಜನೆ ದೊಡ್ಡ ಮಟ್ಟದಲ್ಲೇ ಭ್ರಷ್ಟಾಚಾರಕ್ಕೆ ತುತ್ತಾಗಿತ್ತು ಅನ್ನುವುದನ್ನು ಇಲ್ಲಿ ನೆನೆಯಬಹುದು.
ಇದು ಬಿಜೆಪಿ,ಕಾಂಗ್ರೆಸ್ ಸಮಸ್ಯೆಯಲ್ಲ
ಇದು ಬಿಜೆಪಿ ಇಲ್ಲವೇ ಕಾಂಗ್ರೆಸಿನ ಸಮಸ್ಯೆಯಲ್ಲ. ಇದು ಭಾರತದ ಸಂವಿಧಾನದಲ್ಲಿ ಅಧಿಕಾರ ಹಂಚಿಕೆಯಲ್ಲಿ ಆಗಿರುವ ತೊಂದರೆಯ ಸಮಸ್ಯೆ. ಜನರಿಗೆ ನೇರ ಉತ್ತರದಾಯಿತ್ವ ಹೊಂದಿರುವ ರಾಜ್ಯ ಸರ್ಕಾರಗಳ ಕೈಗೆ ಹೆಚ್ಚಿನ ಹೊಣೆ ಮತ್ತು ಆರ್ಥಿಕ ಸಂಪನ್ಮೂಲ ಕೊಡುವುದು ಇವತ್ತಿನ ಅಗತ್ಯ. ಅದಕ್ಕೆ ತಕ್ಕ ಸಂವಿಧಾನ ತಿದ್ದುಪಡಿ ಮಾಡಿಕೊಳ್ಳಬೇಕಾದ ತುರ್ತು ಅಗತ್ಯವಿದೆ. ರಾಜ್ಯಗಳಲ್ಲಿನ ವ್ಯವಸ್ಥೆಗಳಲ್ಲಿ ಭ್ರಷ್ಟಾಚಾರವಿರಬಹುದು, ಆದರೆ ಅದಕ್ಕೆ ಪರಿಹಾರ ದೆಹಲಿಯಿಂದ ಯೋಜನೆ ರೂಪಿಸುವುದಲ್ಲ. ನಿಜವಾದ ಪರಿಹಾರ ರಾಜ್ಯದಲ್ಲಿನ ವ್ಯವಸ್ಥೆಗಳನ್ನು ಸರಿಪಡಿಸಿಕೊಳ್ಳುವುದಾಗಿದೆ. ಇಲ್ಲದಿದ್ದಲ್ಲಿ ದೆಹಲಿಯಿಂದ ಎಷ್ಟೇ ಪ್ರಾಮಾಣಿಕ ಉದ್ದೇಶದೊಂದಿಗೆ ಯೋಜನೆಗಳು ಆರಂಭವಾದರೂ ಅವು ಜನರನ್ನು ತಲುಪುವುದಿಲ್ಲ ಮತ್ತು ನಮ್ಮ ಸ್ಥಿತಿಯಲ್ಲಿ ಯಾವ ಬದಲಾವಣೆಯೂ ಸಾಧ್ಯವಾಗುವುದಿಲ್ಲ.
ನಾನು ಕ್ಲಿಕ್ಕಿಸಿದ ಫೋಟೋ ಬಳಸಿಕೊಂಡದ್ದಕ್ಕೆ ಧನ್ಯವಾದಗಳು!
ಕ್ಷಮಿಸಿ ಹರ್ಷ. ಇದನ್ನು ಯಾರು ಕ್ಲಿಕ್ ಮಾಡಿದ್ದರು ಅನ್ನುವುದು ತಿಳಿದಿರಲಿಲ್ಲ, ಹೀಗಾಗಿ ಚಿತ್ರಕ್ರಪೆ ಹಾಕಲು ಆಗಿರಲಿಲ್ಲ. ಈಗ ಹಾಕಿರುವೆ.