ಡಿಸೆಂಬರ್ 12, ಶನಿವಾರ ಬನವಾಸಿ ಬಳಗ ಪ್ರಕಾಶನದಿಂದ ನನ್ನ “ಕನ್ನಡ ಜಗತ್ತು” ಪುಸ್ತಕ ಬಿಡುಗಡೆಯಾಯಿತು. ಈ ಕಾರ್ಯಕ್ರಮದ ಅತಿಥಿಗಳಲ್ಲಿ ಒಬ್ಬರಾಗಿದ್ದ ಶಾಸಕರು, ಜಾತ್ಯಾತೀತ ಜನತಾದಳದ ಹಿರಿಯ ನಾಯಕರು ಆದ ವೈ.ಎಸ್.ವಿ ದತ್ತಾ ಅವರು ಕಾರಣಾಂತರಗಳಿಂದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗದ ಕಾರಣ ಪುಸ್ತಕದ ಬಗೆಗಿನ ತಮ್ಮ ಅನಿಸಿಕೆಯನ್ನು ಪತ್ರದ ಮೂಲಕ ಬರೆದು ಕಳಿಸಿದ್ದರು. ಆ ಪತ್ರದಲ್ಲಿ ಕರ್ನಾಟಕದ, ಕನ್ನಡಿಗರ ಸಮಸ್ಯೆಗಳ ಬಗ್ಗೆ ಅವರ ಅರ್ಥಪೂರ್ಣ ಅನಿಸಿಕೆಗಳು ಇದ್ದ ಕಾರಣ ಅದನ್ನು ಮುನ್ನೋಟದ ಓದುಗರಿಗಾಗಿ ಇಲ್ಲಿ ಪ್ರಕಟಿಸುತ್ತಿರುವೆ.
-ಸಂಪಾದಕ
ಆತ್ಮಿಯರೇ,
ಗೆಳೆಯ ವಸಂತ ಶೆಟ್ಟಿಯವರ “ಕನ್ನಡ ಜಗತ್ತು” ಕ್ರತಿಯ ಲೋಕಾರ್ಪಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ವೇದಿಕೆ ಮೇಲಿನ ಗಣ್ಯರಾದ ಶ್ರೀ ರವಿ ಹೆಗಡೆಯವರೆ, ಶ್ರೀ. ರಾಮಕ್ರಷ್ಣ ಉಪಾಧ್ಯ ಅವರೇ, ಹಾಗೂ ಭಾಗವಹಿಸಿರುವ ಕನ್ನಡದ ಮನಸ್ಸುಗಳೇ, ನಿಮಗೆ ನನ್ನ ಅಭಿನಂದನೆಗಳು. ಈ ಕಾರ್ಯಕ್ರಮದಲ್ಲಿ ನಾನು ಅನಿವಾರ್ಯ ಕಾರಣಗಳಿಂದಾಗಿ ಭಾಗವಹಿಸಲಾಗುತ್ತಿಲ್ಲ. ಹಾಗಾಗಿ ನನ್ನ ತಪ್ಪನ್ನು ತಾವೆಲ್ಲರೂ ಕ್ಷಮಿಸಬೇಕಾಗಿ ಕೋರುತ್ತೇನೆ.
ಕನ್ನಡದ ಭಾಷೆ, ಇತಿಹಾಸ, ಕನ್ನಡಕ್ಕೆ ಎದುರಾಗಿರುವ ಸಮಸ್ಯೆಗಳು, ಸವಾಲುಗಳು, ಅವುಗಳಿಗಿರುವ ಪರಿಹಾರಗಳೂ – ಹೀಗೆ, ಕನ್ನಡ ಪರವಾದ ಆಲೋಚನೆ ಮತ್ತು ಆಂದೋಲನಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ವಸಂತ ಅವರು ತಮ್ಮ ಆಲೋಚನೆಗಳನ್ನು ಉದಯವಾಣಿ ಪತ್ರಿಕೆಯಲ್ಲಿ ಅಂಕಣ ರೂಪದಲ್ಲಿ ನಮ್ಮಂತವರೊಂದಿಗೆ ಹಂಚಿಕೊಂಡು ಬಂದಿದ್ದಾರೆ. ಆ ಅಂಕಣಗಳ ಸಂಗ್ರಹವೇ ಇಂದು ಬಿಡುಗಡೆಯಾಗುತ್ತಿರುವ “ಕನ್ನಡ ಜಗತ್ತು”
ಮೊದಲಿಗೆ ಕನ್ನಡ ಜಗತ್ತು ಆಗಲೇಬೇಕಾದ ವಾಸ್ತವದೆಡೆಗೆ ನಮ್ಮ ಗಮನ ಸೆಳೆಯುತ್ತದೆ. ಜಾಗತೀಕರಣದ ನಂತರ ಇಡೀ ಜಗತ್ತೇ ಒಂದು ಹಿಡಿ ಗಾತ್ರಕ್ಕೆ ಇಳಿದಿರುವಾಗ, ಮತ್ತು ಅದರಿಂದಾಗಿ ಸೊಗಡು, ಸೊಬಗು, ಸೊಗಸು ಎಂಬ ಪ್ರಾದೇಶಿಕ ಅಂಶಗಳು ಮಾಯವಾಗತೊಡಗಿದಾಗ ಒಂದು ಪುಟ್ಟ ವ್ಯವಸ್ಥೆ ಹೇಗೆ ಜಗತ್ತಾಗಿ ಉಳಿಯುವುದು ಅನಿವಾರ್ಯವೆನ್ನುವುದನ್ನು ಈ ಪುಸ್ತಕ ಸಾರುತ್ತದೆ. ಕನ್ನಡ, ಜಗತ್ತಿನ ಒಂದು ಪುಟ್ಟ ಭಾಗ, ಆದರೆ ಅದು ಜಾಗತೀಕರಣದ ಹೊಡೆತದಲ್ಲಿ ಪುಟ್ಟ ಭಾಗವಾಗಿ ಕರಗಿ ಹೋಗದೇ, ಅದೇ ಒಂದು ಜಗತ್ತಾಗಿ ಉಳಿಯಬೇಕಾಗಿದದ್ದು ಇಂದಿನ ಸವಾಲಾಗಿದೆ. ಇದನ್ನು ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ – ಹೀಗೆ ವಿವಿಧ ಆಯಾಮಗಳಿಂದ ಚರ್ಚಿಸಿರುವ ವಸಂತ ಶೆಟ್ಟಿಯವರು, ಹೇಗೆ ಕನ್ನಡಿಗರು ನಿರ್ವಿಣ್ಣರಾಗತೊಡಗಿದ್ದಾರೆ ಎಂಬ ವಿಷಾದದ ಜೊತೆಗೆ, “ನಿರಾಸೆಯ ಕತ್ತಲಿನಲ್ಲೂ ಕ್ರಿಯಾಶೀಲನಾಗಿರು” ಎಂಬ ಲೋಹಿಯಾ ಅವರ ಮಾತಿನಂತೆ ಕನ್ನಡತನದ ಉಳಿವಿಗೆ ನಾವು ಅನುಸರಿಸಲೇಬೇಕಾದ ಮಾರ್ಗೋಪಾಯಗಳನ್ನು ಸ್ಪುಟವಾಗಿ ಚರ್ಚಿಸಿದ್ದಾರೆ.
ಭಾರತದ ಸಂವಿಧಾನವೇ ಹೇಳಿರುವಂತೆ ಮೊದಲಿಗೆ ಭಾರತ ದೇಶವಲ್ಲ. ಅದು ರಾಜ್ಯಗಳ ಒಕ್ಕೂಟ. ಹಾಗಾಗಿ “ವಿವಿಧತೆಯಲ್ಲಿ ಏಕತೆ” ಎಂಬುದು ಬರೀ ಕ್ಲಿಷೆಯ ಮಾತಲ್ಲ. ಬದಲಿಗೆ ಭಾರತದ ಮಹತ್ವ ಮತ್ತು ಕಟು ವಾಸ್ತವವನ್ನು ಸಾರುವ ಸಂದೇಶ ವಾಕ್ಯ. ಹಾಗಾಗಿ ಭಾರತದ ಅಖಂಡತೆ ಮತ್ತು ಸಮಗ್ರತೆಯ ಬಗ್ಗೆ ಹೆಚ್ಚು ಹೆಚ್ಚು ಮಾತನಾಡಿದಂತೆಲ್ಲ, ವಿವಿಧತೆ ಮಂಕಾಗುವ ಅಪಾಯವನ್ನು ನಾವು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಜಾಗತೀಕರಣದ ನಂತರವಂತೂ ಭಾರತ ವ್ಯಾಪಾರೀಕರಣಕ್ಕೆ ಜಗತ್ತಿಗೆ ತೆರೆದುಕೊಂಡ ರೀತಿಯಿಂದಾಗಿ ವಿವಿಧತೆಗೆ ತೀವ್ರ ಪೆಟ್ಟು ಬಿದ್ದಿದೆ. ಅದಕ್ಕೆ ನಮ್ಮ ಕನ್ನಡವೂ ಹೊರತಾಗಿಲ್ಲ. ಇದು ತಮಿಳು, ತೆಲುಗು, ಬೆಂಗಾಲಿ, ಮಲೆಯಾಳಿ – ಹೀಗೆ ಎಲ್ಲ ಪ್ರಾದೇಶಿಕತೆಗಳ ಪರಿಸ್ಥಿತಿಯೂ ಹೌದು. ಆದರೆ ಕನ್ನಡಕ್ಕೆ ಮಾತ್ರ ಸುಸ್ತು ಎಂದು ಭಾವಿಸಲು ಕಾರಣ, ಉಳಿದ ಪ್ರಾದೇಶಿಕತೆಗಳಲ್ಲಿ ಅವರು ಜಾಗತೀಕರಣದ ಅಪಾಯವನ್ನು ಮೊದಲೇ ಗ್ರಹಿಸಿ, ಬೀಸಬಹುದಾದ ಸುನಾಮಿಗೆ ಪೂರ್ವ ಸಿದ್ದತೆ ಮಾಡಿಕೊಂಡು, ತಮ್ಮತನ ಮತ್ತು ತಮ್ಮ ಜಾಯಮಾನವನ್ನು ಉಳಿಸಿಕೊಂಡೇ ಬಂದಿದ್ದಾರೆ. ನಮ್ಮಲ್ಲಿ ಅಂತಹ ಪೂರ್ವ ಸಿದ್ದತೆಯೂ ಇರಲಿಲ್ಲ; ಮಾನಸಿಕ ತಯಾರಿಯೂ ಇರಲಿಲ್ಲ. ಹೀಗಾಗಿ ಕನ್ನಡದ್ದೇ ವಿಶಿಷ್ಟ ಸಮಸ್ಯೆಯಾಗಿ ನಮ್ಮನ್ನು ಕಾಡತೊಡಗಿದೆ.
ಚಾರಿತ್ರಿಕವಾಗಿ , ಸಾಹಿತ್ಯಿಕವಾಗಿ, ಸಾಂಸ್ಕ್ರುತಿಕವಾಗಿ ನಾವು ಬಹಳ ಎದೆಯುಬ್ಬಿಸಿಕೊಂಡು ಮಾತನಾಡುತ್ತೇವೆ. ಅದೆಷ್ಟು ಶ್ರೀಮಂತರು ನಾವು ಎಂದು ಕೊಚ್ಚಿಕೊಳ್ಳುತ್ತೇವೆ. ಕೊಚ್ಚಿಕೊಳ್ಳುವುದು ಬಡಾಯಿಯಲ್ಲ ಎಂಬುದಕ್ಕೆ ಅಷ್ಟೇ ಆಧಾರ ಮತ್ತು ಗ್ರಾಸಗಳು ಇವೆ. ಅದಾಗ್ಯೂ ನಾವು ಈ ದೇಶದಲ್ಲಿ ತೀವ್ರ ಅವಕ್ರಪೆಗೆ ಮತ್ತು ಅಲಕ್ಷ್ಯಕ್ಕೆ ಈಡಾಗುತ್ತಿರುವುದಕ್ಕೆ ಕಾರಣಗಳೇನು ಎಂಬ ಬಗ್ಗೆ ನಿರ್ವಿಕಾರವಾಗಿ ವಿಚಾರ ಮಾಡಬೇಕಾಗಿದೆ. ಹಿಂದಿ ಹೇರಿಕೆ ಪಕ್ಕದ ತಮಿಳುನಾಡಿನಲ್ಲಿ ಹೊಸ ವ್ಯವಸ್ಥೆಯನ್ನೇ ಹುಟ್ಟು ಹಾಕುತ್ತದೆ. ಉತ್ತರ ಭಾರತದ ದಬ್ಬಾಳಿಕೆಗೆ ಪ್ರತಿಯಾಗಿ ದಕ್ಷಿಣದ ದ್ರಾವಿಡ ಸಂಸ್ಕ್ರುತಿ ಅವಿರತವಾಗಿ, ಅವಿಚ್ಛಿನ್ನವಾಗಿ ಅಲ್ಲಿ ಪ್ರತಿಷ್ಟಾಪನೆಯಾಗುತ್ತದೆ. ಆದರೆ ನಮ್ಮಲ್ಲಿ 80ರ ದಶಕದಲ್ಲಿ ನಡೆದ ಗೋಕಾಕ್ ಚಳುವಳಿಯ ಬಿಸಿ ಕೆಲವೇ ವರ್ಷಗಳಲ್ಲಿ ಆರಿ ಹೋಗಿ ಕೇವಲ ಇಪ್ಪತ್ತು ವರ್ಷಗಳಲ್ಲಿ ಸಂಸ್ಕ್ರುತಕ್ಕೆ ಅಗ್ರ ತಾಂಬೂಲ ನೀಡುವ ಸಂಸ್ಕ್ರುತ ವಿಶ್ವವಿದ್ಯಾಲಯವನ್ನು ಸ್ಥಾಪಿಸುವ ಮೂಲಕ ಗೋಕಾಕ್ ಚಳುವಳಿಯ ಮೂಲ ಆಶಯಕ್ಕೆ ಗೋರಿ ಕಟ್ಟಿಬಿಡುತ್ತೇವೆ. ಇದು ನಿಜಕ್ಕೂ ಚಿಂತನೆಗೆ ಯೋಗ್ಯವಾದ ವಿಶಯ. ಭಾಷೆಗೂ ಅನ್ನಕ್ಕೂ ಸಂಬಂಧವಿದೆ ಅನ್ನುವುದನ್ನೇ ನಾವು ಅರ್ಥ ಮಾಡಿಕೊಂಡಿಲ್ಲ. ಬೇರೆ ನುಡಿ ಸಮುದಾಯಗಳಿಂದ ಪಾಠವನ್ನೂ ಕಲಿತಿಲ್ಲ. ಹೀಗಾಗಿ ನಾವು ದಿನೇ ದಿನೇ ಕೊರಗಿ, ಸೊರಗಿ, ನಿಸ್ತೇಜರಾಗುತ್ತಿದ್ದೇವೆ.
ಕರ್ನಾಟಕದ ಏಕೀಕರಣದ ನಂತರದ ಸವಾಲುಗಳು ಅಷ್ಟರಮಟ್ಟಿಗೆ ಪರಿಹಾರವಾಗಿದ್ದವು ಎಂದೇ ನನ್ನ ಭಾವನೆ, ಆದರೆ ಅದು ಸಾಧ್ಯವಾಗದೇ ಹೋಗಿದ್ದಕ್ಕೆ ಕಾರಣ, ಅದಾಗ ತಾನೇ ಸ್ವಾತಂತ್ರ್ಯ ಚಳುವಳಿಯ ಹುರುಪಿನಿಂದ ಹೊರ ಬಂದಿದ್ದರ ಪರಿಣಾಮವಾಗಿ ನಮ್ಮನ್ನು ತೀವ್ರವಾಗಿ ಕಾಡುತ್ತಿದ್ದ ರಾಷ್ಟ್ರೀಯತೆಯ ಪ್ರಜ್ಞೆ. ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡರಲ್ಲೂ ಒಂದೇ ಪಕ್ಷದ ಆಡಳಿತವಿದ್ದುದರ ಪರಿಣಾಮವೆನೋ ಎಂಬಂತೆ ನಮ್ಮ ಕ್ರಷ್ಣಾ ನದಿಯ ಸಮಸ್ಯೆಯಾಗಲಿ, ವಿಜಯನಗರ ಉಕ್ಕಾಗಲಿ, ರೈಲ್ವೆ ವಲಯವಾಗಲಿ, ಎಲ್ಲವೂ ನಮ್ಮ ಅತಿಯಾದ ರಾಷ್ಟ್ರೀಯತೆಯ ಪ್ರಜ್ಞೆಯಿಂದಾಗಿ, ಅಥವಾ ಕನ್ನಡಿಗರ ಅತಿಯಾದ ಧಾರಾಳತನದಿಂದಾಗಿ ನಮ್ಮ ಕೈ ತಪ್ಪಿದವು ಮತ್ತು ಪರಿಹಾರವಾಗಬಹುದಾದದ್ದು ಪರಿಹಾರವಾಗಲಿಲ್ಲ.
ಆದರೆ 90ರ ದಶಕದ ನಂತರದ ಪರಿಸ್ಥಿತಿ ಮತ್ತೂ ಗಂಭೀರವಾದದ್ದು. ಹೊಸ ಆರ್ಥಿಕ ನೀತಿಯ ಪರಿಣಾಮವಾಗಿ ಕೊಳ್ಳುಬಾಕತನ ಸಂಸ್ಕ್ರುತಿಯ ಬೀದಿಯ ಮಾರಿ ನಮ್ಮ ಮನೆಗೇ ಬಂದು ಅಡರಿಕೊಂಡಿದೆ. ಹಾಗಾಗಿ ಕನ್ನಡಿಗರ ಪ್ರತಿ ಮನೆ, ಮನದಿಂದ ಈ ಮಾರಿಯನ್ನು ಹೊರದಬ್ಬಬೇಕಾಗಿದೆ. ಆದರೆ ಅದು ಹೇಳಿದಶ್ಟು ಸುಲಭವಲ್ಲ. ಇದಕ್ಕೆ ವ್ಯಾಪಕ ಸಿದ್ದತೆಗಳು ಬೇಕಾಗುತ್ತವೆ. ಅಂತಹ ಸಿದ್ದತೆಗಳ ಕಡೆಗೆ ವಸಂತ ಶೆಟ್ಟಿಯವರು ನಮ್ಮ ಗಮನ ಸೆಳೆದಿದ್ದಾರೆ.
ಮೊದಲಿಗೆ ನಮ್ಮಲ್ಲೆ ನಮ್ಮನ್ನು ಕಾಡುತ್ತಿರುವ ಪ್ರಾದೇಶಿಕ ಅಸಮಾನತೆ, ಗಟ್ಟಿಯಾದ ಪ್ರಾದೇಶಿಕ ಪಕ್ಷದ ಕೊರತೆ, ಬಾಹ್ಯ ಆಡಂಬರಕ್ಕೆ ಮರುಳಾಗಿ ತನ್ನನ್ನು ತಾನೇ ಮರೆತಿರುವ ಕನ್ನಡಿಗನ ಅತಂತ್ರತೆ – ಹೀಗೆ ಪಟ್ಟಿ ಮಾಡುತ್ತಲೇ ಅವುಗಳಿಗೆ ಪರಿಹಾರವನ್ನೂ ಸೂಚಿಸಿರುವುದು ವಸಂತ ಅವರ ಹೆಗ್ಗಳಿಕೆ.
ಸರಳವಾಗಿ ಮತ್ತು ಸಂಕ್ಷಿಪ್ತವಾಗಿ ಹೇಳಬೇಕೆಂದರೆ ನಾವು ಪೂರ್ಣ ಚಂದ್ರ ತೇಜಸ್ವಿಯವರ ಮಾತನ್ನೇ ಹೇಳಬೇಕಾಗುತ್ತದೆ. ಅವರು ಹೇಳಿದಂತೆ “ನಮಗೆ ಅಭಿವ್ರದ್ದಿಯೊಂದೇ ಮುಖ್ಯವಲ್ಲ, ಸ್ವಾಭಿಮಾನವೂ ಮುಖ್ಯ” ಪ್ರತಿಯೊಂದು ಆರ್ಥಿಕ, ರಾಜಕೀಯ ನೀತಿ ಹೇಗೆ ನಮ್ಮನ್ನು, ನಮ್ಮತನವನ್ನು ಕೊಲ್ಲುತ್ತಿದೆ ಎಂಬುದನ್ನು ನಾವು ನಮ್ಮ ಜನರಿಗೆ ಮನವರಿಕೆ ಮಾಡಿ ಕೊಡುತ್ತಲೇ ಇರಬೇಕಾಗಿದೆ. ಹಾಗಾಗಿ ಅವನ್ನು ಜಾಗ್ರತಗೊಳಿಸುತ್ತಲೇ ಇರಬೇಕಿದೆ. ಇಲ್ಲವಾದಲ್ಲಿ ನಮ್ಮ ನೆಲ, ಜಲವನ್ನು ಕಳೆದುಕೊಂಡು ದೆಹಲಿಯ ಆಳರಸರ ಮುಂದೆ ಜೀಹುಜೂರ್ ಗಳಾಗಿ ಬಿಡುತ್ತೇವೆ ಎಂಬ ತೇಜಸ್ವಿಯವರ ಮಾತು ಈಗ ನಮಗೆ ಪ್ರಸ್ತುತವೂ ಹೌದು, ಸ್ಪೂರ್ತಿಯೂ ಹೌದು.
ವಸಂತ ಶೆಟ್ಟಿಯವರು “ಕನ್ನಡ ಜಗತ್ತು” ಕ್ರತಿಯಲ್ಲಿ ಅದೇ ಆಶಯವನ್ನು ತಮ್ಮ ವಿಶೇಷ ಅಧ್ಯಯನದಿಂದ ಗಳಿಸಿಕೊಂಡ ವ್ಯಾಪಕ ಮಾಹಿತಿ, ಪಡೆದುಕೊಂಡ ಅನುಭವ, ಸಂಗ್ರಹಿಸಿದ ಗ್ರಾಸ – ಇವುಗಳನ್ನು ಬೆಸೆದು ಮತ್ತಶ್ಟು ಸಾಂದ್ರವಾಗಿ ಮತ್ತು ಪ್ರಚೋದಕವಾಗಿ ನಮ್ಮ ಮುಂದಿಟ್ಟಿದ್ದಾರೆ. ಇದಕ್ಕಾಗಿ ನಾನು, ನನ್ನಂತಹ ಸಮಾನ ಮನಸ್ಕ ಕನ್ನಡಿಗರ ಪರವಾಗಿ ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ ಮತ್ತು ಪುಸ್ತಕಕ್ಕೆ ಹೆಚ್ಚಿನ ಯಶಸ್ಸುಹಾರೈಸುತ್ತೇನೆ. ನಮಸ್ಕಾರ.