ಕಳೆದ ವಾರ ದೆಹಲಿಯಲ್ಲಿ ನಡೆದ ಅಂತರ್ ರಾಜ್ಯ ಸಮಿತಿ ಸಭೆ ಭಾರತದ ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಒಂದು ಮಹತ್ವದ ಸಭೆಯಾಗಿತ್ತು. ಪ್ರಧಾನಿ ಮೋದಿಯವರ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಈ ಸಭೆಯಲ್ಲಿ ಬಹುತೇಕ ರಾಜ್ಯಗಳ ಮುಖ್ಯಮಂತ್ರಿಗಳು ಇಲ್ಲವೇ ಹಿರಿಯ ಸಚಿವರು ಪಾಲ್ಗೊಂಡಿದ್ದರು. ಹತ್ತು ವರ್ಷಗಳ ದೊಡ್ಡ ಅಂತರದ ನಂತರ ಏರ್ಪಾಡಾಗಿದ್ದ ಈ ಸಭೆಯಲ್ಲಿ ಒಕ್ಕೂಟದ ಬೇರೆ ಬೇರೆ ರಾಜ್ಯಗಳು ತಮ್ಮ ತಮ್ಮ ರಾಜ್ಯಗಳ ಏಳಿಗೆಯತ್ತ ಕೇಂದ್ರ ಸರ್ಕಾರದಿಂದ ದೊರೆಯಬೇಕಾದ ಸಹಕಾರದತ್ತ ಗಮನ ಸೆಳೆದರು. ಭಾರತದಂತಹ ಭಾಷಾವಾರು ಪ್ರಾಂತ್ಯಗಳ ಒಕ್ಕೂಟದಲ್ಲಿ ರಾಜ್ಯ ರಾಜ್ಯಗಳ ನಡುವಿನ ಸಾಮಾಜಿಕ, ಆರ್ಥಿಕ ಸ್ಥಿತಿಯಲ್ಲಿನ ಅಗಾಧ ವ್ಯತ್ಯಾಸಗಳನ್ನೂ, ಅಭಿವೃದ್ಧಿಯ ಆಶಯಗಳಲ್ಲಿನ ಹಲತನವನ್ನೂ ಗಮನಿಸಿದಾಗ ಭಾರತದ ಏಳಿಗೆಯಾಗಬೇಕೆಂದರೆ ಅದು ರಾಜ್ಯಗಳ ಏಳಿಗೆಯ ಮೂಲಕವೇ ಸಾಧ್ಯ ಮತ್ತು ಆ ನಿಟ್ಟಿನಲ್ಲಿ ರಾಜ್ಯಗಳಿಗೆ ಹೆಚ್ಚಿನ ರಾಜಕೀಯ ಮತ್ತು ಆರ್ಥಿಕ ಸ್ವಾಯತ್ತತೆ ಒದಗಿಸುವುದರ ಮಹತ್ವವನ್ನು ಪ್ರಧಾನಿ ಮೋದಿಯವರಿಗೆ ತಲುಪಿಸುವಲ್ಲಿ ಈ ಸಭೆ ತಕ್ಕಮಟ್ಟಿಗೆ ಗೆಲುವು ಕಂಡಿದೆ.
ಅಂತರ್ ರಾಜ್ಯ ಸಮಿತಿ ಸಭೆಯ ಇತಿಹಾಸ
ಅಂತರ್ ರಾಜ್ಯ ಸಮಿತಿ ಸಭೆಯಲ್ಲಿ ಯಾವ ರಾಜ್ಯದ ನಾಯಕರು ಏನು ಮಾತನಾಡಿದರು ಅನ್ನುವುದನ್ನು ನೋಡುವ ಮುನ್ನ ಈ ಅಂತರ್ ರಾಜ್ಯ ಸಮಿತಿ ಸಭೆ ಯಾಕಾಗಿ ಜಾರಿಗೆ ಬಂತು, ಅದರ ಉದ್ದೇಶಗಳೇನು, ಈವರೆಗಿನ ಅದರ ಕೆಲಸಗಳೇನು ಅನ್ನುವುದನ್ನು ತಿಳಿಯಬೇಕು. ಸಂವಿಧಾನ ಜಾರಿಗೆ ಬಂದ ಹೊತ್ತಿನಲ್ಲಿ, ರಾಜ್ಯಗಳ ನಡುವಿನ ವಿವಾದಗಳನ್ನು ಬಗೆಹರಿಸಲು ಸಲಹೆ ನೀಡುವುದು, ಜನರ ಒಳಿತಿನ ಯಾವುದೇ ನೀತಿ ನಿಯಮ ರೂಪಿಸುವಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವೆ ಸಮನ್ವಯ ಸಾಧಿಸುವ ಉದ್ದೇಶಕ್ಕಾಗಿ ಸಂವಿಧಾನದ ಆರ್ಟಿಕಲ್ 263ರ ಅನ್ವಯ ಅಂತರ್ ರಾಜ್ಯ ಸಮಿತಿಯ ಸ್ಥಾಪನೆಗೆ ರಾಷ್ಟ್ರಪತಿಗಳು ಯಾವುದೇ ಹೊತ್ತಿನಲ್ಲಿ ಅನುಮತಿ ನೀಡಬಹುದು ಎಂದು ಬರೆಯಲಾಗಿತ್ತು. ಅದರಂತೆಯೇ ಹಲವಾರು ವಿಷಯಗಳ ಚರ್ಚೆಗೆ ಆಗಾಗ ಇಂತಹದೊಂದು ಸಮಿತಿ ರಚಿಸುವ ಕೆಲಸ ನಡೆಯುತ್ತಲಿತ್ತು. ಮುಂದೆ ಇದಕ್ಕೊಂದು ನಿಶ್ಚಿತ ಸ್ವರೂಪ ನೀಡುವ ಬಗ್ಗೆ ಸರ್ಕಾರಿಯಾ ಕಮಿಶನ್ ನೀಡಿದ ಶಿಫಾರಸ್ಸಿನಂತೆ 1990ರಲ್ಲಿ ಅಂತರ್ ರಾಜ್ಯ ಸಮಿತಿ ಸಭೆ ವಿಧ್ಯುಕ್ತವಾಗಿ ಜಾರಿಗೆ ಬಂತು. ಪ್ರಧಾನಿಗಳೂ ಅಧ್ಯಕ್ಷರಾಗಿಯೂ, ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಕೇಂದ್ರದ ಆರು ಸಚಿವರು ಸದಸ್ಯರಾಗಿಯೂ ಅಸ್ತಿತ್ವಕ್ಕೆ ಬಂದ ಸಭೆ ವರ್ಷಕ್ಕೆ ಮೂರು ಬಾರಿ ಭೇಟಿ ಆಗುವ ಗುರಿ ಹೊಂದಿತ್ತಾದರೂ 1990ರಿಂದ ಇಲ್ಲಿಯವರೆಗೆ ನಡೆದಿರುವ ಸಭೆಗಳ ಸಂಖ್ಯೆ ಕೇವಲ 11. ಇದು ಭಾರತದಲ್ಲಿ ಒಕ್ಕೂಟ ವ್ಯವಸ್ಥೆಯನ್ನು ಸಾಂಸ್ಥಿಕ ಸ್ವರೂಪದಲ್ಲಿ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಎಷ್ಟರ ಮಟ್ಟಿಗೆ ಗಂಭೀರವಾಗಿದೆ ಅನ್ನುವ ಪ್ರಶ್ನೆಯನ್ನೇ ಎತ್ತುತ್ತದೆ. ತಡವಾಗಿಯಾದರೂ ಸರಿ, ಈ ನಿಟ್ಟಿನಲ್ಲಿ ಸಭೆಗೆ ಮುಂದಾದ ಪ್ರಧಾನಿಯವರನ್ನು ಅಭಿನಂದಿಸಬೇಕು. ರಾಜ್ಯ ಮತ್ತು ಕೇಂದ್ರಗಳು ಹೆಗಲಿಗೆ ಹೆಗಲು ಕೊಟ್ಟು ನಡೆದರೆ ಮಾತ್ರವೇ ದೇಶದ ಏಳಿಗೆ ಸಾಧ್ಯ ಅನ್ನುವ ಅವರ ಮಾತುಗಳು ಇಂದಿಗೆ ಅತ್ಯಂತ ಪ್ರಸ್ತುತವಾಗಿದ್ದು, ಸಭೆಯಲ್ಲಿ ವ್ಯಕ್ತವಾದ ರಾಜ್ಯಗಳ ಅಭಿಪ್ರಾಯಗಳನ್ನು ತೆರೆದ ಮನಸ್ಸಿನಿಂದ ಆದರಿಸಲು ಮುಂದಾದರೆ ಮಾತ್ರ ಸಹಕಾರಿ ತತ್ವದ ಒಕ್ಕೂಟ ವ್ಯವಸ್ಥೆಯ ಬಗೆಗಿನ ಅವರ ಮಾತುಗಳಿಗೆ ತೂಕ ಬಂದೀತು.
ಯಾರು ಏನೆಂದರು?
ಸಭೆಯಲ್ಲಿ ಮಾತನಾಡಿದ ಬಹುತೇಕರು ಸಂವಿಧಾನದ 356ನೇ ವಿಧಿಯನ್ನು ಬಳಸಿ ಜನರಿಂದ ಆಯ್ಕೆಯಾದ ಸರ್ಕಾರವನ್ನು ಕಿತ್ತೆಸೆಯುವ ಕ್ರಮದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಬ್ರಿಟಿಷ್ ಪಳಿಯುಳಿಕೆಯಾದ ರಾಜ್ಯಪಾಲರ ಹುದ್ದೆಯನ್ನು ರದ್ದು ಮಾಡಿ, ಇಲ್ಲವೇ ಕೊನೆಯ ಪಕ್ಷ ಅವರನ್ನು ನೇಮಿಸುವ, ವಜಾಗೊಳಿಸುವ ವಿಚಾರದಲ್ಲಿ ರಾಜ್ಯದ ಮುಖ್ಯಮಂತ್ರಿಗಳ ಅಭಿಪ್ರಾಯಕ್ಕೂ ಮನ್ನಣೆ ಇರಲಿ ಎಂದು ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ವಾದಿಸಿದಾಗ ಸಭೆಯಲ್ಲಿ ಬಹುತೇಕರ ಒಪ್ಪಿಗೆ ಅದಕ್ಕಿತ್ತು. ಶಿರೋಮಣಿ ಅಕಾಲಿ ದಳದ ಸುಖಬೀರ್ ಸಿಂಗ್ ಬಾದಲ್ ಸಂವಿಧಾನದ ಸ್ಥಾಪಿತ ಆಶಯಗಳಿಗೆ ವಿರುದ್ಧವಾಗಿ ರಾಜ್ಯಗಳ ಹಕ್ಕು ಮತ್ತು ಅಧಿಕಾರವನ್ನು ಮೊಟಕುಗೊಳಿಸುವ ಕೆಲಸ ನಿರಂತರವಾಗಿ ನಡೆಯುತ್ತಿದ್ದು, ರಾಜ್ಯಗಳನ್ನು ಭಿಕ್ಷುಕರ ಮಟ್ಟಕ್ಕೆ ಇಳಿಸಲಾಗಿದೆ ಎಂದರು. ಕರ್ನಾಟಕವನ್ನು ಪ್ರತಿನಿಧಿಸಿದ್ದ ಡಾ.ಪರಮೇಶ್ವರ ಅವರು ರಾಜ್ಯ-ಕೇಂದ್ರದ ನಡುವಿನ ಸಮಾಲೋಚನೆಗೆ ಸಾಂಸ್ಥಿಕ ರೂಪ ಕೊಡಬೇಕು ಹಾಗೂ ರಾಜ್ಯ ಪಟ್ಟಿಯಲ್ಲಿರುವ ವಿಷಯಗಳಲ್ಲಿ ಕೇಂದ್ರದ ಮೂಗು ತೂರಿಸುವಿಕೆಗೆ ಅಂಕೆ ಹಾಕಬೇಕು ಎಂದರು. ಜಂಟಿ ಪಟ್ಟಿಯಲ್ಲಿರುವ ವಿಷಯಗಳಲ್ಲಿ ರಾಜ್ಯ ಮತ್ತು ಕೇಂದ್ರದ ನಡುವೆ ಸೌಹಾರ್ದಯುತ ಸಂಬಂಧಕ್ಕೆ ಒತ್ತು ಕೊಡಬೇಕು ಅಂದರು. ಆದರೆ ಸಭೆಯಲ್ಲಿ ಅತ್ಯಂತ ಸಮರ್ಥವಾಗಿ ಒಕ್ಕೂಟದಲ್ಲಿ ರಾಜ್ಯಗಳ ಪರ ವಕಾಲತ್ತು ಬಂದಿದ್ದು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ (ಇಂತಹ ವಾದ ಕರ್ನಾಟಕದಿಂದ ಯಾವತ್ತಿಗಾದರೂ ಬಂದೀತಾ?) ಅವರಿಂದ. ತಮಿಳುನಾಡನ್ನು ಪ್ರತಿನಿಧಿಸಿ ಬಂದಿದ್ದ ಹಣಕಾಸು ಮಂತ್ರಿ ಪನೀರ್ ಸೆಲ್ವಂ ಜಯಲಲಿತಾ ಅವರ ಭಾಷಣದ ಪ್ರತಿಯನ್ನು ಹಂಚಿದರು.
ಜಯಲಲಿತಾ ಅವರ ವಾದವೇನು?
ಸಹಕಾರಿ ತತ್ವದ ಒಕ್ಕೂಟ ವ್ಯವಸ್ಥೆಯ ಬಗೆಗಿನ ಮೋದಿಯವರ ಕಾಳಜಿಯನ್ನು ಮೆಚ್ಚುತ್ತಲೇ “ಸಹಕಾರಿ ತತ್ವದ ಒಕ್ಕೂಟ ವ್ಯವಸ್ಥೆ” ಅನ್ನುವುದು ಇಡೀ ದೇಶದಲ್ಲಿ, ಆಯಾ ರಾಜ್ಯದ ಸಾಮಾಜಿಕ-ಆರ್ಥಿಕ ಸ್ಥಿತಿಗತಿಗಳನ್ನು ಲೆಕ್ಕಿಸದೇ, ಒಂದೇ ಮಾದರಿಯ ಆಡಳಿತದ ಆಚರಣೆಗಳನ್ನು ಇಡೀ ದೇಶದ ಮೇಲೆ ಹೇರುವ ಪದ್ದತಿಗೆ ಇನ್ನೊಂದು ಹೆಸರಾಗಿ ಉಳಿಯದಿರಲಿ ಎಂದು ಆಶಿಸಿದ ಜಯಲಲಿತಾ ಅವರು, ರಾಜ್ಯಗಳಿಗೆ ತಕ್ಕ ಅಧಿಕಾರ ಮತ್ತು ಆರ್ಥಿಕ ಸಂಪನ್ಮೂಲ ಒದಗಿಸದಿದ್ದರೆ ಇದೆಲ್ಲವೂ ಬಾಯಿಮಾತಿನ ಬೊಗಳೆಯಾಗಿ ಉಳಿಯಬಹುದು ಎಂದು ಆತಂಕ ವ್ಯಕ್ತಪಡಿಸಿದರು. ಜಂಟಿ ಪಟ್ಟಿಯಲ್ಲಿರುವ ವಿಷಯಗಳ ಮೇಲೆ ಕೇಂದ್ರ ಸರ್ಕಾರ ಬೇಕಾಬಿಟ್ಟಿ ಕಾನೂನು ರೂಪಿಸುವುದಕ್ಕೆ ತಡೆಯಿರಬೇಕು ಎಂದಿರುವ ಜಸ್ಟಿಸ್ ಪುಂಚೀ ಕಮಿಶನ್ನಿನ ಶಿಫಾರಸ್ಸುಗಳಿಗೆ ಪೂರ್ತಿ ಬೆಂಬಲ ಸೂಚಿಸಿದರು. ತುರ್ತು ಪರಿಸ್ಥಿತಿಯಲ್ಲಿ ಸಂವಿಧಾನದ ಜಂಟಿ ಪಟ್ಟಿಗೆ ಸೇರಿಸಲಾಗಿದ್ದ “ಶಿಕ್ಷಣ”ದ ವಿಷಯವನ್ನು ಮರಳಿ ರಾಜ್ಯ ಪಟ್ಟಿಗೆ ಹಾಗೂ ಕೇಂದ್ರ ಪಟ್ಟಿಯಲ್ಲಿರುವ “ಪರಿಸರ, ಪರಿಸರ ವಿಜ್ಞಾನ, ವಾತಾವರಣ ಬದಲಾವಣೆ”ಯಂತಹ ವಿಷಯಗಳನ್ನು ಜಂಟಿ ಪಟ್ಟಿಗೆ ವರ್ಗಾಯಿಸಬೇಕು ಎಂದು ಅವರು ಆಗ್ರಹಿಸಿದರು. ರಾಜ್ಯಗಳಿಗೆ ಆರ್ಥಿಕ ಸಂಪನ್ಮೂಲ ಹೊಂದಿಸುವಲ್ಲಿ ಆಗುತ್ತಿರುವ ತೊಡಕಿನ ಬಗ್ಗೆ ಗಮನ ಸೆಳೆದ ಅವರು “ರಾಜ್ಯಗಳ ಜೊತೆ ಹಂಚಿಕೊಳ್ಳದೇ, ಕೇವಲ ಕೇಂದ್ರದ ಕೈಯಲ್ಲೇ ಉಳಿಯುವ ಸೆಸ್, ಸರ್ಚಾರ್ಜ್ ಗಳ ಸಂಖ್ಯೆ ಏರುತ್ತಿದ್ದು, ಅದಕ್ಕೆ ಕಡಿವಾಣ ಹಾಕಿ, ಮೂಲ ತೆರಿಗೆಯ ಲೆಕ್ಕಕ್ಕೆ ಇದನ್ನು ಸೇರಿಸಿ ಬರುವ ಆರ್ಥಿಕ ವರ್ಷದಿಂದ ರಾಜ್ಯಗಳ ಜೊತೆ ಮರಳಿ ಹಂಚಿಕೊಳ್ಳಬೇಕು ಎಂದು ವಾದಿಸಿದರು. ಹಂತ ಹಂತವಾಗಿ ಅಧಿಕಾರದ ತಕ್ಕಡಿ ಕೇಂದ್ರದ ಕೈಯಿಂದ ರಾಜ್ಯಗಳ ಕೈಯತ್ತ ವಾಲುತ್ತಿರುವ ಬದಲಾವಣೆಯನ್ನು ಗುರುತಿಸಿದ ಅವರು, ಇದನ್ನು ದೇಶ ಒಡೆಯುವ ದನಿಯೆಂದು ಕಾಣದೇ, ವೈವಿಧ್ಯತೆ ಮತ್ತು ಪ್ರಜಾಪ್ರಭುತ್ವ ಹೊಂದಿರುವ ದೇಶವಾಗಿ ಭಾರತದ ಒಕ್ಕೂಟ ಮಾಗುತ್ತಿರುವುದರ ಸಂಕೇತ ಎಂದು ಕಾಣಬೇಕೆಂದು ಕರೆ ನೀಡಿದರು.
ಜನರಿಗೆ ನೇರ ಉತ್ತರದಾಯಿತ್ವ ಮತ್ತು ಹೊಣೆಗಾರಿಕೆ ಹೊಂದಿರುವ ರಾಜ್ಯ ಸರ್ಕಾರಗಳ ಈ ಕಾಳಜಿ, ಕಳವಳಗಳನ್ನು ಮೋದಿಯವರು ಗಂಭೀರವಾಗಿ ಪರಿಗಣಿಸಿ ಸೂಕ್ತ ಬದಲಾವಣೆಯತ್ತ ಮುಂದಡಿಯಿಟ್ಟರೆ ರಾಜ್ಯಗಳ ಗಟ್ಟಿ ಬುನಾದಿಯ ಮೇಲೆ ಬಲವಾದ ಭಾರತದ ಒಕ್ಕೂಟ ಎದ್ದು ನಿಲ್ಲಬಹುದು. ಗುಜರಾತಿನ ಮುಖ್ಯಮಂತ್ರಿಯಾಗಿದ್ದ ಮೋದಿಯವರಿಗೆ ಇದು ಅರ್ಥವಾಗದ್ದೇನು ಅಲ್ಲ.