ಮೋದಿ ಸರ್ಕಾರಕ್ಕೆ ಒಂದು ವರುಶ – ಒಕ್ಕೂಟ ವ್ಯವಸ್ಥೆಯ ಕಣ್ಣಿನಿಂದ ಒಂದು ವಿಮರ್ಶೆ

ಮೋದಿಯವರ ಸರ್ಕಾರಕ್ಕೆ ಒಂದು ವರುಶ ತುಂಬಿದ್ದು, ಸರ್ಕಾರದ ಸಾಧನೆ, ವೈಫಲ್ಯಗಳ ಬಗ್ಗೆ ಚರ್ಚೆಯಾಗುತ್ತಿದೆ. ಮೋದಿ ಗುಜರಾತಿನ ಮುಖ್ಯಮಂತ್ರಿ ಹುದ್ದೆಯಿಂದ ಪ್ರಧಾನಿ ಹುದ್ದೆಗೇರಿದವರು ಮತ್ತು ಸತತವಾಗಿ ಸಹಕಾರಿ ತತ್ವದ ಒಕ್ಕೂಟ ವ್ಯವಸ್ಥೆ ಬಗ್ಗೆ ಮಾತನಾಡುತ್ತ ಬಂದವರು. ಹೀಗಾಗಿ ಅವರ ಸರ್ಕಾರ “ಒಕ್ಕೂಟ ವ್ಯವಸ್ಥೆ”ಯ ವಿಷಯದಲ್ಲಿ ಏನು ಮಾಡಿದೆ ಅನ್ನುವುದನ್ನು ಗಮನಿಸುತ್ತ ಬಂದಿದ್ದ ನನಗೆ ಕಂಡ ಕೆಲ ಅಂಶಗಳನ್ನು ಓದುಗರೊಡನೆ ಹಂಚಿಕೊಳ್ಳುತ್ತಿರುವೆ.

ಒಳ್ಳೆಯದು:

  1. ಭಾರತದಲ್ಲಿ ಒಕ್ಕೂಟ ವ್ಯವಸ್ಥೆ / ಫೆಡರಲಿಸಂ ಅನ್ನುವುದು ಮುಖ್ಯವಾಹಿನಿಯಲ್ಲಿ ಎಂದಿಗೂ ಬಳಸದ ಪದವಾಗಿಯೇ ಉಳಿದಿತ್ತು. ಮೋದಿ ನಿರಂತರವಾಗಿ “ರಾಜ್ಯಗಳಿಂದಲೇ ದೇಶ” ಎಂದು ಮಾತನಾಡುತ್ತ ಅದನ್ನೊಂದು ಮುಖ್ಯವಾಹಿನಿಯ ವಿಷಯವಾಗಿಸಿದ್ದಕ್ಕೆ ಅವರನ್ನು ಮೆಚ್ಚಿಕೊಳ್ಳಬೇಕು.
  2. 14ನೇ ಹಣಕಾಸು ಆಯೋಗದ ಶಿಫಾರಸ್ಸನ್ನು ಒಪ್ಪಿ ಕೇಂದ್ರದಿಂದ ರಾಜ್ಯಗಳಿಗೆ ಹೋಗುವ ತೆರಿಗೆ ಹಣದ ನೇರ ವರ್ಗಾವಣೆಯ ಪ್ರಮಾಣವನ್ನು 32ರಿಂದ 42ಕ್ಕೆ ಏರಿಸಿದ್ದನ್ನು ಒಂದು ಒಳ್ಳೆಯ ಹೆಜ್ಜೆಯೆಂದೇ ನೋಡಬೇಕು. ಈ ಕ್ರಮದಿಂದ ಕೇಂದ್ರಕ್ಕೆ ಹಣದ ಕೊರತೆಯಾಗುತ್ತೆ ಅನ್ನುವ ಮೋದಿಯವರ ಮಾತುಗಳಲ್ಲಿ ಹುರುಳಿಲ್ಲ. ಯಾಕೆಂದರೆ CSS ಮತ್ತು ಅನುದಾನದಲ್ಲಿ ರಾಜ್ಯಗಳಿಗೆ ಕಡಿತ ಮಾಡಿ, ಅದೇ ಹಣವನ್ನು ನೇರ ವರ್ಗಾವಣೆಯ ಪ್ರಮಾಣಕ್ಕೆ ಸೇರಿಸಿರುವುದರಿಂದ ಕೇಂದ್ರಕ್ಕೆ ಯಾವುದೇ ಹಣದ ಕೊರತೆಯಾಗಿಲ್ಲ. ಬದಲಿಗೆ, ಕರ್ನಾಟಕದಂತಹ ರಾಜ್ಯಕ್ಕೆ ಸರಿ ಸುಮಾರು 3-4 ಸಾವಿರ ಕೋಟಿಯಷ್ಟು ಕೊರತೆಯೇ ಆಗಿದೆ. ಆದರೆ ಈ ಹೆಜ್ಜೆಯಲ್ಲಿ ಆಗಿರುವ ಒಂದು ಒಳ್ಳೆಯ ಕೆಲಸವೆಂದರೆ ರಾಜ್ಯ ಸರ್ಕಾರಗಳು ತಮಗೆ ಬರುವ ನೇರ ವರ್ಗಾವಣೆಯ ಹಣವನ್ನು ಯಾವ ಆದ್ಯತೆಗೆ, ಯಾವ ಯೋಜನೆಗಳಿಗೆ ಖರ್ಚು ಮಾಡಬೇಕು ಅನ್ನುವ ನಿಟ್ಟಿನಲ್ಲಿ ಒಂದಿಷ್ಟು ಹೆಚ್ಚಿನ ಸ್ವಾತಂತ್ರ್ಯ ಸಿಕ್ಕಿದೆ ಅನ್ನಬಹುದು. ಅದಕ್ಕಾಗಿ ಮೋದಿ ಸರ್ಕಾರಕ್ಕೊಂದು ಮೆಚ್ಚುಗೆ ಸಲ್ಲಬೇಕು.
  3. ಕಲ್ಲಿದ್ದಲಿನಂತಹ ಸಂಪತ್ತಿನ ಹರಾಜಿನಿಂದ ಬರುವ ಆದಾಯವನ್ನು ರಾಜ್ಯಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಹಂಚುವ ನಿರ್ಧಾರ ಸ್ವಾಗತಾರ್ಹ. ಇದು ಪಶ್ಚಿಮ ಬಂಗಾಳ, ಜಾರ್ಖಂಡ್, ಓಡಿಶಾದಂತಹ ಬಡ ರಾಜ್ಯಗಳಿಗೆ ಹೆಚ್ಚಿನ ನೆರವು ಕಲ್ಪಿಸುತ್ತದೆ. ಈ ಬಡ ರಾಜ್ಯಗಳು ಹೆಚ್ಚು ಆರ್ಥಿಕವಾಗಿ ಬಲವಾದರೆ ಇಲ್ಲಿಂದ ದಕ್ಷಿಣದ ರಾಜ್ಯಗಳಿಗೆ ಆಗುತ್ತಿರುವ ತಡೆರಹಿತ ವಲಸೆಯೂ ಕಡಿಮೆಯಾಗಬಹುದು.

ಕೆಟ್ಟದ್ದು:

  1. ಮೋದಿಯವರ ಸರ್ಕಾರ ಬಂದಾಗಿನಿಂದಲೂ ಅತ್ಯಂತ ಸ್ಪಷ್ಟವಾಗಿ ತಾನು ಹಿಂದಿ ಪರ ಅನ್ನುವುದನ್ನು ತೋರಿಸುತ್ತ ಬಂದಿದೆ. ಕೇಂದ್ರ ಸರ್ಕಾರಿ ಆಡಳಿತದಲ್ಲಿ ಹಿಂದಿ ಕಡ್ಡಾಯದ ಸುತ್ತ ಹೊರಡಿಸಿದ ಸುತ್ತೋಲೆಗಳಿಂದ ಹಿಡಿದು, ಕೇಂದ್ರ ಆರಂಭಿಸಿರುವ ಪ್ರತಿಯೊಂದು ಯೋಜನೆಗೂ ಹಿಂದಿ ಹೆಸರನ್ನೇ ಇಡುವುದರಿಂದ ಹಿಡಿದು, ಪ್ರಪಂಚದ ಎಲ್ಲೇ ಹೋದರೂ ತಮ್ಮ ತಾಯ್ನುಡಿ ಗುಜರಾತಿಯನ್ನು ಕೈಬಿಟ್ಟು ಹಿಂದಿಯಲ್ಲೇ ಮಾತನಾಡುತ್ತ ಭಾರತವೆಂದರೆ ಹಿಂದಿ, ಹಿಂದಿಯೆಂದರೆ ಭಾರತ ಅನ್ನುವ ಅನಿಸಿಕೆಯನ್ನು ಗಟ್ಟಿಗೊಳಿಸುವ ಕೆಲಸವನ್ನು ಮೋದಿ ಸರ್ಕಾರ ಮಾಡಿದೆ. ಇದು ಭಾರತದ ಭಾಷಾ ವೈವಿಧ್ಯತೆಗೆ ಒಂದು ಹೊಡೆತ ಎಂದೇ ಪರಿಗಣಿಸಬೇಕು. ಹಿಂದಿ ಹೇರಿಕೆ ಕೈ ಬಿಟ್ಟು ಎಲ್ಲ ನುಡಿಗಳಿಗೂ ಸಮಾನ ಸ್ಥಾನಮಾನ ಕಲ್ಪಿಸುವ ನಿಲುವು ಇನ್ನು ಕಂಡಿಲ್ಲ.
  2. ರಾಜ್ಯಗಳ ತೆರಿಗೆ ಸಂಗ್ರಹದ ಸಾಮರ್ಥ್ಯಕ್ಕೆ ಕೊಡಲಿಯೇಟು ನೀಡಲಿರುವ ಜಿ.ಎಸ್.ಟಿ ಮಸೂದೆ ಜಾರಿಗೆ ತುದಿಗಾಲಲ್ಲಿ ನಿಂತಿರುವ ಕೇಂದ್ರ ಸರ್ಕಾರ ಕೇಂದ್ರ ಜಿ.ಎಸ್.ಟಿ ಪಟ್ಟಿಗೆ ರಾಜ್ಯಕ್ಕೆ ಹೆಚ್ಚಿನ ಆದಾಯ ತಂದುಕೊಡುತ್ತಿದ್ದ ತೈಲ ಉತ್ಪನ್ನಗಳು, ತಂಬಾಕು ಉತ್ಪನ್ನಗಳನ್ನು ಎಳೆದುಕೊಳ್ಳುವ ಮೂಲಕ ರಾಜ್ಯಗಳ ತೆರಿಗೆ ಸಂಗ್ರಹ ಸಾಮರ್ಥ್ಯಕ್ಕೆ ತೀವ್ರ ಹಿನ್ನಡೆಯಾಗುವಂತೆ ಮಾಡುತ್ತಿದೆ.
  3. ಭೂಮಿ ಅನ್ನುವುದು ಸಂವಿಧಾನದ ರಾಜ್ಯದ ಪಟ್ಟಿಯಲ್ಲಿದ್ದರೂ ಭೂ ಮಸೂದೆಯ ಮೂಲಕ ಕೇಂದ್ರ ಮೂಗು ತೂರಿಸುತ್ತಿದೆ. ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ರಾಜ್ಯ ಸರ್ಕಾರಗಳು ಕೇವಲ ಕೇಂದ್ರದ ಆದೇಶದಂತೆ ಭೂಮಿ ವಶಪಡಿಸಿಕೊಳ್ಳುವ ಕೆಲಸಕ್ಕೆ ಸೀಮಿತಗೊಳಿಸುವಂತಿರುವ ಭೂ ಮಸೂದೆಯಿಂದ ರಾಜ್ಯಗಳ ಕೈಯಲ್ಲಿನ ಅಧಿಕಾರ ಇನ್ನಷ್ಟು ಮೊಟಕುಗೊಳ್ಳುವ ಸಾಧ್ಯತೆಗಳಿವೆ.ರೈತರಿಂದ ಭೂಮಿ ವಶಪಡಿಸಿಕೊಳ್ಳುವ ಹೊಣೆ ರಾಜ್ಯ ಸರ್ಕಾರಕ್ಕಿರುವುದರಿಂದ ರೈತರ ಆಕ್ರೋಶವೂ ರಾಜ್ಯ ಸರ್ಕಾರಗಳೇ ಎದುರಿಸಬೇಕಾಗುತ್ತೆ. ಈ ವಿಷಯದಲ್ಲಿ ಕೇಂದ್ರ ಮೂಗು ತೂರಿಸದೇ ರಾಜ್ಯಗಳಿಗೆ ಬಿಡುವುದೇ ಒಳಿತು ಅನ್ನುವ ನಿಲುವನ್ನು ಬಿಜೆಪಿಯ ಹಿರಿಯ ನಾಯಕ ಅರುಣ್ ಶೌರಿಯವರೂ ಹೇಳಿದ್ದಾರೆ.
  4. ಕೇಂದ್ರ ಜಾರಿ ಮಾಡಲು ಹೊರಟಿರುವ ಹೊಸ ಸಾರಿಗೆ ಕಾಯ್ದೆ ವಾಹನ ನೋಂದಣಿ, ಚಾಲನಾಪತ್ರ ನೀಡುವ ವಿಷಯದಲ್ಲಿ ರಾಜ್ಯ ಸರ್ಕಾರಕ್ಕಿದ್ದ ಅಧಿಕಾರ ಮತ್ತು ತೆರಿಗೆ ಸಂಗ್ರಹದ ಸಾಮರ್ಥ್ಯ ಎರಡನ್ನು ಕಿತ್ತುಕೊಳ್ಳುತ್ತಿದೆ. ಇದು ಈಗಾಗಲೇ ಸಂಪನ್ಮೂಲದ ಕೊರತೆ ಎದುರಿಸುತ್ತಿರುವ ರಾಜ್ಯ ಸರ್ಕಾರಗಳಿಗೆ ಇನ್ನಷ್ಟು ತೊಡಕುಂಟು ಮಾಡುವಂತದ್ದು. ಒಂದು ರಾಜ್ಯದ ಒಳಗೆ ಓಡಾಡುವ ವಾಹನಗಳು ಅಲ್ಲಿನ ರಸ್ತೆಯ ಸೌಕರ್ಯವನ್ನು ಬಳಸುವಾಗ, ಅಲ್ಲಿನ ಸ್ಥಳೀಯ ಸರ್ಕಾರಕ್ಕೆ ತೆರಿಗೆ ಕಟ್ಟಬೇಕಾದದ್ದು ನ್ಯಾಯಯುತವಾದದ್ದು. ಅಮೇರಿಕದಲ್ಲೂ ರಾಜ್ಯಗಳೇ ಈ ವಿಷಯದಲ್ಲಿ ಸರ್ವಾಧಿಕಾರ ಹೊಂದಿವೆ. ಇದನ್ನು ಕಿತ್ತುಕೊಳ್ಳುವುದು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವಂತದ್ದು.
  5. ಕೇಂದ್ರದ ಡಿಜಿಟಲ್ ಇಂಡಿಯಾ ಯೋಜನೆಯಲ್ಲಾಗಲಿ, ಶಿಕ್ಷಣದ ಬಗೆಗಿನ ನಿಲುವಲ್ಲಾಗಲಿ ಭಾರತದ ಎಲ್ಲ ಭಾಷೆಗಳನ್ನು ಪೊರೆಯುವ ನಿಲುವು ಇಂದಿಗೂ ಕಂಡಿಲ್ಲ. ಸುಪ್ರೀಂ ಕೋರ್ಟಿನ ತೀರ್ಪಿನಿಂದ ತಾಯ್ನುಡಿಯಲ್ಲಿ ಮೊದಲ ಹಂತದ ಶಿಕ್ಷಣ ಕಲ್ಪಿಸುವುದಕ್ಕೆ ಹಿನ್ನಡೆಯಾಗಿದ್ದರೂ ಇದಕ್ಕೆ ಸಂವಿಧಾನ ತಿದ್ದುಪಡಿ ತರುವತ್ತ ಕೇಂದ್ರ ಸರ್ಕಾರ ಯಾವುದೇ ಆಸಕ್ತಿ ತೋರಿಸಿಲ್ಲ.

ಒಟ್ಟಿನಲ್ಲಿ ಒಕ್ಕೂಟ ವ್ಯವಸ್ಥೆಯತ್ತ ಒಂದಿಷ್ಟು ಬದ್ಧತೆಯನ್ನು ಮೋದಿ ಸರ್ಕಾರ ತೋರಿದ್ದರೂ ಆಳದಲ್ಲಿ ರಾಜ್ಯಗಳಿಗಿಂತ ಕೇಂದ್ರಕ್ಕೆ ಹೆಚ್ಚು ಗೊತ್ತು, ಕೇಂದ್ರ ಹೇಳಿದಂತೆ ರಾಜ್ಯಗಳು ಕೇಳಲಿ ಅನ್ನುವ ನಿಲುವು ಇರುವಂತೆ ತೋರುತ್ತದೆ. ಭಾರತ ಒಂದು ಒಕ್ಕೂಟ ವ್ಯವಸ್ಥೆ ಅನ್ನುವುದನ್ನು ಎಂದಿಗೂ ಒಪ್ಪದ ಸಂಘಪರಿವಾರದ ಎಲ್ಲೆ ಮೀರಿ ಮೋದಿ ಭಾರತವನ್ನು ಒಂದು ಒಕ್ಕೂಟ ವ್ಯವಸ್ಥೆಯಾಗಿ ಬಲಪಡಿಸಬಹುದು ಅನ್ನುವುದು ಸಂದೇಹವೇ ಸರಿ. ಇದನ್ನು ಕಾಲವೇ ಉತ್ತರಿಸಲಿದೆ.

 

Posted in ಒಕ್ಕೂಟ ವ್ಯವಸ್ಥೆ, ಹಿಂದಿ ಹೇರಿಕೆ | ನಿಮ್ಮ ಟಿಪ್ಪಣಿ ಬರೆಯಿರಿ

ನುಡಿಯರಿಮೆಗೆ ಡಾ.ಡಿ.ಎನ್.ಶಂಕರ ಬಟ್ಟರ ಕೊಡುಗೆ

ಕಳೆದ ಭಾನುವಾರ, ಅಂದರೆ ಮೇ 17 2015ರ ಸಂಜೆ ಬೆಂಗಳೂರಿನ ‘ಟೋಟಲ್ ಕನ್ನಡ’ದಲ್ಲಿ ‘ನುಡಿಯರಿಮೆ ವಲಯಕ್ಕೆ ಡಾ. ಡಿ. ಎನ್. ಶಂಕರ ಬಟ್ಟರ ಕೊಡುಗೆಗಳು’ ಎಂಬ ವಿಷಯದ ಬಗ್ಗೆ ನಾನು ಮಾತಾಡಿದೆನು. ನುಡಿಯರಿಮೆ ಎಂದರೇನು ಎಂದು ಸಣ್ಣದಾಗಿ ಪರಿಚಯಿಸಿ, ಶಂಕರ ಬಟ್ಟರು ನಡೆಸಿದ ಅಧ್ಯಯನ, ಸಂಶೋಧನೆ, ಅವರು ಬರೆದ ಹಲವು ಪುಸ್ತಕಗಳು, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಜರ್ನಲುಗಳಲ್ಲಿ ಪ್ರಕಟಿಸಿದ ಸಂಶೋಧನಾ ಪೇಪರುಗಳು – ಹೀಗೆ ನುಡಿಯರಿಮೆಯ ವಲಯಕ್ಕೆ ಅವರು ನೀಡಿದ ಹಲವು ಕೊಡುಗೆಗಳ ಬಗ್ಗೆ ಮಾತುಕತೆ ನಡೆಯಿತು.

ಇಂಗ್ಲಿಶ್ ನಲ್ಲಿ ಅವರು ಬರೆದ ಸೌಂಡ್ ಚೇಂಜ್ (ಧ್ವನಿ ಪರಿವರ್ತನೆ) ಬಗ್ಗೆಯ ಪುಸ್ತಕ ಮತ್ತು ಪೇಪರುಗಳು, ಮಣಿಪುರಿ ವ್ಯಾಕರಣ, ಟಂಕುರ್-ನಾಗಾ ನುಡಿಯ ಪದಪಟ್ಟಿ, ತುಳು, ಹವ್ಯಕ ಮತ್ತು ಕೊರಗ ನುಡಿಗಳ ಬಗ್ಗೆ ಅಧ್ಯಯನ, ಮುಂತಾದ ವಿಷಯಗಳ ಬಗ್ಗೆ ಚರ್ಚೆಯಾಯಿತು. ಹೀಗೆ ಅವರು ಬರೆದ ಹಲವು ಪುಸ್ತಕಗಳಲ್ಲಿ, ಸರ್ವನಾಮಗಳ ಬಗ್ಗೆ ಬರೆದ  ಆಕ್ಸ್ಫರ್ಡ್ ಯೂನಿವರ್ಸಿಟಿ ಪ್ರೆಸ್ ನ ‘ಪ್ರೋನೌನ್ಸ್’ (Pronouns) ಎಂಬದೂ ಒಂದು. ಸುಮಾರು 250ಕ್ಕೂ ಹೆಚ್ಚು ನುಡಿಗಳ ಸರ್ವನಾಮಗಳನ್ನು ಆಳವಾಗಿ ಅಧ್ಯಯನ ಮಾಡಿ, ಬರೆದ ಈ ಪುಸ್ತಕದೊಂದಿಗೆ ಅವರ ಇತರೆ ವ್ಯಾಕರಣ ಮತ್ತು ನುಡಿಯರಿಮೆಯ ಪುಸ್ತಕಗಳ ಬಗ್ಗೆ ಮಾತಾಯಿತು. ಕನ್ನಡ ನುಡಿಯರಿಮೆಯಲ್ಲಿ ವ್ಯಾಕರಣ, ನುಡಿಯ ಹಳಮೆ ಮತ್ತು ನಡೆದು ಬಂದ ದಾರಿ, ಪದ ಕಟ್ಟಣೆ, ಮತ್ತು ಹೊಸ ಬರಹದ ಕುರಿತಾಗಿ ಬಟ್ಟರ ವಿಚಾರಗಳ ಬಗ್ಗೆ ಚರ್ಚೆಯಾಯಿತು. ಈ ಮಾತುಕತೆಯ ವಿಡಿಯೋ ಇಲ್ಲಿದೆ.

Posted in ಕನ್ನಡ | ನಿಮ್ಮ ಟಿಪ್ಪಣಿ ಬರೆಯಿರಿ

ಜಾಗ, ಕರೆಂಟ್ ಕೊಟ್ಟ ಕೂಡಲೇ ಐಟಿ ಬಂದು ಬಿಡುತ್ತಾ?

ನಡಹಳ್ಳಿ ಸಾಹೇಬ್ರು ಉತ್ತರ ಕರ್ನಾಟಕದ ಏಳಿಗೆಗೆ ಹಾಕಿರುವ ಪ್ಲಾನ್ ಏನು ಅಂತ ಮೊನ್ನೆ ಒಂದು ಸಂದರ್ಶನದ ವಿಡಿಯೋ ನೋಡಿದೆ. ಅವರ ಪ್ರಕಾರ ಹುಬ್ಬಳ್ಳಿಯಲ್ಲಿ ಐಟಿ ಪಾರ್ಕಿಗೆ ಅಂತ ಸರ್ಕಾರದ ಬಳಿ 500 ಎಕ್ರೆ ಜಾಗ ಇದೆಯಂತೆ, ಬೆಳಗಾವಿಯಲ್ಲಿ 300 ಎಕ್ರೆ ಜಾಗ ಇದೆ. ಕಾರವಾರದಲ್ಲೂ ಸರ್ಕಾರದ ಜಾಗವಿದೆಯಂತೆ. ಇದೆಲ್ಲವನ್ನು ಐಟಿ ಕಂಪನಿಗಳಿಗೆ ಫ್ರಿ ಆಗಿ ಕೊಟ್ಟು. ಫ್ರೀ ಕರೆಂಟ್, ತೆರಿಗೆ ಹಾಲಿಡೇಸ್ ಕೊಡಬೇಕಂತೆ. ಕಾರವಾರದಲ್ಲಿ ಕಡಲ ತೀರ ಇದೆ. ಐಟಿ,ಬಿಟಿ ಜನಕ್ಕೆ ಹಾಲಿಡೇಸ್ ಹೋಗಲು, ಎಂಜಾಯ್ ಮಾಡಲು ಬೀಚ್ ಇದೆ. ಬೆಳಗಾವಿ-ಹುಬ್ಬಳ್ಳಿ-ಕಾರವಾರದ ಒಂದು ಐಟಿ ಮತ್ತು ಟೂರಿಸಂ ಕಾರಿಡಾರ್ ಮಾಡಿದರೆ ಕಂಪನಿಗಳೆಲ್ಲ ಬರ್ತಾವೆ. ಆಗ ಫಾರಿನರ್ಸ್ ಬರ್ತಾರೆ. ರೆವೆನ್ಯೂ ಬರುತ್ತೆ, ಏಳಿಗೆಯಾಗುತ್ತೆ. ಇದೊಂದು ಜಿರೊ ಬಜೆಟ್ ಐಟಿ ಪ್ರಾಜೆಕ್ಟ್, ಇದಕ್ಕೆ ದುಡ್ಡು ಬೇಡ ಅಂತ ಹೇಳಿಕೊಳ್ತಾರೆ.

ಐಟಿ ಉದ್ಯಮ ಹೇಗೆ ನಡೆಯುತ್ತೆ?

ಇವರಿಗೆ ಐಟಿ ಉದ್ಯಮ ಹೇಗೆ ನಡೆಯುತ್ತೆ ಅನ್ನುವ ಬಗ್ಗೆ ಐಡಿಯಾನೇ ಇಲ್ಲ ಅನ್ನಿಸಲ್ವಾ?

  1. ಬರೀ ವ್ಯವಸ್ಥೆ ಕೊಟ್ಟ ಕೂಡಲೇ ಅಲ್ಲಿಗೆ ಐಟಿ ಬರಲ್ಲ. ಬೆಂಗಳೂರು ಪಕ್ಕದ ಮೈಸೂರಲ್ಲಿ ತಿಪ್ಪರಲಾಗ ಹಾಕಿದ್ರೂ ಇವತ್ತಿಗೂ ಇರೋದು ಐದೋ ಹತ್ತೋ ಐಟಿ ಕಂಪನಿಗಳು. ಪೋರ್ಟ್ ಸಿಟಿ, ಆಪರೇಶನಲ್ ಏರಪೋರ್ಟ್ ಇರುವ ಮಂಗಳೂರಿಗೆ ಇವತ್ತಿಗೂ ಐಟಿ ಹೋಗಿಲ್ಲ. ಅದು ಅಲ್ಲದೇ, ಈ ಎರಡೂ ನಗರಗಳಲ್ಲೂ ಇರುವ ಚೂರು ಪಾರು ಐಟಿ ಕಂಪನಿಗಳಲ್ಲಿ ಇರೋದು ಮಲೆಯಾಳಿಗಳು, ಹಿಂದಿಯವರು, ಕನ್ನಡದವರನ್ನ ದುರ್ಬೀನ್ ಹಾಕಿಕೊಂಡು ಹುಡುಕಬೇಕು.
  2. ಐಟಿ ಬಿಟಿ ಬರಲು ಬರೀ ವ್ಯವಸ್ಥೆ ಇದ್ರೆ ಸಾಕು ಅನ್ನೋದು ಪೆದ್ದುತನದ ಹೇಳಿಕೆ. ವಿದೇಶದಿಂದ ಐಟಿ ಆರ್ಡರ್ ಇದ್ರೆ ಮಾತ್ರ ತಾನೇ ಐಟಿ ವ್ಯಾಪಾರ ನಡೆಯೋದು. ದೇಶದ ಎಲ್ಲ ನಗರಗಳಲ್ಲೂ ಐಟಿ ಬರಲು ಸಾಧ್ಯವಿಲ್ಲ. ಪುಣೆಗೆ ಬಂದಿರುವ ಐಟಿ ಮುಂಬೈಗೂ ಹೋಗಿಲ್ಲ, ನಾಸಿಕ್, ನಾಗಪುರಕ್ಕೂ ಹೋಗಿಲ್ಲ. ಹೈದರಾಬಾದಿಗೆ ಬಂದಿರುವ ಐಟಿ ವಿಜಯವಾಡಕ್ಕೆ ಹೋಗಿಲ್ಲ. ಚೆನ್ನೈಗೆ ಬಂದರುವ ಐಟಿ ಮದುರೈಗೂ ಹೋಗಿಲ್ಲ.
  3. ಐಟಿ ಕಂಪನಿಗಳು ಬರಲು ವ್ಯವಸ್ಥೆಯ ಜೊತೆ ಟ್ಯಾಲೆಂಟ್ ಪೂಲ್ ಬೇಕು. ಬೆಂಗಳೂರು ಈ ಪಾಟಿ ಗಬ್ಬೆದ್ದು ಹೋಗಿದ್ದರೂ ಇಲ್ಲೇ ಹೂಡಿಕೆ ಮಾಡ್ತೀನಿ ಅಂತ ಬರಲು ಕಾರಣ ಉದ್ಯೋಗ ಅರಸುವವರೆಲ್ಲ ಬೆಂಗಳೂರಲ್ಲೇ ಸಿಗ್ತಾರೆ ಅನ್ನುವ ಕಂಪನಿಗಳ ಅನಿಸಿಕೆ. ಜೊತೆಯಲ್ಲೇ ಹೆಚ್ಚೆಚ್ಚು ಸಂಬಳದ ಕೆಲಸ, ಹೆಚ್ಚೆಚ್ಚು ಕಂಪನಿಗಳ ಆಯ್ಕೆ ಸಿಗುತ್ತೆ ಅನ್ನುವ ಕಾರಣಕ್ಕೆ ಉದ್ಯೋಗಿಗಳು ಬೆಂಗಳೂರನ್ನೇ ಆಯ್ದುಕೊಳ್ಳುತ್ತಾರೆ. ಇದು ಸರಿ ಅಂತ ನಾನು ಹೇಳಲ್ಲ, ಆದರೆ ಇದು ಸತ್ಯ.
  4. ಐಟಿ ಕೆಲಸಗಳಲ್ಲಿ ಇರುವಷ್ಟು insecurity ಇನ್ನಾವ ಕ್ಷೇತ್ರದಲ್ಲೂ ಇರಲಿಕ್ಕಿಲ್ಲ. ಯಾವಾಗ ಬೇಕಾದರೂ ಕೆಲಸದಿಂದ ತೆಗೆಯಬಹುದು ಅಂತ ಇರುವ ಕ್ಷೇತ್ರದಲ್ಲಿ ಯಾವತ್ತು ಕೆಲಸ ಹೋದರೂ ಇನ್ನೊಂದು ಕೆಲಸ ಹಿಡಿಯಬೇಕು ಅಂದರೆ ಅತೀ ಹೆಚ್ಚು ಕಂಪನಿಗಳು ಕೆಲಸ ಮಾಡುವ ಊರಿನಲ್ಲೇ ಇರಬೇಕು ಅನ್ನುವುದು ಉದ್ಯೋಗಿಗಳ ಅನಿಸಿಕೆಯೂ ಹೌದು. ಈ ಕಾರಣಕ್ಕೆ ಸರ್ಕಾರ ಹುಬ್ಬಳ್ಳಿ, ಮೈಸೂರು, ಮಂಗಳೂರು, ಶಿವಮೊಗ್ಗ, ಬೆಳಗಾವಿಯಂತಹ ಟೈರ್ 2 ಊರುಗಳಿಗೆ ಐಟಿ ಹೂಡಿಕೆ ತರಲು ಮಾಡಿರುವ ಸಾಕಷ್ಟು ಪ್ರಯತ್ನಕ್ಕೆ ಅಂದುಕೊಂಡಷ್ಟು ಯಶಸ್ಸು ಸಿಕ್ಕಿಲ್ಲ.
  5. ಅದು ಅಲ್ಲದೇ ಐಟಿ ಬಂದ ಮೇಲೆ ಬೆಂಗಳೂರಿನಲ್ಲಿ ಏನಾಗಿದೆ. ಅದರ ಅತೀ ಹೆಚ್ಚು ಲಾಭ ಕನ್ನಡೇತರರಿಗೆ ಹೋಗಿದೆ. 2002ರ ಹೊತ್ತಲ್ಲಿ ಐಟಿ ಉದ್ಯಮದಲ್ಲಿದ್ದ ಕನ್ನಡಿಗರ ಸಂಖ್ಯೆ ಬರೀ 15% ಆಸುಪಾಸಿನಲ್ಲಿತ್ತು. ಕನ್ನಡಿಗರಲ್ಲಿ ಹೆಚ್ಚಿದ ಕನ್ನಡತನದ ಜಾಗ್ರತಿಯ ಪರಿಣಾಮವಾಗಿ ಈಗ ಅದೊಂದು 40-45% ಆಸುಪಾಸಿನಲ್ಲಿರಬಹುದು ಅನ್ನುವ ಅಂದಾಜಿದೆ. ಗಡಿಯಂಚಿನ ಬೆಳಗಾವಿಗೆ ಐಟಿ ಬಂದರೆ ಅದರ ಬಹುಪಾಲು ಲಾಭ ಯಾರಿಗೆ ಸಿಗುತ್ತೆ ಅನ್ನುವುದನ್ನು ಊಹಿಸುವುದು ಕಷ್ಟವೇ?

ಈ ರೀತಿ ಎಕನಾಮಿಕ್ ರೀಸನಿಂಗ್ ಇಲ್ಲದಿರುವ, ಕೇಳಿಸಲು ಅದ್ಭುತ ಅನಿಸುವ ಯೋಜನೆಗಳನ್ನು ಪ್ರತ್ಯೇಕತಾವಾದಿಗಳು ಮೇಲಿಂದ ಮೇಲೆ ಹೇಳುತ್ತಾರೆ. ಅದು ಜನರ ದಿಕ್ಕು ತಪ್ಪಿಸುವ ಪ್ರಯತ್ನವೇ ಸರಿ.

Posted in ಕರ್ನಾಟಕ | ನಿಮ್ಮ ಟಿಪ್ಪಣಿ ಬರೆಯಿರಿ

ತಮಿಳರು, ಬೆಂಗಾಲಿಗಳ ತರ ಕನ್ನಡಿಗರಿಗೇಕೆ ಸ್ಟಿರಿಯೋಟೈಪ್ ಇಲ್ಲ?

“ಭಾಷೆ ವಿಷಯಕ್ಕೆ ಬಂದರೆ ಅವನೊಳ್ಳೆ ತಮಿಳರ ತರ ಆಡ್ತಾನೆ.”, “ ಮಲ್ಲುಗಳು (ಮಲೆಯಾಳಿಗಳು) ಬಿಡಿ, ಚಂದ್ರಲೋಕದಲ್ಲಿ ಬಿಟ್ರೂ ಕಿರಾಣಿ ಅಂಗಡಿ, ಇಲ್ಲ ಚಹದಂಗಡಿ ಶುರು ಮಾಡಿ ಬಿಡ್ತಾರೆ.”, “ಗುಜ್ಜುಗಳ (ಗುಜರಾತಿಗಳು) ರಕ್ತದಲ್ಲೇ ವ್ಯಾಪಾರ ಬರೆದಿದೆ”, “ಬೊಂಗ್ (ಬೆಂಗಾಲಿ) ಗಳು ಸಕತ್ ಕನ್ನಿಂಗ್ ಆಗಿರ್ತಾರೆ ಬಿಡಮ್ಮ”, “ಈ ಗುಲ್ಟಿಗಳು (ತೆಲುಗರು) ಸಿನ್ಮಾ ಅಂದ್ರೆ ಸಾಯ್ತಾರಪ್ಪ” ಈ ರೀತಿ ಒಂದು ಭಾಷಿಕರನ್ನು ಒಂದು ಗುಣಕ್ಕೆ, ಒಂದು ವಿಶೇಷತೆಗೆ ಪಡಿಯಚ್ಚಿಸುವ (ಸ್ಟಿರಿಯೋಟೈಪ್) ಹೇಳಿಕೆಗಳನ್ನು ಕೇಳದವರಿಲ್ಲ. ಅಂತರ್ಜಾಲದಲ್ಲಿ ಗುಜ್ಜು ಜೋಕ್ಸ್, ಮಲ್ಲು ಜೋಕ್ಸ್, ಬೊಂಗ್ ಜೋಕ್ಸ್, ಸರ್ದಾಜಿ ಜೋಕ್ಸ್ ತರದ್ದು ದಂಡಿಯಾಗಿ ಕಾಣಿಸುತ್ತೆ, ಆದರೆ ಕನ್ನಡಿಗ ಜೋಕ್ಸ್ ಅಂತನ್ನುವುದು ಯಾಕೆ ಕಾಣಿಸಲ್ಲ? ಇಂತಹದೊಂದು ಪಡಿಯಚ್ಚು ಕನ್ನಡಿಗರಿಗೆ ಏಕಿಲ್ಲ? ಕನ್ನಡಿಗರು ಕರ್ನಾಟಕದಿಂದಾಚೆ ಹೆಚ್ಚು ವಲಸೆ ಹೋಗದ ಕಾರಣಕ್ಕೆ ಹೀಗೆದೆಯಾ? ಅಥವಾ ಹೋದರೂ ಅಲ್ಲಿ ಈ ಮೇಲಿನ ಭಾಷಿಕರಂತೆ ನಮ್ಮದೇ ಅಸ್ತಿತ್ವವನ್ನು ಸಾರುವ ಕೆಲಸ ಮಾಡದೇ ಹೋದದ್ದರಿಂದ ಹೀಗಾಗಿದೆಯಾ? ಕನ್ನಡಿಗರು ಅಂದ್ರೆ ಹೀಗೆ ಅನ್ನುವ ಒಂದು ಪಡಿಯಚ್ಚು ನಮಗೂ ಬೇಕಾ?

ಭಾರತದಲ್ಲಿನ ಭಾಷಾ ವೈವಿಧ್ಯತೆಯನ್ನು ಜಗತ್ತಿಗೆ ಸಾರುವ ಸಂದರ್ಭದಲ್ಲೆಲ್ಲ ಬಳಕೆಯಾಗುವ ಮಾದರಿಗಳು ಯಾವುವು ಎಂದು ಸೂಕ್ಷ್ಮವಾಗಿ ಗಮನಿಸಿದರೆ ಹೆಚ್ಚಾಗಿ ಕಾಣಿಸುವಂತದ್ದು ಪಂಜಾಬಿಗಳು, ಬೆಂಗಾಲಿಗಳು, ಮರಾಠಿಗರು, ತಮಿಳು, ಮಲೆಯಾಳಿಗಳ ಆಚಾರ ವಿಚಾರಗಳು. ಇವರ ಜೀವನ ಶೈಲಿ, ಉಡುಗೆ ತೊಡುಗೆ, ಆಹಾರ ಎಲ್ಲವೂ ಭಾರತದ ವೈವಿಧ್ಯತೆಯನ್ನು ಸಾರುವ ಸಾಧನವೆಂಬಂತೆ ಬಿಂಬಿತವಾಗುತ್ತವೆ. ದೆಹಲಿಯ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದ ಆರಾಮಕೋಣೆಯ ಸುತ್ತ ಹಾಕಿರುವ ಮದುಮಕ್ಕಳ ಚಿತ್ರಗಳಲ್ಲೂ ಇದನ್ನು ಗಮನಿಸಬಹುದು. ಆದರೆ ಇಂತಹದೊಂದು ಚಿತ್ರ ಕನ್ನಡಿಗರಿಗೇಕಿಲ್ಲ? ಕನ್ನಡಿಗರೆಲ್ಲರನ್ನು ಪ್ರತಿನಿಧಿಸುವಂತೆ ಒಂದು ದಿರಿಸಿನ ಶೈಲಿಯಾಗಲಿ, ಆಹಾರ ಪದ್ಧತಿಯಾಗಲಿ ಕರ್ನಾಟಕದಲ್ಲಿಲ್ಲದಿರುವುದು ಇದಕ್ಕೆ ಕಾರಣವಿರಬಹುದಾ? ಬೆಂಗಾಲಿಗಳು, ಮಲೆಯಾಳಿಗಳು, ಪಂಜಾಬಿಗಳಿಗೆ ಇರುವಂತೆ ಯಾವುದೋ ಒಂದು ಆಹಾರ, ದಿರಿಸಿನ ಶೈಲಿಯ ಮೇಲೆ ಕನ್ನಡಿಗರನ್ನು ಗುರುತಿಸಲಾಗದು. ಇಂತಹದೊಂದು ಗಟ್ಟಿಗೊಳಿಸಿದ ಚಿತ್ರಣ (ಕೋಡಿಫೈಡ್ ಇಮೇಜ್) ಕನ್ನಡಿಗರಿಗೆ ಇಲ್ಲದಿರುವುದರಿಂದಲೇ ಕನ್ನಡಿಗ ಸ್ಟಿರಿಯೋಟೈಪ್ ಅನ್ನುವುದು ಹೆಚ್ಚಾಗಿ ಬಳಕೆಯಲ್ಲಿಲ್ಲ. ಇಂತಹದೊಂದು ಸಾಮಾನ್ಯ ಗುರುತಿನ ಕೊರತೆಯಿಂದಲೇ ಕರ್ನಾಟಕದಾಚೆ ಕನ್ನಡಿಗರು ಒಟ್ಟಾಗುವುದು ಇತರೆ ಭಾಷಿಕರಷ್ಟು ವ್ಯಾಪಕವಾಗಿಲ್ಲ ಅನ್ನಬಹುದು. ಉದಾಹರಣೆಗೆ ಭಾರತದ ಹಲವು ರಾಜ್ಯಗಳಲ್ಲಿರುವ ಐಐಟಿ, ಐಐಎಮ್ ಗಳಲ್ಲಿ, ವಿವಿಧ ರಾಜ್ಯಗಳಲ್ಲಿರುವ ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ತಮಿಳು, ತೆಲುಗು, ಬೆಂಗಾಲಿ ಸಂಘಗಳನ್ನು ಕಾಣಬಹುದು, ಆದರೆ ಕನ್ನಡ ಸಂಘಗಳನ್ನು ದೊಡ್ಡ ಮಟ್ಟದಲ್ಲಿ ಕಾಣುವುದು ಕಷ್ಟ. ಅಲ್ಲೆಲ್ಲ ಕನ್ನಡಿಗರು ದೊಡ್ಡ ಸಂಖ್ಯೆಯಲ್ಲಿಲ್ಲ ಅನ್ನುವುದು ಇನ್ನೊಂದು ವಿಚಾರ.

ಕನ್ನಡಿಗರಿಗೆ ಯಾಕಿಲ್ಲ?

ಈ ಸ್ಟಿರಿಯೋಟೈಪುಗಳು ಯಾವಾಗ ಹುಟ್ಟಿಕೊಳ್ಳುತ್ತವೆ ಅನ್ನುವುದನ್ನು ಹುಡುಕ ಹೊರಟರೆ ಒಂದಂಶ ಸ್ಪಷ್ಟವಾಗುತ್ತೆ. ಯಾವ ಭಾಷಿಕರು ಹೊರ ರಾಜ್ಯ, ಹೊರ ದೇಶಗಳಿಗೆ ವ್ಯಾಪಕವಾಗಿ ವಲಸೆ ಹೋಗುತ್ತಾರೋ ಮತ್ತು ಹೋದಲ್ಲೆಲ್ಲ ತಮ್ಮದೇ ಆದ ಜೀವನಶೈಲಿಯಿಂದ ಎದ್ದು ತೋರುತ್ತಾರೋ ಅಂತವರ ಬಗ್ಗೆ ಒಂದು ಸ್ಟಿರಿಯೋಟೈಪ್ ಹುಟ್ಟಿಕೊಳ್ಳುತ್ತೆ. ಎಲ್ಲೇ ಹೋದರೂ ಅಲ್ಲಿ ವ್ಯಾಪಾರದಲ್ಲಿ ತಮ್ಮ ಛಾಪು ಮೂಡಿಸುವ ಮಲೆಯಾಳಿಗಳು, ತಮ್ಮ ಭಾಷೆಯ ಬಗ್ಗೆ ಉಗ್ರ ಅಭಿಮಾನ ಇರುವ ತಮಿಳರು, ಬೆಂಗಾಲಿಗಳು, ತಮಾಷೆ ಮತ್ತು ತಿಂಡಿ ಪ್ರಿಯ ಪಂಜಾಬಿಗಳು, ಹೀಗೆ ಹಲವು ಪಡಿಯಚ್ಚುಗಳು ಹುಟ್ಟಿಕೊಳ್ಳಲು ಕಾರಣ ಈ ಭಾಷಿಕ ಸಮುದಾಯ ಹೆಚ್ಚೆಚ್ಚು ವಲಸೆ ಹೋಗಿದ್ದು ಮತ್ತು ಹೋದಲ್ಲೆಲ್ಲ ಭಾಷೆಯ ಸುತ್ತ ತಮ್ಮನ್ನು ತಾವು ಸಂಘಟಿತರನ್ನಾಗಿಸಿಕೊಂಡಿದ್ದು. ಕನ್ನಡಿಗರು ಕೆಲವು ಹೊರ ದೇಶ ಮತ್ತು ಹೊರ ರಾಜ್ಯಗಳಿಗೆ ದೊಡ್ಡ ಸಂಖ್ಯೆಯಲ್ಲಿ ವಲಸೆ ಹೋದರೂ ಅಲ್ಲಿ ಇಂತಹದೊಂದು ಸ್ಟಿರಿಯೋಟೈಪುಗಳು ಹುಟ್ಟಿಕೊಳ್ಳಲಿಲ್ಲ. ಅದಕ್ಕೆ ಒಂದು ಕಾರಣ ಹಾಗೆ ವಲಸೆ ಹೋದವರಲ್ಲಿ ತಮ್ಮ ಮೂಲ ಗುರುತು ಕನ್ನಡ ಅನ್ನುವ ಪ್ರಜ್ಞೆ ಅಷ್ಟಾಗಿ ಇರದಿದ್ದದ್ದು ಅನ್ನಬಹುದು. ತಮಗಿರುವ ಹತ್ತಾರು ಗುರುತುಗಳಲ್ಲಿ ಕನ್ನಡವೂ ಒಂದು ಅನ್ನುವಂತೆ ನಮ್ಮಲ್ಲಿ ಏರ್ಪಾಟುಗಳಿರುವುದರಿಂದ ವಲಸೆ ಹೋದಲ್ಲಿ ಕನ್ನಡದ ಸುತ್ತ ಸಂಘಟಿತರಾಗುವ ತೀವ್ರ ಸೆಳೆತ ಕನ್ನಡಿಗರಲ್ಲಿ ಅಷ್ಟಾಗಿಲ್ಲ. ಭಾಷೆಯ ಸುತ್ತ ವ್ಯಾಪಕವಾದ ಒಂದು ಜನರ ಮನ ಜೋಡಿಸುವಂತಹ ರಾಜಕೀಯ ಚಳುವಳಿ ಕರ್ನಾಟಕದಲ್ಲಿ ನಡೆದಿಲ್ಲ ಅನ್ನುವುದು ಇದರ ಮೂಲದಲ್ಲಿರುವ ಒಂದು ಕೊರತೆ ಎಂದು ಗುರುತಿಸಬಹುದು. ಗಮನಿಸಿದರೆ ಒಂದು ಗಟ್ಟಿಯಾದ ಸ್ಟಿರಿಯೋಟೈಪ್ ಇರುವ ಪಂಜಾಬಿಗಳು, ಬೆಂಗಾಲಿಗಳು, ತಮಿಳರು, ಮರಾಠಿಗರ ಸಮಾಜದಲ್ಲಿ ಭಾಷೆಯ ಸುತ್ತ ಚಳುವಳಿಗಳು ನಡೆದಿದ್ದು, ಆ ಜನರ ಅಸ್ಮಿತೆಯನ್ನು ಎತ್ತಿ ಹಿಡಿಯುವಂತೆ ಅಲ್ಲಿ ಪ್ರಾದೇಶಿಕ ಪಕ್ಷಗಳು ಹುಟ್ಟಿಕೊಂಡಿದ್ದು ಕಾಣಿಸುತ್ತೆ. ರಾಜಕೀಯವಾಗಿ ಒಂದು ನುಡಿ ಸಮಾಜ ತನ್ನ ಗುರುತು ಕಂಡುಕೊಂಡಾಗ ಅದು ಕೊಡುವ ಆತ್ಮವಿಶ್ವಾಸದ ಪರಿಣಾಮವಾಗಿ ಹೊರಹೊಮ್ಮುವ ಬೈ ಪ್ರಾಡಕ್ಟ್ ಆ ನುಡಿಯ ಬಗೆಗಿನ ಸ್ಟಿರಿಯೋಟೈಪ್ ಅನ್ನಿಸುತ್ತೆ. ರಾಜಕೀಯವಾಗಿ ಯಾವಾಗಲೂ ದನಿಯೇ ಇಲ್ಲದಂತೆ ಕರ್ನಾಟಕದ ಒಳಗೂ ಹೊರಗೂ ಕಾಣಿಸುವ ಕನ್ನಡಿಗರು ಸಹಜವಾಗಿಯೇ ಇಂತಹದೊಂದು ಸ್ಟಿರಿಯೋಟೈಪ್ ಕಟ್ಟಿಕೊಳ್ಳುವಲ್ಲಿ ಎಡವಿದ್ದಾರೆ ಅನ್ನಬಹುದು.

ಸ್ಟಿರಿಯೋಟೈಪುಗಳು ಬೇಕೇ?

ಸ್ಟಿರಿಯೋಟೈಪುಗಳು ಕೆಲವೊಮ್ಮೆ ಅಪಹಾಸ್ಯ, ನಿಂದನೆಯಂತಹ ವಿಷಯಗಳಾಗಿಯೂ ಕಾಣಿಸಬಹುದು. ಪಂಜಾಬಿಗಳ ಬಗ್ಗೆ ಇರುವ ಅಪಹಾಸ್ಯದ ಜೋಕುಗಳು ಹಲವು ಪಂಜಾಬಿಗಳಲ್ಲಿ ರೇಜಿಗೆ ಹುಟ್ಟಿಸಿದೆ. ಕೆಲವೊಮ್ಮೆ ಅದು ಜಗಳ, ಹಿಂಸೆಗೂ ಕಾರಣವಾಗಬಹುದು. ಆದರೆ ಸ್ಟಿರಿಯೋಟೈಪುಗಳೇ ಇಲ್ಲದೇ ಹೋದರೆ ಭಾರತದಂತಹ ಭಾಷಾ ಒಕ್ಕೂಟದಲ್ಲಿ ಭಾರತದ ರಾಷ್ಟ್ರೀಯ ಪರಿಕಲ್ಪನೆಯಲ್ಲಿ(ನ್ಯಾಶನಲ್ ಇಮ್ಯಾಜಿನೇಶನ್) ಕನ್ನಡಿಗರು ಒಂದು ವಿಶೇಷವಾದ, ಪ್ರತ್ಯೇಕವಾದ ಗುರುತಾಗಿ ಕಾಣಿಸುವುದಿಲ್ಲ. ಅಂತಹದೊಂದು ಗುರುತು ಇಂದಲ್ಲ ನಾಳೆ ನಾವು ಪಡೆದುಕೊಳ್ಳಬೇಕಾದದ್ದು ಮುಖ್ಯ. ಜಾಗತೀಕರಣ, ಅತಿಯಾದ ಕೇಂದ್ರಿಕ್ರತ ವ್ಯವಸ್ಥೆಯಂತಹ ಬುಲ್-ಡೋಜರುಗಳು ಎಲ್ಲವನ್ನು ಒಂದೇ ತೆರನಾಗಿಸುತ್ತ (ಹೊಮೊಜೆನೈಸ್) ಹೊರಟಿರುವಾಗ ಅದನ್ನು ತಡೆದು ನಮ್ಮ ಅಸ್ತಿತ್ವ ಸಾರಿಕೊಳ್ಳಲು ಕನ್ನಡಿಗರು ರಾಜಕೀಯವಾಗಿ ಸಂಘಟಿತರಾಗಬೇಕಿರುವುದು ಮತ್ತು ಅವರ ಸುತ್ತ ಒಂದು ಸ್ಟಿರಿಯೋಟೈಪು ಹುಟ್ಟಿಕೊಳ್ಳಬೇಕಿರುವುದರ ಅಗತ್ಯವಿದೆ ಅನ್ನಿಸುತ್ತೆ.

ಗಮನಿಸಿ: ಔಟಲುಕ್ ಪತ್ರಿಕೆಯಲ್ಲಿ ಕೆಲವು ವರ್ಷಗಳ ಹಿಂದೆ ಚಂದನ್ ಗೌಡ ಅನ್ನುವವರು ಬರೆದ “ಹರ್ಡ್ ದಟ್ ಕನ್ನಡಿಗಾ ಜೋಕ್” ಅನ್ನುವ ಅಂಕಣದ ಸ್ಪೂರ್ತಿ ಈ ಅಂಕಣಕ್ಕಿದೆ.

Posted in ಕನ್ನಡ, ಕನ್ನಡತನ | ನಿಮ್ಮ ಟಿಪ್ಪಣಿ ಬರೆಯಿರಿ

ವೈಜ್ಞಾನಿಕ ಪ್ರಗತಿ – ಧರ್ಮ ಮತ್ತು ಭಾಷೆ

ಭಾರತ ಯಾಕೆ ವೈಜ್ಞಾನಿಕ ಪ್ರಗತಿಯಲ್ಲಿ ಹಿಂದೆ ಬಿದ್ದಿದೆ?

ಒಂದು ನಾಡಿನ ವೈಜ್ಞಾನಿಕ ಸಂಶೋಧನೆಯ ಸಾಮರ್ಥ್ಯಕ್ಕೂ ಧಾರ್ಮಿಕತೆಗೂ ಯಾವುದಾದರೂ ನೆಂಟಿದೆಯೇ? – ಇಂತಹದೊಂದು ಪ್ರಶ್ನೆ ಎತ್ತಿಕೊಂಡು ಹೊರಟ ಇಟಲಿಯ ಡೇವಿಡ್ ಟಿಚ್ಚಿ, ಅಂಡ್ರಿಯಾ ವಿಂಡಿನಿ ಮತ್ತು ಅಮೇರಿಕದ ರೋಲಂಡ್ ಬೆನಬೋ ಅನ್ನುವ ಮೂವರು ಎಕನಾಮಿಸ್ಟ್ ಗಳು ಒಂದು ಸಂಶೋಧನಾ ವರದಿಯನ್ನು ಹೊರ ತಂದಿರುವ ಬಗ್ಗೆ ಇತ್ತೀಚೆಗೆ ವಾಲ್ ಸ್ಟ್ರೀಟ್ ಜರ್ನಲ್ ಪತ್ರಿಕೆ ವರದಿ ಮಾಡಿತ್ತು. ವರದಿಯ ಪ್ರಕಾರ ಯಾವ ನಾಡು ಅತೀ ಹೆಚ್ಚು ಧಾರ್ಮಿಕವಾಗಿದೆಯೋ, ಧರ್ಮ ಶ್ರದ್ಧೆ ಹೊಂದಿದೆಯೋ ಆ ನಾಡು ವೈಜ್ಞಾನಿಕ ಪ್ರಗತಿಯಲ್ಲಿ ಹಿಂದುಳಿದಿದೆ!

ವರದಿ ಏನ್ ಹೇಳುತ್ತೆ?

ಒಂದು ನಾಡಿನ ಜನಸಂಖ್ಯೆ, ತಲಾದಾಯ, ಉನ್ನತ ಶಿಕ್ಷಣ ಪಡೆದವರ ಸಂಖ್ಯೆ, ಇರುವ ನೈಸರ್ಗಿಕ ಸಂಪನ್ಮೂಲವೆಲ್ಲವನ್ನು ತನ್ನ ಅಧ್ಯಯನದಲ್ಲಿ ಒಂದು ಅಂಶವಾಗಿ ಪರಿಗಣಿಸುವ ಈ ತಂಡ ಅವುಗಳೊಂದಿಗೆ ಮುಖ್ಯವಾಗಿ ಒಂದು ನಾಡು ಎಷ್ಟರ ಮಟ್ಟಿಗೆ ಧಾರ್ಮಿಕವಾಗಿದೆ ಮತ್ತು ಅಲ್ಲಿನ ವೈಜ್ಞಾನಿಕ ಪ್ರಗತಿ ಯಾವ ಮಟ್ಟದಲ್ಲಿದೆ ಅನ್ನುವುದನ್ನು ಅಧ್ಯಯನ ಮಾಡಿತು. ಅತೀ ಧಾರ್ಮಿಕವಾದ ನಾಡುಗಳೊಂದೇ ಅಲ್ಲದೇ ಮಿತಿಮೀರಿದ ಸಿದ್ಧಾಂತದ ಸೆಳೆತಕ್ಕೆ ಸಿಲುಕುವ ನಾಡುಗಳೂ ವೈಜ್ಞಾನಿಕ ಪ್ರಗತಿಯಲ್ಲಿ ಹಿಂದುಳಿಯುತ್ತವೆ ಅನ್ನುವ ವಾದವನ್ನು ಈ ತಂಡ ಮಂಡಿಸುತ್ತದೆ. 1980ರಿಂದ 2005ರವರೆಗಿನ ಪ್ರಪಂಚದ ಬಹುತೇಕ ದೇಶಗಳಲ್ಲಿ ವೈಜ್ಞಾನಿಕ ಪ್ರಗತಿಯ ಅಳತೆಗೋಲಾದ ಪೇಟೆಂಟ್ಸ್ ಪರ್ ಕ್ಯಾಪಿಟಾ ಎಷ್ಟಿತ್ತು ಅನ್ನುವ ಮಾಹಿತಿಯನ್ನು ಆಧರಿಸಿ ತಮ್ಮ ವಾದ ಮಂಡಿಸುವ ಈ ತಂಡ, ಒಂದು ದೇಶದ ವೈಜ್ಞಾನಿಕ ಪ್ರಗತಿಯನ್ನು ನಿರ್ಧರಿಸುವಲ್ಲಿ ಆ ದೇಶದಲ್ಲಿರುವ ಅಸ್ತಿತ್ವದಲ್ಲಿರುವ ಧಾರ್ಮಿಕ ನಂಬಿಕೆ,ನಿಷ್ಟೆಗಳ ಪಾತ್ರದ ಬಗ್ಗೆ ಬೆಳಕು ಚೆಲ್ಲುತ್ತದೆ. ಈ ವರದಿಯ ಅನ್ವಯ ಅತಿ ಹೆಚ್ಚು ವೈಜ್ಞಾನಿಕ ಸಂಶೋಧನೆಯಲ್ಲಿ ಮುಂದಿರುವ ನಾಡುಗಳು ಜಪಾನ್, ದಕ್ಷಿಣ ಕೋರಿಯಾ, ಸ್ವೀಡನ್, ಗ್ರೇಟ್ ಬ್ರಿಟನ್, ಜರ್ಮನಿ, ಫಿನ್ ಲ್ಯಾಂಡ್ ಮತ್ತು ಅಮೇರಿಕ.

ಏಳಿಗೆಯಲ್ಲಿ ತಾಯ್ನುಡಿ ಶಿಕ್ಷಣದ ಪಾತ್ರ

ವಿಜ್ಞಾನಕ್ಕೂ ನಂಬಿಕೆಗೂ ನಡುವಿರುವ ತಿಕ್ಕಾಟ ಇಂದಿನದಲ್ಲ. ಅದರ ಚರ್ಚೆಗೆ ಹೋಗದೇ ಈ ವರದಿಯಲ್ಲಿ ಹೆಸರಿಸಲಾಗಿರುವ ಮುಂದುವರೆದ ನಾಡುಗಳೆಲ್ಲವನ್ನು ಒಮ್ಮೆ ಸೂಕ್ಷ್ಮವಾಗಿ ಗಮನಿಸಿದರೆ ಸ್ಪಷ್ಟವಾಗುವ ಒಂದಂಶವೆಂದರೆ ಈ ಎಲ್ಲ ನಾಡುಗಳಲ್ಲಿ ಅಲ್ಲಿನ ಸ್ಥಳೀಯ ನುಡಿಯಲ್ಲೇ ಪ್ರಾಥಮಿಕ ಹಂತವೊಂದೇ ಅಲ್ಲದೇ ಎಲ್ಲ ಹಂತದ ಕಲಿಕೆಯ ಏರ್ಪಾಡುಗಳಿವೆ. ಜಪಾನೀಯರಾಗಲಿ, ಜರ್ಮನ್ನರಾಗಲಿ ಉನ್ನತ ಶಿಕ್ಷಣಕ್ಕೆ ಇಂಗ್ಲಿಷಿನಂತಹ ಹೊರನುಡಿಯನ್ನೇನು ನಂಬಿಕೊಂಡಿಲ್ಲ. ಸುಜುಕಿ, ಸೋನಿಯಂತಹ ದೈತ್ಯ ಕಂಪನಿಗಳನ್ನು ಹುಟ್ಟು ಹಾಕಿದ ಜಪಾನ್ ಆಗಲಿ, ಬೆಂಝ್, ಆಡಿ ತರದ ವಿಶ್ವಮಾನ್ಯ ಕಾರ್ ಕಂಪನಿಗಳನ್ನು ಕಟ್ಟಿದ ಜರ್ಮನಿಗಾಗಲಿ ತಮ್ಮ ನುಡಿಯಲ್ಲಿ ಉನ್ನತ ಕಲಿಕೆ ಸಾಧ್ಯವಿಲ್ಲ ಅಂತನ್ನಿಸಿಲ್ಲ. ತಮ್ಮ ನುಡಿಯಲ್ಲೇ ಎಲ್ಲವನ್ನು ಕಟ್ಟಿಕೊಳ್ಳುವ ಛಲ ಅವರಲ್ಲಿ ಇದ್ದಿದ್ದರಿಂದ ಇಂಗ್ಲಿಷಿಗೆ ಸೆಡ್ಡು ಹೊಡೆದು ನಿಲ್ಲುವಂತಹ ಶಕ್ತಿ ಅವರಿಗೆ ದಕ್ಕಿದೆ. ಅವರ ಪಾಲಿಗೆ ಇಂಗ್ಲಿಷ್ ಏನಿದ್ದರೂ ತಮ್ಮ ಉತ್ಪನ್ನಗಳನ್ನು ಜಗತ್ತಿಗೆ ಮಾರಲು ಬಳಸುವ ಒಂದು ಮಾರ್ಕೆಟಿಂಗ್ ಭಾಷೆಯಷ್ಟೇ. ಈಗ ಈ ವರದಿಯಲ್ಲಿ ಅತ್ಯಂತ ಕೆಳಗಿರುವ ದೇಶಗಳಾವುವು ಎಂದು ನೋಡಿದರೆ ಕಾಣುವಂತದ್ದು ಪಾಕಿಸ್ತಾನ, ಬಾಂಗ್ಲಾದೇಶ, ಇಂಡೋನೇಶಿಯಾ, ಅಲ್ಜಿರಿಯಾ, ಫಿಲಿಫೈನ್ಸ್ ಮತ್ತು ಭಾರತದಂತಹ ದೇಶಗಳು. ಜನಸಂಖ್ಯೆಯ ದೃಷ್ಟಿಯಲ್ಲಿ ಸಾಕಷ್ಟು ಮುಂದಿರುವ ಈ ದೇಶಗಳು ವೈಜ್ಞಾನಿಕ ಪ್ರಗತಿಯಲ್ಲಿ ಹಿಂದುಳಿಯಲು ಮುಖ್ಯ ಕಾರಣವೆಂದರೆ ಈ ಎಲ್ಲ ದೇಶಗಳು ತಮ್ಮ ಜನರ ನುಡಿಯನ್ನು ಕೈ ಬಿಟ್ಟು, ಹೊರಗಿನ ಇನ್ನೊಂದು ನುಡಿಯಲ್ಲಿ ಉನ್ನತ ಶಿಕ್ಷಣ ಪಡೆಯಲು ಪ್ರಯತ್ನಿಸುತ್ತಿರುವುದು.ಇಂಡೋನೇಶಿಯಾದಂತಹ ದೇಶದಲ್ಲಿ ಬಹಾಸಾ ಇಂಡೋನೇಶಿಯಾ ಅನ್ನುವ ಕೃತಕ ಭಾಷೆಯಲ್ಲಿ ಉನ್ನತ ಶಿಕ್ಷಣ ಸೌಲಭ್ಯ ಕಲ್ಪಿಸಿದ್ದರೂ ಅದು ಅಲ್ಲಿನ ಜನರ ಭಾಷೆಯಾಗಿಲ್ಲದ ಕಾರಣದಿಂದ ಈ ಪ್ರಯತ್ನ ಅಲ್ಲೂ ಸೋತಿದೆ. ತಾಯ್ನುಡಿಯಲ್ಲಿ ಉನ್ನತ ಶಿಕ್ಷಣ ರೂಪಿಸಿದ ತಕ್ಷಣ ಆ ನಾಡು ಮುಂದುವರೆಯುತ್ತದೆ ಅನ್ನುವ ನೇರ ಸಂಬಂಧ ಕಲ್ಪಿಸಲಾಗದು. ಆದರೆ, ಸರಿಯಾದ ರಾಜಕೀಯ ಮತ್ತು ಆರ್ಥಿಕ ಏರ್ಪಾಡುಗಳ ಜೊತೆಯಲ್ಲಿ ಇಂದಿನ ಜ್ಞಾನಾಧಾರಿತ ಜಗತ್ತಿನಲ್ಲಿ ಮುಂದುವರೆಯಲು ಬೇಕಿರುವ ಅತ್ಯಂತ ಮುಖ್ಯವಾದ ವಿಷಯವೇ ಕಲಿಕೆ. ಆ ಕಲಿಕೆ ಹೆಚ್ಚು ಪರಿಣಾಮಕಾರಿಯಾಗಿ ಇಡೀ ಸಮಾಜವನ್ನು ತಲುಪಬೇಕು ಮತ್ತು ಹೆಚ್ಚೆಚ್ಚು ಸಂಖ್ಯೆಯಲ್ಲಿ ಅಲ್ಲಿನ ಜನರು ಇಂಜಿನಿಯರಿಂಗ್, ವಿಜ್ಞಾನ, ವೈದ್ಯಕೀಯ, ಸಂಶೋಧನೆಯಂತಹ ಉನ್ನತ ಶಿಕ್ಷಣ ಪಡೆಯುವಂತಾಗಬೇಕೆಂದರೆ ಅದು ಜನರ ನುಡಿಯಲ್ಲಿದ್ದಾಗ ಮಾತ್ರವೇ ಸಾಧ್ಯ. ಜಗತ್ತಿನ ಜನಸಂಖ್ಯೆಯ ಆರರಲ್ಲಿ ಒಂದು ಭಾಗ ಭಾರತದಲ್ಲಿದ್ದರೂ, ಐಟಿ ಉದ್ಯಮದಲ್ಲಿ ಒಂದಿಷ್ಟು ಬ್ಯಾಕ್ ಆಫೀಸ್ ಕೆಲಸದಲ್ಲಿ ಹೆಸರು ಪಡೆದಿದ್ದರೂ ನಿಜವಾದ ವೈಜ್ಞಾನಿಕ ಸಂಶೋಧನೆಯ ಬಹುತೇಕ ಅಳತೆಗಳಲ್ಲಿ ಭಾರತ ಇಂದಿಗೂ ಒಂದು ಹಿಂದುಳಿದ ದೇಶವೇ ಆಗಿದೆ.

ಕುಂಟು ನೆಪ ಸಾಕು

ಭಾರತ ಒಂದು ಬಹು ಭಾಷಾ ದೇಶ, ಒಂದೇ ಭಾಷೆಯ ಜರ್ಮನಿ, ಜಪಾನಿನಲ್ಲಿ ಸಾಧ್ಯವಾಗಿದ್ದು ಇಲ್ಲಿ ಆಗದು ಅನ್ನುವ ವಾದ ಸಾಕು. ಭಾರತ ಒಂದು ಒಕ್ಕೂಟ ವ್ಯವಸ್ಥೆ. ಇಲ್ಲಿ ಆಯಾ ರಾಜ್ಯದಲ್ಲಿ ಎಲ್ಲ ಹಂತದ ಕಲಿಕೆಯನ್ನು ಅಲ್ಲಿನ ನುಡಿಗಳಲ್ಲಿ ಕಟ್ಟಲು ಸಾಧ್ಯವಾಗುವಂತೆ ಕಲಿಕೆಯನ್ನು ಸಂವಿಧಾನದ ರಾಜ್ಯ ಪಟ್ಟಿಗೆ ವರ್ಗಾಯಿಸುವುದು, ರಾಜ್ಯಗಳಲ್ಲಿ ಇದಕ್ಕೆ ಸಂಬಂಧಿಸಿದಂತೆ ಒಂದು ಸಮಯಾಧಾರಿತ ಯೋಜನೆ ಹಾಕಿಕೊಳ್ಳುವುದು, ಉನ್ನತ ಶಿಕ್ಷಣ ಸಾಧ್ಯವಾಗಿಸಲು ಹೊಸ ಪದ ಸಂಪತ್ತು ಹುಟ್ಟು ಹಾಕಲು ಭಾಷಾ ವಿಜ್ಞಾನದಲ್ಲಿ ಆಗಬೇಕಾದ ಕೆಲಸಗಳನ್ನು ತುರ್ತಿನ ಮೇಲೆ ಕೈಗೆತ್ತಿಕೊಳ್ಳುವುದು, ಈಗಿರುವ ಇಂಗ್ಲಿಷಿನ ವ್ಯವಸ್ಥೆಯನ್ನು ಕೈ ಬಿಡದೇ ಹಂತ ಹಂತವಾಗಿ ಭಾರತೀಯ ಭಾಷೆಗಳನ್ನು ಕಟ್ಟುತ್ತ ಹೋಗುವ ಕೆಲಸ ಮಾಡುವುದು, ಹೀಗೆ ದುಡಿಯುತ್ತ ಹೋದರೆ ಇನ್ನೊಂದು ಇಪ್ಪತ್ತೈದು ವರ್ಷದಲ್ಲಿ ಇದು ಸಾಧ್ಯವಾಗದ ಕನಸೇನಲ್ಲ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಾಗಲೇ ಸ್ವಾತಂತ್ರ್ಯ ಪಡೆದ ದಕ್ಷಿಣ ಕೋರಿಯಾದಂತಹ ನಾಡಿನಲ್ಲಿ ಇದು ಸಾಧ್ಯವಾಗಿರಬೇಕಾದರೆ ನಮ್ಮಲ್ಲಿ ಯಾಕೆ ಸಾಧ್ಯವಿಲ್ಲ? ಸಾಧ್ಯ-ಅಸಾಧ್ಯಗಳು ನಮ್ಮ ಮನಸ್ಸಿನಲ್ಲಿವೆ. ಇಂದು ಯುರೋಪಿನ ಚಿಕ್ಕ ಚಿಕ್ಕ ನಾಡುಗಳು ತಮ್ಮ ತಮ್ಮ ಭಾಷೆಗಳಲ್ಲಿ ಎಲ್ಲದನ್ನು ಸಾಧ್ಯವಾಗಿಸಿಕೊಳ್ಳುತ್ತಲೇ ನೆರೆಹೊರೆಯವರೊಡನೆ ಹೊಂದಿಕೊಂಡು ಬಾಳುತ್ತಿಲ್ಲವೇ? ಈ ಪಾಟಿ ಯುವಕರಿರುವ ಭಾರತದಲ್ಲಿ ಅವರ ಶಕ್ತಿಯೆಲ್ಲವೂ ಪುಡಿಗಾಸಿಗೆ ಬೇರೆ ದೇಶದ ಬ್ಯಾಕ್ ಆಫೀಸಿನಂತೆ ಕೆಲಸ ಮಾಡುವುದರಲ್ಲೋ, ಚೀನಾದಂತೆ ಫ್ಯಾಕ್ಟರಿಗಳಲ್ಲಿ ಅಮಾನವೀಯ ಸ್ಥಿತಿಯಲ್ಲಿ ದುಡಿಯುವುದರಲ್ಲೋ ಕಳೆದು ಹೋಗಬೇಕೇ? ಅದನ್ನು ಮೀರಿ ಜ್ಞಾನದ ಬಲದಿಂದ ವೈಜ್ಞಾನಿಕವಾದ ಪ್ರಗತಿ ಸಾಧಿಸುವ ದೇಶವಾಗಿ ಭಾರತ ಬದಲಾಗಬೇಕೆಂದರೆ ಶಿಕ್ಷಣದಲ್ಲಿ ಭಾರತದ ನುಡಿಗಳನ್ನು ಈಗ ನಡೆಸಿಕೊಳ್ಳುತ್ತಿರುವ ಹೀನಾಯ ಸ್ಥಿತಿಯಿಂದ ಮೇಲೆತ್ತಲೇಬೇಕು. ಇಲ್ಲದಿದ್ದಲ್ಲಿ ಇಂಗ್ಲಿಷಿನ ತಡೆಗೋಡೆ ದಾಟಲಾಗುವ ಕೆಲವೇ ಕೆಲವು ಭಾರತೀಯರನ್ನು ಹೊರತು ಪಡಿಸಿ ಉಳಿದವರೆಲ್ಲ ತಮ್ಮ ಕತ್ತಲ ಕೋಣೆಯ ಬದುಕಿನಿಂದ ಆಚೆ ಬರಲಾರರು. ಇಂಗ್ಲಿಷ್ ಲಾಬಿಗೆ ಎಲ್ಲ ವ್ಯವಸ್ಥೆಗಳು ಶರಣಾಗುತ್ತಿರುವಾಗ ಇದು ಅರಣ್ಯ ರೋದನೆ ಅನ್ನಿಸಿದರೂ ಸತ್ಯಕ್ಕೆ ಇಂದಲ್ಲ ನಾಳೆಯಾದರೂ ಜಯ ಸಿಗುತ್ತದೆ. ಅಲ್ಲಿಯವರೆಗೂ ಈ ಬಗ್ಗೆ ದನಿ ಎತ್ತುತ್ತಲೇ ಇರಬೇಕು.

Posted in ಕನ್ನಡ, ಕಲಿಕೆ, ಜಾಗತೀಕರಣ | ನಿಮ್ಮ ಟಿಪ್ಪಣಿ ಬರೆಯಿರಿ

ನುಡಿಯರಿಮೆಯ ವಲಯಕ್ಕೆ ಡಾ. ಡಿ. ಎನ್. ಶಂಕರ ಬಟ್ಟರ ಕೊಡುಗೆ – ಒಂದು ಮಾತುಕತೆ

totalkannada

ಕನ್ನಡದ ನಿಜಸ್ವರೂಪವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಡಾ. ಡಿ. ಎನ್. ಶಂಕರ ಬಟ್ಟರು ಹಲವಾರು ಸಂಶೋಧನೆಗಳನ್ನು ನಡೆಸುತ್ತಾ ಬಂದಿರುವುದು ತಿಳಿದಿರುವ ವಿಚಾರ. ಅವರು ಬರೆದಿರುವ ‘ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ’, ‘ನಿಜಕ್ಕೂ ಹಳೆಗನ್ನಡ ವ್ಯಾಕರಣ ಎಂತಹದು?’, ‘ಕನ್ನಡ ಪದಗಳ ಒಳರಚನೆ’, ‘ಕನ್ನಡ ಬರಹದ ಸೊಲ್ಲರಿಮೆ’ (1-4) ಮುಂತಾದ ಹೊತ್ತಗೆಗಳು ಕನ್ನಡದ ನಿಜಸ್ವರೂಪದ ಬಗ್ಗೆ ಸಾಕಷ್ಟು ಚರ್ಚೆಗಳಿಗೆ ಎಡೆ ಮಾಡಿಕೊಟ್ಟಿವೆ. ‘ಕನ್ನಡದಲ್ಲೇ ಹೊಸಪದಗಳನ್ನು ಕಟ್ಟುವ ಬಗೆ’ ಎಂಬಂತಹ ಹೊತ್ತಗೆಗಳ ಮೂಲಕ ಕನ್ನಡದಲ್ಲೇ ಹೊಸ ಪದಗಳನ್ನು ಕಟ್ಟುವ ಬಗೆಯನ್ನು ತೋರಿಸಿಕೊಟ್ಟಿದ್ದಾರೆ. ಅವರು ಈ ಹಿಂದೆ ಬರೆದ  ‘ಇಂಗ್ಲಿಶ್ ಪದಗಳಿಗೆ ಕನ್ನಡದ್ದೇ ಪದಗಳು’ ಎಂಬ ಪದನೆರಕೆಯಲ್ಲಿ ಹಲವು ಸಾವಿರ ಇಂಗ್ಲಿಶ್ ಪದಗಳಿಗೆ ಕನ್ನಡದ್ದೇ ಪದಗಳನ್ನು ನೀಡಿದ್ದಾರೆ. ಮಹಾಪ್ರಾಣಗಳನ್ನು ಸೇರಿದಂತೆ ಕನ್ನಡ ಬರಹಕ್ಕೆ ಕೆಲವು ಅಕ್ಷರಗಳು ಅನವಶ್ಯಕ ಎಂಬುದನ್ನು ವೈಜ್ಞಾನಿಕವಾಗಿ ತೋರಿಸಿಕೊಟ್ಟು, ಕನ್ನಡ ಲಿಪಿ ಸುಧಾರಣೆಯನ್ನು ಪ್ರತಿಪಾದಿಸಿದ್ದಾರೆ.

ಕನ್ನಡ ನುಡಿಯರಿಮೆಯ (Linguistics) ನೆಲೆಯಲ್ಲಿ ಹೊಮ್ಮಿರುವ ಶಂಕರ ಬಟ್ಟರ ವಿಚಾರಗಳು ಕನ್ನಡ ಸಮಾಜದಲ್ಲಿ ಹಲವು ಚರ್ಚೆಗಳನ್ನು ಹುಟ್ಟು ಹಾಕಿವೆ. ಬಟ್ಟರ ವಿಚಾರಗಳನ್ನು ಹಲವರು ಮೆಚ್ಚಿಕೊಂಡರೆ, ಇನ್ನು ಕೆಲವರು ವೈಜ್ಞಾನಿಕ ನೆಲೆಗಟ್ಟಿನಲ್ಲಿ ನಿಂತು ಪ್ರಶ್ನೆ ಮಾಡುವುದೂ ಉಂಟು. ಇನ್ನು ಕೆಲವರು ವೈಜ್ಞಾನಿಕ ನೆಲೆಗಟ್ಟಿನಲ್ಲಿ ನಿಲ್ಲದೆಯೇ ಬಟ್ಟರ ವಿಚಾರಗಳನ್ನು ಪ್ರಶ್ನಿಸಿದ್ದು, ಇಂತಹ ಪ್ರಶ್ನೆಗಳು ಬಟ್ಟರ ಮೇಲಿನ ಆಪಾದನೆಗಳಂತೆ ಕಂಡು ಬಂದಿವೆ.

ಆದರೆ ಕನ್ನಡ ನುಡಿಯರಿಮೆಗಲ್ಲದೇ, ಇಡೀ ನುಡಿಯರಿಮೆಯ ವಲಯಕ್ಕೆ ಶಂಕರ ಬಟ್ಟರ ಕೊಡುಗೆಗಳು ಅಪಾರ. ಸಂಸ್ಕೃತದಲ್ಲಿ ಎಂ. ಎ. ಮಾಡಿ ನುಡಿಯರಿಮೆಯಲ್ಲಿ ಪಿ. ಎಚ್. ಡಿ. ಪಡೆದಿರುವ ಬಟ್ಟರು ನುಡಿಯರಿಗರಾಗಿ ಭಾರತ ಮತ್ತು ವಿಶ್ವದ ಇತರೆ ಪ್ರತಿಷ್ಟಿತ ವಿಶ್ವವಿದ್ಯಾಲಯಗಳಲ್ಲಿ ಕೆಲಸ ಮಾಡಿದ್ದಾರೆ.

ನುಡಿಯರಿಮೆಯ ವಿಷಯದಲ್ಲಿ ಅವರು ಬರೆದಿರುವ ಹಲವು ಪುಸ್ತಕಗಳು ಮತ್ತು ಅಧ್ಯಯನದ ಪೇಪರುಗಳು ವಿಶ್ವದ ಹಲವು ನುಡಿಯರಿಗರ ಗಮನ ಸೆಳೆದಿವೆ. 90ರ ದಶಕದವರೆಗೂ ಕನ್ನಡದಲ್ಲಿ ಅವರು ಬರೆದ ‘ಕನ್ನಡ ಭಾಷೆಯ ಕಲ್ಪಿತ ಚರಿತ್ರೆ’ (1970) ಮತ್ತು ‘ಭಾಷೆಯ ಬಗೆಗೆ ನೀವೇನು ಬಲ್ಲಿರಿ’ (1970) ಎಂಬಂತಹ ಕೆಲವು ಪುಸ್ತಕಗಳನ್ನು ಬಿಟ್ಟರೆ, ಬಟ್ಟರು ಹೆಚ್ಚಾಗಿ ಬರೆದುದು ಇಂಗ್ಲೀಶಿನಲ್ಲಿ. ಮತ್ತು ಅವರು ಬರೆದ ವಿಷಯಗಳು ಕನ್ನಡ ನುಡಿಗಷ್ಟೇ ಸೀಮಿತವಾಗಿರದೆ, ಹಲವು ಇತರೆ ನುಡಿಗಳು ಮತ್ತು ಸಾಮಾನ್ಯ ನುಡಿಯರಿಮೆಯ ಹಲವು ವಿಚಾರಗಳನ್ನೊಳಗೊಂಡಿವೆ. ಅವರು ಬರೆದಿರುವ ಪುಸ್ತಕಗಳು ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ವಿಶ್ವವಿದ್ಯಾಲಯಗಳಲ್ಲಿ ಪಠ್ಯಪುಸ್ತಕಗಳಾಗಿವೆ.

ಒಂದು ನುಡಿಯನ್ನು, ಮತ್ತು ಅದರ ಮೂಲಕ ಆ ನುಡಿಯ ಸಮಾಜವನ್ನು ಸಬಲಗೊಳಿಸುವುದರಲ್ಲಿ ನುಡಿಯರಿಮೆಯ ಹಲವು ವಿಚಾರಗಳನ್ನು ಬಳಸಿಕೊಳ್ಳಬಹುದು. ಹೀಗೆ ನುಡಿಯರಿಮೆಯ ಮೂಲಕ ತಮ್ಮ ನುಡಿಗಳನ್ನು ಗಟ್ಟಿಗೊಳಿಸಿಕೊಂಡ ಹಲವು ನುಡಿಸಮುದಾಯಗಳ ಉದಾಹರಣೆಗಳು ಈ ಆಧುನಿಕ ಕಾಲದಲ್ಲಿ ನಮ್ಮ ಮುಂದಿವೆ. ಈ ನೆಲೆಯಲ್ಲಿ ಕನ್ನಡ ಸಮಾಜವು ಬಟ್ಟರ ಕನ್ನಡ ನುಡಿಯರಿಮೆಯ ವಿಚಾರಗಳ ಜೊತೆಗೆ, ನುಡಿಯರಿಮೆ ವಲಯಕ್ಕೆ ಅವರು ನೀಡಿದ ಕೊಡುಗೆಗಳನ್ನೂ ತಿಳಿದು, ಅದರ ಬಗ್ಗೆ ಚರ್ಚಿಸುವ ಅಗತ್ಯವಿದೆ.  ಹಾಗಾಗಿ, ನುಡಿಯರಿಮೆಯ ವಲಯಕ್ಕೆ ಶಂಕರ ಬಟ್ಟರು ನೀಡಿರುವ ಕೊಡುಗೆಗಳತ್ತ ಒಂದು ನೋಟ ಬೀರುವ ಸಲುವಾಗಿ, ಬನವಾಸಿ ಬಳಗ ಪ್ರಕಾಶನವು ಟೋಟಲ್ ಕನ್ನಡ ಮಳಿಗೆಯಲ್ಲಿ ಹಮ್ಮಿಕೊಂಡಿರುವ ‘ತಿಂಗಳ ಅಂಗಳ’ ಕಾರ್ಯಕ್ರಮದಲ್ಲಿ ಈ ವಿಚಾರವಾಗಿ ಮಾತಾಡಲಿದ್ದೇನೆ. ಬರುವ ಭಾನುವಾರ ದಿನಾಂಕ 17-05-2015ರ ಸಂಜೆ 7ರಿಂದ 8ರವರೆಗೆ ನಡೆಯುವ ಈ ಕಾರ್ಯಕ್ರಮಕ್ಕೆ ಆಸಕ್ತರೆಲ್ಲರೂ ಬಂದು ಪಾಲ್ಗೊಳ್ಳಿ.

Posted in ಕನ್ನಡ | ನಿಮ್ಮ ಟಿಪ್ಪಣಿ ಬರೆಯಿರಿ

21ನೇ ಶತಮಾನದ ಕನ್ನಡ ಚಳುವಳಿ ಯಾವುದು ಗೊತ್ತೇ?

ಇತ್ತೀಚೆಗೆ ನಡೆದ ಬೆಂಗಳೂರು ನಗರ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪಿನಲ್ಲಿ ಹೊರ ಬಂದಿರುವ ಸ್ಮರಣ ಸಂಚಿಕೆಯೊಂದಕ್ಕೆ ಕನ್ನಡದಲ್ಲಿ ಗ್ರಾಹಕ ಚಳುವಳಿ ಯಾಕೆ ಮುಖ್ಯ ಮತ್ತು ಮುಂದಿನ ದಿನಗಳಲ್ಲಿ ಅದು ಹೇಗೆ ಕನ್ನಡಕ್ಕೆ ಬಲ ತುಂಬುವಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸಲಿದೆ ಅನ್ನುವ ಬಗ್ಗೆ ಮುನ್ನೋಟ ಬ್ಲಾಗಿನ ಸಂಪಾದಕರಾದ ವಸಂತ ಶೆಟ್ಟಿ ಅವರೊಂದು ವಿಶೇಷ ಅಂಕಣ ಬರೆದಿದ್ದರು. ಅದನ್ನು ಹೆಚ್ಚು ಓದುಗರಿಗೆ ತಲುಪಿಸುವ ನಿಟ್ಟಿನಲ್ಲಿ ಮುನ್ನೋಟ ಬ್ಲಾಗಿನಲ್ಲಿ ಹಂಚಿಕೊಳ್ಳಲಾಗಿದೆ.


ಭಾರತದಲ್ಲಿ ಭಾಷಾವಾರು ಪ್ರಾಂತ್ಯಗಳ ರಚನೆಯ ಹೊತ್ತಿನಲ್ಲಿ ಇದ್ದ ಎರಡು ಆಶಯಗಳೇನೆಂದರೆ ಆಯಾ ನುಡಿಯಲ್ಲೇ ಅಲ್ಲಿನ ಜನರ ಕಲಿಕೆಯಾಗಬೇಕು ಮತ್ತು ಆಯಾ ನುಡಿಯಲ್ಲೇ ಸರ್ಕಾರದ ಆಡಳಿತ ಜನರಿಗೆ ತಲುಪುವಂತಾಗಬೇಕು ಅನ್ನುವುದಾಗಿತ್ತು. ಆಗಿನ ಸಂದರ್ಭದಲ್ಲಿ ಮಾರುಕಟ್ಟೆ ಅನ್ನುವ ಕಲ್ಪನೆ ಇಂದಿನಷ್ಟು ವ್ಯಾಪಕವಾದುದಾಗಿರಲಿಲ್ಲ. ಯಾಕೆಂದರೆ ಸರ್ಕಾರವೇ ಅರ್ಥ ವ್ಯವಸ್ಥೆಯ ಎಲ್ಲ ಹಂತವನ್ನು ನಿಯಂತ್ರಿಸಬೇಕು ಮತ್ತು ಆ ಮೂಲಕ ಒಂದು ನಾಡಿನ ಜನರ ಬದುಕಿನ ಎಲ್ಲ ಅಗತ್ಯಗಳನ್ನು ಸರ್ಕಾರವೇ ಪೂರೈಸಬೇಕು ಅನ್ನುವ ಚಿಂತನೆ ಅಂದಿನ ಜನರಲ್ಲೂ, ಜನನಾಯಕರಲ್ಲೂ ಒಂದೇ ಪ್ರಮಾಣದಲ್ಲಿತ್ತು. ಅರ್ಥ ವ್ಯವಸ್ಥೆಯ ಎಲ್ಲ ಮಜಲುಗಳನ್ನು ಸರ್ಕಾರವೇ ನಿಯಂತ್ರಿಸುವ ನಿಲುವಿನಿಂದಾಗಿ ಖಾಸಗಿ ಬಂಡವಾಳವಾಗಲಿ, ಖಾಸಗಿ ಸಂಸ್ಥೆಗಳಾಗಲಿ ಜನರ ಬದುಕನ್ನು ತೀವ್ರವಾಗಿ ತಲುಪುವ, ಪ್ರಭಾವಿಸುವ ವ್ಯವಸ್ಥೆಗಳಿರಲಿಲ್ಲ. ಇಂತಹದೊಂದು ವ್ಯವಸ್ಥೆಯಲ್ಲಿ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ವ್ಯಾಪಕ ವಲಸೆಯಾಗಲಿ, ಮಾರುಕಟ್ಟೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಖಾಸಗಿ ಸಂಸ್ಥೆಗಳ ಇರುವಿಕೆಯಾಗಲಿ ಇರಲಿಲ್ಲ. ಆಯಾ ರಾಜ್ಯದಲ್ಲಿ ಮಾರುಕಟ್ಟೆಯಲ್ಲಿ ಅಂದಿಗೆ ಲಭ್ಯವಿದ್ದ ಎಲ್ಲ ತರದ ಗ್ರಾಹಕ ಸೇವೆಗಳು ಹೆಚ್ಚು ಕಡಿಮೆ ಅಲ್ಲಿನ ನುಡಿಯಲ್ಲೇ ದೊರಕುವ ದಿನಗಳಿದ್ದವು. ಕರ್ನಾಟಕದ ಉದಾಹರಣೆಯನ್ನೇ ತೆಗೆದುಕೊಂಡರೆ ಜಾಗತೀಕರಣಕ್ಕೆ ಭಾರತ ತೆರೆದುಕೊಳ್ಳುವವರೆಗೂ ನಮ್ಮ ಬಹುತೇಕ ನಗರ-ಪಟ್ಟಣಗಳಲ್ಲಿನ ಮಾರುಕಟ್ಟೆಯಲ್ಲಿ ಕನ್ನಡದಲ್ಲಿ ಎಲ್ಲ ತರದ ಗ್ರಾಹಕ ಸೇವೆಯನ್ನು ಪಡೆಯುವುದು ಅಂತಹ ದೊಡ್ಡ ಸವಾಲಾಗಿರಲಿಲ್ಲ. ಆದರೆ ಇದು ಬಹಳ ದೊಡ್ಡ ರೀತಿಯಲ್ಲಿ ಬದಲಾದದ್ದು ಭಾರತ ಜಾಗತೀಕರಣಕ್ಕೆ ತೆರೆದುಕೊಂಡ ನಂತರ.

ಜಾಗತೀಕರಣಕ್ಕೆ ಭಾರತ ತೆರೆದುಕೊಳ್ಳುತ್ತಿದ್ದಂತೆಯೇ ಮೂರು ಮುಖ್ಯ ಬದಲಾವಣೆಗಳು ನಮ್ಮ ಸಮಾಜದಲ್ಲಿ ಆಗಿವೆ. ಮೊದಲನೆಯದ್ದು, ಅರ್ಥ ವ್ಯವಸ್ಥೆಯಲ್ಲಿ ಸರ್ಕಾರದ ಪಾತ್ರ ಕುಸಿಯುತ್ತ, ಖಾಸಗಿ ಸಂಸ್ಥೆ ಮತ್ತು ಬಂಡವಾಳದ ಪಾತ್ರ ಬೆಳೆಯುತ್ತ ಬಂದಿದೆ. ಎರಡನೆಯದ್ದು, ತಂತ್ರಜ್ಞಾನದಲ್ಲಾಗುತ್ತಿರುವ ಕ್ಷಿಪ್ರ ಬದಲಾವಣೆಗಳು ಭಾಷೆಯ ಬಳಕೆಯ ವ್ಯಾಪ್ತಿ, ಬಗೆಯನ್ನು ಕಂಡು ಕೇಳರಿಯದ ರೀತಿಯಲ್ಲಿ ಬದಲಾಯಿಸಿದೆ. ಮೂರನೆಯದ್ದು, ಉತ್ತಮ ಆರ್ಥಿಕ ನಿರ್ವಹಣೆ ತೋರುತ್ತಿದ್ದ, ಪ್ರಗತಿಶೀಲ ರಾಜ್ಯಗಳಾದ ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡಿನಂತಹ ರಾಜ್ಯಗಳ ನಗರ ಪ್ರದೇಶಗಳಿಗೆ ದೇಶದ ಇತರೆ ಭಾಗಗಳಿಂದ ಬಹಳ ದೊಡ್ಡ ಪ್ರಮಾಣದಲ್ಲಿ ವಲಸೆಯಾಗುವ ಮೂಲಕ ಅಲ್ಲಿನ ಸ್ಥಳೀಯ ಜನಲಕ್ಷಣ ಅಂದರೆ ಡೆಮಾಗ್ರಫಿಯ ಚಹರೆಯೇ ಬದಲಾಗುತ್ತಿದೆ. ಈ ಮೂರೂ ಬದಲಾವಣೆಗಳು ಕಳೆದ ಎರಡು ಸಾವಿರ ವರ್ಷಗಳಲ್ಲೇ ಎದುರಿಸದಿರುವಂತಹ ಸವಾಲುಗಳನ್ನು ಕನ್ನಡದ ಮುಂದೆ ತಂದು ನಿಲ್ಲಿಸಿದೆ ಮತ್ತು ಅವುಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ನಾವು ಎಡವಿದರೆ ಅಳಿವಿನಂಚಿನಲ್ಲಿರುವ ನುಡಿಗಳಲ್ಲಿ ಒಂದಾಗುವ ಅಪಾಯ ಇಂದಲ್ಲದಿದ್ದರೂ ಇನ್ನೊಂದು ಐವತ್ತು ವರ್ಷಗಳಲ್ಲಿ ಕಾಣುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು.

ಈ ಮೂರು ಬದಲಾವಣೆಗಳ ಪೀಠಿಕೆ ಯಾಕೆ ಮುಖ್ಯವೆಂದರೆ ಈ ಮೂರು ಬದಲಾವಣೆಗಳನ್ನು ಅರಗಿಸಿಕೊಂಡು ಮಾರುಕಟ್ಟೆಯಲ್ಲಿ ಮತ್ತು ಸಮಾಜದಲ್ಲಿ ಕನ್ನಡ ಸಬಲವಾಗಿ ತಲೆ ಎತ್ತಿ ನಿಲ್ಲುವಂತೆ ಮಾಡುವಲ್ಲಿ “ಕನ್ನಡ ಕೇಂದ್ರಿತ ಗ್ರಾಹಕ ಚಳುವಳಿ”ಯ ಪಾತ್ರ ಅತ್ಯಂತ ಮುಖ್ಯವಾದುದಾಗಿದೆ. ಈ ಮೂರು ಬದಲಾವಣೆಗಳನ್ನು ಕೊಂಚ ವಿವರವಾಗಿ ನೋಡಬೇಕು.

ಮಾರುಕಟ್ಟೆಯಲ್ಲಿ ಖಾಸಗಿ ಬಂಡವಾಳದ ಪ್ರಭಾವ

ಆರ್ಥಿಕ ಸುಧಾರಣೆಗಳಿಗೆ ಭಾರತ ತೆರೆದುಕೊಂಡ ನಂತರ ಮಾರುಕಟ್ಟೆಯಲ್ಲಿ ಸರ್ಕಾರದ ಹಿಡಿತ ಕಡಿಮೆಯಾಗುತ್ತ ಬಂದಿದೆ. ಒಂದು ಕಾಲದಲ್ಲಿ ಮನೆಯೊಂದಕ್ಕೆ ಟೆಲಿಫೋನ್ ಸಂಪರ್ಕ ಪಡೆಯಬೇಕು ಎಂದರೆ ಸರ್ಕಾರಿ ಸ್ವಾಮ್ಯದ ಕಂಪನಿಯೊಂದರಿಂದ ಮಾತ್ರವೇ ಇದು ಲಭ್ಯವಿತ್ತು. ಜೊತೆಯಲ್ಲೇ ತಿಂಗಳುಗಟ್ಟಲೆ ಕಾದು ಒಂದು ಸಂಪರ್ಕ ಪಡೆಯಬೇಕಾದ ಪರಿಸ್ಥಿತಿ ಇತ್ತು. ಒಂದೊಮ್ಮೆ ಟೆಲಿಫೋನ್ ಕೆಟ್ಟು ನಿಂತರೆ ಅದನ್ನು ಸರಿ ಮಾಡಿಸಿಕೊಳ್ಳುವುದು ಒಂದು ಯುದ್ಧ ಮಾಡಿದಷ್ಟೇ ಶ್ರಮದ ಅನುಭವವಾಗಿತ್ತು. ನಿಮ್ಮ ಬಿಲ್ ಸರಿಯಾದ ಹೊತ್ತಿನಲ್ಲಿ ಪಾವತಿಸಿದ್ದರೂ ಕೆಟ್ಟು ನಿಂತ ಫೋನ್ ರಿಪೇರಿಯಾಗಲು ತಿಂಗಳುಗಳೇ ಬೇಕಿದ್ದವು. ಕೊಂಚ ಕೈ ಬಿಸಿ ಮಾಡದೇ ರಿಪೇರಿಯಾಗುತ್ತಿದ್ದದ್ದು ಅಪರೂಪವೆಂಬಂತ್ತಿತ್ತು. ಒಟ್ಟಾರೆ ದುಡ್ಡು ಕೊಟ್ಟವನು ಗ್ರಾಹಕ ಅನ್ನುವ ಕಲ್ಪನೆಯಾಗಲಿ, ಗ್ರಾಹಕನಿಗೆ ತನ್ನ ಹಣಕ್ಕೆ ತಕ್ಕೆ ಸೇವೆಗಳನ್ನು ಪಡೆಯುವ ಹಕ್ಕಿದೆಯೆನ್ನುವುದಾಗಲಿ ಅಸ್ತಿತ್ವದಲ್ಲೇ ಇಲ್ಲದ ದಿನಗಳು ಆಗ ಇದ್ದವು. ಆದರೆ ಈಗ ಆ ಸ್ಥಿತಿಯಿದೆಯೇ? ಖಾಸಗಿ ಸಂಸ್ಥೆಗಳಿಗೂ ಟೆಲಿಫೋನ್ ಸೇವೆ ನೀಡಲು ಅವಕಾಶ ಕಲ್ಪಿಸಿದ ನಂತರ ಇಪ್ಪತ್ತನಾಲ್ಕು ಗಂಟೆಗಳಲ್ಲಿ ನಿಮ್ಮ ಕೈಗೆಟುಕುವ ದರದಲ್ಲಿ ಫೋನ್ ಸಂಪರ್ಕ ಕೊಡಲು ಸಂಸ್ಥೆಗಳೇ ನಿಮ್ಮ ಬೆನ್ನು ಬೀಳುವಂತಹ ದಿನಗಳು ಈಗಿವೆ. ಟೆಲಿಫೋನ್ ಸೇವೆ ಇಲ್ಲಿ ಒಂದು ಉದಾಹರಣೆಯಷ್ಟೇ. ಜನಸಾಮಾನ್ಯರು ಬಳಸುವ ಪ್ರತಿಯೊಂದು ವಿಷಯದಲ್ಲೂ ಇಂತಹದೊಂದು ಆಯ್ಕೆ ದೊರೆಯುವ ದಿನಗಳು ಇಂದು ನಮ್ಮ ಮುಂದಿವೆ. ಇದು ಅನುಕೂಲವೇ ಸರಿ, ಆದರೆ ದಿಢೀರ್ ಆಗಿ ಸಾವಿರಾರು ಸಂಖ್ಯೆಯಲ್ಲಿ ಬಂದ ಖಾಸಗಿ ಸಂಸ್ಥೆಗಳ ಉತ್ಪನ್ನಗಳು, ಸೇವೆಗಳು ಕನ್ನಡದಲ್ಲಿ ಎಲ್ಲ ತರದ ಗ್ರಾಹಕ ಸೇವೆ ನೀಡಲು ಮುಂದಾಗಲಿಲ್ಲ ಮತ್ತು ಹಾಗೇ ಮುಂದಾಗುವಂತೆ ಅವರನ್ನು ಒತ್ತಾಯಿಸುವ ಯಾವುದೇ ಕಾನೂನಿನ ಬೆಂಬಲವೂ ಕನ್ನಡಕ್ಕಿರಲಿಲ್ಲ. ವ್ಯಾಪಾರಕ್ಕೆ ಇಳಿಯುವ ಪ್ರತಿಯೊಬ್ಬರು ಎಷ್ಟು ಸಾಧ್ಯವೋ ಅಷ್ಟು ಹಣ ಉಳಿಸಲು ಪ್ರಯತ್ನಿಸುತ್ತಾರೆ ಅನ್ನುವುದು ಸಹಜ. ಅಂತೆಯೇ ಭಾರತಕ್ಕೆ ಇಂಗ್ಲಿಷ್, ಹಿಂದಿ ಎರಡೇ ನುಡಿಗಳು ಸಾಕು ಅನ್ನುವ ಕೇಂದ್ರ ಸರ್ಕಾರದ ನಿಯಮದ ಗುರಾಣಿಯನ್ನೇ ಹಿಡಿದು ಇತರೆಲ್ಲ ಭಾಷೆಗಳನ್ನು ಕಡೆಗಣಿಸುವ ಕೆಲಸವನ್ನು ಖಾಸಗಿ ಸಂಸ್ಥೆಗಳು ಮಾಡುತ್ತ ಬಂದಿವೆ. ಕರ್ನಾಟಕದಲ್ಲಿ ವ್ಯಾಪಾರಕ್ಕಿಳಿದ ಸಂಸ್ಥೆಗಳು ತಮ್ಮ ಉತ್ಪನ್ನಗಳ ವಿವರವಾಗಲಿ, ಗ್ರಾಹಕ ಸೇವೆಯಾಗಲಿ ಕನ್ನಡದಲ್ಲಿ ಕಡ್ಡಾಯವಾಗಿ ನೀಡತಕ್ಕದ್ದು ಅನ್ನುವ ಕಾನೂನು ಕರ್ನಾಟಕದ ಸರ್ಕಾರವೂ ಮಾಡಿಲ್ಲ. ಅಂತಹದೊಂದು ಕಾನೂನು ಕರ್ನಾಟಕದ ಸರ್ಕಾರ ಮಾಡಿದರೂ (ಉದಾಹರಣೆಗೆ ನಾಮಫಲಕಗಳಲ್ಲಿ ಕನ್ನಡವಿರಬೇಕು ಅನ್ನುವ ನಿಯಮ) ಅದನ್ನು ಕೋರ್ಟಿನಲ್ಲಿ ಪ್ರಶ್ನಿಸಿ ಖಾಸಗಿ ಸಂಸ್ಥೆಗಳು ಗೆದ್ದುಕೊಂಡಂತಹ ಉದಾಹರಣೆ ನಮ್ಮ ಮುಂದಿದೆ. ಇದು ಜಾಗತೀಕರಣದ ದೆಸೆಯಿಂದ ನಮ್ಮ ಮಾರುಕಟ್ಟೆಗಳಲ್ಲಿ ಖಾಸಗಿ ಸಂಸ್ಥೆಗಳು ಬಲಗೊಂಡ ನಂತರ ಕನ್ನಡಕ್ಕೆ ಎದುರಾಗಿರುವ ಮೊದಲ ಸವಾಲು.

ತಂತ್ರಜ್ಞಾನದ ಕ್ರಾಂತಿ ಮತ್ತು ಕನ್ನಡ

ಜಾಗತೀಕರಣದ ನಂತರ ಕನ್ನಡದ ಮುಂದೆ ಬಂದಿರುವ ಎರಡನೆಯ ಮುಖ್ಯ ಸವಾಲು ತಂತ್ರಜ್ಞಾನದಲ್ಲಾಗಿರುವ ಕ್ಷಿಪ್ರ ಬದಲಾವಣೆ. ಕಳೆದ ಇಪ್ಪತ್ತು ವರ್ಷಗಳನ್ನು ಗಮನಿಸಿದರೆ ವ್ಯಕ್ತಿಯೊಬ್ಬನ ಜೀವನವನ್ನು ತಂತ್ರಜ್ಞಾನ ಯಾವ ಯಾವ ರೀತಿಯಲ್ಲಿ ಪ್ರಭಾವಿಸಿದೆ ಅನ್ನುವುದನ್ನು ಗುರುತಿಸುವುದೇ ಕಷ್ಟವೆನ್ನಬಹುದು. ಅಂತಹದೊಂದು ಸರ್ವಾಂತರ್ಯಾಮಿ ಸ್ವರೂಪದಲ್ಲಿ ತಂತ್ರಜ್ಞಾನದ ಬದಲಾವಣೆ ನಮ್ಮ ಸಮಾಜವನ್ನು ತಟ್ಟಿದೆ. ಕಂಪ್ಯೂಟರು, ಮೊಬೈಲು, ಇಂಟರ್ ನೆಟ್, ಎ.ಟಿ.ಎಮ್, ಐ.ವಿ.ಆರ್, ಟ್ಯಾಬ್ಲೆಟು, ಖಾಸಗಿ ವಾಹಿನಿಗಳು, ಎಫ್.ಎಮ್ ರೇಡಿಯೊ ಹೀಗೆ ಹಲವು ವಿಧದಲ್ಲಿ ವ್ಯಕ್ತಿಯ ಕೈ ಸೇರಿರುವ ತಂತ್ರಜ್ಞಾನದ ಪರಿಕರಗಳು ಆತ ಭಾಷೆಯನ್ನು ಬಳಸುತ್ತಿದ್ದ ಬಗೆ ಮತ್ತು ವ್ಯಾಪ್ತಿಯನ್ನು ಹಿಗ್ಗಿಸಿವೆ. ಇಪ್ಪತ್ತು ವರ್ಷದ ಹಿಂದೆ ಪತ್ರಿಕೆ, ರೇಡಿಯೊ, ಟಿವಿ, ಸಿನೆಮಾ, ರಂಗಭೂಮಿ ಹೀಗೆ ಕೆಲವು ವಿಷಯಗಳಲ್ಲಿ ಕನ್ನಡ ಬಳಸಲ್ಪಡುತ್ತಿತ್ತು, ಆದರೆ ಜಾಗತೀಕರಣದ ಪರಿಣಾಮವಾಗಿ ಪ್ರಪಂಚದ ಯಾವ ಮೂಲೆಯಲ್ಲೇ ನಡೆಯುವ ತಂತ್ರಜ್ಞಾನದ ಬೆಳವಣಿಗೆ ರಾತ್ರಿ ಬೆಳಗಾಗುವುದರೊಳಗೆ ನಮ್ಮ ನಾಡನ್ನು ಪ್ರವೇಶಿಸುವ ದಿನಗಳನ್ನು ನೋಡುತ್ತಿದ್ದೇವೆ. ದುರದೃಷ್ಟವಶಾತ್ ಈ ಬದಲಾವಣೆ ಆಗುವ ಹೊತ್ತಲ್ಲಿ ಇವೆಲ್ಲವೂ ಕನ್ನಡದಲ್ಲೇ ಸಾಧ್ಯವಾಗುವಂತಹ ಬದಲಾವಣೆಗಳು ಆಗಲಿಲ್ಲ. ಇದರ ಪರಿಣಾಮವಾಗಿ ಮೊಬೈಲು, ಕಂಪ್ಯೂಟರು, ಇಂಟರ್ ನೆಟ್, ಹೀಗೆ ಹಲವು ಹೊಸ ಸಾಧ್ಯತೆಗಳನ್ನು ಮೊದಲ ದಿನದಿಂದಲೇ ಕನ್ನಡದಲ್ಲಿ ಚೆನ್ನಾಗಿ ಬಳಸಲು ಸಾಧ್ಯವಾಗಲಿಲ್ಲ. ಇದರಿಂದಾಗಿ ದಿನೇ ದಿನೇ ಭಾಷೆ ಬಳಸುವ ಹೊಸ ಹೊಸ ಸಾಧ್ಯತೆಗಳಲ್ಲಿ ಕನ್ನಡ ಹಿಂದೆ ಬೀಳುತ್ತ ಬಂದಿತ್ತು. ಇದರಲ್ಲಿ ಒಂದಿಷ್ಟು ಸಮಸ್ಯೆಗಳಿಗೆ ಸಮುದಾಯದ ಪಾಲ್ಗೊಳ್ಳುವಿಕೆಯ ಯೋಜನೆಗಳು ಪರಿಹಾರವನ್ನು ಕಲ್ಪಿಸಿದವು. ಉದಾಹರಣೆಗೆ ಅಂತರ್ಜಾಲದ ವಿಕ್ಷನರಿ, ವಿಕೀಪಿಡಿಯಾ, ಫೇಸ್ ಬುಕ್ ಕನ್ನಡ ಆಯ್ಕೆ ತರದ ವಿಷಯಗಳನ್ನು ಕನ್ನಡದ ಯುವ ಸಮುದಾಯ ಒಟ್ಟಾಗಿ ಕೆಲಸ ಮಾಡಿ ಕನ್ನಡದಲ್ಲಿ ಸಾಧ್ಯವಾಗಿಸಿತು. ಆದರೆ ವ್ಯಾಪಾರಿ ನೆಲೆಯಲ್ಲಿ ಲಭ್ಯವಿದ್ದ ಮೊಬೈಲ್, ಬ್ಯಾಂಕುಗಳ ಎ.ಟಿ.ಎಮ್, ಐ.ವಿ.ಆರ್, ಖಾಸಗಿ ಎಫ್.ಎಮ್ ವಾಹಿನಿ ಮುಂತಾದ ಸವಲತ್ತುಗಳು ಕೇವಲ ಇಂಗ್ಲಿಷ್ ಇಲ್ಲವೇ ಹಿಂದಿಯಲ್ಲಿ ಮಾತ್ರವೇ ದೊರೆಯುತ್ತಿದ್ದವು. ಕನ್ನಡಕ್ಕಾಗಿ ಯಾರಾದರೂ ಕೇಳಿದರೆ ಕನ್ನಡಕ್ಕೆ ಬೇಡಿಕೆಯಿಲ್ಲ, ಮಾರುಕಟ್ಟೆಯಿಲ್ಲ ಅನ್ನುವ ಸಿದ್ಧ ಉತ್ತರಗಳು ಯಾವತ್ತಿಗೂ ದೊರೆಯುತ್ತಿದ್ದವು. ಇದು ಕನ್ನಡದ ಮುಂದೆ ಹೆಚ್ಚು ವ್ಯಾಪಕವಾದ ಸವಾಲುಗಳನ್ನು ತಂದಂತಹ ಎರಡನೆಯ ಬೆಳವಣಿಗೆಯಾಗಿತ್ತು.

ಅನಿಯಂತ್ರಿತ ವಲಸೆ ಮತ್ತು ಜನಲಕ್ಷಣ ಬದಲಾವಣೆ

ಜಾಗತೀಕರಣದ ದೆಸೆಯಿಂದ ಕನ್ನಡದ ಮುಂದೆ ಬಂದ ಮೂರನೆಯ ದೊಡ್ಡ ಸವಾಲು ಅನಿಯಂತ್ರಿತ ಪರ ಭಾಷಿಕರ ವಲಸೆ ತಂದಿರುವ ಜನಲಕ್ಷಣ ಇಲ್ಲವೇ ಡೆಮಾಗ್ರಫಿ ಬದಲಾವಣೆಯದ್ದು. ಜಾಗತೀಕರಣದ ಬೆನ್ನಲ್ಲೇ ಬೆಂಗಳೂರಿನಂತಹ ನಗರಕ್ಕೆ ಪರ ಭಾಷಿಕರ ಅನಿಯಂತ್ರಿತ ವಲಸೆ ಹರಿದು ಬಂದಿದೆ. ಅಂತಹ ವಲಸೆಯ ಮೇಲೆ ಕರ್ನಾಟಕದ ಸರ್ಕಾರಕ್ಕೆ ಯಾವುದೇ ನಿಯಂತ್ರಣವೂ ಇಲ್ಲ ಮತ್ತು ಹಾಗೆ ಬಂದವರು ಕನ್ನಡ ಕಲಿಯಬೇಕು ಅನ್ನುವುದನ್ನು ಕಡ್ಡಾಯ ಮಾಡುವಂತೆಯೂ ಇಲ್ಲ. ಅಂತಹ ಯಾವುದೇ ಪ್ರಯತ್ನವನ್ನು ಕೋರ್ಟುಗಳು ತಳ್ಳಿ ಹಾಕುತ್ತವೆ. ಇದರಿಂದಾಗಿ ಬೆಂಗಳೂರಿನಂತಹ ಊರುಗಳಲ್ಲಿ ಕನ್ನಡದ ಸಾರ್ವಭೌಮತ್ವಕ್ಕೆ ಕೆಲ ಮಟ್ಟಿಗಿನ ಸವಾಲು ಎದುರಾಗಿರುವುದು ನಿಜ. ಇನ್ನೊಂದೆಡೆ ನಮ್ಮ ನಗರಗಳಿಗೆ ಬರುತ್ತಿರುವ ಹೆಚ್ಚಿನ ವಲಸೆ, ಹೆಚ್ಚು ಸಂಪಾದನೆಯ ಬಿಳಿ ಕಾಲರ್ ಹುದ್ದೆಗಳಿಗಾಗಿ ಆಗುತ್ತಿರುವುದರಿಂದ ಆರ್ಥಿಕವಾಗಿ ಬಲಶಾಲಿಯಾಗಿರುವ ಆದರೆ, ಕನ್ನಡ ಬಾರದ, ಕಲಿಯದ ಪರಭಾಷಿಕರು ನಮ್ಮ ಊರುಗಳಲ್ಲಿ ನೆಲೆಗೊಳ್ಳುತ್ತಿದ್ದಾರೆ. ಅವರ ಮಕ್ಕಳು ಮರಿ ಕನ್ನಡದ ನೆರಳು ತಾಕದಂತೆ ನಮ್ಮ ನೆಲದಲ್ಲೇ ಬೆಳೆಯುತ್ತಿದ್ದಾರೆ. ಅಂತಹ ಎಲ್ಲ ಏರ್ಪಾಡು ಇಂದು ನಮ್ಮ ನಡುವಿದೆ. ಆರ್ಥಿಕವಾಗಿ ಬಲವಾಗಿರುವ ಕಾರಣಕ್ಕೆ ಅವರ ನುಡಿಗಳು ಮಾರುಕಟ್ಟೆಯಲ್ಲಿ ಚಲಾವಣೆಗೆ ಬರುತ್ತಿರುವುದನ್ನು ಕೆಲವು ಕಡೆ ಗಮನಿಸಬಹುದಾಗಿದೆ. ದೊಡ್ಡ ಪ್ರಮಾಣದಲ್ಲಿ ಕನ್ನಡಿಗರು ಇಂತಹ ಕೆಲಸಗಳಲ್ಲಿದ್ದರೂ ತಮ್ಮ ಭಾಷೆಯ ಕುರಿತ ನಿರಭಿಮಾನ, ಕನ್ನಡತನದ ಗುರುತಿನ ಕೊರತೆ ಮುಂತಾದ ಕಾರಣಗಳಿಂದ ಮಾರುಕಟ್ಟೆಯಲ್ಲಿ ಕನ್ನಡ ಸಾಕಷ್ಟು ನೆಮ್ಮದಿಯ ಸ್ಥಾನ ಪಡೆಯುವಲ್ಲಿ ಹಿಂದಿರುವುದನ್ನು ಕಾಣಬಹುದು. ಮಾರುಕಟ್ಟೆಯಲ್ಲಿ ಗ್ರಾಹಕನೇ ದೇವರು ಮತ್ತು ಗ್ರಾಹಕನ ಭಾಷೆಯೇ ದೇವಭಾಷೆಯಂತಿರುವುದರಿಂದ ಅನಿಯಂತ್ರಿತ ವಲಸೆ ಮತ್ತು ಕನ್ನಡಿಗರಲ್ಲಿರುವ ತನ್ನ ಗುರುತಿನ ಬಗೆಗಿನ ಗೊಂದಲಗಳು ಒಟ್ಟಾಗಿ, ನೆಲದ ಭಾಷೆಗಿಂತ ವಲಸಿಗನ ಭಾಷೆಗೆ ಹೆಚ್ಚು ಮನ್ನಣೆ ದೊರೆಯುವ ಕೆಟ್ಟ ಸ್ಥಿತಿ ನಮ್ಮ ನಾಡಿನಲ್ಲಿದೆ. ಇದು ಮಾರುಕಟ್ಟೆಯಲ್ಲಿ ಕನ್ನಡಕ್ಕೆ ದೊಡ್ಡ ಸವಾಲುಗಳನ್ನು ತಂದಿರುವ ಮೂರನೆಯ ಬೆಳವಣಿಗೆ.

ಕನ್ನಡದಲ್ಲಿ ಗ್ರಾಹಕ ಚಳುವಳಿಯೆನ್ನುವ ಫಾಸ್ಟ್ ಫುಡ್ ಅಸ್ತ್ರ!

ಮೇಲಿನ ಮೂರು ಬಗೆಯ ಸವಾಲುಗಳನ್ನು ಗಮನಿಸಿದಾಗ ಇಂದಿರುವ ವ್ಯವಸ್ಥೆಯಲ್ಲಿ ಪೂರ್ತಿಯಾಗಲ್ಲದಿದ್ದರೂ ತಕ್ಕ ಮಟ್ಟಿಗೆ ಅವುಗಳಿಗೆ ಪರಿಹಾರ ರೂಪಿಸಿಕೊಳ್ಳುವಲ್ಲಿ ಕನ್ನಡ ಕೇಂದ್ರಿತ ಗ್ರಾಹಕ ಚಳುವಳಿಯ ಪಾತ್ರ ಅತ್ಯಂತ ಹಿರಿದಿದೆ. ಹಾಗಿದ್ದರೆ ಕನ್ನಡ ಕೇಂದ್ರಿತವಾದ ಗ್ರಾಹಕ ಚಳುವಳಿಯೆಂದರೇನು? ಅದು ಹೇಗೆ ಜಾಗತೀಕರಣದ ಈ ಮೂರು ಸವಾಲುಗಳಿಗೆ ಪರಿಹಾರ ಕಲ್ಪಿಸುವ ಶಕ್ತಿ ಹೊಂದಿದೆ ಅನ್ನುವ ಪ್ರಶ್ನೆಗಳೇಳಬಹುದು. ಕರ್ನಾಟಕದಲ್ಲಿ ದೊರೆಯುವ ಯಾವುದೇ ಉತ್ಪನ್ನ ಇಲ್ಲವೇ ಸೇವೆಯಾಗಿರಲಿ, ಅದು ಸರ್ಕಾರ ಇಲ್ಲವೇ ಯಾವುದೇ ಖಾಸಗಿ ಸಂಸ್ಥೆ ಕೊಡಮಾಡಿರಲಿ, ಅಲ್ಲೆಲ್ಲ ಕನ್ನಡದಲ್ಲಿ ಸಮರ್ಪಕವಾದ ಸೇವೆ ಸಿಗಬೇಕು ಎಂದು ಸಾಮಾನ್ಯ ಕನ್ನಡದ ಗ್ರಾಹಕರು ಒತ್ತಾಯಿಸುವುದೇ ಕನ್ನಡ ಕೇಂದ್ರಿತವಾದ ಗ್ರಾಹಕ ಚಳುವಳಿ. ಇದೊಂದು ಫಾಸ್ಟ್ ಪುಡ್ ಮಾದರಿಯ ಚಳುವಳಿಯೆಂದು ಕರೆಯಬಹುದು. ಹೇಗೆ ನೂಡಲ್ಸಿನಂತಹ ಫಾಸ್ಟ್ ಫುಡ್ ಅನ್ನು ನಿಮಿಷಗಳಲ್ಲೇ ತಯಾರಿಸಬಹುದೋ, ಯಾರು ಬೇಕಾದರೂ ಮಾಡಬಹುದೋ ಮತ್ತು ಅದರ ರುಚಿ ಎಲ್ಲರಿಗೂ ಇಷ್ಟವಾಗುತ್ತೋ, ಕನ್ನಡ ಕೇಂದ್ರಿತ ಗ್ರಾಹಕ ಚಳುವಳಿಯೂ ಅದೇ ಗುಣಗಳನ್ನು ಹೊಂದಿದೆ. ನೀವೇ ನೋಡಿ, ಮಾರುಕಟ್ಟೆಯಲ್ಲಿ ಕನ್ನಡದಲ್ಲಿ ಸೇವೆ ಸಿಕ್ಕಿಲ್ಲ ಎಂದು ದೂರು ಸಲ್ಲಿಸುವ ಕೆಲಸ ನಿಮಿಷಗಳದ್ದು, ಅದನ್ನು ಒಬ್ಬ ಹತ್ತು ರೂಪಾಯಿಗೆ ಪೆನ್ನು ಕೊಂಡುಕೊಳ್ಳುವವನು ಮಾಡಬಹುದು ಇಲ್ಲವೇ ಕೋಟಿ ರೂಪಾಯಿಗೆ ಬೆಂಝ್ ಕಾರ್ ಕೊಂಡುಕೊಳ್ಳುವವನು ಮಾಡಬಹುದು ಮತ್ತು ಆ ಪ್ರಯತ್ನದಿಂದ ಕರ್ನಾಟಕದ ಮಾರುಕಟ್ಟೆಯಲ್ಲಿ ಕನ್ನಡದ ಪರವಾಗಿ ಆಗುವ ಬದಲಾವಣೆಯ ರುಚಿ ಎಡ-ಬಲವೆನ್ನದೇ ಎಲ್ಲ ಸಿದ್ಧಾಂತದ ಕನ್ನಡಿಗರಿಗೂ ಇಷ್ಟವಾಗುವಂತದ್ದು. ಈ ಹೋರಾಟ ಕಳೆದ ಹತ್ತು ವರ್ಷಗಳಿಂದ ಹಂತ ಹಂತವಾಗಿ ಬೆಳೆಯುತ್ತ ಇಂದು ಕನ್ನಡದಲ್ಲಿ ಗ್ರಾಹಕ ಸೇವೆಗಾಗಿ ಒತ್ತಾಯಿಸುವ ಒಂದು ವರ್ಗವೇ ಸೃಷ್ಟಿಯಾಗಿದೆ. ಇಂತಹ ಸಂಘಟಿತ ಗ್ರಾಹಕರ ಒತ್ತಾಯದಿಂದ ಬೆಂಗಳೂರು ಮತ್ತು ಕರ್ನಾಟಕದ ಮಾರುಕಟ್ಟೆಯಲ್ಲಿ ಆಗಿರುವ ನೂರಾರು ಬದಲಾವಣೆಗಳಲ್ಲಿ ಕೆಲವು ಇಲ್ಲಿವೆ.

ಪ್ರಕರಣ ೧: ಸುಮಾರು ಹತ್ತು-ಹನ್ನೆರಡು ವರ್ಷದ ಹಿಂದಿನ ಮಾತು. ಆಗಷ್ಟೇ ಬೆಂಗಳೂರಿಗೆ ಖಾಸಗಿ ಎಫ್.ಎಮ್ ವಾಹಿನಿಗಳ ಪ್ರವೇಶವಾಗಿತ್ತು. ಮೊದಲಿಗೆ ಬಂದ ವಾಹಿನಿಯೊಂದು ಇಂಗ್ಲಿಷ್ ಮಾತು, ಇಂಗ್ಲಿಷ್-ಹಿಂದಿ ಹಾಡುಗಳನ್ನು ಹಾಕುತ್ತ ಕನ್ನಡಕ್ಕೆ ಯಾವುದೇ ಬೆಲೆ ಕೊಡದೇ ಮುಂದುವರೆದಿತ್ತು. ಬೆಂಗಳೂರು ಐಟಿ ಸಿಟಿ, ಕಾಸ್ಮೊಪಾಲಿಟಿನ್ ನಗರ, ಇಲ್ಲಿನ ಯುವಕರಿಗೆ ಕನ್ನಡ ಬೇಡ ಅನ್ನುವ ನಿಲುವಿಗೆ ಅವರು ಬಂದಿದ್ದರು. ಕನ್ನಡದ ಗ್ರಾಹಕರು ಕನ್ನಡ ಹಾಡುಗಳಿಗಾಗಿ ನಿರಂತರವಾಗಿ ಒತ್ತಾಯಿಸಿದರ ಫಲವಾಗಿ ಉಪಕಾರ ಮಾಡಿದಂತೆ ವಾರಕ್ಕೆ ಎರಡು ಗಂಟೆ ಕನ್ನಡ ಹಾಡು ಹಾಕಲು ಮುಂದಾದರು. ಇದನ್ನೇ ಚಾತಕ ಪಕ್ಷಿಯಂತೆ ಕಾದು ಕೇಳುತ್ತಿದ್ದ ಕನ್ನಡಿಗರಿದ್ದರು. ಇದರ ಬೆನ್ನಲ್ಲೇ ಶುರುವಾದ ಇನ್ನೊಂದು ವಾಹಿನಿಯಲ್ಲಿ ಕನ್ನಡ ಮಾತು ಆದ್ರೆ ಹಿಂದಿ ಹಾಡುಗಳನ್ನು ಹಾಕುವ ಸಂಪ್ರದಾಯ ಶುರುವಾಯಿತು. ಆಗ ಕನ್ನಡ ಗ್ರಾಹಕರ ಸಂಘಟಿತವಾದ ಚಳುವಳಿಯೊಂದು ಸದ್ದಿಲ್ಲದೇ ಬೆಂಗಳೂರಿನಲ್ಲಿ ಕೆಲಸ ಮಾಡಿತು. ಆನ್ ಲೈನ್ ಸಹಿ ಸಂಗ್ರಹ ಅಭಿಯಾನವೊಂದರ ಮೂಲಕ ಐದು ಸಾವಿರಕ್ಕೂ ಹೆಚ್ಚು ಜನರು ವಾಹಿನಿಯನ್ನು ಸಂಪೂರ್ಣವಾಗಿ ಕನ್ನಡ ವಾಹಿನಿಯಾಗಿಸಲು ಒತ್ತಾಯ ಮಾಡಿದರು. ರೇಡಿಯೊ ವಾಹಿನಿಗಳಿಗೆ ನಿರಂತರವಾಗಿ ಕನ್ನಡಕ್ಕಿರುವ ಬೇಡಿಕೆಯನ್ನು, ಕನ್ನಡ ಬಳಸಿದರೆ ಹೆಚ್ಚಬಹುದಾದ ವ್ಯಾಪಾರದ ಸಾಧ್ಯತೆಯನ್ನು ಮನವರಿಕೆ ಮಾಡಿಕೊಡುವ ಕೆಲಸಕ್ಕೆ ಕೈ ಹಾಕಿದರು. ಇದರ ಫಲವಾಗಿ ಪ್ರಯೋಗಾರ್ಥವೆಂಬಂತೆ ಒಂದು ವಾಹಿನಿ ಕನ್ನಡಕ್ಕೆ ಬದಲಾಗಿ ತನ್ನನ್ನು ತಾನು ಬೆಂಗಳೂರಿನ ನೂರು ಪ್ರತಿಶತ ಕನ್ನಡ ಎಫ್.ಎಮ್ ವಾಹಿನಿ ಎಂದು ಕರೆದುಕೊಂಡಿತು. ನೋಡ ನೋಡುತ್ತಿದ್ದಂತೆಯೇ ಆ ವಾಹಿನಿಯ ಕೇಳುಗರ ಸಂಖ್ಯೆ ತೀವ್ರ ಗತಿಯಲ್ಲಿ ಏರಿಕೆ ಕಂಡಿತು. ರೇಡಿಯೊ ಕೇಳುಗರ ಸಂಖ್ಯೆಯನ್ನು ಅಳೆಯುವ RAM ರೇಟಿಂಗಿನಲ್ಲಿ ಪ್ರತಿವಾರವೂ ಕನ್ನಡ ವಾಹಿನಿಯೇ ಅತಿ ಹೆಚ್ಚು ಕೇಳುಗರನ್ನು ಹೊಂದಿರುವ ಮಾಹಿತಿ ಹೊರ ಬೀಳತೊಡಗಿತು. ಇದರ ಬೆನ್ನಲ್ಲೇ ಮತ್ತೆರಡು ವಾಹಿನಿಗಳು ಕನ್ನಡವನ್ನು ಅಪ್ಪಿಕೊಂಡವು. ಇಂದು ಸರಿ ಸುಮಾರು ಮೂರು ವಾಹಿನಿಗಳು ಪೂರ್ತಿ ಕನ್ನಡದಲ್ಲಿ ಹಾಡು ಪ್ರಸಾರ ಮಾಡುತ್ತ, ಬೆಂಗಳೂರಿನ ಖಾಸಗಿ ಬಾನುಲಿ ಮಾರುಕಟ್ಟೆಯ 75% ಮಾರುಕಟ್ಟೆಯನ್ನು ಹಿಡಿದುಕೊಂಡು ತಮ್ಮ ವ್ಯಾಪಾರ ಹೆಚ್ಚಿಸಿಕೊಂಡಿವೆ. ಬೆಂಗಳೂರಿನಲ್ಲಿ ಕನ್ನಡಿಗರು ಅಲ್ಪಸಂಖ್ಯಾತರು ಎಂದು ತಾವೂ ನಂಬಿ, ಕನ್ನಡಿಗರನ್ನು ನಂಬಿಸಲು ಪ್ರಯತ್ನಿಸುತ್ತಿರುವ ಹಲವಾರು ಜನರು ಎಫ್.ಎಮ್ ವಾಹಿನಿಗಳ RAM ರೇಟಿಂಗ್ ಅನ್ನು ಹತ್ತಿರದಿಂದ ಗಮನಿಸಿದರೆ ಬೆಂಗಳೂರಿನಲ್ಲಿ ಕನ್ನಡಕ್ಕಿರುವ ಮಾರುಕಟ್ಟೆಯನ್ನು ಅರಿಯಬಹುದು. ಕನ್ನಡ ಹಾಡುಗಳ ವಾಹಿನಿಯನ್ನು ಕನ್ನಡಿಗರೇ ಅಲ್ಲವೇ ಕೇಳುವುದು? ದಿನವೊಂದಕ್ಕೆ 50 ಲಕ್ಷಕ್ಕೂ ಅಧಿಕ ಜನ ಎಫ್,ಎಮ್ ರೇಡಿಯೋಗಳನ್ನು ಕೇಳುತ್ತಿದ್ದು ಅದರಲ್ಲಿ 75 ಪ್ರತಿಶತಕ್ಕೂ ಅಧಿಕ ಜನರು ಕನ್ನಡ ವಾಹಿನಿಯನ್ನೇ ಕೇಳುತ್ತಿರುವುದು ಏನನ್ನು ಸೂಚಿಸುತ್ತೆ? ದಿನಪತ್ರಿಕೆಗಳ ವಿಷಯದಲ್ಲಿ ಬರುವ ಎಬಿಸಿ ಮತ್ತು ಐ.ಆರ್.ಎಸ್ ವರದಿಗಳು ಬೆಂಗಳೂರಿನಲ್ಲಿ ಶೇಕಡಾ 70ರಷ್ಟು ಜನ ಕನ್ನಡ ಪತ್ರಿಕಗಳನ್ನೇ ಓದುವ ಮಾಹಿತಿ ನೀಡಿರುವುದನ್ನು ಗಮನಿಸಿದಾಗ ಬೆಂಗಳೂರಿನಲ್ಲಿ ಕನ್ನಡಿಗರು ಅಲ್ಪಸಂಖ್ಯಾತರಲ್ಲ ಅನ್ನುವುದು ಸ್ಪಷ್ಟ ಪಡಿಸಿಕೊಳ್ಳಬಹುದು.

ಪ್ರಕರಣ ೨: ಅದು ಜಗತ್ತಿನ ಪ್ರಖ್ಯಾತ ಮೊಬೈಲ್ ಕಂಪನಿ. ಅಂಡ್ರಾಯ್ಡ್ ತಂತ್ರಜ್ಞಾನ ಆಧಾರಿತ ಸ್ಮಾರ್ಟ್ ಫೋನ್ ಗಳನ್ನು ಉತ್ಪಾದಿಸುವಲ್ಲಿ ಜಗತ್ತಿನಲ್ಲೇ ಮುಂಚೂಣಿಯಲ್ಲಿನ ಸಂಸ್ಥೆ. ತನ್ನ ಫೋನಿನಲ್ಲಿ ಹಲವು ವಿದೇಶಿ ಭಾಷೆಗಳ ಆಯ್ಕೆ ಕೊಟ್ಟಿದ್ದರೂ ಕನ್ನಡ ಭಾಷೆಯ ಆವೃತ್ತಿ ಹೊಂದಿರಲಿಲ್ಲ. ಕನ್ನಡದಲ್ಲೇ ಸ್ಮಾರ್ಟ್ ಫೋನ್ ಬಳಸುವ ಆಯ್ಕೆ ಕೊಡಿ ಎಂದು ನಿರಂತರವಾಗಿ ಕನ್ನಡ ಗ್ರಾಹಕರು ಬೇಡಿಕೆ ಇಟ್ಟ ಪರಿಣಾಮವಾಗಿ ಇಂದು ಕನ್ನಡದಲ್ಲೂ ತನ್ನ ಸ್ಮಾರ್ಟ್ ಫೋನ್ ಸರಣಿ ಹೊರ ತಂದಿರುವುದೇ ಅಲ್ಲದೇ “ನಿಮ್ಮ ಫೋನ್ ಕನ್ನಡದಲ್ಲಿದೆ” ಅನ್ನುವುದನ್ನೇ ಒಂದು ವ್ಯಾಪಾರದ ಹೆಗ್ಗಳಿಕೆಯಂತೆ ಬಳಸಿ ಜನ ಮನ್ನಣೆ ಗಳಿಸುತ್ತಿದೆ. ಅದರ ಬೆನ್ನಲ್ಲೇ ಇನ್ನು ಕೆಲವು ಕಂಪನಿಗಳು ಇದರತ್ತ ಹೂಡಿಕೆ ಮಾಡಲು ಮುಂದಾಗಿವೆ. ಹೊಸತಾಗಿ ನಮ್ಮ ಸಮಾಜವನ್ನು ಪ್ರವೇಶಿಸಿದ ಒಂದು ತಂತ್ರಜ್ಞಾನದ ಪರಿಕರವನ್ನು ಬಹಳ ಬೇಗನೇ ಕನ್ನಡಕ್ಕೆ ಒಗ್ಗಿಸಿಕೊಳ್ಳುವ ಕೆಲಸ ಇಲ್ಲಿ ಸಾಧ್ಯವಾಗಿದ್ದು ಕನ್ನಡ ಗ್ರಾಹಕರ ಹಕ್ಕೊತ್ತಾಯದಿಂದಲೇ. ತೀವ್ರ ಗತಿಯಲ್ಲಿ ನಮ್ಮ ಚಿಕ್ಕ ಊರು ಪಟ್ಟಣಗಳಿಗೂ ಮೊಬೈಲ್ ಮತ್ತು ಅಂತರ್ಜಾಲ ಹರಡುತ್ತಿರುವಾಗ ಮೊಬೈಲ್ ಫೋನಿನಲ್ಲಿ ಕನ್ನಡ ಸರಿಯಾಗಿ ಬಳಸಲು ದೊರೆಯುವಂತಾಗುವುದು ಬಹಳ ಮುಖ್ಯ. ಇಂತಹದೊಂದು ಬದಲಾವಣೆಗೆ ಕನ್ನಡ ಗ್ರಾಹಕರ ಹಕ್ಕೊತ್ತಾಯ ನಾಂದಿ ಹಾಡಿದೆ.

ಪ್ರಕರಣ ೩: ಅದು ಭಾರತದ ಅತಿ ದೊಡ್ಡ ಖಾಸಗಿ ಬ್ಯಾಂಕುಗಳಲ್ಲಿ ಒಂದು. ಕರ್ನಾಟಕವೊಂದರಲ್ಲೇ ಸುಮಾರು ಏಳು ನೂರಕ್ಕೂ ಹೆಚ್ಚು ಎ.ಟಿ.ಎಮ್ ಗಳನ್ನು ಹೊಂದಿರುವ ಬ್ಯಾಂಕ್ ಕೂಡಾ. ಅದರ ಎ.ಟಿ.ಎಮ್ ನಲ್ಲಿನ ಭಾಷೆಗಳ ಆಯ್ಕೆಯಲ್ಲಿ ಕೇವಲ ಇಂಗ್ಲಿಷ್ ಮತ್ತು ಹಿಂದಿ ಮಾತ್ರವೇ ಇದ್ದವು. ಬರೀ ಕನ್ನಡವೊಂದನ್ನೇ ಬಲ್ಲ ಸಾಮಾನ್ಯ ಕನ್ನಡಿಗರು ಈ ಬ್ಯಾಂಕಿನ ಸೇವೆಯನ್ನು ಬಳಸಲು ಸಾಧ್ಯವೇ ಇಲ್ಲ ಅನ್ನುವ ಸ್ಥಿತಿಯಿತ್ತು. ಆಗ ಕನ್ನಡದಲ್ಲಿ ಬ್ಯಾಂಕಿಂಗ್ ಸೇವೆಗಾಗಿ ಒತ್ತಾಯಿಸುವ ನೂರಾರು ಮಿಂಚೆಗಳು, ಫೋನ್ ಕರೆಗಳು ಬ್ಯಾಂಕಿನ ಬೇರೆ ಬೇರೆ ಶಾಖೆಗಳಿಗೆ ಹೋದವು. ಕಾರ್ಪೋರೇಟ್ ವಲಯದಲ್ಲಿ ಕೆಲಸ ಮಾಡುತ್ತಿದ್ದ ನೂರಾರು ಕನ್ನಡಿಗರು ಕನ್ನಡದಲ್ಲಿ ಸೇವೆ ನೀಡದೇ ಹೋದಲ್ಲಿ ಬ್ಯಾಂಕಿನಲ್ಲಿರುವ ತಮ್ಮ ಖಾತೆಯನ್ನು ರದ್ದುಗೊಳಿಸಿ ಕನ್ನಡದಲ್ಲಿ ಸೇವೆ ನೀಡುವ ಇನ್ನೊಂದು ಬ್ಯಾಂಕಿನತ್ತ ವಲಸೆ ಹೋಗುತ್ತೇವೆ ಅನ್ನುವ ಅಸಹಕಾರದ ಹಾದಿ ಹಿಡಿದರು. ಇದಕ್ಕೆ ಸ್ಪಂದಿಸಿದ ಬ್ಯಾಂಕ್ ಕಳೆದ ಒಂದು ವರ್ಷದ ಅವಧಿಯಲ್ಲಿ ತನ್ನೆಲ್ಲ ಎ.ಟಿ.ಎಮ್ ಗಳಲ್ಲಿ ಕನ್ನಡ ಬಳಸುವ ಆಯ್ಕೆ ಕೊಟ್ಟಿದ್ದು ದೊಡ್ಡ ಸಂಖ್ಯೆಯಲ್ಲಿ ಸಾಮಾನ್ಯ ಕನ್ನಡಿಗರಿಗೆ ಅನುಕೂಲ ಕಟ್ಟಿಕೊಟ್ಟು ತನ್ನ ವ್ಯಾಪಾರ ಹೆಚ್ಚಿಸಿಕೊಂಡಿದೆ. ಕನ್ನಡ ಬಾರದ ಸಿಬ್ಬಂದಿಗೆ ಕನ್ನಡ ಕಲಿಸುವ ಕೆಲಸವೂ ಅನೇಕ ಬ್ಯಾಂಕುಗಳಲ್ಲಿ ನಡೆಯುತ್ತಿದೆ. ಇಂತಹುದೇ ಬದಲಾವಣೆ ಹಲವಾರು ಬ್ಯಾಂಕುಗಳಲ್ಲೂ ಆಗುತ್ತಿದೆ. ನಿರಂತರವಾದ, ಶಾಂತಿಯುತವಾದ ಗ್ರಾಹಕ ಅಸಹಕಾರದ ಮಾರ್ಗದ ಮೂಲಕ ಕನ್ನಡದಲ್ಲಿ ಗ್ರಾಹಕ ಸೇವೆ ಸಾಧ್ಯವಾಗಿಸುವ ಬದಲಾವಣೆ ಇಂದು ನಮ್ಮಲ್ಲಿ ಶುರುವಾಗಿದೆ. ಇದರ ಫಲವಾಗಿ ಕನ್ನಡದಲ್ಲೇ ತಂತ್ರಜ್ಞಾನ ಅಭಿವೃದ್ಧಿಪಡಿಸುವ ಸಂಸ್ಥೆಗಳಿಗೂ ಕೆಲಸ ಮತ್ತು ವ್ಯಾಪಾರ ದಕ್ಕುತ್ತಿದೆ.

ಪ್ರಕರಣ ೪: ಕನ್ನಡಿಗರು ಕ್ರಿಕೆಟ್ ಪ್ರೇಮಿಗಳಾಗಿದ್ದರೂ ಕ್ರಿಕೆಟ್ ಪಂದ್ಯಾವಳಿಯ ವೀಕ್ಷಕ ವಿವರಣೆ ಕನ್ನಡದಲ್ಲಿ ನೋಡುವ ಅವಕಾಶ ಇಲ್ಲಿಯವರೆಗೂ ಸಿಕ್ಕಿರಲಿಲ್ಲ. ರೇಡಿಯೊ ಕಾಮೆಂಟರಿ ಕಾಲದಲ್ಲಿ ಚೂರು-ಪಾರಾದರೂ ಕನ್ನಡ ಕಾಮೆಂಟರಿ ದೊರೆಯುತ್ತಿದ್ದದ್ದು ಟಿವಿ ಕಾಲಕ್ಕೆ ನಿಂತು ಹೋಗಿ, ಕ್ರಿಕೆಟ್ ಕಾಮೆಂಟರಿ ಅಂದರೆ ಕೇವಲ ಹಿಂದಿ ಮತ್ತು ಇಂಗ್ಲಿಷ್ ಅನ್ನುವ ಹಾಗಾಗಿತ್ತು. ಹಿಂದಿ ಹೇರಿಕೆಯ ಪರವಿರುವ ಕೇಂದ್ರ ಸರ್ಕಾರಗಳು ಹಿಂದಿ ಹೇರಿಕೆಯ ಪ್ರಬಲ ಅಸ್ತ್ರವಾಗಿ ಕ್ರಿಕೆಟ್ ಕಾಮೆಂಟರಿಯನ್ನು ಬಳಸಿಕೊಳ್ಳುತ್ತ ಬಂದಿದ್ದವು. ಕನ್ನಡಿಗರಿಗೆ ಎಂದಿಗೂ ಅರ್ಥವಾಗದ ಇಕ್ಯಾನವೆ, ಚೌಬೀಸ್, ಪಚತ್ತರ್ ಮುಂತಾದ ಹಿಂದಿ ಭಾಷೆಯ ಅಂಕಿ-ಸಂಕಿಗಳನ್ನೇ ಅರ್ಥವಾಗದಿದ್ದರೂ ಕೇಳಿಕೊಂಡು ಪಂದ್ಯ ನೋಡುವ ಸ್ಥಿತಿಯಿತ್ತು. ಇದೇ ಹೊತ್ತಿನಲ್ಲಿ ಜಾಗತೀಕರಣದ ನಂತರ ಮನರಂಜನೆ ವಲಯದಲ್ಲಿ ವ್ಯಾಪಕ ಪ್ರಮಾಣದಲ್ಲಿ ನಡೆದ ಖಾಸಗಿ ಬಂಡವಾಳ ಹೂಡಿಕೆಯ ಫಲವಾಗಿ ಕ್ರಿಕೆಟ್ ಪಂದ್ಯಾವಳಿ ಪ್ರಸಾರಕ್ಕೆ ಹಲವಾರು ಹೊಸ ಖಾಸಗಿ ವಾಹಿನಿಗಳು ಹುಟ್ಟಿಕೊಂಡವು. ಇಷ್ಟಾದರೂ ಕನ್ನಡದಲ್ಲಿ ಕ್ರಿಕೆಟ್ ವೀಕ್ಷಕ ವಿವರಣೆ ಸಾಧ್ಯವಾಗಿರಲಿಲ್ಲ. ಕಳೆದ ವರ್ಷ ಸ್ಟಾರ್ ಸಂಸ್ಥೆ ಕ್ರಿಕೆಟಿಗಾಗಿಯೇ ಮೀಸಲಾಗಿರುವ ನಾಲ್ಕು ಹೊಸ ಕ್ರೀಡಾವಾಹಿನಿಗಳನ್ನು ಶುರು ಮಾಡುವ ನಿರ್ಧಾರ ಕೈಗೊಂಡಾಗ ದೊಡ್ಡ ಸಂಖ್ಯೆಯಲ್ಲಿ ಕನ್ನಡದ ಗ್ರಾಹಕರು ಕನ್ನಡದಲ್ಲಿ ಕ್ರಿಕೆಟ್ ವಾಹಿನಿ ಶುರು ಮಾಡುವಂತೆಯೂ, ಕ್ರಿಕೆಟ್ ಕಾಮೆಂಟರಿ ಕನ್ನಡದಲ್ಲಿ ಕೊಡುವಂತೆಯೂ ಬೇಡಿಕೆ ಸಲ್ಲಿಸುವ ಕೆಲಸ ಮಾಡಿದರು. ಇದರ ಪರಿಣಾಮವಾಗಿ ಸ್ವಾತಂತ್ರ್ಯ ಬಂದ ನಂತರ ಮೊದಲ ಬಾರಿಗೆ ಈ ಬಾರಿಯ ವಿಶ್ವಕಪ್ ಪಂದ್ಯಾವಳಿಯೊಂದನ್ನು ಸಂಪೂರ್ಣವಾಗಿ ಕನ್ನಡದಲ್ಲೇ ನೋಡುವ ಅವಕಾಶವನ್ನು ಸ್ಟಾರ್ ಸಂಸ್ಥೆ ತನ್ನ ಸುವರ್ಣ ಪ್ಲಸ್ ವಾಹಿನಿಯ ಮೂಲಕ ಮಾಡಿಕೊಟ್ಟಿತು. ಇದು ನಿರೀಕ್ಷೆ ಮೀರಿ ಯಶಸ್ಸು ಪಡಿದಿದ್ದು, ಸಂಸ್ಥೆಗೆ ವ್ಯಾಪಾರದ ಲಾಭವಾದರೆ ಕನ್ನಡಿಗರಿಗೆ ಕ್ರಿಕೆಟ್ ಕಾಮೆಂಟರಿಯನ್ನು ತಮ್ಮದೇ ನುಡಿಯಲ್ಲಿ ನೋಡುವ ಅವಕಾಶವಾಯಿತು. ಕನ್ನಡ ಗ್ರಾಹಕರ ಸಂಘಟಿತ ಪ್ರಯತ್ನಕ್ಕೆ ಸಿಕ್ಕ ಇತ್ತೀಚಿನ ದೊಡ್ಡ ಗೆಲುವು ಇದೆನ್ನಬಹುದು.

ಇದೆಲ್ಲ ಸಾಧ್ಯವಾಗಿದ್ದು ಹೇಗೆ?

ಮೇಲೆ ನೀಡಿದ್ದು ಕಳೆದ ಹತ್ತು ವರ್ಷಗಳಲ್ಲಿ ಕರ್ನಾಟಕದ ಮಾರುಕಟ್ಟೆಯಲ್ಲಿ ಕನ್ನಡದ ಸುತ್ತ ಆದ ನೂರಾರು ಬದಲಾವಣೆಗಳಲ್ಲಿ ಆಯ್ದ ಕೆಲವು. ಈ ಯಾವ ಬದಲಾವಣೆಗಳು ಯಾವುದೇ ಸರ್ಕಾರದ ಕಾನೂನು-ನಿಯಮಗಳಿಂದ ಸಾಧ್ಯವಾಗಿದ್ದಲ್ಲ. ಇದು ಸಾಧ್ಯವಾಗಿದ್ದು ಕನ್ನಡದಲ್ಲಿ ಗ್ರಾಹಕ ಸೇವೆಗಾಗಿ ಒತ್ತಾಯಿಸುವ, ಕೊಟ್ಟಾಗ ಬಳಸುವ, ಕೊಡದಿದ್ದಾಗ ಅಂತಹ ಸಂಸ್ಥೆಗಳೊಡನೆ ಅಸಹಕಾರ ಚಳುವಳಿಗಿಳಿಯುವ ಸಾಮಾನ್ಯ ಕನ್ನಡದ ಗ್ರಾಹಕರ ಪ್ರಯತ್ನದಿಂದಾಗಿ. 1991ರಲ್ಲಿ ಭಾರತ ಮುಕ್ತ ಮಾರುಕಟ್ಟೆಯ ವ್ಯವಸ್ಥೆಗೆ ತೆರೆದುಕೊಂಡ ನಂತರ ಮಾರುಕಟ್ಟೆಯಲ್ಲಿ ಗ್ರಾಹಕ ಅನ್ನುವ ಒಬ್ಬ ವ್ಯಕ್ತಿ ಒಂದು ದೊಡ್ಡ ಶಕ್ತಿಯಾಗಿ ಹೊರ ಹೊಮ್ಮಿದ್ದಾನೆ. ಆತನ ಬೇಕು-ಬೇಡಗಳಿಗೆ ಸ್ಪಂದಿಸಲು ಸಂಸ್ಥೆಗಳು ತುದಿಗಾಲಿನಲ್ಲಿ ಸ್ಪರ್ಧೆಗೆ ನಿಲ್ಲುವಂತಹ ಬದಲಾವಣೆ ನಮ್ಮ ಸಮಾಜದಲ್ಲಾಗಿದೆ. ಹೀಗಿದ್ದಾಗಲೂ ಕರ್ನಾಟಕದ ಮಾರುಕಟ್ಟೆಗಳಲ್ಲಿ ಕನ್ನಡ ಮೊದಲ ಆದ್ಯತೆಯ ಸ್ಥಾನ ಪಡೆಯುವಲ್ಲಿ ಸೋತಿತ್ತು. ಇದಕ್ಕೆ ಕಾರಣ ಗ್ರಾಹಕ ಚಳುವಳಿ ಅನ್ನುವ ಕಲ್ಪನೆಯೇ ನಮ್ಮ ಸಮಾಜಕ್ಕೆ ಹೊಸತಾಗಿದ್ದದ್ದು. ಇದ್ದ ಚೂರು ಪಾರು ಗ್ರಾಹಕ ಹಕ್ಕಿನ ಪರಿಕಲ್ಪನೆಯೂ ಕೇವಲು ತೂಕ, ಅಳತೆ, ಗುಣಮಟ್ಟಕ್ಕೆ ಸೀಮಿತವಾಗಿತ್ತು. ಆದರೆ ಅನೇಕ ಮುಂದುವರೆದ ಭಾಷಾ ಜನಾಂಗದ ನಾಡಿನಲ್ಲಿರುವಂತೆ, ಗ್ರಾಹಕ ಸೇವೆಗೆ ಭಾಷೆಯ ಬಹು ದೊಡ್ಡ ಆಯಾಮವೊಂದಿದ್ದು, ತನ್ನ ಭಾಷೆಯಲ್ಲಿ ಸೇವೆಯನ್ನು ಕೊಡದಿರುವುದು ಗ್ರಾಹಕ ಹಕ್ಕುಗಳ ಉಲ್ಲಂಘನೆ ಅನ್ನುವ ಜಾಗೃತಿ ಹೆಚ್ಚತೊಡಗಿದಂತೆ ಕರ್ನಾಟಕದ ಮಾರುಕಟ್ಟೆಯಲ್ಲೂ ಹಲವಾರು ಕನ್ನಡ ಪರ ಬದಲಾವಣೆಗಳಾಗಿವೆ. ಇದರ ಪರಿಣಾಮವಾಗಿ ಎಂಬಂತೆ ಇತ್ತೀಚೆಗೆ ಕನ್ನಡದ ಸಿನೆಮಾ ಕಲಾವಿದರಾದ ಸುದೀಪ್, ಪುನೀತ್, ಉಪೇಂದ್ರ ಮುಂತಾದವರನ್ನು ಬಳಸಿಕೊಂಡು ಜಾಹೀರಾತು ನೀಡಲು ಹಲವಾರು ಕಂಪನಿಗಳು ಮುಂದಾಗಿವೆ. ಇವತ್ತಿಗೆ ಕರ್ನಾಟಕದ ಮಾರುಕಟ್ಟೆಯಲ್ಲಿ ಕನ್ನಡದ ವಿಷಯದಲ್ಲಿ ಎಲ್ಲವೂ ಸರಿ ಹೋಗಿದೆ ಅನ್ನಲಾಗದಿದ್ದರೂ ಸರಿ ಹೋಗಿರುವುದರಲ್ಲಿ ಹೆಚ್ಚಿನದ್ದು ಕನ್ನಡದ ಗ್ರಾಹಕರ ಹಕ್ಕೊತ್ತಾಯದಿಂದಲೇ ಅನ್ನುವುದನ್ನು ಮರೆಯಬಾರದು.

ಈ ಬದಲಾವಣೆಗಳು ಒಂದು ಬಹು ದೊಡ್ಡ ಪಾಠವನ್ನು ಕನ್ನಡ ಸಮಾಜಕ್ಕೆ ನೀಡುತ್ತಿದೆ. ಅದೇನೆಂದರೆ ಬರುವ ದಿನಗಳಲ್ಲಿ ಕನ್ನಡ ಚಳುವಳಿಯ ಬಹುದೊಡ್ಡ ಭಾಗವಾಗಿ, ಮಹತ್ವದ ಪಾತ್ರವನ್ನು ಕನ್ನಡ ಕೇಂದ್ರಿತ ಗ್ರಾಹಕ ಚಳುವಳಿ ನಿಭಾಯಿಸಲಿದೆ ಅನ್ನುವುದು. ಯಾಕೆಂದರೆ ಮಾರುಕಟ್ಟೆಯಲ್ಲಿ ಕನ್ನಡವನ್ನು ಭದ್ರವಾಗಿ ನೆಲೆ ನಿಲ್ಲಿಸಬೇಕೆಂದರೆ ಅದನ್ನು ಸಾಧ್ಯವಾಗಿಸುವುದು ಆ ಮಾರುಕಟ್ಟೆಯನ್ನು ನಿಯಂತ್ರಿಸುವ ಶಕ್ತಿ ಹೊಂದಿರುವ ಗ್ರಾಹಕರಿಂದ ಮಾತ್ರವೇ ಸಾಧ್ಯ ಅನ್ನುವುದು. ವ್ಯಾಪಾರದಲ್ಲಿರುವ ಪ್ರತಿಯೊಂದು ಕಂಪನಿಯೂ ಯಾವತ್ತು ಖರ್ಚು ಕಡಿಮೆ ಮಾಡಿಕೊಳ್ಳಲು ನೋಡುತ್ತವೆ. ಹೀಗಾಗಿ ತಮ್ಮ ಉತ್ಪನ್ನಗಳ ಮಾರಾಟ, ಸೇವೆಯಲ್ಲಿ ಎಷ್ಟು ಕಡಿಮೆ ಭಾಷೆಯಿರುತ್ತೋ ಅಷ್ಟೇ ಅವರಿಗೆ ಲಾಭ. ಆದರೆ ಗ್ರಾಹಕರಾದ ನಮಗೆ ಅವರ ಚಿಂತೆ ಬೇಕಿಲ್ಲ. ನಾವು ದುಡ್ಡು ಕೊಡುತ್ತೇವೆ, ಅದಕ್ಕೆ ತಕ್ಕುದಾಗಿ ಕನ್ನಡದಲ್ಲಿ ಎಲ್ಲ ಹಂತದ ಗ್ರಾಹಕ ಸೇವೆ ಪಡೆಯುವುದು ನಮ್ಮ ಹಕ್ಕು. ಗ್ರಾಹಕ ಚಳುವಳಿಯ ಮೂಲಕ ಜಾಗತೀಕರಣದ ನಂತರ ಕನ್ನಡ ಸಮಾಜವನ್ನು ಪ್ರವೇಶಿಸಿರುವ ಹೊಸ ಹೊಸ ಭಾಷೆ ಬಳಸುವ ಆಯ್ಕೆ (ಲ್ಯಾಂಗ್ವೇಜ್ ಪ್ಲಾನಿಂಗ್ (ನುಡಿ ಹಮ್ಮುಗೆ) ಭಾಷೆಯಲ್ಲಿ ಕರೆಯಲಾಗುವ ಲ್ಯಾಂಗ್ವೇಜ್ ರೆಜಿಸ್ಟರ್)ಗಳನ್ನು ಚೆನ್ನಾಗಿ ಕನ್ನಡದಲ್ಲಿ ಕಟ್ಟಿಕೊಳ್ಳಲು ಸಾಧ್ಯ. ಇಂದು ಮೊಬೈಲಿನಲ್ಲಿ, ಕಂಪ್ಯೂಟರಿನಲ್ಲಿ ಕನ್ನಡ ಬಳಸಲು ಸಾಧ್ಯವಾಗಿದೆ. ಬ್ಯಾಂಕಿನ ಎ.ಟಿ.ಎಮ್ ಕನ್ನಡದಲ್ಲಿ ಬಳಸಬಹುದಾಗಿದೆ. ಈ ಮೊದಲು ಪೀಠಿಕೆಯಲ್ಲಿ ಹೇಳಿದಂತೆ ಕರ್ನಾಟಕದಲ್ಲಿ ವ್ಯಾಪಾರ ಮಾಡುತ್ತಿರುವ ಖಾಸಗಿ ಸಂಸ್ಥೆಗಳು ಕನ್ನಡ ಕಡೆಗಣಿಸಿರುವುದು, ಕನ್ನಡ ಸಮಾಜವನ್ನು ಬಹಳ ದೊಡ್ಡ ಪ್ರಮಾಣದಲ್ಲಿ ಪ್ರಭಾವಿಸುತ್ತಿರುವ ತಂತ್ರಜ್ಞಾನದ ಬದಲಾವಣೆಗಳು, ಮಿತಿಮೀರಿದ ವಲಸೆಯಿಂದ ಬೆಂಗಳೂರಿನಂತಹ ಊರುಗಳಲ್ಲಿ ಕನ್ನಡದ ಸಾರ್ವಭೌಮತ್ವಕ್ಕೆ ಎದುರಾಗಿರುವ ತೊಂದರೆಗಳಿಗೆ ಸಂಘಟಿತವಾದ ಕನ್ನಡಿಗರ ಗ್ರಾಹಕ ಚಳುವಳಿ ಒಂದು ಪ್ರಬಲ ಪರಿಹಾರವಾಗಿದೆ. ಇದನ್ನು ಇನ್ನಷ್ಟು ವ್ಯಾಪಕಗೊಳಿಸಲು, ಹೆಚ್ಚೆಚ್ಚು ಕನ್ನಡಿಗರು ತಮ್ಮ ಗ್ರಾಹಕ ಹಕ್ಕನ್ನು ಚಲಾಯಿಸಿ ಕನ್ನಡದಲ್ಲಿ ಸೇವೆಗೆ ಆಗ್ರಹಿಸುವಂತಾಗಲು ಗ್ರಾಹಕ ಪ್ರಜ್ಞೆ ಮತ್ತು ಗ್ರಾಹಕ ಸೇವೆ ಪಡೆಯುವಾಗ ಕನ್ನಡದಲ್ಲಿ ಸೇವೆ ಕೇಳುವುದು ಯಾಕೆ ಮುಖ್ಯ ಅನ್ನುವುದನ್ನು ಮನವರಿಕೆ ಮಾಡಿಕೊಡುವ ಗುರುತರವಾದ ಕೆಲಸ ನಮ್ಮ ಮುಂದಿದೆ. ಸ್ವಾತಂತ್ರ್ಯ ಬಂದಾಗಿನಿಂದಲೂ ಬೆಂಗಳೂರಿನಲ್ಲಿ ಕನ್ನಡದ ಸಾರ್ವಭೌಮತ್ವಕ್ಕಾಗಿ ಅನೇಕ ಚಳುವಳಿಗಳು ನಡೆದಿವೆ ಮತ್ತು ಇವೆಲ್ಲವೂ ಒಂದು ಮಟ್ಟಿಗೆ ಕನ್ನಡದ ನೆಲೆಯನ್ನು ಭದ್ರಗೊಳಿಸುವಲ್ಲಿ ಸಹಾಯ ಮಾಡಿವೆ. ಆದರೆ ಜಾಗತೀಕರಣ ತಂದಿರುವ ಬದಲಾವಣೆಯ ಅಲೆ ಕನ್ನಡವು ಕಳೆದ ಎರಡು ಸಾವಿರ ವರ್ಷಗಳಲ್ಲೇ ನೋಡಿರದಂತದ್ದು. ಇದಕ್ಕೆ ನಮ್ಮ ಪ್ರತಿಕ್ರಿಯೆ ಹಳೆಯ ಮಾದರಿಯಲ್ಲಿದ್ದರೆ ಸಾಲದು. ಈ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಲು ಹೆಚ್ಚೆಚ್ಚು ಕನ್ನಡಿಗರು ಪಾಲ್ಗೊಳ್ಳುವಂತಹ, ಚಿಕ್ಕ ಚಿಕ್ಕ ಹೆಜ್ಜೆಯಿಂದಲೇ ಬದಲಾವಣೆಯತ್ತ ಸಾಗುವಂತಹ ಕ್ರಮಗಳು ಬೇಕು ಮತ್ತು ಅಂತಹದೊಂದು ಸಾಧ್ಯತೆ ಕನ್ನಡದಲ್ಲಿ ಪ್ರಬಲವಾದ ಗ್ರಾಹಕ ಚಳುವಳಿ ಸಾಧ್ಯವಾಗಿಸುತ್ತೆ. ಏಕೆಂದರೆ ಅಮೇರಿಕದ ಅಧ್ಯಕ್ಷರಾಗಿದ್ದ ಜಾನ್. ಎಫ್. ಕೆನಡಿಯವರು ಹೇಳುವಂತೆ “ನಾವೆಲ್ಲರೂ ಗ್ರಾಹಕರೇ” ಮತ್ತು ನಮಗೆಲ್ಲರಿಗೂ ಸುರಕ್ಷತೆಯ, ತಿಳಿದುಕೊಳ್ಳುವ, ಆಯ್ಕೆಯ ಮತ್ತು ನ್ಯಾಯ ಪಡೆಯುವ ಎಲ್ಲ ಹಕ್ಕುಗಳೂ ಇವೆ. ಕನ್ನಡದ ಸಂದರ್ಭದಲ್ಲಿ ಈ ಹಕ್ಕುಗಳ ಜೊತೆ ಕನ್ನಡದಲ್ಲೇ ಸೇವೆ ಪಡೆಯುವ ಭಾಷೆಯ ಹಕ್ಕೊಂದನ್ನು ನಾವು ಸೇರಿಸಿಕೊಳ್ಳಬೇಕಿದೆ. ಕನ್ನಡ ಕೇಂದ್ರಿತ ಗ್ರಾಹಕ ಚಳುವಳಿಯನ್ನು ಸಮರ್ಥವಾಗಿ, ಸಂಘಟಿತವಾಗಿ ಕಟ್ಟುವಲ್ಲಿ ಯಶಸ್ಸು ಕಂಡರೆ ಮುಂದಿನ ದಿನಗಳಲ್ಲಿ ಕನ್ನಡ ಚಳುವಳಿ, ಕನ್ನಡ ನಾಡಿನ ಮಾರುಕಟ್ಟೆಯನ್ನೇ ಕನ್ನಡಕ್ಕೆ ಒಗ್ಗಿಸಿಕೊಳ್ಳುವ ಚಳುವಳಿಯಾಗಿ, ಕನ್ನಡವನ್ನು ಭವಿಷ್ಯದತ್ತ ಮುಖ ಮಾಡಿಸುವ ಚಳುವಳಿಯಾಗಿ ರೂಪುಗೊಳ್ಳುತ್ತದೆ. ಇದರ ಶಕ್ತಿ ಕನ್ನಡ ಪರ ಸಾಹಿತಿಗಳು, ಚಿಂತಕರು, ಹೋರಾಟಗಾರರು, ಹೀಗೆ ಎಲ್ಲರಿಗೂ ಮನವರಿಕೆಯಾಗಬೇಕಿದೆ.

ಅಂಕಣವನ್ನು ಡೌನ್ ಲೋಡ್ ಮಾಡಲು ಈ ಕೊಂಡಿ ಬಳಸಿ: ಗ್ರಾಹಕಸೇವೆಯಲ್ಲಿ ಕನ್ನಡ

Posted in ಕನ್ನಡ, ಗ್ರಾಹಕ ಸೇವೆ, ಜಾಗತೀಕರಣ | ನಿಮ್ಮ ಟಿಪ್ಪಣಿ ಬರೆಯಿರಿ

ಭಾರತಕ್ಕೂ ಚೀನಾಗೂ ಇರುವ ಸಾಮ್ಯತೆ – ಭಾಷಾ ಹೇರಿಕೆ

ಚೀನಾ ಅಂದ ಕೂಡಲೇ ಮೊದಲು ಕೇಳಿ ಬರುವುದೇನು? ಚೀನಾದಲ್ಲಿ ಒಂದೇ ಭಾಷೆಯಿದ್ದು, ಚೀನಿಯರೆಲ್ಲರೂ ಮ್ಯಾಂಡರೀನ್ ನುಡಿಯುತ್ತಾರೆ ಅನ್ನುವುದಲ್ಲವೇ? ಭಾರತದಲ್ಲಿ ಭಾಷಾ ವೈವಿಧ್ಯತೆ ಇರುವುದೇ ನಮ್ಮ ಸಮಸ್ಯೆ, ಚೀನಿಯರಂತೆ ನಮ್ಮಲ್ಲೂ ಒಂದೇ ನುಡಿ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಅನ್ನುವ ಅಭಿಪ್ರಾಯ ಕೆಲವರದ್ದು. ಆದರೆ ಪ್ರಜಾಪ್ರಭುತ್ವವಿಲ್ಲದ, ಹೊರಪ್ರಪಂಚಕ್ಕೆ ಯಾವತ್ತಿಗೂ ಮುಚ್ಚಿಕೊಂಡಿರುವ ಚೀನಾದೊಳಗೆ ಅತ್ಯಂತ ವ್ಯವಸ್ಥಿತವಾಗಿ ಅಲ್ಲಿನ ಹಲವಾರು ಭಾಷೆಗಳನ್ನು ಹಂತ ಹಂತವಾಗಿ ಮುಗಿಸಿ, ಇಡೀ ಚೀನಾ ಮ್ಯಾಂಡರೀನ್ ಮಾತನಾಡುವ ಏಕಭಾಷೆಯ ದೇಶವಾಗಿಸುವ ಪ್ರಯತ್ನ ನಡೆಯುತ್ತಿದೆ ಅನ್ನುವುದು ಬಹಳಷ್ಟು ಜನರಿಗೆ ತಿಳಿದಿರಲಾರದು.

ಚೀನಾದ ಭಾಷಾ ಇತಿಹಾಸ

ಪ್ರಪಂಚದ ಭಾಷೆಗಳನ್ನು ಗುರುತಿಸುವ ಎತ್ನಲಾಗ್ 2015ರ ವರದಿ ಪ್ರಕಾರ ಚೀನಾದಲ್ಲಿ ಸುಮಾರು 292 ಜೀವಂತ ನುಡಿಗಳಿವೆ. ಆದರೆ ಉತ್ತರ ಚೀನಾ, ಅದರಲ್ಲೂ ರಾಜಧಾನಿ ಬೀಜಿಂಗ್ ಸುತ್ತಮುತ್ತ ಮಾತನಾಡುವ ಮ್ಯಾಂಡರೀನ್ ನುಡಿಯ ಒಂದು ಒಳನುಡಿಯಾದ ಪುಟೋಂಗ್ವಾವನ್ನು ಅಲ್ಲಿನ ಸರ್ಕಾರ ಚೀನಾದ ಅಧಿಕೃತ ಭಾಷೆಯೆಂದು ಗುರುತಿಸಿದೆ. ಚೀನಾದೊಳಗೆ ಸ್ವಾಯತ್ತೆ ಇರುವ ಪ್ರಾಂತ್ಯಗಳಾದ ಹಾಂಗ್ ಕಾಂಗ್, ಮಕಾವ್ ಮತ್ತು ಟಿಬೇಟಿನಲ್ಲಿ ಮ್ಯಾಂಡರೀನ್ ಜೊತೆ ಕ್ರಮವಾಗಿ ಅಲ್ಲಿನ ನುಡಿಗಳಾದ ಇಂಗ್ಲಿಷ್, ಪೊರ್ಚುಗೀಸ್ ಮತ್ತು ಟಿಬೇಟಿಯನ್ ನುಡಿಗಳಿಗೂ ಅಧಿಕೃತ ಭಾಷೆಯ ಸ್ಥಾನ ಕೊಟ್ಟಿದೆ. ಸ್ವಾಯತ್ತೆ ಇರುವ ಈ ಪ್ರಾಂತ್ಯಗಳೆಲ್ಲವೂ ಬೇರೆ ಆಡಳಿತದಲ್ಲಿದ್ದ ಪ್ರದೇಶಗಳಾಗಿದ್ದು, ಅವುಗಳನ್ನು ಬಿಗಿಪಟ್ಟಿನಿಂದ ಚೀನಾ ತನ್ನ ತೆಕ್ಕೆಗೆ ತೆಗೆದುಕೊಂಡಿದ್ದು ಅನ್ನುವುದನ್ನು ಇಲ್ಲಿ ಮರೆಯಬಾರದು. ಹೀಗಾಗಿ ಅಲ್ಲಿನ ನುಡಿಗಳನ್ನು ಗುರುತಿಸುವ ಹೆಜ್ಜೆ ಎಲ್ಲೆಡೆ ಮ್ಯಾಂಡರೀನ್ ಸ್ಥಾಪಿಸುವ ಹಾದಿಯಲ್ಲಿ ತೋರಿಕೆಯ ಒಂದು ತಾತ್ಕಾಲಿಕ ಕ್ರಮವೆಂದೇ ಕಾಣಬೇಕು. ಆದರೆ ಇವತ್ತು ಹೇಳಲು ಹೊರಟಿರುವುದು ಚೀನಾದ ಒಳಗಡೆಯೇ ಇರುವ ದಕ್ಷಿಣ ಚೀನಾದ ಗ್ವಾಂಗ್ಡಂಗ್ ಪ್ರಾಂತ್ಯದಲ್ಲಿ ತಲೆತಲಾಂತರದಿಂದ ಹತ್ತು ಕೋಟಿಯಷ್ಟು ಜನರು ಮಾತನಾಡುತ್ತ ಬಂದಿರುವ ಕ್ಯಾಂಟೋನೀಸ್ ಭಾಷೆ ಮತ್ತು ಅದನ್ನು ವ್ಯವಸ್ಥಿತವಾಗಿ ಮೂಲೆಗುಂಪಾಗಿಸುತ್ತಿರುವ ನೋವಿನ ಕತೆ.

ಕ್ಯಾಂಟೋನೀಸ್ ಕತೆ

ಚೀನಾದ ದಕ್ಷಿಣ ಭಾಗದಲ್ಲಿ ಇರುವ ಗ್ವಾಂಗ್ಡಂಗ್ ಪ್ರಾಂತ್ಯ ಮತ್ತು ಪಕ್ಕದ ಹಾಂಗ್ ಕಾಂಗ್, ಮಕಾವಿನಲ್ಲಿ ಬಹುತೇಕರು ಮಾತನಾಡುತ್ತಿದ ಭಾಷೆ ಕ್ಯಾಂಟೋನೀಸ್ ಆಗಿತ್ತು. ಚೀನಾ ಆರ್ಥಿಕ ಸುಧಾರಣೆಗಳಿಗೆ ತೆರೆದುಕೊಂಡ ನಂತರ ಭೌಗೋಳಿಕವಾಗಿ ಆಯಕಟ್ಟಿನ ಪ್ರದೇಶವಾಗಿದ್ದ ಗ್ವಾಂಗ್ಡಂಗ್ ಪ್ರಾಂತ್ಯಕ್ಕೆ ಅಪಾರ ಪ್ರಮಾಣದ ವಿದೇಶಿ ಹೂಡಿಕೆ ಹರಿದು ಬಂತು. ಹೂಡಿಕೆಯ ಬೆನ್ನಲ್ಲೇ ದೊಡ್ಡ ಸಂಖ್ಯೆಯಲ್ಲಿ ಸೃಷ್ಟಿಯಾದ ಉದ್ಯೋಗವಕಾಶಗಳನ್ನು ಅರಸಿ ಮ್ಯಾಂಡರೀನ್ ನುಡಿಯಾಡುವ ಹಾನ್ ಚೈನೀಸ್ ಅನ್ನುವ ಉತ್ತರ ಚೀನಾದ ಪ್ರಬಲ ಜನಾಂಗದವರ ವಲಸೆ ಇಲ್ಲಿಗೆ ಹರಿದು ಬಂತು. ಈ ವಲಸೆ 20-30 ವರ್ಷದ ಅವಧಿಯಲ್ಲಿ ಈ ಪ್ರದೇಶದ ಸಂಪೂರ್ಣ ಜನಲಕ್ಷಣವನ್ನೇ ಬುಡಮೇಲು ಮಾಡುವ ಸ್ವರೂಪದಲ್ಲಿ ಆಯಿತು. ಮೂಲನಿವಾಸಿಗಳಷ್ಟೇ ಸಂಖ್ಯೆಯಲ್ಲಿ ವಲಸಿಗರು ನೆಲೆಸುವ ಬದಲಾವಣೆಯ ಬೆನ್ನಲ್ಲೇ ವಲಸಿಗರ ನುಡಿ ಮ್ಯಾಂಡರೀನ್ ಈ ಪ್ರಾಂತ್ಯದ ವ್ಯಾಪಾರ,ವಹಿವಾಟು, ಮಾರುಕಟ್ಟೆ, ಸಾಂಸ್ಕೃತಿಕ ವಲಯಗಳನ್ನೆಲ್ಲ ತನ್ನ ತೆಕ್ಕೆಗೆ ತೆಗೆದುಕೊಳ್ಳಲಾರಂಭಿಸಿತು. ಇಂತಹ ಹೊತ್ತಿನಲ್ಲಿ ಕ್ಯಾಂಟೋನೀಸ್ ನುಡಿಯ ಪರ ನಿಲ್ಲಬೇಕಿದ್ದ ಚೀನಾದ ಸರ್ಕಾರ, ಮ್ಯಾಂಡರೀನ್ ಹರಡುವ ತನ್ನ ಯೋಜನೆಗೆ ಇದನ್ನೊಂದು ಅಪೂರ್ವ ಅವಕಾಶ ಎಂಬಂತೆ ಕಂಡಿತಲ್ಲದೇ ಮ್ಯಾಂಡರೀನ್ ಹರಡಲು ಸಾಧ್ಯವಿರುವ ಎಲ್ಲ ಹೆಜ್ಜೆಗಳನ್ನು ತೆಗೆದುಕೊಳ್ಳಲಾರಂಭಿಸಿತು. ಮೊದಲಿಗೆ ಅಲ್ಲಿನ ಶಾಲೆಗಳಲ್ಲಿ ಮಕ್ಕಳು ಕಡ್ಡಾಯವಾಗಿ ಮ್ಯಾಂಡರೀನಿನಲ್ಲೇ ಮಾತನಾಡಬೇಕು ಅನ್ನುವ ಸುತ್ತೋಲೆ ಹೊರಡಿಸಿತು. ಮ್ಯಾಂಡರೀನ್ ಒಂದು ಸುಂದರವಾದ, ಮೆದುವಾದ, ವರ್ಚಸ್ಸಿನ ಭಾಷೆ, ಅದನ್ನು ಕಲಿಯುವುದು ಪ್ರತಿಷ್ಟೆಯ ಸಂಕೇತ ಅನ್ನುವ ಪ್ರಚಾರ ವ್ಯಾಪಕವಾಯಿತು. ಇಲ್ಲಿನ ಟಿವಿ, ರೇಡಿಯೊ ಮಾಧ್ಯಮಗಳಲ್ಲಿ ಕ್ಯಾಂಟೋನೀಸ್ ಬದಲು ಹೆಚ್ಚೆಚ್ಚು ಮ್ಯಾಂಡರೀನ್ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವಂತೆ ಅಲ್ಲಿನ ಮಾಧ್ಯಮಗಳ ಮೇಲೆ ನಿರ್ಬಂಧ ಹೇರಲಾಯಿತು. ಕ್ಯಾಂಟೋನೀಸ್ ಪರ ದನಿ ಎತ್ತುವ ಮೂಲನಿವಾಸಿಗಳನ್ನು ಬಂಧಿಸಿ, ಅವರು ಯಾವುದೋ ಹಿಡನ್ ಅಜೆಂಡಾ ಇಟ್ಟುಕೊಂಡಿರುವವರು ಎಂಬಂತೆ ಬಿಂಬಿಸುವ ಕೆಲಸಗಳಾದವು.ಕ್ಯಾಂಟೋನೀಸ್ ಕಲಿತರೆ ಅಂತಹ ಪ್ರಯೋಜನವೇನಿದೆ ಎಂಬ ಭಾವನೆ ಅಲ್ಲಿನ ಜನರಿಗೇ ಬರುವ ಹಾಗೇ (ಕನ್ನಡ ಕಲಿತರೆ ಏನು ಪ್ರಯೋಜನ ಎಂದು ನಮ್ಮಲ್ಲಿ ಮಾಡಲಾಗುತ್ತಿರುವಂತೆ) ಮಾಡಲಾಯಿತು. ಇದೆಲ್ಲದರ ಪರಿಣಾಮವಾಗಿ ಈಗ ಅಲ್ಲಿ ಕ್ಯಾಂಟೋನೀಸ್ ನುಡಿ ದಿನೇ ದಿನೇ ತನ್ನ ಸಾರ್ವಭೌಮತ್ವ ಕಳೆದುಕೊಂಡು ಅವಸಾನದ ಅಂಚಿಗೆ ಸಾಗುತ್ತಿದೆ. ಕನ್ ಫ್ಯೂಶಿಯಸ್ ನಂತಹ ಅಪರೂಪದ ತತ್ವಜ್ಞಾನಿಯನ್ನು ಜಗತ್ತಿಗೆ ಕೊಟ್ಟಿದೆ ಎನ್ನಲಾದ ಈ ನುಡಿ ಇನ್ನೆರಡು ತಲೆಮಾರಿನ ಅವಧಿಯಲ್ಲಿ ಪೂರ್ತಿಯಾಗಿ ಮರೆಯಾಗಬಹುದು ಅನ್ನುವುದು ಎಂತಹ ದುರಂತ ಅಲ್ಲವೇ? ಚೀನಾ ಒಂದು ಬಾಗಿಲು ಮುಚ್ಚಿದ ದೇಶವಾಗಿರುವುದರಿಂದ, ಪತ್ರಿಕಾ ಸ್ವಾತಂತ್ರ್ಯ ಅನ್ನುವುದು ಅಲ್ಲಿ ಇಲ್ಲದಿರುವುದರಿಂದ ಈ ದುರಂತ ಪ್ರಪಂಚದ ಹೆಚ್ಚಿನ ಜನರಿಗೆ ತಲುಪಲು ಸಾಧ್ಯವಾಗುತ್ತಿಲ್ಲ. ಪ್ರಪಂಚದಲ್ಲಿ ಬೃಹದಾಕಾರವಾಗಿ ಬೆಳೆದಿರುವ ಚೀನಿಯರ ಆರ್ಥಿಕ ಮತ್ತು ರಾಜಕೀಯ ಬಲ, ಎಲ್ಲ ದೇಶಗಳಿಗೂ ಅದರ ಸ್ನೇಹ ಸಂಪಾದಿಸುವುದನ್ನು ತಮ್ಮ ವಿದೇಶಾಂಗ ನೀತಿಯ ಒಂದು ಭಾಗವನ್ನಾಗಿಸಬೇಕಾದ ಒತ್ತಡ ತಂದಿದೆ. ಹೀಗಾಗಿ ತಮ್ಮ ತಮ್ಮ ದೇಶದ ಸ್ವಹಿತಾಸಕ್ತಿಯ ಮುಂದೆ ಚೀನಾದಲ್ಲಿ ಆಗುತ್ತಿರುವ ಈ ತೊಂದರೆಗಳಿಗೆ ಎಲ್ಲರದ್ದೂ ಜಾಣಕಿವುಡಿನ ವರ್ತನೆ. ಇಷ್ಟಾದರೂ ಕ್ಯಾಂಟೋನೀಸ್ ಪರ ದನಿ ಎತ್ತುವ ಕೆಲಸ ನಿಂತಿಲ್ಲ. ಕಳೆದು ಇನ್ನೂರು-ಮುನ್ನೂರು ವರ್ಷಗಳ ಅವಧಿಯಲ್ಲಿ ಪಶ್ಚಿಮದ ದೇಶಗಳಿಗೆ ವ್ಯಾಪಕವಾಗಿ ವಲಸೆ ಹೋಗಿದ್ದ ಕ್ಯಾಂಟೋನೀಸ್ ಭಾಷಿಕರು ಇಂದು ಆ ದೇಶಗಳಲ್ಲಿ ಸಂಘಟಿತರಾಗಿ ತಮ್ಮ ನುಡಿಯ ರಕ್ಷಣೆಗಾಗಿ ದನಿ ಎತ್ತಿದ್ದಾರೆ. ಆದರೂ ಪ್ರಜಾಪ್ರಭುತ್ವವಿಲ್ಲದ ಚೀನಾದಲ್ಲಿ ಇದನ್ನೆಲ್ಲ ಸರಿಪಡಿಸಿಕೊಳ್ಳುವುದು ಅಷ್ಟು ಸುಲಭ ಸಾಧ್ಯವಲ್ಲ.

ಭಾರತಕ್ಕೆ ಪಾಠ

ಚೀನಾದಲ್ಲಾಗುತ್ತಿರುವ ಈ ಘಟನೆಯ ಹಿಂದಿರುವವರ ಮನಸ್ಥಿತಿಗೂ ಭಾರತದಲ್ಲಿ ಎಲ್ಲೆಡೆ ಹಿಂದಿ ಹರಡಬೇಕು ಎಂದು ಹೊರಡುತ್ತಿರುವವರ ಮನಸ್ಥಿತಿಗೂ ಅಂತಹ ವ್ಯತ್ಯಾಸವೇನಿಲ್ಲ. ಭಾರತದಲ್ಲಿ ಪ್ರಜಾಪ್ರಭುತ್ವ ಇರುವುದರಿಂದ, ಬೇರೆ ಬೇರೆ ಭಾಷಿಕ ಜನರ ಆಶೋತ್ತರಗಳನ್ನು ಈಡೇರಿಸಲು ಭಾಷಾವಾರು ಪ್ರಾಂತ್ಯಗಳನ್ನು ಕಟ್ಟಿಕೊಂಡಿದ್ದರಿಂದ ಇಂತಹದೊಂದು ಹೇರಿಕೆಯ ಹೆಜ್ಜೆ ಚೀನಾದಲ್ಲಿ ಆದಷ್ಟು ವೇಗವಾಗಿ ಭಾರತದಲ್ಲಿ ಹರಡಿಲ್ಲ. ಆದರೂ ಇಂದಿಗೂ ಈ ನಿಟ್ಟಿನಲ್ಲಿ ನಡೆಯುತ್ತಿರುವ ಪ್ರಯತ್ನಗಳು, ಭಾರತದ ಸರ್ಕಾರದ ಎಲ್ಲ ಯೋಜನೆಗಳನ್ನು ಕೇವಲ ಹಿಂದಿ/ಇಂಗ್ಲಿಷಿನಲ್ಲಷ್ಟೆ ಜನರಿಗೆ ತಲುಪಿಸುವ ಕೆಲಸಗಳು, ಸ್ಥಳೀಯ ಭಾಷೆಗಳನ್ನು ಕಡೆಗಣಿಸಿ ಬ್ಯಾಂಕು, ಅಂಚೆ, ರೈಲು, ವಿಮಾನ ಮುಂತಾದೆಡೆಯೆಲ್ಲ ಹಿಂದಿಯನ್ನು ವ್ಯವಸ್ಥಿತವಾಗಿ ಬಳಕೆಗೆ ತರುವ ಹೆಜ್ಜೆಗಳು, ಹಿಂದಿ ಭಾಷಿಕರಿಗೆ ದೇಶದ ಎಲ್ಲೆಡೆ ವಲಸೆ ಸುಲಭವಾಗುವಂತೆ ಕಟ್ಟಲಾಗುತ್ತಿರುವ ವ್ಯವಸ್ಥೆಗಳೆಲ್ಲವನ್ನೂ ಗಮನಿಸಿದರೆ ಕ್ಯಾಂಟೋನಿಸಿಗೆ ಬಂದಿರುವ ಸ್ಥಿತಿ ನಮ್ಮ ಭಾಷೆಗಳಿಗೂ ಬರದೇ ಇರದು. ಪ್ರಜಾಪ್ರಭುತ್ವದ ಕಾರಣಕ್ಕೆ ತಡವಾಗಬಹುದು, ಆದರೆ ಬರದು ಅನ್ನಲಾಗದು. ಬೆಂಗಳೂರು, ಮುಂಬೈ, ಚೆನ್ನೈಯಂತಹ ನಗರಗಳಲ್ಲಿ ಇಂದು ಹಿಂದಿಯ ಪ್ರಾಬಲ್ಯ ಅಲ್ಲಿನ ಸ್ಥಳೀಯ ಭಾಷೆಗಳನ್ನು ಮೀರಿ ಬೆಳೆಯುತ್ತಿರುವುದನ್ನು ಈ ಕಣ್ಣಿನಿಂದ ನೋಡಿದಾಗಲಷ್ಟೇ ಅರ್ಥ ಮಾಡಿಕೊಳ್ಳಬಹುದು. ನಮ್ಮ ರಾಜಕಾರಣಿಗಳು ಈಗ ಎಚ್ಚೆತ್ತು ಭಾರತ ಸಂವಿಧಾನದ 8ನೇ ಪರಿಚ್ಛೇದದಲ್ಲಿರುವ ಎಲ್ಲ ಭಾಷೆಗಳಿಗೂ ಭಾರತ ಸರ್ಕಾರದ ಅಧಿಕೃತ ಭಾಷೆಯ ಸ್ಥಾನಮಾನ ದೊರಕಿಸಿಕೊಳ್ಳಲು ದನಿಯೆತ್ತಬೇಕು, ಇಲ್ಲದಿದ್ದರೆ ಕ್ಯಾಂಟೋನೀಸಿನ ಗತಿ ಕನ್ನಡಕ್ಕೂ ಬರಬಹುದು.

Posted in ಕ್ಯಾಂಟೋನೀಸ್, ಹಿಂದಿ ಹೇರಿಕೆ | ನಿಮ್ಮ ಟಿಪ್ಪಣಿ ಬರೆಯಿರಿ

ಬ್ಯಾಂಕುಗಳಿಗೆ ಏನು ಮುಖ್ಯವಾಗಬೇಕು? ಜನರ ಅನುಕೂಲವೋ? ಹಿಂದೀ ಹೇರಿಕೆಯೋ?

ಇತ್ತೀಚೆಗೆ ಕರ್ನಾಟಕದಲ್ಲೇ ಹುಟ್ಟಿ ಬೆಳೆದ ಕೇಂದ್ರ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಒಂದರಲ್ಲಿ ಕನ್ನಡಕ್ಕೆ ಒದಗಿರುವ ಸ್ಥಿತಿಯ ಬಗ್ಗೆ ಗೆಳೆಯರೊಬ್ಬರು ತಮ್ಮ ಅನುಭವ ಹಂಚಿಕೊಂಡರು. ಎಲ್ಲೇ ಹೋದರೂ ಕನ್ನಡದಲ್ಲಿ ಗ್ರಾಹಕ ಸೇವೆಗಾಗಿ ಶಾಂತಿಯುತ ಅಸಹಕಾರ ಚಳುವಳಿಗೆ ಇಳಿಯುವ ಅವರು ಕೇಂದ್ರ ಸರ್ಕಾರ ಕಲ್ಪಿಸುವ ಎಲ್ಲ ಗ್ರಾಹಕ ಸೇವೆಗಳಲ್ಲಿ ಬಿಗಡಾಯಿಸುತ್ತಿರುವ ಕನ್ನಡದ ಸ್ಥಿತಿಯ ಬಗ್ಗೆ ತೀವ್ರವಾಗಿ ನೊಂದಿದ್ದರು. ಅವರಿಗಾದ ಅನುಭವ ಹೀಗಿತ್ತು.

ಇದು ಕರ್ನಾಟಕದ ಬ್ಯಾಂಕುಗಳಲ್ಲಿನ ಸ್ಥಿತಿ

ಬೆಂಗಳೂರಿನ ಜೆಪಿನಗರದಲ್ಲಿರುವ ಈ ಬ್ಯಾಂಕಿನ ಕಚೇರಿಗೆ ತಮ್ಮ ಖಾತೆಗೆ ಹಣ ಜಮಾಯಿಸಲು ತೆರಳಿದ್ದ ಗೆಳೆಯರು, ಗ್ರಾಹಕರು ಯಾವುದೇ ಸರತಿಸಾಲಲ್ಲಿ ನಿಲ್ಲುವ ಅಗತ್ಯವಿಲ್ಲದೇ ತಾವೇ ಹಣ ಜಮಾವಣೆ ಮಾಡುವ ಅವಕಾಶ ಕಲ್ಪಿಸಿರುವ ಹಣ ತುಂಬುವ ಕಿಯಾಸ್ಕಿಗೆ ಭೇಟಿ ನೀಡಿದ್ದಾರೆ. ಆ ಯಂತ್ರವನ್ನು ಕನ್ನಡದಲ್ಲಿ ಬಳಸಲು ಅವಕಾಶವಿದೆಯೇ ಎಂದು ಪರಿಶೀಲಿಸಿದಾಗ ಅಲ್ಲಿ ಕೇವಲ ಹಿಂದಿ ಮತ್ತು ಇಂಗ್ಲಿಷ್ ಭಾಷೆಯ ಆಯ್ಕೆ ಕಂಡ ಗೆಳೆಯರು ಈ ಬಗ್ಗೆ ಬ್ಯಾಂಕ್ ಮ್ಯಾನೇಜರ್ ಜೊತೆ ಮಾತನಾಡಿ ತಮ್ಮ ದೂರು ಸಲ್ಲಿಸಲು ಕಾಯುತ್ತಿದ್ದಾಗ, ಅಲ್ಲಿ ಈ ಕಿಯಾಸ್ಕಿನ ಬದಲು ಸರತಿ ಸಾಲಲ್ಲೇ ನಿಂತು ಹಣ ತುಂಬಲು ಪ್ರಯತ್ನಿಸುತ್ತಿದ್ದ ಹಲವು ಕೆಳ ಮಧ್ಯಮ ವರ್ಗದ ಕನ್ನಡಿಗರನ್ನು ನೋಡಿದ್ದಾರೆ. ಅವರಲ್ಲಿ ಬಹಳಷ್ಟು ಜನರು ಬ್ಯಾಂಕಿನ ಸಿಬ್ಬಂದಿಯನ್ನೇ ತಮ್ಮ ಅರ್ಜಿ ತುಂಬಿ ಕೊಡಲು ಕೋರಿಕೊಳ್ಳುತ್ತ ಒದ್ದಾಡುತ್ತಿದ್ದದ್ದನ್ನು, ತಮ್ಮ ಕೆಲಸದ ನಡುವೆ ಇಂತಹ ಹಲವು ಒತ್ತಾಯದಿಂದ ಸಿಡಿಮಿಡಿಗೊಂಡಿದ್ದ ಸಿಬ್ಬಂದಿಯನ್ನು ಕಂಡಿದ್ದಾರೆ. ಅರ್ಜಿ ನಮೂನೆಗಳನ್ನು ಪರಿಶೀಲಿಸಿದಾಗ ಅದರಲ್ಲೆಲ್ಲೂ ಕನ್ನಡದಲ್ಲಿ ಬರೆಯುವ ಆಯ್ಕೆಯಿಲ್ಲ ಅನ್ನುವುದನ್ನು ಕಂಡುಕೊಂಡ ಗೆಳೆಯರು ಮ್ಯಾನೇಜರ್ ಬಳಿ ಈ ಎಲ್ಲ ವಿಷಯ ಪ್ರಸ್ತಾಪಿಸಲು ಕಾಯುತ್ತಿದ್ದಾಗಲೇ ಹಣತುಂಬುವ ಕಿಯಾಸ್ಕಿಗೆ ಬಂದ ಹಿಂದಿ ಭಾಷಿಕ ಕಟ್ಟಡ ಕಾರ್ಮಿಕರೊಬ್ಬರು ಯಾರ ಸಹಾಯವೂ ಇಲ್ಲದೇ ಹಿಂದಿಯಲ್ಲಿದ್ದ ಅರ್ಜಿಯನ್ನು ತುಂಬಿ, ಕಿಯಾಸ್ಕಿನ ಹಿಂದಿ ಭಾಷೆಯ ಆಯ್ಕೆಯನ್ನು ಬಳಸಿ ಹಣ ತುಂಬಿ ಸಲೀಸಾಗಿ ಐದೇ ನಿಮಿಷದಲ್ಲಿ ಅಲ್ಲಿಂದ ಹೊರಹೊಗಿದ್ದನ್ನು ಕಂಡಿದ್ದಾರೆ. ಕರ್ನಾಟಕದಲ್ಲೇ ಹುಟ್ಟಿದ ಬ್ಯಾಂಕಿನ ಕರ್ನಾಟಕದೊಳಗಿನ ಶಾಖೆಯೊಂದರಲ್ಲಿ ಕನ್ನಡದಲ್ಲಿ ಅರ್ಜಿಯೂ ಇಲ್ಲ, ಕನ್ನಡ ಮಾತನಾಡುವ ಸಿಬ್ಬಂದಿಯೂ ಇಲ್ಲ, ಕನ್ನಡದಲ್ಲಿ ವ್ಯವಹರಿಸಲೂ ಸಾಧ್ಯವಿಲ್ಲ, ಆದರೆ ಅಂತಹ ಯಾವುದೇ ತಾಪತ್ರಯ ಹಿಂದಿ ಬಲ್ಲವರಿಗಿಲ್ಲ. ಹಾಗಿದ್ದರೆ ನಮ್ಮ ನಾಡಿನ ವ್ಯವಸ್ಥೆಗಳು ಇರಬೇಕಾದದ್ದು ಯಾರ ಸಲುವಾಗಿ? ಹಿಂದಿ ಭಾಷಿಕರಿಗೆ ದೇಶದ ಯಾವುದೇ ಮೂಲೆಯಲ್ಲೂ ತೊಂದರೆಯಾಗದಂತೆ ವ್ಯವಸ್ಥೆ ಕಲ್ಪಿಸುವ ಕೇಂದ್ರ ಸರ್ಕಾರಕ್ಕೆ ಇದೇ ಕಾಳಜಿ ಹಿಂದೀಗಿಂತಲೂ ಶ್ರೀಮಂತವೂ, ಇತಿಹಾಸವುಳ್ಳವೂ ಆದ ನಮ್ಮ ಭಾಷೆಗಳ ಬಗ್ಗೆ ಯಾಕಿಲ್ಲ ಅನ್ನುವ ಪ್ರಶ್ನೆಗಳನ್ನು ಬ್ಯಾಂಕ್ ಮ್ಯಾನೇಜರ್ ಮುಂದೆ ಎತ್ತಿದ್ದಾರೆ. ಬ್ಯಾಂಕಿನ ಹೆಚ್ಚಿನ ಸಿಬ್ಬಂದಿ ಕನ್ನಡ ಬಾರದವರಾಗಿದ್ದರೂ ಕನ್ನಡದವರಾಗಿದ್ದ ಮ್ಯಾನೇಜರ್ ಇದಕ್ಕೆ ಕೊಟ್ಟ ಉತ್ತರವೇನು ಗೊತ್ತೇ? “ಇದನ್ನೆಲ್ಲ ನಿರ್ಧರಿಸುವ ಅಧಿಕಾರ ನಮಗೆಲ್ಲಿದೆ ಸಾರ್? ಸೆಂಟ್ರಲ್ ಏಜೆನ್ಸಿಯಿಂದ ಎಲ್ಲ ಬರುತ್ತೆ, ಅವರು ಕೊಟ್ಟ ಭಾಷೆಯಲ್ಲಿ ಎಲ್ಲವನ್ನು ಬಳಸುವ ಅನಿವಾರ್ಯತೆ ನಮ್ಮ ಮುಂದಿದೆ. ಅದನ್ನು ಪ್ರತಿಭಟಿಸಿದರೆ ನಮ್ಮ ಕೆಲಸ, ಬಡ್ತಿ ಎಲ್ಲದಕ್ಕೂ ತೊಂದರೆ. ಹೀಗಾಗಿ ಏನೂ ಮಾಡುವ ಸ್ಥಿತಿಯಲ್ಲಿ ತಾವಿಲ್ಲ” ಎಂದು ತಮ್ಮ ಅಸಹಾಯಕತೆ ತೋಡಿಕೊಂಡಿದ್ದಾರೆ. ಅಷ್ಟಕ್ಕೆ ಸುಮ್ಮನಾಗದ ಗೆಳೆಯರು ಬ್ಯಾಂಕಿನ ಕೇಂದ್ರ ಕಚೇರಿಯಲ್ಲಿರುವ ಗ್ರಾಹಕ ದೂರು ಪರಿಹರಿಸುವ ಕೇಂದ್ರಕ್ಕೆ ಮೇಲಿಂದ ಮೇಲೆ ಕರೆ ಮಾಡಿದ್ದರೂ ಅಲ್ಲಿ ಯಾರೂ ಫೋನಿಗೆ ಉತ್ತರ ನೀಡಿಲ್ಲ. ಅಲ್ಲಿಂದ ಅಂತರ್ಜಾಲದ ಮೂಲಕ ಈ ಬಗ್ಗೆ ದೂರು ಸಲ್ಲಿಸುವ ಪ್ರಯತ್ನ ಮಾಡಿದರೆ ಆ ವ್ಯವಸ್ಥೆಯೂ ಕೇವಲ ಹಿಂದಿ ಮತ್ತು ಇಂಗ್ಲಿಷಿನಲ್ಲಿ ನೀಡಲಾಗಿದೆ. ಇಂಗ್ಲಿಷಿನಲ್ಲೇ ದೂರು ಬರೆದ ಗೆಳೆಯರು ಬಾರದ ಉತ್ತರಕ್ಕೆ ಕಾಯುತ್ತಿದ್ದಾರೆ.

ಇದು ಮಾನವ ಹಕ್ಕುಗಳ ಉಲ್ಲಂಘನೆ

ಇದು ಬರೀ ಒಂದು ಬ್ಯಾಂಕಿನ ಕತೆಯಲ್ಲ. ಇಂದು ಕರ್ನಾಟಕದ ಸಣ್ಣಪುಟ್ಟ ಊರುಗಳಲ್ಲಿನ ಬಹುತೇಕ ಬ್ಯಾಂಕುಗಳಲ್ಲೂ ಇದೇ ಸ್ಥಿತಿ ಉಂಟಾಗಿದೆ. ಗ್ಯಾಸ್ ಸಬ್ಸಿಡಿ ನೇರವಾಗಿ ಬ್ಯಾಂಕಿಗೆ ವರ್ಗಾಯಿಸುವ ವ್ಯವಸ್ಥೆ ಬಂದ ಮೇಲಂತೂ ಕನ್ನಡ ಬಿಟ್ಟು ಇನ್ನೊಂದು ನುಡಿಯ ಪರಿಚಯವೂ ಇರದ ಸಾಮಾನ್ಯ ಜನರು ಬ್ಯಾಂಕಿಗೆ ಎಡತಾಕಬೇಕಾದ ಅನಿವಾರ್ಯತೆ ಹುಟ್ಟಿಕೊಂಡಿದೆ ಮತ್ತು ಅಲ್ಲೆಲ್ಲ ಕನ್ನಡದಲ್ಲಿ ಸೇವೆ ದೊರೆಯದೆ ತೀವ್ರ ತೊಂದರೆಗೊಳಗಾಗಿದ್ದಾರೆ. ಈ ಸ್ಥಿತಿ ಬರೀ ಬ್ಯಾಂಕಿಂಗ್ ಕ್ಷೇತ್ರವೊಂದಕ್ಕೆ ಸೀಮಿತವಾಗಿಲ್ಲ. ಕರ್ನಾಟಕದೊಳಗೆ ಓಡಾಡುವ ರೈಲಿನ ಟಿಕೇಟ್ ಕನ್ನಡದಲ್ಲಿಲ್ಲ. ರೈಲ್ವೇ ರಿಸರ್ವೇಶನ್ ಪಟ್ಟಿ ಕನ್ನಡದಲ್ಲಿಲ್ಲ. ಬೆಂಗಳೂರು-ಮಂಗಳೂರಿನಿಂದ ಹೊರಡುವ ಯಾವುದಾದರೂ ವಿಮಾನದಲ್ಲಿ ಕನ್ನಡ-ತುಳುವಿನಲ್ಲಿ ಮಾಹಿತಿ ಇದೆಯೇ? ಕನ್ನಡದಲ್ಲೇ ಆದಾಯ ತೆರಿಗೆಯನ್ನು ಪಾವತಿಸುವ ವ್ಯವಸ್ಥೆ ಇದೆಯೇ? ಯುರೋಪಿನ ಯಾವುದೇ ದೊಡ್ಡ ದೇಶಕ್ಕೆ ಹೋಲಿಸಬಹುದಾದ ಕರ್ನಾಟಕದ ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ಕನ್ನಡದಲ್ಲಿ ಗ್ರಾಹಕ ಸೇವೆ ಅನ್ನುವುದು ದಿನೇ ದಿನೇ ಮರೀಚಿಕೆಯಾಗುತ್ತಿದೆ. ಇದರಿಂದ ದೊಡ್ಡ ಮಟ್ಟಕ್ಕೆ ತೊಂದರೆಗೊಳಗಾಗುತ್ತಿರುವವರು ಬರೀ ಕನ್ನಡವೊಂದನ್ನೇ ಬಲ್ಲ ಕೋಟಿಗಟ್ಟಲೆ ಜನರು. ಯಾವ ನುಡಿಯಲ್ಲಿ ಅವರಿಗೆ ಈ ಎಲ್ಲ ಸೌಲಭ್ಯಗಳು ಅತ್ಯಂತ ಸಹಜವಾಗಿ ಸಿಗಬೇಕಿತ್ತೋ ಅದು ದೊರೆಯುತ್ತಿಲ್ಲ ಅನ್ನುವುದು ಒಂದು ರೀತಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯೇ ಸರಿ. ಒಂದು ಕಡೆ ಮಿತಿ ಮೀರಿದ ಪ್ರಮಾಣದಲ್ಲಿ ಕನ್ನಡೇತರರ ವಲಸೆ ಕರ್ನಾಟಕದ ಬಹುತೇಕ ದೊಡ್ಡ ಊರುಗಳಿಗೆ ಆಗುತ್ತಿದೆ. ಹಾಗೇ ಬಂದವರು ಕನ್ನಡ ಕಡ್ಡಾಯವಾಗಿ ಕಲಿಯಬೇಕು ಅನ್ನುವಂತೆ ಹೇಳುವ ಅಧಿಕಾರವೂ ಕನ್ನಡಿಗರ ಸರ್ಕಾರಕ್ಕಿಲ್ಲ. ಕನ್ನಡಿಗರಿಗೆ ಉದ್ಯೋಗ ಕೊಡಿ ಎಂದು ಹೇಳುವುದೂ ಇವತ್ತಿನ ಸಂವಿಧಾನದ ಪ್ರಕಾರ ತಪ್ಪಾದೀತು. ಇನ್ನೊಂದೆಡೆ ಇರುವ ಕನ್ನಡಿಗರಿಗೂ ಈ ರೀತಿ ನಿರಂತರವಾಗಿ ಅನಾನುಕೂಲಗಳಾಗುತ್ತಿದ್ದರೂ ಅದನ್ನು ಸರಿಪಡಿಸಿಕೊಳ್ಳುವ ಆಯ್ಕೆಗಳಿಲ್ಲ. ಇತ್ತೀಚೆಗೆ ಹಾಸನದ ಆಲೂರಿನಲ್ಲಿ ಕನ್ನಡದಲ್ಲಿ ಸೇವೆ ನೀಡದ ಸಿಬ್ಬಂದಿಯನ್ನೇ ಕೂಡಿ ಹಾಕಿ ಬ್ಯಾಂಕಿಗೆ ಬೀಗ ಜಡಿಯುವ ಮೂಲಕ ರೈತರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದ ಘಟನೆ ವರದಿಯಾಗಿತ್ತು. ಈ ರೀತಿಯ ಪ್ರತಿಭಟನೆಯೇ ಇದಕ್ಕೆ ಪರಿಹಾರ ಅನ್ನುವಂತಾದರೆ ಸರ್ಕಾರ, ಕಾನೂನು, ವ್ಯವಸ್ಥೆ ಅನ್ನುವುದೆಲ್ಲ ಯಾಕೆ ಬೇಕು?

ಬದಲಾಗಲಿ ಭಾಷಾ ನೀತಿ

ಕೇಂದ್ರ ಸರ್ಕಾರ ಕಲ್ಪಿಸುವ ಎಲ್ಲ ನಾಗರೀಕ ಸೇವೆಗಳು ಆಯಾ ರಾಜ್ಯದಲ್ಲಿ ಅಲ್ಲಿನ ಭಾಷೆಯಲ್ಲಿ ದೊರೆಯಬೇಕು ಅನ್ನುವುದನ್ನು ಅರ್ಥ ಮಾಡಿಕೊಳ್ಳುವುದು ನಿಜಕ್ಕೂ ಅಷ್ಟು ಕಷ್ಟದ ವಿಷಯವೇ? ಸಂವಿಧಾನಕ್ಕೆ ತಿದ್ದುಪಡಿ ತಂದು ಸಂವಿಧಾನದ ಎಂಟನೆಯ ಪರಿಚ್ಛೇದದಲ್ಲಿರುವ ಎಲ್ಲ ಭಾಷೆಗಳಿಗೂ ಕೇಂದ್ರ ಸರ್ಕಾರದ ಆಡಳಿತ ಭಾಷೆಯ ಸ್ಥಾನ ಕೊಟ್ಟರೆ, ಇಂತಹ ಕಣ್ಣಿಗೆ ರಾಚುವ ಅನ್ಯಾಯಕ್ಕೆ ತಡೆ ಬೀಳಬಹುದು. ಆದರೆ ಕರ್ನಾಟಕದಲ್ಲಿ ಈ ನಿಟ್ಟಿನಲ್ಲಿ ಬೆಕ್ಕಿಗೆ ಗಂಟೆ ಕಟ್ಟುವ ಕಾಳಜಿ, ನೈತಿಕತೆ ಯಾವ ಪಕ್ಷಕ್ಕಿದೆ? ಜನಪರ ಕಾಳಜಿಯ ಬಗ್ಗೆ ಪಕ್ಷಗಳು ಏನೇ ಮಾತನಾಡಬಹುದು, ಆದರೆ ಸರ್ಕಾರ ಕಲ್ಪಿಸುವ ಸೇವೆಗಳೆಲ್ಲವೂ ಜನರ ಭಾಷೆಯಲ್ಲಿರಬೇಕು ಅನ್ನುವ ಬಗ್ಗೆ ಕೂಗೆತ್ತದೇ ಹೋದರೆ ಆ ಮಾತುಗಳಿಗೆಲ್ಲ ಏನಾದರೂ ಅರ್ಥವಿದೆಯೇ?

Posted in ಕನ್ನಡ, ಹಿಂದಿ ಹೇರಿಕೆ | ನಿಮ್ಮ ಟಿಪ್ಪಣಿ ಬರೆಯಿರಿ

ಕನ್ನಡಕ್ಕೆ ತನ್ನತನವಿದೆ – ಇದು ಸಂಶೋಧನೆ: “ಭಾರತ ಭಂಜನ”ದ ಹುನ್ನಾರವಲ್ಲ!

“ಹಳಗನ್ನಡ” ಎನ್ನುವ ಒಂದು ಹೊತ್ತಗೆಯನ್ನು ಕನ್ನಡದ ಖ್ಯಾತ  ಸಂಶೋಧಕರು, ಬರಹಗಾರರು ಆದ ಪ್ರೊ. ಷಟ್ಟರ್ ಬರೆದಿದ್ದಾರೆ. ಈ ಹೊತ್ತಗೆ ಕನ್ನಡದ ಹಳಮೆಯ ಬಗ್ಗೆ ಬಹಳ ಆಳವಾದ ನೋಟವನ್ನು ಹೊಂದಿದೆ. ಕನ್ನಡದ ಬೇರುಗಳ ಬಗ್ಗೆ ತಪ್ಪು ಕಲ್ಪನೆಗಳನ್ನು ಹರಡುವ ಪ್ರಯತ್ನಗಳಾಗುತ್ತಿರುವಾಗ ಕನ್ನಡದ ಬೇರ್ಮೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಓದಬೇಕಿರುವ ಒಂದು ಅಪರೂಪದ ಹೊತ್ತಗೆ ಇದಾಗಿದೆ. ಇದನ್ನು ಓದಿ, ವಿವರವಾದ  ವಿಮರ್ಶೆ ಬರೆದಿದ್ದ ಕನ್ನಡ ಪರ ಚಿಂತಕ ಆನಂದ ಜಿ ಅವರ ಬರಹವನ್ನು ಅವರ ಅನುಮತಿಯೊಂದಿಗೆ ಮುನ್ನೋಟದಲ್ಲಿ ಪ್ರಕಟಿಸಲಾಗಿದೆ.  ಓದಿ, ಹಂಚಿಕೊಳ್ಳಬೇಕೆಂದು ಓದುಗ ಗೆಳೆಯರಲ್ಲಿ ಮನವಿ. – ಮುನ್ನೋಟ ಸಂಪಾದಕರು


“ಹಳಗನ್ನಡ” ಎನ್ನುವ ಒಂದು ಹೊತ್ತಗೆಯನ್ನು ಪ್ರೊ. ಷಟ್ಟರ್ ಅವರು ಬರೆದಿದ್ದಾರೆ. ಇವರು ಮೂಲತಃ ಅಧ್ಯಾಪಕರು, ಸಂಶೋಧಕರು ಮತ್ತು ಬರಹಗಾರರು. ಮೊದಲಿಗೆ ಹೇಳಬೇಕಾದುದೇನೆಂದರೆ ಇಡೀ ಪುಸ್ತಕದಲ್ಲಿ ಅವರು ಕನ್ನಡದ ತನ್ನತನ ತೋರಿಸುವ ಪ್ರಯತ್ನವೇನೂ ಮಾಡಿಲ್ಲಾ. ಕನ್ನಡ ಶಾಸನಗಳನ್ನು ಅಧ್ಯಯನ ಮಾಡಿ, ಅದರ ಲಿಪಿ ಮತ್ತು ಲಿಪಿಕಾರರ ಕುರಿತಾಗಿ ಈ ಪುಸ್ತಕವನ್ನು ಬರೆದಿದ್ದಾರೆ. ಇದು ಅಪ್ಪಟ ಸಂಶೋಧನೆಯ ಕೃತಿ ಮತ್ತು ಯಾವುದೋ ಸಿದ್ಧಾಂತದ ಸಾಬೀತಿಗಾಗಿ ಬರೆದದ್ದಲ್ಲಾ… ಯಾಕೆಂದರೆ ಅಂತಹ ಯಾವ ನಿರ್ಣಯವನ್ನೂ ಷಟ್ಟರ್ ಅವರು ಇದರಲ್ಲಿ ಮಾಡಲು ಹೋಗಿಲ್ಲ.

ಈ ಪೀಠಿಕೆ ಯಾಕೆಂದರೆ ಮೊನ್ನೆ ತಾನೇ “ಭಾರತ ಭಂಜನ” ಕೃತಿಯ ಬಗ್ಗೆ ಬರೆದಿದ್ದೆ. ಅದರ ಲೇಖಕರು ಭಾವಿಸಿರುವಂತೆ “ಯಾವುದೇ ಭಾರತೀಯ ಭಾಷೆಯೂ ತನ್ನತನ ಹೊಂದಿಲ್ಲಾ, ಮೂಲದಲ್ಲಿ ಎಲ್ಲವೂ ಸಂಸ್ಕೃತದಿಂದಲೇ ಹುಟ್ಟಿದ್ದು… ಅವುಗಳ ನಡುವೆ ಚೂರುಪಾರು ವ್ಯತ್ಯಾಸವಿದೆ. ಈ ವ್ಯತ್ಯಾಸವನ್ನೇ ದೊಡ್ಡದು ಮಾಡಿ ಅದು ಬೇರೆಯದೇ ಮೂಲದ್ದು ಎಂದು ಹೇಳುವುದು ಭಾರತವನ್ನು ಒಡೆಯಲು ಮಾಡುವ ಸಂಚು” ಎಂಬುದು ನಿಜವಲ್ಲಾ ಎನ್ನುವ ವಾದಕ್ಕೆ ಪೂರಕವಾಗಿ ಈ ಸಂಶೋಧನೆಗಳಿವೆ. ಯಾವುದೇ ನುಡಿಯ ಹಳಮೆ, ಬೇರ್ಮೆ ಮತ್ತು ತನ್ನತನದ ಹುಡುಕಾಟ ಭಾರತವನ್ನು ಒಡೆಯಲಿಕ್ಕಾಗೇ ಎಂಬ ಭೀತಿಯ ವಾದ ಭಾರತ ಭಂಜನ ಪುಸ್ತಕದಲ್ಲಿದೆ. ಆ ವಾದ/ ಅನಿಸಿಕೆ ಎಷ್ಟು ಪೊಳ್ಳಿನದು ಎಂಬುದನ್ನು ಹಳಗನ್ನಡ ಪುಸ್ತಕದ ಹಲಭಾಗಗಳನ್ನು ನೋಡಿದಾಗ ಅನ್ನಿಸುತ್ತದೆ. ವಾಸ್ತವವಾಗಿ ಈ ಹಳಗನ್ನಡ ಪುಸ್ತಕವು ಅರಿಮೆಯ ಹೊತ್ತಗೆಯಾಗಿದ್ದು, ಶಾಸನಗಳ ಅಧ್ಯಯನ, ಬರೆದವರ ಬಗೆಗಿನ ವಿಶ್ಲೇಷಣೆಯೇ ಮೊದಲಾದ ವಿಷಯಗಳನ್ನು ಮಾತ್ರಾ ಚರ್ಚಿಸುತ್ತದೆ. ಈ ಪುಸ್ತಕದ ಕೆಲಸಾಲುಗಳನ್ನು ಕೆಳಗೆ ನೀಡಲಾಗಿದೆ. ಅಧ್ಯಯನದ ವಿಧಾನ ಏನು, ಇಲ್ಲಿ ಹೇಗೆ ಶಾಸನಗಳನ್ನು ಅಧ್ಯಯನ ಮಾಡಲಾಗಿದೆ ಎಂಬುದಕ್ಕೆ ಉದಾಹರಣೆಯಾಗಿ ಈ ಪುಟವಿದೆ ನೋಡಿರಿ.

ಮೂಲ ಕಲ್ಬರಹ/ ತಾಮ್ರಪಟದಲ್ಲಿ ಹೇಗಿದೆಯೋ ಹಾಗೆ ಬರೆದ ಸಾಲುಗಳನ್ನು ಮೊದಲಿಗೆ ಕೊಡಲಾಗಿದ್ದು (ಬ್ರಾಹ್ಮಿ/ ಹಳಗನ್ನಡ ಲಿಪಿ) ಅದರ ಕೆಳಗೆ ಈಗಿನ ಲಿಪಿಯಲ್ಲಿ ಅದೇ ಬರಹವನ್ನು ಬರೆಯಲಾಗಿದೆ. ನಂತರ ಇಡೀ ಶಾಸನವನ್ನು ಓದಲು ಪ್ರಯತ್ನಿಸಲಾಗಿದ್ದು ಅದರಲ್ಲಿ ಎಷ್ಟು ಪದಗಳಿವೆ, ಸಾಲುಗಳಿವೆ, ವಾಕ್ಯಗಳಿವೆ ಎಂದು ವಿವರಿಸಲಾಗಿದೆ. ಹೀಗೆ ವಿವರಿಸುವಾಗ ಸಂದರ್ಭ, ಸನ್ನಿವೇಶ, ಅರ್ಥಗಳನ್ನೂ ತಿಳಿದುಕೊಳ್ಳುವ ಪ್ರಯತ್ನ ಮಾಡಿರುವುದನ್ನೂ ನಾವು ಕಾಣಬಹುದು. ಬರಹಗಳ ವಿಶ್ಲೇಷಣೆಯಲ್ಲಿ ಎಷ್ಟು ಪದಗಳು ಕನ್ನಡದಲ್ಲಿವೆ, ಎಷ್ಟು ಸಾಲುಗಳು ಕನ್ನಡದಲ್ಲಿವೆ, ಸಂಸ್ಕೃತ ಪದಗಳ ಎಣಿಕೆ ಏನು, ಹೇಗೆ ಅವುಗಳನ್ನು ಬರೆಯಲಾಗಿದೆ ಎಂಬುದನ್ನು ವಿಸ್ತರಿಸುತ್ತಾ ಅಂದಿನ ಸಮಾಜವನ್ನು ಅರಿಯುವ ಪ್ರಯತ್ನ ಮಾಡಿರುವುದನ್ನು ಕಾಣಬಹುದಾಗಿದೆ.

ಇಂತಹ ನೂರಾರು ಶಾಸನಗಳನ್ನು ಶಾಸ್ತ್ರಬದ್ಧವಾಗಿ ಅಧ್ಯಯನ ಮಾಡಿದ ಮೇಲೆ ಕನ್ನಡ ಲಿಪಿ/ ನುಡಿಗಳು ಹೇಗೆ ಶಾಸನಗಳನ್ನು ಪ್ರಭಾವಿಸಿವೆ ಎಂಬುದನ್ನು ವಿವರಿಸಲಾಗಿದೆ. ಕನ್ನಡವೆಂಬ ಜನನುಡಿ ಮತ್ತು ಶಾಸನದ ಹೆರನುಡಿಗಳು ಶಾಸನ ಬರಹಗಳಲ್ಲಿ ಒಂದನ್ನೊಂದು ಹೇಗೆ ಪ್ರಭಾವಿಸಿದವು ಎಂಬುದನ್ನು ಅಚ್ಚುಕಟ್ಟಾಗಿ ವಿವರಿಸಲಾಗಿದೆ. ಕಾಲಾಂತರದಲ್ಲಿ ಕನ್ನಡ ಲಿಪಿ ಹೆರನುಡಿಗಳಿಗೆ ಹೊಂದಿಕೆಯಾಗುವಂತೆ ಹೇಗೆ ತನ್ನ ಸ್ವರೂಪವನ್ನು ಹೊಂದಿಸಿಕೊಂಡಿತು ಎಂಬುದನ್ನು ಹೀಗೆ ಬರೆಯಲಾಗಿದೆ.

ಪ್ರಾಕೃತದ ಏಕಸ್ವಾಮ್ಯವು ಮುಕ್ತಾಯವಾಗಿ ಸಂಸ್ಕೃತವು ಕಾಲಿಡುವಾಗ ಬ್ರಾಹ್ಮೀಯ ಏಕಸ್ವಾಮ್ಯವೂ ಮುಕ್ತಾಯವಾಗಿ ಮುಂಚೂಣಿ (ಹಳಗನ್ನಡ) ಕನ್ನಡಲಿಪಿ ಕಾಣಿಸಿಕೊಂಡಿತು. ಆವರೆಗೂ ಪ್ರಾಕೃತದ ವಾಹಕವಾಗಿದ್ದ ಕೆಳದಖ್ಖಣದ ಲಿಪಿಯ ಗುಣಗಳೇ ಹಳಗನ್ನಡ ಲಿಪಿಯಲ್ಲಿರುವುದನ್ನು ಗುರುತಿಸಬಹುದು. ಅಂದರೆ ಸ್ವರಾಕ್ಷರಗಳಲ್ಲಿ ’ಏ’, ’ಐ’, ’ಓ’, ’ಔ’ಗಳು, ಅವರ್ಗೀಯಗಳಲ್ಲಿ ’ಶ’, ’ಷ’, ’ಹ’ಗಳು, ವರ್ಗೀಯ ವ್ಯಂಜನಗಳಲ್ಲಿ ವರ್ಗ ದ್ವಿತೀಯ ಮತ್ತು ಚತುರ್ಥ (ಮಹಾಪ್ರಾಣಾಕ್ಷರ)ಗಳು, ಅನುನಾಸಿಕದ ಸ್ಥಾನದಲ್ಲಿ ಬಿಂದು, ಇವೆಲ್ಲಕ್ಕಿಂತಾ ಮುಖ್ಯವಾಗಿ ಅನುಸ್ವಾರಕ್ಕೊಂದು ನಿಶ್ಚಿತ ಸ್ಥಾನ ಇಲ್ಲದಿರುವ ಕಾಲ ಇದಾಗಿತ್ತು. ಆದರೆ ಮುಂಚೂಣಿ ಕನ್ನಡಲಿಪಿ ಸಂಸ್ಕೃತದ ವಾಹನವಾಗತೊಡಗಿದೊಡನೆ, ತನಗೆ ಅವಶ್ಯವಿರಲಿ-ಬಿಡಲಿ, ಇವೆಲ್ಲವನ್ನೂ ತನ್ನ ತೆಕ್ಕೆಯೊಳಗೆ ತಂದುಕೊಂಡಿತಲ್ಲದೆ, ಇವುಗಳೊಡನೆ ನಾಲಿಗೆಗೆ ಒಗ್ಗದ ’ಋ’ ಸ್ವರಾಕ್ಷರವನ್ನು (ತಾನು ಮುಂದೆಂದೂ ಬಳಸದೆ ಇಂದಿನವರೆಗೂ ಪೋಷಿಸಿಕೊಂಡು ಬಂದಿರುವ ಕೂಳುಬಾಕ ’ೠ’ ದೀರ್ಘಾಕ್ಷರವನ್ನು) ಒಡಲಿನಲ್ಲಿ ತುಂಬಿಕೊಂಡು ತನ್ನ ಕಾಯವನ್ನು ವಿಸ್ತರಿಸಿಕೊಂಡಿತು.

ಶಾಸನ ಬರಹಗಳ ಅಧ್ಯಯನವು ಬರಿಯ ಲಿಪಿಯ ವಿಕಾಸದ ಕಥೆಯನ್ನು ಮಾತ್ರಾ ಹೇಳದೆ ಅಂದಿನ ಸಮಾಜವು ಶಾನ್ಸನ ಬರೆಯುವುದರ ಮೇಲೆ ಉಂಟುಮಾಡಿದ್ದ ಪ್ರಭಾವವನ್ನೂ ಬಣ್ಣಿಸುತ್ತಾ ಬಂದಿರುವದನ್ನು ಕಾಣಬಹುದು. ಶಾಸನದ ಬರಹವು ಸಂಸ್ಕೃತ ಪ್ರಾಕೃತಗಳಿಂದ ಸಾಗಿ ಮಿಶ್ರ ಬರಹವಾಗಿ, ದ್ವಿಭಾಷಾ ಬರಹವಾಗಿ ಕನ್ನಡ ಲಿಪಿ ಬಳಕೆಯ ಹರವು ಹಿಗ್ಗಿರುವುದನ್ನು ಹೀಗೆ ಗುರುತಿಸಲಾಗಿದೆ. ಕದಂಬರ ಕಾಲಘಟ್ಟದಲ್ಲಿ ಇದ್ದ ಕನ್ನಡದ ಸ್ಥಿತಿಗತಿಗಳನ್ನು ಇಂತಹ ಶಾಸನಗಳ ಮೂಲಕ ಮಾಡಲಾಗಿದ್ದು ಸಮಾಜವು ಹೇಗಿತ್ತು ಎನ್ನುವುದನ್ನು ಅರಿಯಬಹುದಾಗಿದೆ. ಈ ಕೆಳಗಿನ ಬರಹದಲ್ಲಿ ಅಂತಹ ಬೆಳವಣಿಗೆಯ ಬಗೆಯನ್ನು ವಿವರಿಸಲಾಗಿದೆ.

ಲಿಪಿ ಮತ್ತು ಭಾಷೆಯಲ್ಲಾದ ಬದಲಾವಣೆ: ಬನವಾಸಿಯ ಕದಂಬರೇನೂ ರಾಜಕೀಯವಾಗಿ ಮಹಾಶಕ್ತಿಯಾಗಿರಲಿಲ್ಲ. ಸಾತವಾಹನರ ನಂತರ ಆಳಿದ ದಖ್ಖಣದ ಸ್ಥಳೀಯ ಅರಸರಲ್ಲಿವರು ಎದ್ದು ಕಾಣುವುದೇನೋ ನಿಜ. ಆದರೆ ಬಾದಾಮಿ ಚಾಳುಕ್ಯರಂತಾಗಲೀ ತಲಕಾಡಿನ ಗಂಗರಂತಾಗಲೀ ಇವರು ರಾಜ್ಯವನ್ನು ವಿಸ್ತರಿಸಲಿಲ್ಲ. ರಾಜಕೀಯ ಇತಿಹಾಸದಲ್ಲಿ ಇವರ ಸ್ಥಾನ ಗೌಣವೆನಿಸಿದರೂ ಕನ್ನಡ ಲಿಪಿ ಮತ್ತು ಭಾಷಾ ಇತಿಹಾಸದಲ್ಲಿ ಅದು ಗುರುತರವಾಗಿದೆ.

ಕದಂಬರ ಕಾಲದಲ್ಲಾದ ನಾಲ್ಕು ಪ್ರಮುಖ ಭಾಷಾ ಬದಲಾವಣೆಗಳನ್ನು ಗುರುತಿಸಬಹುದು. ಒಂದು, ಸುಮಾರು ಅರ್ಧ ಸಹಸ್ರಮಾನಕ್ಕಿಂತ ಹೆಚ್ಚುಕಾಲ ಬಳಕೆಯಲ್ಲಿದ್ದ ಬ್ರಾಹ್ಮೀಲಿಪಿ ಮತ್ತು ಪ್ರಾಕೃತ ಭಾಷೆಯ ವಹಿವಾಟು ಅಂತ್ಯಗೊಳ್ಳುವುದು: ಎರಡು, ಬ್ರಾಹ್ಮೀ ಸ್ಥಾನವನ್ನು ಮುಂಚೂಣಿ ಕನ್ನಡಲಿಪಿ ಪಡೆದುಕೊಂಡು ಸಂಸ್ಕೃತ ಭಾಷಾ ವ್ಯವಹಾರವನ್ನು ನಿಭಾಯಿಸತೊಡಗುವುದು: ಮೂರು, ದಖ್ಖಣದ ಪ್ರತಿಷ್ಠಿತರ ವ್ಯವಹಾರ ಭಾಷೆಯಾಗಿ ಸಂಸ್ಕೃತ ಹೊರಹೊಮ್ಮುವುದು: ನಾಲ್ಕು, ಕನ್ನಡ ಭಾಷೆ ಮತ್ತು ಲಿಪಿ ಸಂಸ್ಕೃತದೊಡನೆ ನುಡಿ ಕಾರ್ಯಭಾರವನ್ನು ಹಂಚಿಕೊಳ್ಳಲಾರಂಭಿಸುವುದು. ಮಾಧ್ಯಮದ ಇತಿಹಾಸದಲ್ಲಿ ಇದೊಂದು ಸಂಕ್ರಮಣ ಕಾಲ.

ಇಡೀ ಹಳಗನ್ನಡ ಪುಸ್ತಕವು ಹೀಗೆ ಎಳೆಎಳೆಯಾಗಿ ಕನ್ನಡ ಮತ್ತು ಸಂಸ್ಕೃತ, ಪ್ರಾಕೃತಗಳ ಇರುವನ್ನು ಗುರುತಿಸುತ್ತಾ, ನುಡಿಯ, ಲಿಪಿಯ ಮತ್ತು ಸಮಾಜವನ್ನು ಅಧ್ಯಯನವನ್ನು ಮಾಡಿರುವ ಪರಿ ಅತ್ಯಂತ ವೈಜ್ಞಾನಿಕವಾದುದಾಗಿದೆ ಮತ್ತು ಅಲ್ಲಗಳೆಯಲು ಆಗದ್ದಾಗಿದೆ. ಈ ಪುಸ್ತಕದ ಕಂಡುಕೊಳ್ಳುವಿಕೆಗಳನ್ನು ನೋಡಿದಾಗ ಕನ್ನಡ ನಾಡಲ್ಲಿ ಎಂದಿಗೂ ಸಂಸ್ಕೃತವು ಜನಸಾಮಾನ್ಯರ ಭಾಷೆಯಾಗಿರಲಿಲ್ಲ ಎನ್ನುವುದು ತಿಳಿಯುತ್ತದೆ. ಕನ್ನಡ ಮತ್ತು ಸಂಸ್ಕೃತದ ನಡುವಿನ ಅಂತರವು ಇಂದಿಗಿಂತಲೂ ಹಿಂದೆಯೇ ಹೆಚ್ಚಿತ್ತು ಎನ್ನುವುದು ತಿಳಿಯುತ್ತದೆ. ಕನ್ನಡ ನುಡಿಯು ಸಂಸ್ಕೃತ ಜನ್ಯವಲ್ಲವೆಂದೂ, ಅದಕ್ಕೆ ತನ್ನತನವಿದೆಯೆಂದೂ ವೇದ್ಯವಾಗುತ್ತದೆ! “ಭಾರತ ಭಂಜನ” ಕೃತಿಕಾರರು ಕನ್ನಡಕ್ಕೆ, ತಮಿಳಿಗೆ, ತೆಲುಗಿಗೆ ಅಥವಾ ಇನ್ನಾವುದೇ ಭಾರತೀಯ ನುಡಿಗೆ ತನ್ನತನವಿರುವುದು ಭಾರತ ಒಡೆಯಲು ಕಾರಣವಾಗುತ್ತದೆ ಎನ್ನುವ ಭೀತಿಯ ಕಾರಣದಿಂದ ಎಲ್ಲಾ ಒಂದೇ ಎಂದುಬಿಡುವುದು ಅಪಚಾರವಾಗುತ್ತದೆಯಲ್ಲದೆ, ಅವರು ಹಂಬಲಿಸುತ್ತಿರುವ ಏಕತೆಗೆ ನಿಜಕ್ಕೂ ಮಾರಕವಾಗಬಲ್ಲುದಾಗಿದೆ. ಇರುವ ವೈವಿಧ್ಯತೆಯನ್ನು ಒಪ್ಪಿ ಗೌರವಿಸಿ ಸಮಾನ ಗೌರವ, ಸಮಾನ ಸ್ಥಾನಮಾನ, ಸಮಾನ ಅವಕಾಶ ಒದಗಿಸುವುದೊಂದೇ ಏಕತೆಗೆ ದಾರಿ ಎಂಬುದನ್ನು ಮನಗಾಣುವುದು ಅವಶ್ಯಕವಾಗಿದೆ.

ಒಟ್ಟಿನಲ್ಲಿ ಈ ಅಧ್ಯಯನವು ಸಂಪೂರ್ಣವಾಗಿ ಆಧಾರಸಹಿತವಾಗಿದ್ದು ಕನ್ನಡಕ್ಕೆ ತನ್ನತನವಿದ್ದು ಅದು ಸಂಸ್ಕೃತಕ್ಕಿಂತ ಬೇರೆಯಾಗಿತ್ತು ಎಂಬುದನ್ನು ಎತ್ತಿ ತೋರುತ್ತದೆ. ಇಡೀ ಪುಸ್ತಕವನ್ನು ಓದುವಾಗ ಬರಹಗಾರರ ಪ್ರಾಮಾಣಿಕತೆ, ವಿದ್ವತ್ತು ಹಾಗೂ ವಿನಯಗಳು ಎದ್ದೆದ್ದು ಕಾಣುತ್ತದೆ. ತಾವು ಕಂಡುಕೊಂಡು ಮಾಡಿರುವ ವಿಶ್ಲೇಷಣೆಯು ಅದ್ಭುತವಾಗಿದ್ದು ಸ್ಪಷ್ಟವಾದ ನಿರ್ಣಯಗಳೆಡೆ ಒಯ್ದಿದ್ದರೂ, ನಿಸ್ಸಂದಿಗ್ಧವಾಗಿ ಷಟ್ಟರ್ ಅವರ ಮಾತುಗಳನ್ನು ಸಂಪೂರ್ಣವಾಗಿ ಸಮರ್ಥಿಸುತ್ತಿದ್ದಾಗಲೂ ಕೂಡಾ ಅವರು “ಇರುವಷ್ಟನ್ನೇ ಇಟ್ಟುಕೊಂಡು ಇದಮಿತ್ಥಂ ಎನ್ನುವುದು ಸೂಕ್ತವಲ್ಲವೇನೋ, ಇದರ ಬಗ್ಗೆ ಬೇರೆ ಬೇರೆ ಕ್ಷೇತ್ರಗಳ ತಜ್ಞರುಗಳು ಒಗ್ಗೂಡಿ ಕೆಲಸ ಮಾಡಬೇಕು” ಎಂದು ತಮ್ಮ ವಿನಯವನ್ನು ತೋರಿಸುತ್ತಾರೆ. ಇಂತಹ ಅಧ್ಯಯನಗಳನ್ನೇ “ಭಾರತ ಒಡೆಯುವ ಹುನ್ನಾರ, ಭಾಷಾಶಾಸ್ತ್ರ ಎನ್ನುವುದು ಶಾಸ್ತ್ರವೇ ಅಲ್ಲಾ” ಎಂದೆಲ್ಲಾ ಬರೆಯುವುದನ್ನು “ಭಾರತ ಭಂಜನ” ಪುಸ್ತಕದ ಬರಹಗಾರರು ಮಾಡುತ್ತಿರುವುದನ್ನು ಕಂಡಾಗ ಭಾಷೆಗಳ ಬಗ್ಗೆ ಇವರಿಗಿರುವ ಜ್ಞಾನದ ಕೊರತೆ, ಭಾರತ ಒಂದಾಗಿ ಉಳಿಯದು ಎನ್ನುವ ಭೀತಿ ಇರುವ ವೈವಿಧ್ಯತೆಗಳನ್ನು ನಿರಾಕರಿಸುವ ಮನಸ್ಥಿತಿಗೆ ದೂಡಿದೆಯೇನೋ ಎಂಬ ಅನುಮಾನ ಹುಟ್ಟಿಸುತ್ತದೆ.

Posted in ಕನ್ನಡ | 1 ಟಿಪ್ಪಣಿ