ಕರ್ನಾಟಕದ ಬ್ಯಾಂಕುಗಳಲ್ಲಿ ಕನ್ನಡದ ಕತೆ ವ್ಯಥೆ

ಇತ್ತೀಚೆಗೆ ಕರ್ನಾಟಕದ ಬ್ಯಾಂಕುಗಳಲ್ಲಿ ಕನ್ನಡ ಮತ್ತು ಕನ್ನಡಿಗರು ಸಂಪೂರ್ಣವಾಗಿ ಕಡೆಗಣನೆಗೆ ಒಳಗಾಗುತ್ತಿರುವುದು ಹೆಚ್ಚುತ್ತಿದೆ. ಈ ಬಗ್ಗೆ ಸಾಮಾಜಿಕ ತಾಣಗಳ ಮೂಲಕ ನಮ್ಮ ಜನಪ್ರತಿನಿಧಿಗಳ ಗಮನ ಸೆಳೆಯುವ ಕೆಲಸ ಹಲವಾರು ಕನ್ನಡಿಗರು ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಸ್ಪಂದಿಸಿದ ಮೈಸೂರು-ಕೊಡಗು ಸಂಸದರಾದ ಪ್ರತಾಪ್ ಸಿಂಹ ಅವರು ಬ್ಯಾಂಕಿನಲ್ಲಿನ ಸಮಸ್ಯೆಗಳ ಬಗ್ಗೆ ಒಂದಿಷ್ಟು ವಿವರವಾದ ಮಾಹಿತಿಯನ್ನು ಕೋರಿದ್ದರು. ಅವರಿಗೆ ಕಳಿಸಲಾದ ಉತ್ತರ ಇಲ್ಲಿದೆ. ಇಲ್ಲಿರುವ ಮಾಹಿತಿಯನ್ನು ಬಳಸಿ ಅವರು ಮತ್ತು ಕರ್ನಾಟಕದ ಇತರೆ ಸಂಸದರು ಈ ಬಗ್ಗೆ ಸಂಸತ್ತಿನಲ್ಲಿ ದನಿ ಎತ್ತಿ,  ನ್ಯಾಯ ದೊರಕಿಸಿಕೊಡಲಿ ಅನ್ನುವ ಒತ್ತಾಯ ಕನ್ನಡಿಗರದ್ದು.

  • ಸಂಪಾದಕ, ಮುನ್ನೋಟ

ಯಾವುದೇ ನಾಡಿನ ಏಳಿಗೆಯಲ್ಲಿ ಅಲ್ಲಿನ ಬ್ಯಾಂಕಿಂಗ್ ವ್ಯವಸ್ಥೆ ಪ್ರಮುಖ ಪಾತ್ರ ವಹಿಸುವುದರಿಂದ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಜನರಿಗೆ ಬ್ಯಾಂಕಿಂಗ್ ಸೇವೆಗಳು ದೊರೆಯುವಂತಾಗುವುದು ಬಹಳ ಮುಖ್ಯವಾದ ಹೆಜ್ಜೆಯೆಂದೇ ಪರಿಗಣಿತವಾಗಿದೆ. ಭಾರತದಂತಹ ವಿಪರೀತ ಆರ್ಥಿಕ ತಾರತಮ್ಯವಿರುವ ದೇಶದಲ್ಲಿ ಇನ್ನು ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಜನರು ಬ್ಯಾಂಕಿಂಗ್ ವ್ಯವಸ್ಥೆಯ ಹೊರಗೇ ಉಳಿದಿದ್ದಾರೆ. ಬಡವರು, ಶ್ರಮಿಕರು ತಮ್ಮ ದಿನದ  ದುಡಿಮೆಯ ಒಂದು ಪಾಲನ್ನಾದರೂ ಉಳಿತಾಯ ಮಾಡುವತ್ತ ಅಡಿಯಿಟ್ಟರೆ ಅದು ಉಳಿತಾಯದ ಸಂಸ್ಕೃತಿಯೊಂದನ್ನು ಪೋಷಿಸುವುದಲ್ಲದೇ ಆರ್ಥಿಕ ತಾರತಮ್ಯ ಕಡಿಮೆಗೊಳಿಸುವತ್ತಲೂ ಕೊಡುಗೆ ನೀಡಬಲ್ಲ ಶಕ್ತಿ ಹೊಂದಿದೆ. ಅಂತೆಯೇ ದೇಶದ ಎಲ್ಲ ನಾಗರೀಕರಿಗೂ ಬ್ಯಾಂಕಿಂಗ್ ಸೇವೆ ದೊರೆಯಬೇಕು ಅನ್ನುವ ಆಶಯದೊಂದಿಗೆ ಜನಧನದಂತಹ ಯೋಜನೆಗಳು ಜಾರಿಗೆ ಬಂದಿವೆ. ಇದಲ್ಲದೇ ಸರ್ಕಾರವು ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದ ಜನರ ಒಳಿತಿಗಾಗಿ ರೂಪಿಸಿರುವ ಎಲ್ಲ ಕಲ್ಯಾಣ ಯೋಜನೆಗಳು ಫಲ ಕಾಣಲು ಅವುಗಳ ಅನುಷ್ಟಾನದಲ್ಲಿ ಆಗುತ್ತಿರುವ ಸೋರಿಕೆ ಮತ್ತು ಭ್ರಷ್ಟಾಚಾರವನ್ನು ತಡೆಯುವ ನಿಟ್ಟಿನಲ್ಲೂ ಬ್ಯಾಂಕಿಂಗ್ ವ್ಯವಸ್ಥೆಯನ್ನು ಬಳಸಿಕೊಳ್ಳುವ ದಿಶೆಯಲ್ಲಿ ಡೈರೆಕ್ಟ್ ಬೆನೆಫಿಟ್ ಟ್ರಾನ್ಸಫರ್ ತರದ ಯೋಜನೆಗಳು ಮಹತ್ವ ಪಡೆದುಕೊಳ್ಳುತ್ತಿವೆ. ಈ ಹಿನ್ನೆಲೆಯಲ್ಲಿ ಆರ್ಥಿಕ ಒಳಗೊಳ್ಳುವಿಕೆ (Financial Inclusion)ಯ ಮುಖ್ಯ ಹೆಜ್ಜೆಯಾಗಿ ಬ್ಯಾಂಕಿಂಗ್ ತಲುಪುವಿಕೆಯನ್ನು (Banking Penetration) ಆರ್ಥಿಕ ನೀತಿನಿಯಮ ರೂಪಿಸುವವರು ಗುರುತಿಸಿದ್ದಾರೆ.

ಜನರಿಗೆ ಬ್ಯಾಂಕಿಂಗ್ ಸೇವೆಗಳು ಪರಿಣಾಮಕಾರಿಯಾಗಿ ತಲುಪಬೇಕು ಎಂದು ಆಶಿಸುವವರು ಅದು ಜನರ ಭಾಷೆಯಲ್ಲಿದ್ದರೆ ಮಾತ್ರ ಸಾಧ್ಯ ಅನ್ನುವುದನ್ನು ಮರೆಯಲು ಸಾಧ್ಯವೇ? ದುರ್ದೈವವೆಂದರೆ ಭಾರತದಲ್ಲಿ ಇಂತಹದೊಂದು ದುರಂತವನ್ನು ಕಾಣಬಹುದಾಗಿದೆ. ಭಾರತದಂತಹ ಬಹುಭಾಷಾ ಒಕ್ಕೂಟದಲ್ಲಿ ಆಯಾ ರಾಜ್ಯದಲ್ಲಿ ಅಲ್ಲಿನ ನುಡಿಗಳಲ್ಲಿ ಎಲ್ಲ ಹಂತದ ಬ್ಯಾಂಕಿಂಗ್ ಸೇವೆಗಳು ದೊರೆಯಬೇಕಾದದ್ದು ನ್ಯಾಯಸಮ್ಮತವೂ, ಜನಪರವೂ ಆದ ನಿಲುವು ಆಗಿದ್ದರೂ ಸ್ವಾತಂತ್ರ್ಯ ಬಂದು ಏಳು ದಶಕಗಳಾದ ಮೇಲೂ ಭಾರತದಲ್ಲಿ ಬಹುತೇಕ ಎಲ್ಲ ಬ್ಯಾಂಕಿಂಗ್ ಸೇವೆಗಳು ಹಿಂದಿ ಮತ್ತು ಇಂಗ್ಲಿಷ್ ನುಡಿಗಳಿಗೆ ಸೀಮಿತವಾಗಿವೆ. ಇದರ ಹಿಂದೆ ದೇಶದೆಲ್ಲೆಡೆ ಹಿಂದಿ ಭಾಷೆಯೊಂದೇ ಸಲ್ಲಬೇಕು ಮತ್ತು ಅದು ದೇಶದ ಭಾವೈಕ್ಯತೆ ಹೆಚ್ಚಿಸುವ ಸಾಧನ ಅನ್ನುವ ವೈವಿಧ್ಯತೆ ವಿರೋಧಿಯಾದ ತಪ್ಪು  ನಿಲುವುಗಳನ್ನು ಕಾಣಬಹುದಾಗಿದೆ. ದೇಶದೆಲ್ಲೆಡೆ ಹಿಂದಿಯೊಂದೇ ಇರಬೇಕು ಅನ್ನುವ ನಿಲುವು ಸ್ವಾತಂತ್ರ್ಯ ಬಂದಾಗಿಂದಲೂ ಇದ್ದು, ತಮಿಳುನಾಡಿನಲ್ಲಿ ನಡೆದ ಹಿಂದಿ ಹೇರಿಕೆ ವಿರೋಧಿ ಚಳವಳಿಯ ಪರಿಣಾಮವಾಗಿ ಹಿಂದಿಯೊಂದಿಗೆ ಇಂಗ್ಲಿಷ್ ಕೂಡ ಉಳಿದುಕೊಂಡಿತು. ಹಿಂದಿಯೊಂದಕ್ಕೇ ಮಣೆ ಹಾಕಿದರೆ  ಬ್ಯಾಂಕು ಸೇರಿದಂತೆ ಎಲ್ಲ ಕೇಂದ್ರ ಸರ್ಕಾರಿ ನೌಕರಿಗಳಲ್ಲಿ ಹಿಂದಿ ಭಾಷೆ ಅರಿಯದ ಹಿಂದಿಯೇತರ ರಾಜ್ಯಗಳ ಜನರು ತೀವ್ರ ಅನ್ಯಾಯಕ್ಕೊಳಗಾಗುತ್ತಾರೆ ಅನ್ನುವ ಕಳವಳವೇ ಹಿಂದಿ ಹೇರಿಕೆ ವಿರೋಧಿ ಚಳವಳಿಯ ಮೂಲದಲ್ಲಿತ್ತು. ಹೋರಾಟದ ಫಲವಾಗಿ ಹಿಂದಿಯೊಂದಿಗೆ ಇಂಗ್ಲಿಷ್ ಉಳಿದುಕೊಂಡಿತಾದರೂ ದೇಶದ ಬಹುತೇಕ ಭಾಗದ ಜನರಿಗೆ ಇವೆರಡೂ ನುಡಿಗಳು ಪರಕೀಯವೇ ಆಗಿವೆ ಅನ್ನುವುದನ್ನು ಇಲ್ಲಿ ಮನಗಾಣಬೇಕಿದೆ. ಕೇಂದ್ರ ಸರ್ಕಾರದ ಆಡಳಿತ ಭಾಷೆ ಹಿಂದಿ ಮತ್ತು ಇಂಗ್ಲಿಷ್ ಆಗಿದ್ದು, ಇವೆರಡೇ ಭಾಷೆಗಳಲ್ಲಿ ತನ್ನೆಲ್ಲ ಆಡಳಿತ ನಡೆಯಬೇಕು ಅನ್ನುವ ನಿಲುವಿನಿಂದಾಗಿ ಕೇಂದ್ರ ಸರ್ಕಾರದ ಅಧಿಕೃತ ಭಾಷಾ ನೀತಿಯನ್ವಯ ಎಲ್ಲ ರಾಷ್ಟ್ರೀಕೃತ ಮತ್ತು ಖಾಸಗಿ ಬ್ಯಾಂಕುಗಳ ಸೇವೆಗಳು ಬಹುತೇಕ ಹಿಂದಿ, ಇಂಗ್ಲಿಷ್ ಎರಡೇ ನುಡಿಗಳಲ್ಲಿ ಇಂದು ದೊರೆಯುತ್ತಿದೆ. ರಾಜ್ಯದ ವ್ಯಾಪ್ತಿಯಲ್ಲಿ ಮಾತ್ರ ಕಾರ್ಯ ನಿರ್ವಹಿಸುವ ಸಹಕಾರಿ ಕ್ಷೇತ್ರದ ಬ್ಯಾಂಕುಗಳು ಮಾತ್ರ ಇದಕ್ಕೆ ಹೊರತಾಗಿವೆ. ಇಂತಹದೊಂದು ನೀತಿಯ ಪರಿಣಾಮವಾಗಿ ಯಾವ ಬ್ಯಾಂಕಿಂಗ್ ವ್ಯವಸ್ಥೆ ಜನರ ಪಾಲಿಗೆ ಸೇತುವೆಯಾಗಬೇಕಿತ್ತೋ ಅದೇ ವ್ಯವಸ್ಥೆ ಇಂದು ಕಂದರವಾಗಿ ಮಾರ್ಪಟ್ಟಿದೆ. ಕರ್ನಾಟಕದಂತಹ ರಾಜ್ಯದಲ್ಲಿ ಕಳೆದ ಒಂದೆರಡು ದಶಕಗಳಲ್ಲಿ ಆಗಿರುವ ಬದಲಾವಣೆ ಮತ್ತು ಅದು ಬ್ಯಾಂಕಿಂಗ್ ಕ್ಷೇತ್ರದ ಮೇಲೆ  ಮಾಡಿರುವ ಪರಿಣಾಮದ ಹಿನ್ನೆಲೆಯಲ್ಲಿ ನೋಡಿದಾಗ ಬ್ಯಾಂಕುಗಳ ಈ ಭಾಷಾ ನೀತಿ ಕನ್ನಡಿಗರನ್ನು ತೀವ್ರವಾಗಿ ತೊಂದರೆಗೀಡು ಮಾಡುತ್ತಿದೆ ಅನ್ನುವುದನ್ನು ಕಾಣಬಹುದಾಗಿದೆ.

ಬ್ಯಾಂಕುಗಳಲ್ಲಿ ಕನ್ನಡದ ಸ್ಥಿತಿ ಯಾಕೆ ಹೀಗಾಗಿದೆ?

ಭಾರತದ ಬ್ಯಾಂಕಿಂಗ್ ಕ್ಷೇತ್ರಕ್ಕೆ ಕರ್ನಾಟಕದ ಕೊಡುಗೆ ಅತ್ಯಂತ ಹಿರಿದಾದದ್ದು. ದೇಶದ 27 ಸಾರ್ವಜನಿಕ ಸ್ವಾಮ್ಯದ ಬ್ಯಾಂಕುಗಳಲ್ಲಿ 4 ಬ್ಯಾಂಕುಗಳು ಕರ್ನಾಟಕ ಮೂಲದವು. ದೇಶದ ಹತ್ತು ದೊಡ್ಡ ಸಾರ್ವಜನಿಕ ಬ್ಯಾಂಕುಗಳಲ್ಲಿ ಕರ್ನಾಟಕ ಮೂಲದ ಕೆನರಾ ಮತ್ತು ಸಿಂಡಿಕೇಟ್ ಬ್ಯಾಂಕುಗಳು ಸ್ಥಾನ ಪಡೆದಿದ್ದಾವೆ. ಕರ್ನಾಟಕ ಇಂದು ಕೇಂದ್ರಕ್ಕೆ ದೇಶದಲ್ಲೇ ಮೂರನೆಯ ಅತಿ ಹೆಚ್ಚು ತೆರಿಗೆ ಪಾವತಿಸುವ ರಾಜ್ಯವಾಗಿದ್ದರೆ, ಅಂತಹದೊಂದು ಆರ್ಥಿಕ ಬೆಳವಣಿಗೆಯ ಹಿಂದೆ ಬ್ಯಾಂಕುಗಳು ದೊಡ್ಡ ಪಾತ್ರವಹಿಸಿವೆ. 2011ರ ಜನಗಣತಿಯನ್ವಯ ಕರ್ನಾಟಕದಲ್ಲಿರುವ 1,31,79,911 ಕುಟುಂಬಗಳ ಪೈಕಿ 80,54,677 ಕುಟುಂಬಗಳು, ಅಂದರೆ ಸರಿಸುಮಾರು 61 ಪ್ರತಿಶತ ಕುಟುಂಬಗಳು,  ಬ್ಯಾಂಕಿಂಗ್ ಸೇವೆಗಳನ್ನು ಪಡೆಯುತ್ತಿದ್ದಾರೆ. (ಗಮನಿಸಿ: ಆರ್ಥಿಕವಾಗಿ ಹಿಂದುಳಿದಿರುವ ಆದರೆ ಹಿಂದಿ ಭಾಷಿಕ ಉತ್ತರಪ್ರದೇಶದಲ್ಲಿ 72% ಕುಟುಂಬಗಳು ಬ್ಯಾಂಕಿಂಗ್ ಸೇವೆಗಳನ್ನು ಪಡೆಯುತ್ತಿವೆ !) ಇದರರ್ಥ ಇನ್ನೂ ಕರ್ನಾಟಕದ  39% ಕುಟುಂಬಗಳು ಬ್ಯಾಂಕಿಂಗ್ ವ್ಯವಸ್ಥೆಯ ಹೊರಗಿದ್ದು, ಅವುಗಳನ್ನು ಬ್ಯಾಂಕಿಂಗ್ ವ್ಯವಸ್ಥೆಯ ಒಳಗೆ ತರಬೇಕಿದೆ. ಕರ್ನಾಟಕದಲ್ಲೇ ಶುರುವಾದ ಹಲವು ಬ್ಯಾಂಕುಗಳು ರಾಷ್ಟ್ರೀಕರಣವಾಗುವ ಮೊದಲು ಬಹುತೇಕ ಕನ್ನಡಿಗರನ್ನೇ ತಮ್ಮ ಉದ್ಯೋಗಿಗಳನ್ನಾಗಿ ಹೊಂದಿದ್ದರು. 1965ರಲ್ಲಿ ಬ್ಯಾಂಕ್ ರಾಷ್ಟ್ರೀಕರಣವಾದ ಮೇಲೂ ಸಾಕ್ಷರತೆಯಲ್ಲಿ ಉತ್ತರದ ರಾಜ್ಯಗಳಿಗಿಂತ ಮುಂದಿದ್ದ ಕನ್ನಡಿಗರು ಬ್ಯಾಂಕುಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಉದ್ಯೋಗದಲ್ಲಿದ್ದರು. ಇದರಿಂದಾಗಿ ಬ್ಯಾಂಕುಗಳ ಹಿಂದಿ/ಇಂಗ್ಲಿಷ್ ನೀತಿಯ ನಡುವೆಯೂ ಕನ್ನಡಿಗರಿಗೆ ಕನ್ನಡದಲ್ಲೇ ಬ್ಯಾಂಕು ಸೇವೆಗಳನ್ನು ಪಡೆಯುವುದು ತೀವ್ರ ಸವಾಲಿನ ಕೆಲಸವಾಗಿರಲಿಲ್ಲ. ಆದರೆ ಕಳೆದ ಇಪ್ಪತ್ತು ವರ್ಷಗಳಲ್ಲಿ ಈ ಪರಿಸ್ಥಿತಿ ಬದಲಾಗಿದ್ದು, ಕರ್ನಾಟಕದ ಬ್ಯಾಂಕುಗಳಲ್ಲಿ ಕನ್ನಡದಲ್ಲಿ ಸೇವೆ ಪಡೆಯುವುದು ಕಷ್ಟದ ಕೆಲಸವಾಗಿ ಪರಿಣಮಿಸಿದೆ. ಇದರ ಹಿಂದೆ ಕೆಲ  ಕಾರಣಗಳನ್ನು ಗುರುತಿಸಬಹುದು.

  1. ಬ್ಯಾಂಕುಗಳ ಉದ್ಯೋಗ ನೇಮಕಾತಿಯಲ್ಲಿ ಹಿಂದಿ/ಇಂಗ್ಲಿಷ್ ಎರಡೇ ಭಾಷೆಗಳಿಗೆ ಅವಕಾಶ ಕಲ್ಪಿಸಿರುವುದರಿಂದ ಈ ಭಾಷೆಗಳು ಬಾರದ ಕನ್ನಡಿಗರು ಬ್ಯಾಂಕ್ ಉದ್ಯೋಗ ಪಡೆಯುವಲ್ಲಿ ಹಿಂದೆ ಬೀಳುತ್ತಿರುವುದು.
  2. IBPS ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ ಮೂಲಕ ಎಲ್ಲ ಬ್ಯಾಂಕುಗಳು ತಮ್ಮ ನೇಮಕಾತಿ ಮಾಡುತ್ತಿದ್ದು, 2011ರಿಂದ ಈ ಸಂಸ್ಥೆ ಕಾಮನ್ ರಿಟನ್ ಎಕ್ಸಾಮಿನೆಶನ್ ಅನ್ನುವ ಆನ್ ಲೈನ್ ಪರೀಕ್ಷೆ ಮೂಲಕ ಬ್ಯಾಂಕ್ ನೇಮಕಾತಿ ಹಮ್ಮಿಕೊಳ್ಳಲು ಆರಂಭಿಸಿದ್ದು, ಅಲ್ಲಿ ಪರೀಕ್ಷೆಗಳು ಕೇವಲ ಇಂಗ್ಲಿಷ್/ಹಿಂದಿಯಲ್ಲಿ ಮಾತ್ರವೇ ಲಭ್ಯವಿದ್ದು ಇದರ ಪರಿಣಾಮವಾಗಿ ಕೇವಲ ರಾಷ್ಟ್ರೀಕೃತ ಬ್ಯಾಂಕುಗಳೊಂದೇ ಅಲ್ಲದೇ ಗ್ರಾಮೀಣ ಬ್ಯಾಂಕು (ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್, ಕಾವೇರಿ ಗ್ರಾಮೀಣ ಬ್ಯಾಂಕ್ ಇತ್ಯಾದಿ)ಗಳಲ್ಲಿಯೂ ಕನ್ನಡ ಬಾರದ ಸಿಬ್ಬಂದಿ ನೇಮಕವಾಗುತ್ತಿದ್ದಾರೆ. ಇದು ಹಳ್ಳಿಗಾಡಿನ ರೈತರಿಗೆ ತೀವ್ರ ತೊಂದರೆಯುಂಟು ಮಾಡುತ್ತಿರುವ ವಿಷಯ ಮೈಸೂರು-ಕೊಡಗು ಸಂಸದರಾದ ಪ್ರತಾಪ್ ಸಿಂಹ ಅವರ ಗಮನಕ್ಕೂ ಬಂದಿರುವ ಬಗ್ಗೆ ಬ್ಯುಸಿನೆಸ್ ಸ್ಟಾಂಡರ್ಡ್ ಪತ್ರಿಕೆ ವರದಿ ಮಾಡಿದ್ದನ್ನು ಇಲ್ಲಿ ನೆನೆಯಬಹುದು. ಈ ವರ್ಷದಿಂದ ಸಂದರ್ಶನವನ್ನು ಪೂರ್ತಿಯಾಗಿ ತೆಗೆದು ಹಾಕಿ, ಕೇವಲ ಆನ್ ಲೈನ್ ಪರೀಕ್ಷೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳುವ ಐ.ಬಿ.ಪಿ.ಎಸ್ ನಿರ್ಧಾರದಿಂದ ಈ ಸಮಸ್ಯೆ ಇನ್ನಷ್ಟು ತೀವ್ರವಾಗುವ ಸಾಧ್ಯತೆ ಹೆಚ್ಚಿದೆ.
  3. ಐಟಿ ಮುಂತಾದ ಖಾಸಗಿ ಕ್ಷೇತ್ರದಲ್ಲಿ ಉದ್ಯೋಗವಕಾಶಗಳ ಕಾರಣ ಬ್ಯಾಂಕ್ ನೌಕರಿಯತ್ತ ಕನ್ನಡಿಗರ ಆಸಕ್ತಿ ಕೊಂಚ ಕಡಿಮೆಯಾಗಿರುವುದು.
  4. ಮೂವತ್ತು-ನಲವತ್ತು ವರ್ಷಗಳ ಹಿಂದೆ ಕೆಲಸಕ್ಕೆ ಸೇರಿದ್ದ ಕನ್ನಡಿಗರು ನಿವೃತ್ತಿ ಆಗುತ್ತಿದ್ದಂತೆಯೇ ಆಗುತ್ತಿರುವ ಹೊಸ ನೇಮಕಾತಿಯಲ್ಲಿ ಬಹುತೇಕ ಪಾಲು ಈ ಪರೀಕ್ಷೆಗಳನ್ನು ಹಿಂದಿಯಲ್ಲಿ ಬರೆಯಬಲ್ಲ ಹಿಂದಿ ಭಾಷಿಕರ ಪಾಲಾಗುತ್ತಿರುವುದು.
  5. ಬ್ಯಾಂಕ್ ಸೇವೆಗಳನ್ನು ಆಯಾ ರಾಜ್ಯದಲ್ಲಿ ಅಲ್ಲಿನ ಭಾಷೆಯಲ್ಲಿ ನೀಡಲೇಬೇಕು ಅನ್ನುವ ಯಾವುದೇ ಗ್ರಾಹಕ ಸೇವೆಯ ಕಾನೂನುಗಳು ಇಲ್ಲದಿರುವುದರ ಪರಿಣಾಮವಾಗಿ ಕನ್ನಡ ಬಾರದ ಸಿಬ್ಬಂದಿ, ಕನ್ನಡವೇ ಇಲ್ಲದ ವಾತಾವರಣದಲ್ಲಿ ಕೆಲಸ ಮಾಡುತ್ತ, ಕಚೇರಿಗೆ ಭೇಟಿ ಕೊಡುವ ಸಾಮಾನ್ಯ ಕನ್ನಡಿಗರಿಗೆ ತೀವ್ರ ತೊಂದರೆಗೆ ಕಾರಣವಾಗುತ್ತಿರುವುದು.

ಆದರೆ ಇಲ್ಲಿ ಪ್ರಮುಖವಾಗಿ ಗಮನಿಸಬೇಕಿರುವ ಕಾರಣ ಭಾಷಾ ನೀತಿಯದ್ದಾಗಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಕನ್ನಡ ಬಾರದ ಸಿಬ್ಬಂದಿ ಇಲ್ಲಿ ಕೆಲಸ ಪಡೆಯಲು ಸಾಧ್ಯವಾಗುತ್ತಿರುವುದು, ಮತ್ತು ಕನ್ನಡದಲ್ಲಿ ಸೇವೆ ನೀಡದೆ, ಜನಸಮಾನ್ಯರಿಗೆ ತೊಂದರೆಯಾದರೂ ಮುಂದುವರೆಯಲು ಸಾಧ್ಯವಾಗುತ್ತಿರುವುದು ಯಾಕೆಂದರೆ ಭಾರತದ ಭಾಷಾ ನೀತಿ ಅದನ್ನು ಸಾಧ್ಯವಾಗಿಸಿದೆ. ಆರ್ಟಿಕಲ್ 343ರಿಂದ 351ರವರೆಗೆ ಬರೆಯಲಾಗಿರುವ ಕೇಂದ್ರ ಸರ್ಕಾರದ ಭಾಷಾ ನೀತಿಯನ್ವಯ ಬ್ಯಾಂಕುಗಳ ನೇಮಕಾತಿ ಪರೀಕ್ಷೆ/ ಸಂದರ್ಶನ ಕೇವಲ ಹಿಂದಿ/ಇಂಗ್ಲಿಷಿಗೆ ಸೀಮಿತವಾಗಿದೆ. ಇದರ ಲಾಭ ಅತೀ ಹೆಚ್ಚು ಪ್ರಮಾಣದಲ್ಲಿ ಹಿಂದಿ ಭಾಷಿಕರಿಗೆ ಲಭ್ಯವಾಗುತ್ತಿದೆ. ಇನ್ನೊಂದೆಡೆ ಹೀಗೆ ವಲಸೆ ಬಂದವರು ಕನ್ನಡ ಕಲಿತು ಕನ್ನಡದಲ್ಲಿ ಸೇವೆ ನೀಡುವ ಅಗತ್ಯ ಯಾಕೆ ಕಂಡುಕೊಳ್ಳುತ್ತಿಲ್ಲವೆಂದರೆ ಅದೇ ಭಾಷಾ ನೀತಿ ಅನ್ವಯ ಬ್ಯಾಂಕುಗಳು ಹಿಂದಿ/ಇಂಗ್ಲಿಷಿನಲ್ಲಿ ಸೇವೆ ನೀಡಿದರೆ ಸಾಕು ಅನ್ನುವ ನಿಲುವು. ಪ್ರತಿಯೊಂದು ಬ್ಯಾಂಕಿನ ಸಿಬ್ಬಂದಿಯೂ ಹಿಂದಿಯ ಬಳಕೆ ಹೆಚ್ಚಿಸುವತ್ತ ವಿಶೇಷ ಗಮನ ಹರಿಸಬೇಕು ಅನ್ನುವ ರಾಜ್ ಭಾಷಾ ಆಯೋಗ ನಿಗದಿಪಡಿಸಿರುವ ಗುರಿಯ ಬೆಂಬತ್ತುವ ಬ್ಯಾಂಕ್ ಸಿಬ್ಬಂದಿ ಕನ್ನಡದಲ್ಲಿ ಸೇವೆ ನೀಡುವ ಯಾವುದೇ ಆಸಕ್ತಿ ಹೊಂದಿಲ್ಲ. ಭಾರತದ ಎಲ್ಲ ಬ್ಯಾಂಕುಗಳ ಉಸ್ತುವಾರಿ ಹೊತ್ತಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕೂಡಾ ಭಾರತದ ಕೇಂದ್ರ ಸರ್ಕಾರದ ಭಾಷಾ ನೀತಿ ಅನ್ವಯ ಕೆಲಸ ನಿರ್ವಹಿಸಬೇಕಿರುವುದರಿಂದ ಬ್ಯಾಂಕುಗಳಲ್ಲಿ ಆಗುತ್ತಿರುವ ಈ ಕನ್ನಡದ ಕಡೆಗಣನೆಗೆ ಕೊನೆಯಿಲ್ಲದಂತಾಗಿದೆ.  ರಾಷ್ಟ್ರೀಕೃತ ಮತ್ತು ಖಾಸಗಿ ನೆಲೆಯ ಎಲ್ಲ ದೊಡ್ಡ ಬ್ಯಾಂಕುಗಳು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿಗದಿಪಡಿಸಿರುವಂತೆ ಹಿಂದಿ ಮತ್ತು ಇಂಗ್ಲಿಷಿನಲ್ಲಿ ತಮ್ಮ ಎಲ್ಲ ಬ್ಯಾಂಕ್ ಸೇವೆಗಳನ್ನು ಕೊಡುತ್ತಿವೆ. ತಂತ್ರಜ್ಞಾನ ಬಳಸಿ ನೀಡುವ ಸೇವೆಗಳಾದ ಎ.ಟಿ.ಎಂ/ ಐ.ವಿ.ಆರ್/ ನೆಟ್ ಬ್ಯಾಂಕಿಂಗ್ ಸೇರಿದಂತೆ ಎಲ್ಲ ಸೇವೆಗಳು, ಕನ್ನಡದಲ್ಲಿ ಸುಲಭದಲ್ಲಿ ಕೊಡಲು ಸಾಧ್ಯವಿರುವಾಗಲೂ, ಹಿಂದಿ/ಇಂಗ್ಲಿಷ್ ಎರಡೇ ಭಾಷೆಯಲ್ಲಿ ಲಭ್ಯವಾಗುತ್ತಿವೆ. ಆರ್.ಬಿ.ಐ ಸ್ಥಳೀಯ ಭಾಷೆಗಳ ಬಗ್ಗೆ ಯಾವುದೇ ನೀತಿ ಹೊಂದಿಲ್ಲ ಅಂತೇನಿಲ್ಲ. ತ್ರಿಭಾಷಾ ಸೂತ್ರದ ಹೆಸರಿನಲ್ಲಿ ರಾಜ್ಯ ಭಾಷೆಗಳಿಗೆ ಸಂಬಂಧಿಸಿದಂತೆ ಆರ್.ಬಿ.ಐ ರೂಪಿಸಿರುವ ಯಾವುದೇ ಕಾನೂನುಗಳನ್ನು ಈಗ ಪಾಲಿಸಲಾಗುತ್ತಿಲ್ಲ.

ರಿಸರ್ವ್ ಬ್ಯಾಂಕಿನ ಹಿಂದಿ ಪ್ರೇಮ

ಪ್ರತಿ ವರ್ಷ ರಿಸರ್ವ್ ಬ್ಯಾಂಕ್ ಗ್ರಾಹಕ ಸೇವೆಗೆ ಸಂಬಂಧಿಸಿದಂತೆ ಸುತ್ತೊಲೆಗಳನ್ನು ಹೊರಡಿಸುತ್ತದೆ. ಈ ಸುತ್ತೋಲೆಯಲ್ಲಿ ಸೂಚಿಸಿರುವುದನ್ನು ಎಲ್ಲಾ ಬ್ಯಾಂಕುಗಳೂ ಪಾಲಿಸಬೇಕಾಗಿದೆ. ಈ ಸುತ್ತೋಲೆಯನ್ನು Master Circular on Customer Service in Banks ಎಂದು ಕರೆಯಲಾಗಿದೆ. ಈ ಸುತ್ತೋಲೆಯನ್ನು ಈ ಕೆಳಗಿನ ಕೊಂಡಿಯಲ್ಲಿ ನೋಡಬಹುದು : https://www.rbi.org.in/Scripts/BS_ViewMasCirculardetails.aspx?id=9862

  1. ಈ ಸುತ್ತೋಲೆಯ ಭಾಗ ೧.೧(1.1 General (c)) ವಿಭಾಗದಲ್ಲಿ ಹೀಗೆಂದು ಹೇಳಲಾಗಿದೆ- ಬ್ಯಾಂಕಿನಲ್ಲಿರುವ ಎಲ್ಲಾ ರೀತಿಯ ಕೌಂಟರ್ ಗಳ ಬಗೆಗಿನ ವಿವರಗಳನ್ನು ಹಿಂದಿ/ಇಂಗ್ಲೀಷ್ ಮತ್ತು ಆಯಾ ರಾಜ್ಯದ ಭಾಷೆಯಲ್ಲಿ ಬರೆಯಬೇಕಿದೆ.
  2. (e) ಬ್ಯಾಂಕಿನಲ್ಲಿ ದೊರೆಯುವ ಎಲ್ಲಾ ಸೌಲಬ್ಯಗಳ ಬಗೆಗಿನ ಪುಸ್ತಕವನ್ನು ಹಿಂದಿ/ಇಂಗ್ಲೀಷ್ ಮತ್ತು ಆಯಾ ರಾಜ್ಯದ ಭಾಷೆಗಳಲ್ಲಿ ಒದಗಿಸಬೇಕು.
  3. ೪.೩ Printed materials in trilingual form- ಚಲನ್ ಗಳು/ಬ್ರೋಷರ್ ಗಳು ಸೇರಿದಂತೆ ಗ್ರಾಹಕರ ಅನುಕೂಲಕ್ಕೆಂದು ಮುದ್ರಿಸಿರುವ ಎಲ್ಲಾವೂ ಹಿಂದಿ/ಇಂಗ್ಲಿಷ್ ಮತ್ತು ರಾಜ್ಯದ ಭಾಷೆಯಲ್ಲಿ ಇರಬೇಕು.
  4. 7.2 Writing the cheques in any language – ಈ ನಿಯಮದ ಪ್ರಕಾರ ಕನ್ನಡದಲ್ಲಿ ಚೆಕ್ ಬುಕ್ ಮುದ್ರಿಸಲಾಗುವುದಿಲ್ಲ, ಆದರೆ ಸದ್ಯೆಕ್ಕೆ ಕನ್ನಡದಲ್ಲಿ ಚಕ್ ಬುಕ್ಕಿನ ಮೇಲೆ ಬರೆಯುವ ಅವಕಾಶವಿದೆ.
  5. ೮.೩.೧ Notice Boards – ಎಲ್ಲಾ ನೋಟಿಸ್ ಬೋರ್ಡ್ ಮೇಲೆ ಹಿಂದಿ/ಇಂಗ್ಲೀಷ್ ಮತ್ತು ರಾಜ್ಯ ಭಾಷೆಯಲ್ಲಿ ಮಾಹಿತಿ ಒದಗಿಸಬೇಕು.

ಈ ರೀತಿಯ ನಿಯಮಗಳನ್ನು ರೂಪಿಸಿದ್ದರೂ ಕರ್ನಾಟಕದ ಬಹುತೇಕ ಬ್ಯಾಂಕುಗಳಲ್ಲಿ ಇದನ್ನು ಗಾಳಿಗೆ ತೂರಲಾಗಿದೆ ಅನ್ನುವುದು ಕಾಣುತ್ತಿದೆ. ಬೆಂಗಳೂರಿನ ಹಲವು ಬ್ಯಾಂಕುಗಳಲ್ಲಿ ಕನ್ನಡದಲ್ಲಿ ಚೆಕ್ ಬರೆದರೆ ಅದು ಅರ್ಥವಾಗದ ಸಿಬ್ಬಂದಿ ಅದನ್ನು ಮರಳಿಸುವ ಕೆಲಸ ಮಾಡುತ್ತಿರುವ ಬಗ್ಗೆ ಹಲವು ದೂರುಗಳು ಪತ್ರಿಕೆಗಳ ಓದುಗರೆ ಓಲೆಯ ವಿಭಾಗದಲ್ಲಿ ಬಂದಿವೆ. ಅಲ್ಲದೇ ಆರ್.ಬಿ.ಐ ಸ್ಥಳೀಯ ಭಾಷೆಗಳಿಗಿಂತ ಹೆಚ್ಚಾಗಿ ಹಿಂದಿ ಪ್ರಚಾರಕ್ಕೆ ಒತ್ತು ಕೊಡುತ್ತಿದೆ ಅನ್ನುವುದಕ್ಕೆ ಸಾಕಷ್ಟು ಆಧಾರಗಳಿವೆ. ಹಿಂದಿಯಲ್ಲಿ ಸೇವೆ ನೀಡುವ ಬ್ಯಾಂಕುಗಳಿಗೆ ರಾಜಭಾಷಾ ಶೀಲ್ಡ್, “Excellent writing in the field of banking in Hindi” ಮುಂತಾದ ಹೆಸರಿನ ಬಹುಮಾನ ನೀಡುವ ಸಂಪ್ರದಾಯ ಆರ್.ಬಿ.ಐ ನಲ್ಲಿದೆ. ಈ ಬಗ್ಗೆ ಮಾಹಿತಿ ಕೆಳಗಿನ ಕೊಂಡಿಯಲ್ಲಿ ನೋಡಬಹುದು.

ಅಲ್ಲದೇ ಬ್ಯಾಂಕುಗಳಲ್ಲಿ ಹಿಂದಿಯಲ್ಲಿ ಸೇವೆ ದೊರಕಿಸುವ ಕುರಿತು 41 ಅಂಶಗಳ ವಿವರವಾದ ಸರ್ಕುಲರ್ ಅನ್ನು ಆರ್.ಬಿ.ಐ ಬ್ಯಾಂಕುಗಳಿಗೆ ಹೊರಡಿಸಿರುವುದನ್ನು ಕೆಳಗಿನ ಕೊಂಡಿಯಲ್ಲಿ ನೋಡಬಹುದು: https://www.rbi.org.in/Scripts/BS_ViewMasCirculardetails.aspx?id=8205

ಇಂತಹ ಯಾವುದೇ ವಿವರವಾದ ನೀತಿ ನಿಯಮಗಳನ್ನು ಹಿಂದಿಯೇತರ ಭಾಷೆಗಳ ಕುರಿತಾಗಿ ಆರ್.ಬಿ.ಐ ಹೊರಡಿಸಿಲ್ಲ ಅನ್ನುವುದನ್ನು ಕಂಡಾಗ ಸ್ಥಳೀಯ ಭಾಷೆಗಳಲ್ಲಿ ಬ್ಯಾಂಕಿಂಗ್ ಸೇವೆ ಕಲ್ಪಿಸುವ ಕುರಿತು ಆರ್.ಬಿ.ಐ ಎಷ್ಟು ಗಂಭೀರವಾಗಿದೆ ಅನ್ನುವ ಪ್ರಶ್ನೆಗಳು ಏಳುತ್ತವೆ. ಹಿಂದಿಯಲ್ಲಿ ಆಡಳಿತ ಅನ್ನುವ ಕೇಂದ್ರದ ಭಾಷಾ ನೀತಿಗೆ ಪೂರಕವಾಗಿಯೇ ಆರ್.ಬಿ.ಐ ಇಂತಹ ನಿಲುವು ರೂಪಿಸುತ್ತಿದೆ ಅನ್ನುವುದು ಯಾರಿಗೂ ಅರ್ಥವಾಗುತ್ತದೆ.

ಕರ್ನಾಟಕದಲ್ಲಿ ಹಿಂದಿ ಹೇರಿಕೆಯ ತೊಂದರೆಗಳು

ಇಂತಹ ಭಾಷಾ ನೀತಿಯ ಪರಿಣಾಮವಾಗಿ ಕಳೆದ ಕೆಲ ವರ್ಷದಿಂದ ಕರ್ನಾಟಕದ ಬ್ಯಾಂಕುಗಳಲ್ಲಿ ಕನ್ನಡದಲ್ಲಿ ಸೇವೆ ಪಡೆಯುವುದು ಬಹು ದೊಡ್ಡ ಸವಾಲಾಗುತ್ತಿದ್ದು, ಉದ್ಯೋಗದಲ್ಲೂ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ. ಕನ್ನಡೇತರ ಸಿಬ್ಬಂದಿ ಸಾಮಾನ್ಯ ಕನ್ನಡಿಗರನ್ನು ಹಿಂದಿ ಇಲ್ಲವೇ ಇಂಗ್ಲಿಷಿನಲ್ಲಿ ಮಾತನಾಡಿ ಎಂದು ದಬಾಯಿಸುವ ಘಟನೆಗಳು ನಡೆಯುತ್ತಿದ್ದು, ಇದರ ವಿರುದ್ಧ ಸಾಕಷ್ಟು ಆಕ್ರೋಶ ವ್ಯಕ್ತವಾಗುತ್ತಿದೆ. ಇತ್ತೀಚಿಗೆ ಪತ್ರಿಕೆಯಲ್ಲಿ ವರದಿಯಾದ ಕೆಲ ಘಟನೆಗಳು:

  1. PIL opposes selection of bank staff who don’t know Kannada : http://goo.gl/V467tu
  2. Kannada must for bank staff : http://goo.gl/PkvyUN
  3. ಕನ್ನಡ ಬರುವವರನ್ನು ಕಳಸ್ರಿ – ಮಂಟೂರು ಗ್ರಾಮ ಸಭೆಯಲ್ಲಿ ಗ್ರಾಮಸ್ಥರ ಒತ್ತಾಯ: https://goo.gl/10pVLY
  4. ರಾಷ್ಟ್ರೀಕೃತ ಬ್ಯಾಂಕ್‌ ಹುದ್ದೆಗಳ  ನೇಮಕಾತಿಯಲ್ಲಿ ಕನ್ನಡ ಭಾಷೆ ಕಡ್ಡಾಯ ಎಂಬ ನಿಯಮ ತೆಗೆದು ಹಾಕಿರುವ ಕ್ರಮ ಖಂಡಿಸಿ ಬ್ಯಾಂಕಿಂಗ್‌ ಕ್ಷೇತ್ರದ ನೂರಾರು ಉದ್ಯೋಗ ಆಕಾಂಕ್ಷಿಗಳು ನಗರದಲ್ಲಿ ಪ್ರತಿಭಟನೆ: http://goo.gl/lZySBs
  5. ಹೊರರಾಜ್ಯದವರಿಗೆ ಅವಕಾಶ: ಬ್ಯಾಂಕಿಂಗ್‌ ಉದ್ಯೋಗಾಂಕ್ಷಿಗಳ ಪ್ರತಿಭಟನೆ: http://goo.gl/afM3Ke
  6. ಬ್ಯಾಂಕ್‌ನಲ್ಲಿ ಕನ್ನಡ ಮಾತನಾಡಿದರೆ ಜೋಕೆ: http://goo.gl/GtXeuz
  7. ಇಂಗ್ಲಿಷ್ ಬರಲ್ಲ ಅಂತ್ಲೂ ಇಂಗ್ಲಿಷಲ್ಲೇ ಬರೆದು ಕೊಡ್ಬೇಕಂತೆ!: http://goo.gl/66Fi58

ಇವು ಕೆಲ ಉದಾಹರಣೆಗಳಾಗಿದ್ದು, ಇಂತಹ ಹತ್ತಾರು ಘಟನೆಗಳು ದಿನವೂ ನಡೆಯುತ್ತಿವೆ. ಈ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಹಿಡಿದು ಸ್ವತಹ ಮುಖ್ಯಮಂತ್ರಿಗಳೇ ಹಲವು ಬಾರಿ ಅಸಮಾಧಾನ ವ್ಯಕ್ತಪಡಿಸಿದ್ದರೂ ಯಾವುದೇ ಬದಲಾವಣೆ ಆಗಿಲ್ಲ.

ಸಮಸ್ಯೆಗೆ ಪರಿಹಾರ:

  1. ಬ್ಯಾಂಕಿಂಗ್ ನೇಮಕಾತಿ ಪರೀಕ್ಷೆಯನ್ನು ಸಂವಿಧಾನದ ಎಂಟನೆಯ ಶೆಡ್ಯೂಲಿನಲ್ಲಿರುವ ಎಲ್ಲ ೨೨ ಭಾಷೆಗಳಲ್ಲೂ ಬರೆಯುವ ಅವಕಾಶವಿರಬೇಕು. ರೈಲ್ವೇ ನೇಮಕಾತಿಯಲ್ಲಿ ಇಂತಹದೊಂದು ಬದಲಾವಣೆ ಮಮತಾ ಬ್ಯಾನರ್ಜಿ ಅವರು ರೈಲ್ವೇ ಮಂತ್ರಿಯಾಗಿದ್ದಾಗ ಜಾರಿ ಮಾಡಿದ್ದು, ಅದು ಈಗ ಯಶಸ್ವಿಯಾಗಿ ಜಾರಿಯಲ್ಲಿದೆ.
  2. ಬ್ಯಾಂಕಿಂಗ್ ನೇಮಕಾತಿಯಾಗುವಾಗ ಕ್ಲೆರಿಕಲ್ ಮತ್ತು ಗ್ರಾಹಕರನ್ನು ಎದುರುಗೊಳ್ಳುವ ಹುದ್ದೆಗಳಿಗೆ ನೇಮಕಾತಿಗೆ ಕನ್ನಡ ಗೊತ್ತಿರುವವರನ್ನೇ ಕಡ್ಡಾಯವಾಗಿ ನೇಮಿಸಬೇಕು ಅನ್ನುವ ನಿಯಮ ರೂಪಿಸಬೇಕು.
  3. ಬ್ಯಾಂಕುಗಳಿಗೆ ನೇಮಕವಾಗುವ ಕನ್ನಡೇತರರು ನಿಗದಿತ ಕಾಲಮಾನದಲ್ಲಿ ಕನ್ನಡ ಕಲಿಯುವುದನ್ನು ಕಡ್ಡಾಯಗೊಳಿಸುವಂತೆ ಬ್ಯಾಂಕ್ ಆಡಳಿತ ಮಂಡಳಿಗೆ ಸೂಚಿಸಬೇಕು.
  4. ಬ್ಯಾಂಕು ನೇಮಕಾತಿಗೆ ಸ್ಥಳೀಯರ ನೇಮಕಕ್ಕೆ ಆದ್ಯತೆ ನೀಡಬೇಕು,
  5. ಬ್ಯಾಂಕುಗಳು ನೀಡುವ ತಂತ್ರಜ್ಞಾನ ಆಧಾರಿತ ಸೇವೆಗಳಾದ ಎಟಿಎಂ, ಐವಿಆರ್, ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಮುಂತಾದ ಸೇವೆಗಳು ಕರ್ನಾಟಕದಲ್ಲಿ ಕನ್ನಡದಲ್ಲಿಯೂ ಕೊಡಬೇಕು ಅನ್ನುವುದನ್ನು ಕಡ್ಡಾಯಗೊಳಿಸಬೇಕು.
  6. ಕರ್ನಾಟಕದ ಬ್ಯಾಂಕುಗಳಲ್ಲಿ ಹಿಂದಿಯಲ್ಲಿ ಎಲ್ಲ ತರದ ಸೇವೆ ಕೊಡುತ್ತಿದ್ದರೂ ಅದನ್ನು ಬಳಸುವವರ ಪ್ರಮಾಣ ಒಂದು ಪ್ರತಿಶತದಷ್ಟೂ ಇಲ್ಲ. ಹೀಗಿರುವಾಗ ಅಮೂಲ್ಯ ಸಂಪನ್ಮೂಲವನ್ನು ಪೋಲು ಮಾಡದೇ ಕರ್ನಾಟಕದಲ್ಲಿ ಕನ್ನಡ ಮತ್ತು ಇಂಗ್ಲಿಷಿನಲ್ಲಿ ಬ್ಯಾಂಕ್ ವ್ಯವಹಾರ ಕಲ್ಪಿಸುವ ದ್ವಿಭಾಷಾ ನೀತಿಗೆ ಒತ್ತು ನೀಡಬೇಕು.
  7. ಭಾರತದ ಅಧಿಕೃತ ಭಾಷಾ ನೀತಿಗೆ ತಿದ್ದುಪಡಿ ತಂದು ಸಂವಿಧಾನದ ಎಂಟನೆಯ ಶೆಡ್ಯೂಲಿನಲ್ಲಿರುವ ಎಲ್ಲ ಭಾಷೆಗಳನ್ನು ಕೇಂದ್ರದ ಅಧಿಕೃತ ನುಡಿಗಳೆಂದು ಘೋಷಿಸಿ, ಆಯಾ ರಾಜ್ಯದಲ್ಲಿ ಕೇಂದ್ರದ ಎಲ್ಲ ಆಡಳಿತ ಅಲ್ಲಿನ ಸ್ಥಳೀಯ ಭಾಷೆಯಲ್ಲಿ ನಡೆಯುವಂತೆ ಮಾಡುವುದು ದೀರ್ಘಾವಧಿಯಲ್ಲಿ ಆಗಬೇಕಿರುವ ಸುಧಾರಣೆಯಾಗಿದ್ದು, ಈ ನಿಟ್ಟಿನಲ್ಲಿ ಸಂವಿಧಾನ ತಿದ್ದುಪಡಿಗೆ ದನಿ ಎತ್ತಬೇಕು.
This entry was posted in ಕನ್ನಡ, ಕರ್ನಾಟಕ, ಹಿಂದಿ ಹೇರಿಕೆ. Bookmark the permalink.

1 Responses to ಕರ್ನಾಟಕದ ಬ್ಯಾಂಕುಗಳಲ್ಲಿ ಕನ್ನಡದ ಕತೆ ವ್ಯಥೆ

  1. ಅನಿಲ್ ಕುಮಾರ್ ಹೇಳುತ್ತಾರೆ:

    ಮಾನ್ಯರೆ,
    ಬ್ಯಾಂಕ್ ಗಳಲ್ಲಿ ಹಿಂದು ಹೇರಿಕೆ ಮೇಲೆ ಹೇಳದ್ದಕ್ಕಿಂತ ಭಯಂಕರವಾಗಿದೆ.
    ಹಿಂದಿಯಲ್ಲಿ ಇ ಮೇಲ್ ಕಳಿಸುವವರಿಗೆ ಬಹುಮಾನ
    ಹಿಂದಿಯಲ್ಲಿ ಉನ್ನತ ವ್ಯಾಸಂಗ ಮಾಡಲು ಹಣ ಸಹಾಯ
    ಹಿಂದಿ ದಿವಸ ಇದ್ದದ್ದು ಈಗ ಹಿಂದಿ ಮಹೀನೆ ಇನ್ನೂ ಹಲವಾರು ಬಗೆಯಲ್ಲಿ ಹಿಂದಿ ಹೇರಲಾಗುತ್ತಿದೆ.
    ಇತ್ತೀಚೆಗೆ ಸ್ನೇಹಿತನೊಂದಿಗೆ(ಹಿಂದಿಯವ) ಚರ್ಚಿಸುವಾಗ ಬ್ಯಾಂಕ್ ಗಳಲ್ಲಿ ಹಿಂದಿ ಇಂಗ್ಲಿಷ್ ಹೊರತಾಗಿ ಬೇರೆ ಭಾಷೆಯ ಅಗತ್ಯವಾದರೂ ಏನು ಎಂದು ಪ್ರಶ್ನಿಸಿದ.

ನಿಮ್ಮ ಟಿಪ್ಪಣಿ ಬರೆಯಿರಿ