ಇಂದು ಫೆಬ್ರವರಿ 21 ವಿಶ್ವ ತಾಯ್ನುಡಿ ದಿನ. 1952ರಲ್ಲಿ ಬೆಂಗಾಲಿಗಳ ಮೇಲೆ ಉರ್ದು ಹೇರಿಕೆಯನ್ನು ವಿರೋಧಿಸಿ, ಬೆಂಗಾಲಿ ಭಾಷೆಗೂ ಪಾಕಿಸ್ತಾನದ ಅಧಿಕೃತ ಭಾಷೆಯ ಸ್ಥಾನಮಾನ ನೀಡುವಂತೆ ಒತ್ತಾಯಿಸಿ, ಅಂದಿನ ಪೂರ್ವ ಪಾಕಿಸ್ತಾನ, ಇಂದಿನ ಬಾಂಗ್ಲಾದೇಶದ ಢಾಕಾ ನಗರದಲ್ಲಿ ಪೋಲಿಸರ ಗುಂಡಿಗೆ ಎದೆಯೊಡ್ಡಿ ಹುತಾತ್ಮರಾದ ಬೆಂಗಾಲಿ ವಿದ್ಯಾರ್ಥಿಗಳ ನೆನಪಿನಲ್ಲಿ ಈ ದಿನ ಆಚರಿಸಲಾಗುತ್ತದೆ. ಅಂದು ಬೆಂಗಾಲಿಗಳ ಪ್ರಾಮಾಣಿಕವೂ, ನ್ಯಾಯಸಮ್ಮತವೂ ಆದ ಬೇಡಿಕೆಗೆ ಕಿವಿಗೊಡದ ಪಾಕಿಸ್ತಾನ ಮುಂದೆ ಬಾಂಗ್ಲಾದೇಶ ಒಂದು ಪ್ರತ್ಯೇಕ ದೇಶವೇ ಆಗುವುದನ್ನು ನೋಡುವಂತಾಯಿತು. ತಮಾಷೆಯೆಂದರೆ ಉರ್ದು ಪಾಕಿಸ್ತಾನದ ಬಹುಸಂಖ್ಯಾತರ ನುಡಿಯೂ ಅಲ್ಲ . ಅಲ್ಲಿನ ನಾಲ್ಕು ಮುಖ್ಯ ಪ್ರಾಂತ್ಯಗಳಾದ ಬಲೂಚಿಸ್ತಾನ್, ಸಿಂಧ್, ಪಂಜಾಬ್ ಮತ್ತು ನಾರ್ತ್ ವೆಸ್ಟ್ ಫ್ರಂಟಿಯರ್ ಎಲ್ಲವುಗಳಿಗೂ ಅದರದ್ದೇ ಆದ ಭಾಷೆಗಳಿವೆ. ಕೇವಲ 8% ಪಾಕಿಸ್ತಾನಿಗಳ ಭಾಷೆಯಾದ ಉರ್ದುವನ್ನು ಅಲ್ಲಿ ಇತರೆಲ್ಲ ಭಾಷಿಕರ ಮೇಲೆ ಹೇರಿ ವೈವಿಧ್ಯತೆಯನ್ನು ಕೊಲ್ಲುವ ವ್ಯವಸ್ಥಿತ ಪ್ರಯತ್ನ ಪಾಕಿಸ್ತಾನ ಹುಟ್ಟಿದಾಗಿನಿಂದಲೂ ನಡೆಯುತ್ತಿದೆ, ಈಗಲೂ ನಡೆಯುತ್ತಿದೆ. ಬಾಂಗ್ಲಾದೇಶ ಬೇರೆಯಾದಂತೆ ಬಲೂಚಿಸ್ತಾನದಲ್ಲೂ ಉರ್ದು ಹೇರಿಕೆಯ ವಿರುದ್ಧದ ಆಕ್ರೋಶ ಪ್ರತ್ಯೇಕ ದೇಶದ ಚಳುವಳಿಯಾಗಿ ನಡೆಯುತ್ತಿದೆ. ತನ್ನ ಇಂತಹ ತಪ್ಪುಗಳ ಭಾರಕ್ಕೆ ಪಾಕಿಸ್ತಾನ ಒಂದು ದಿನ ಕುಸಿದು ಚೂರಾದರೆ ಅಚ್ಚರಿಯಿಲ್ಲ. ಒಟ್ಟಾರೆ ಭಾಷಾ ಹೇರಿಕೆಯ ಅಡ್ಡಪರಿಣಾಮಗಳು, ಬಹು ಭಾಷಿಕ ದೇಶಗಳಲ್ಲಿ ಭಾಷಾ ಸಮಾನತೆಯನ್ನು ಎತ್ತಿ ಹಿಡಿಯಬೇಕಾದ ಅಗತ್ಯ, ಭಾಷಾ ವೈವಿಧ್ಯತೆಯನ್ನು ಪೊರೆಯುವುದರ ಮಹತ್ವದತ್ತ ವಿಶ್ವದ ಗಮನ ಸೆಳೆಯಲು ಇದೊಂದು ಮುಖ್ಯವಾದ ದಿನ.
ಹಿಂದಿ ಹೇರಿಕೆಯ ತೊಂದರೆ
ಭಾರತದ ಸಂವಿಧಾನ, ಪ್ರಜಾಪ್ರಭುತ್ವದಡಿ ಭಾರತವನ್ನು ಒಂದು ಭಾಷಾವಾರು ಪ್ರಾಂತ್ಯಗಳ ಒಕ್ಕೂಟದ ಕಲ್ಪನೆಯಲ್ಲಿ ಕಂಡು, ಭಾಷಿಕ ರಾಜ್ಯಗಳ ರಚನೆಯ ಮೂಲಕ ಒಂದು ಹಂತದವರೆಗೆ ಭಾರತದ ಬೇರೆ ಬೇರೆ ಭಾಷಿಕರ ಆಶೋತ್ತರಗಳಿಗೆ ಬೆಂಬಲವಾಗಿ ನಿಂತಿದ್ದರಿಂದಲೇ ಭಾರತವನ್ನು ಒಗ್ಗೂಡಿಸುವುದು ಸಾಧ್ಯವಾಯಿತು. ಆದರೆ ಸ್ವಾತಂತ್ರ್ಯ ಬಂದಾಗ ಯುರೋಪಿನಲ್ಲಿ ಹುಚ್ಚೆದ್ದಿದ್ದ “ಒಂದು ದೇಶ, ಒಂದು ಭಾಷೆ” ಅನ್ನುವ ತತ್ವದ ಪ್ರಭಾವವೆಂಬಂತೆ ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ದೇಶಕ್ಕೊಂದು ಭಾಷೆ ಬೇಕು ಮತ್ತದು ಅಂದಿಗೂ, ಇಂದಿಗೂ ದೇಶದ ಕೇವಲ ಕಾಲು ಭಾಗ ಜನರ ಭಾಷೆಯಾಗಿರುವ ಹಿಂದಿಯೇ ಆಗಬೇಕು ಅನ್ನುವ ನಿಲುವು ಭಾರತದಲ್ಲಿ ನಿರಂತರವಾಗಿ ಹಿಂದಿಯೇತರರ ಮೇಲೆ ಹಿಂದಿ ಹೇರಿಕೆಗೆ ಕಾರಣವಾಗಿದೆ. ಇದರ ಪರಿಣಾಮವಾಗಿ ಭಾರತದ ಹಲವಾರು ಹಿಂದಿಯೇತರ ಭಾಷೆಗಳು ತಮ್ಮ ನೆಲೆಯನ್ನು ಕಳೆದುಕೊಂಡು, ತಮ್ಮ ಬಳಕೆಯ ವ್ಯಾಪ್ತಿಯನ್ನು ಕುಗ್ಗಿಸಿಕೊಳ್ಳುತ್ತ ಸಾಗಿವೆ. ಅವುಗಳ ಜಾಗವನ್ನು ಹಿಂದಿ ಆಕ್ರಮಿಸುತ್ತ ಬಂದಿದೆ. ಮನರಂಜನೆ, ಗ್ರಾಹಕ ಸೇವೆ, ನಾಗರೀಕ ಸೇವೆ, ಸುರಕ್ಷತೆ, ಶಿಕ್ಷಣ ಹೀಗೆ ಎಲ್ಲ ಕ್ಷೇತ್ರದಲ್ಲೂ ಇಂದು ಹಿಂದಿ ಭಾಷೆಯ ಯಜಮಾನಿಕೆ ಹಬ್ಬಿದ್ದು ಹಿಂದೀಗಿಂತಲೂ ಹಳೆಯ ಮತ್ತು ಶ್ರೀಮಂತವಾದ ಭಾರತದ ಇತರೆ ಭಾಷೆಗಳು ತಮ್ಮ ನೆಲದಲ್ಲೇ ಅನಾಥವಾಗುವ ಸ್ಥಿತಿಯುಂಟಾಗುತ್ತಿದೆ. ಕರ್ನಾಟಕದಲ್ಲೂ ನಮ್ಮ ಅಂಚೆ ಕಚೇರಿ, ಬ್ಯಾಂಕು, ರೈಲು, ವಿಮಾನ ಸೇವೆ, ಹೆದ್ದಾರಿ, ತೆರಿಗೆ, ಪಿಂಚಣಿ ಇಲಾಖೆಗಳಲ್ಲಿ ಕನ್ನಡ ಕಣ್ಮರೆಯಾಗಿ ಹಿಂದಿ/ಇಂಗ್ಲಿಷಿನಲ್ಲೇ ಆಡಳಿತ ನೆಲೆ ನಿಲ್ಲುತ್ತಿರುವುದರ ಹಿಂದೆ ಈ ಭಾಷಾ ನೀತಿಯ ಪಾತ್ರವಿದೆ. ಹಿಂದಿ ಬಳಸುವ ಅಧಿಕಾರಿಗಳಿಗೆ ಬಹುಮಾನ, ಬಡ್ತಿ, ಪ್ರಶಸ್ತಿ ನೀಡುವ ಕ್ರಮದಿಂದಾಗಿ ಕನ್ನಡ ಬಲ್ಲ ಅಧಿಕಾರಿಗಳು ಹಿಂದಿ ಬಳಸಲೇಬೇಕಾದ ಒತ್ತಡಕ್ಕೆ ಸಿಲುಕಿದ್ದಾರೆ. ಇದರಿಂದ ಸಾಮಾನ್ಯ ಜನರಿಗೆ, ಅದರಲ್ಲೂ ಕನ್ನಡವೊಂದನ್ನೇ ಬಲ್ಲ ಜನರಿಗೆ ಆಗುತ್ತಿರುವ ತೊಂದರೆ ಒಂದು ದೊಡ್ಡ ಮಾನವ ಹಕ್ಕುಗಳ ಉಲ್ಲಂಘನೆಯೇ ಸರಿ. ಈ ಬಗ್ಗೆ ಕರ್ನಾಟಕದ ಜನಪ್ರತಿನಿಧಿಗಳಲ್ಲಿ ಇತ್ತೀಚಿನ ದಿನಗಳಲ್ಲಿ ಒಂದಿಷ್ಟು ಎಚ್ಚರ ಮೂಡುತ್ತಿದೆಯಾದರೂ ಅದು ಭಾರತದ ಹುಳುಕಿನ ಭಾಷಾ ನೀತಿಯ ಬದಲಾವಣೆಗೆ ಒತ್ತಾಯಿಸುವಷ್ಟು ತೀವ್ರವಾಗಿ ಈ ಹೊತ್ತಿನಲ್ಲಿಲ್ಲ. ಇದು ಸಾಧ್ಯವಾಗಲು ಜನಸಾಮಾನ್ಯರ ಹೋರಾಟ ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಕನ್ನಡಿಗರೂ ಈಗ ಎಚ್ಚೆತ್ತುಕೊಳ್ಳುತ್ತಿದ್ದಾರೆ.
ಭಾಷಾ ಸಮಾನತೆಗಾಗಿ ದನಿ
ಹಿಂದಿ ಹೇರಿಕೆಯನ್ನು ವಿರೋಧಿಸಿ ಈ ಹಿಂದೆ ಚದುರಿದಂತೆ ಅಲ್ಲಲ್ಲಿ ಏಳುತ್ತಿದ್ದ ಪ್ರತಿರೋಧ ಈಗ ಸಾಕಷ್ಟು ವ್ಯವಸ್ಥಿತವಾಗಿ ರೂಪುಗೊಳ್ಳುತ್ತಿದೆ. ತಮಿಳರು, ಬೆಂಗಾಲಿಗಳು, ಪಂಜಾಬಿಗಳು, ಕನ್ನಡಿಗರು, ಮಲೆಯಾಳಿಗಳು, ಮರಾಠಿಗರು ಹೀಗೆ ಹಲವು ಭಾಷಿಕರು ನ್ಯಾಯಸಮ್ಮತವಾಗಿ ತಮ್ಮ ಭಾಷೆಗೆ ದಕ್ಕಬೇಕಿರುವ ಹಕ್ಕುಗಳಿಗಾಗಿ, ಹಿಂದಿ/ಇಂಗ್ಲಿಷಿಗೆ ಇರುವ ಸ್ಥಾನಮಾನಕ್ಕೆ ಸಮಾನವಾದ ಸ್ಥಾನಮಾನಕ್ಕಾಗಿ ದನಿ ಎತ್ತುವ ಬೆಳವಣಿಗೆ ಕಳೆದ ಹತ್ತು ವರ್ಷಗಳಿಂದ ವ್ಯಾಪಕಗೊಳ್ಳುತ್ತಿದೆ. ಕಳೆದ ವರ್ಷ ಆಗಸ್ಟ್ 15, ಈ ವರ್ಷದ ಜನವರಿ 26ರಂದು ಎರಡು ಬಾರಿ ಸಾಮಾಜಿಕ ತಾಣ ಟ್ವಿಟರಿನಲ್ಲಿ ಹಿಂದಿ ಹೇರಿಕೆಗೆ ತಡೆಯೊಡ್ಡಿ, ಭಾರತದ ಎಲ್ಲ ಭಾಷೆಗಳಿಗೂ ಸಮಾನ ಸ್ಥಾನಮಾನ ನೀಡುವಂತೆ ಆಗ್ರಹಿಸುವ ಅಭಿಯಾನಕ್ಕೆ ದೊಡ್ಡ ಮಟ್ಟದ ಸ್ಪಂದನೆ ಕಂಡು ಬಂದಿದ್ದು, ಅದು ಭಾರತದ ಮಟ್ಟದಲ್ಲಿ ಟ್ವಿಟರಿನಲ್ಲಿ ಟ್ರೆಂಡ್ ಆಗುವ ಮೂಲಕ ಮೂಲೆಗುಂಪಾಗಿದ್ದ ನಮ್ಮ ಭಾಷೆಗಳ ದನಿ ಮತ್ತೆ ಕೇಳಿ ಬರುವಂತಾಗಿದೆ. ಚೆನ್ನೈನಲ್ಲಿ ಕಳೆದ ಸೆಪ್ಟೆಂಬರಿನಲ್ಲಿ ನಡೆದ ಭಾಷಾ ಸಮ್ಮೇಳನದಲ್ಲಿ ತಮಿಳು, ಮಲಯಾಳಂ, ಮರಾಠಿ, ಕನ್ನಡ, ಬೆಂಗಾಲಿ ಮತ್ತು ಪಂಜಾಬಿ ಭಾಷಿಕರು ಒಂದೆಡೆ ಸೇರಿ “ಚೆನ್ನೈ ಭಾಷಾ ಹಕ್ಕುಗಳ ಘೋಷಣೆ”ಯನ್ನು ಹೊರ ತಂದಿದ್ದರು. ಈ ಘೋಷಣೆಯಲ್ಲಿ ಭಾರತದ ಸಂವಿಧಾನದ ಎಂಟನೆಯ ಪರಿಚ್ಛೇದದಲ್ಲಿರುವ ಎಲ್ಲ 22 ಭಾಷೆಗಳಿಗೂ ಕೇಂದ್ರ ಆಡಳಿತ ಭಾಷೆಯ ಸ್ಥಾನಮಾನಕ್ಕೆ ಆಗ್ರಹಿಸಲಾಗಿತ್ತು. ಅಲ್ಲದೇ ಎಂಟನೆಯ ಪರಿಚ್ಛೇದಕ್ಕೆ ಸೇರಲು ಪ್ರಯತ್ನಿಸುತ್ತಿರುವ ತುಳು, ರಾಜಸ್ಥಾನಿ ಮುಂತಾದ ಭಾಷೆಗಳ ಹೋರಾಟಕ್ಕೆ ಬೆಂಬಲ ಸೂಚಿಸಲಾಗಿತ್ತು. ಇದರೊಂದಿಗೆ ಭಾರತದ ಭಾಷೆಗಳಲ್ಲಿ ಶಿಕ್ಷಣ, ಚಿಕ್ಕಪುಟ್ಟ ಭಾಷೆಗಳಿಗೆ ಸಂವಿಧಾನಿಕ ರಕ್ಷಣೆ ಮುಂತಾದ ಬೇಡಿಕೆಗಳಿಗೂ ಸಹಮತ ವ್ಯಕ್ತವಾಗಿತ್ತು. ಈಗ ಮುಂದುವರೆದು ಇದೇ ಫೆಬ್ರವರಿ 21ರಂದು ನಡೆಯುವ ವಿಶ್ವ ತಾಯ್ನುಡಿ ದಿನವನ್ನು ದೆಹಲಿಯಲ್ಲಿ ಆಚರಿಸುವ ನಿರ್ಧಾರವನ್ನು ಈ ಉದ್ದೇಶದತ್ತ ಎಲ್ಲ ಭಾಷಿಕರನ್ನು ಒಳಗೊಂಡು ಕೆಲಸ ಮಾಡುತ್ತಿರುವ ಸೆಂಟರ್ ಫಾರ್ ಲ್ಯಾಂಗ್ವೆಜ್ ಈಕ್ವಾಲಿಟಿ ಆಂಡ್ ರೈಟ್ಸ್ (ಕ್ಲಿಯರ್) ಸಂಸ್ಥೆ ಕೈಗೊಂಡಿದೆ. ಅಂದು ದೆಹಲಿಯ ಪ್ರೆಸ್ ಕ್ಲಬ್ ಆವರಣದಲ್ಲಿ “ಡೆಲ್ಲಿ ಡಿಮಾಂಡ್ಸ್” ಹೆಸರಿನ ಭಾಷಾ ಹಕ್ಕುಗಳ ಘೋಷಣಾಪತ್ರವನ್ನು ಬಿಡುಗಡೆ ಮಾಡಲಾಗುತ್ತಿದ್ದು, ಈ ಕಾರ್ಯಕ್ರಮದಲ್ಲಿ ಭಾರತದ ನಲ್ವತ್ತಕ್ಕೂ ಹೆಚ್ಚು ಭಾಷೆಯ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಕರ್ನಾಟಕದಿಂದ ತುಳು, ಕೊಂಕಣಿ ಮತ್ತು ಕನ್ನಡ ಭಾಷೆಯ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಅದೇ ದಿನ ಸಂಜೆ ಜಂತರ್ ಮಂತರಿನಲ್ಲಿ ಸಂಜೆ 5ಕ್ಕೆ ಭಾಷಿಕ ಹಕ್ಕುಗಳ ಹೋರಾಟದಲ್ಲಿ ಪ್ರಾಣ ತ್ಯಾಗ ಮಾಡಿದ ಭಾರತೀಯರ ಸ್ಮರಣೆಯಲ್ಲಿ ಮೊಂಬತ್ತಿ ಬೆಳಗುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಒಟ್ಟಾರೆ ಭಾರತದ ಭಾಷೆಗಳೆಲ್ಲದರ ಬಗ್ಗೆ ಕಾಳಜಿಯುಳ್ಳ ಈ ಹೋರಾಟ ಸಂಸತ್ತನ್ನು ಪ್ರವೇಶಿಸಿ ಭಾಷಾ ನೀತಿ ಬದಲಾಯಿಸುವ, ಎಲ್ಲ ಭಾಷೆಗಳಿಗೂ ಸಮಾನ ಸ್ಥಾನಮಾನ ಕಲ್ಪಿಸುವ ಹೋರಾಟದ ಮೊದಲ ದೊಡ್ಡ ಹೆಜ್ಜೆ ಇದಾಗಲಿದೆ.
ನಾನು Google ಸಹಾಯದಿಂದ ಈ ಲೇಖನ ಭಾಷಾಂತರಿಸಿ ಓದಿ. ಅತ್ಯುತ್ತಮ ಲೇಖನ.
ತಮಿಳುನಾಡಿನಲ್ಲಿ ಹಿಂದಿ ವಿರೋಧಿ ಚಳುವಳಿ ನಡೆಯುತ್ತಿದ್ದ ವೇಳೆ ಸುಮಾರು 12 ಜನರು ಪ್ರಾಣ ತ್ಯಾಗ ಮಾಡಿದ್ದಾರೆ.