ಬಾಹುಬಲಿ ಅನ್ನುವ ತೆಲುಗು ಸಿನೆಮಾ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಕರ್ನಾಟಕದ ಇನ್ನೂರು ಚಿತ್ರಮಂದಿರಗಳಲ್ಲಿ ನಾಳೆ ಬಿಡುಗಡೆಯಾಗುತ್ತಿದೆ. ಇತ್ತೀಚಿನ ದಿನಗಳಲ್ಲೇ ಕನ್ನಡದಲ್ಲಿ ಬಂದ ಅತ್ಯುತ್ತಮ ಚಿತ್ರ ಅನ್ನುವ ಹೆಸರು ಗಳಿಸಿದ್ದ ರಂಗೀತರಂಗ ಚಿತ್ರ ಬಾಹುಬಲಿಯ ಹಣಬಲದ ಮುಂದೆ ಸ್ಪರ್ಧಿಸಲಾಗದೇ ಅರ್ಧದಷ್ಟು ಚಿತ್ರಮಂದಿರಗಳಿಂದ ಹೊರ ನಡೆಯುತ್ತಿದೆ. ಅನೂಪ್ ಭಂಡಾರಿಯಂತಹ ಯುವ, ಪ್ರತಿಭಾವಂತ ಕನ್ನಡಿಗನನ್ನು ಕನ್ನಡ ಚಿತ್ರರಂಗ ಪಡೆಯುವ ಮುನ್ನವೇ ಕಳೆದುಕೊಳ್ಳುವಂತೆ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ತೆಲುಗು ಚಿತ್ರಗಳು, ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಮಾರುಕಟ್ಟೆ ಕಟ್ಟಿಕೊಂಡ ಬಗ್ಗೆ ಒಂದು ವಿಶ್ಲೇಷಣೆ.
ಹತ್ತು ಹದಿನೈದು ವರ್ಷಗಳ ಹಿಂದೆ ಉತ್ತರ ಕರ್ನಾಟಕದ ಭಾಗದಲ್ಲಿ ತೆಲುಗು ಸಿನೆಮಾಗಳ ಹಾವಳಿ ಇವತ್ತಿನಷ್ಟಿರಲಿಲ್ಲ. ಎಲ್ಲೋ ಅಪರೂಪಕ್ಕೆ ಒಂದೋ ಎರಡೋ ಸಿನೆಮಾಗಳು ಬರುತ್ತಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ಉತ್ತರ ಕರ್ನಾಟಕದ ಬಹುತೇಕ ದೊಡ್ಡ ಊರುಗಳಲ್ಲಿ ಪ್ರಮುಖ ಚಿತ್ರಮಂದಿರಗಳಲ್ಲಿ ತೆಲುಗು ಚಿತ್ರಗಳು ನಿಯಮಿತವಾಗಿ ಪ್ರದರ್ಶನವಾಗುತ್ತಿವೆ. ಈ ಬದಲಾವಣೆ ಹೇಗಾಯ್ತು ? ಸಿನೆಮಾ ಉದ್ಯಮವನ್ನು ಹತ್ತಿರದಿಂದ ನೋಡಿದವರು ಹೇಳುವ ಪ್ರಕಾರ “ತೆಲುಗು ಚಿತ್ರಗಳಿಗೆ ಕರ್ನಾಟಕ ಸೆಕೆಂಡರಿ ಮಾರುಕಟ್ಟೆಯಾಗಿರುವುದರಿಂದ ಸರಿ ಸುಮಾರು ಇಪ್ಪತ್ತು ವರ್ಷಗಳ ಕಾಲ ತೆಲುಗು ಚಿತ್ರಗಳನ್ನು ಬಿಸಾಡುವ ಬೆಲೆಗೆ ಉತ್ತರ ಕರ್ನಾಟಕದಲ್ಲಿ ಹಂಚಿಕೆದಾರರಿಗೆ, ಪ್ರದರ್ಶಕರಿಗೆ ಕೊಡಲಾಯಿತು. ಪರಭಾಷಾ ಚಿತ್ರಗಳ ಮೇಲೆ ತೆರಿಗೆ ಇರುವಾಗ, ಅದನ್ನು ಕದಿಯಲು ಹಲವು ಚಿತ್ರಮಂದಿರಗಳಿಗೂ ಇದೊಂದು ಒಳ್ಳೆಯ ಅವಕಾಶವಾಯ್ತು. ತೆಲುಗು ಉದ್ಯಮದವರಿಗೆ ಬಂದಷ್ಟು ಬರಲಿ ಅನ್ನುವ ಲೆಕ್ಕಾಚಾರ. ಆದರೆ ಇಪ್ಪತ್ತು ವರ್ಷಗಳ ಕಾಲ ನಿರಂತರವಾಗಿ ಜನರಿಗೆ ತೆಲುಗು ಸಿನೆಮಾಗಳನ್ನು ನೋಡುವ ಅಭ್ಯಾಸ ಬೆಳೆಸಿದ ಮೇಲೆ ಈಗ ಉತ್ತರ ಕರ್ನಾಟಕ ತೆಲುಗು ಚಿತ್ರಗಳಿಗೆ ದೊಡ್ಡ ಮಾರುಕಟ್ಟೆಯಾಗಿ ಪರಿಣಮಿಸುತ್ತಿವೆ. ಜೊತೆಯಲ್ಲೇ ತೆಲುಗು ಸಿನೆಮಾಗಳ ಬಗ್ಗೆ ಹೆಚ್ಚಿನ ಕನ್ನಡ ಮಾಧ್ಯಮಗಳು ಕನ್ನಡಕ್ಕಿಂತಲೂ ಹೆಚ್ಚಿನ ಪ್ರಚಾರ ನೀಡಿ ತೆಲುಗು ಮಾರುಕಟ್ಟೆ ಬೆಳೆಸುವಲ್ಲಿ ತಮ್ಮದೇ ಆದ ಸೇವೆ ಸಲ್ಲಿಸಿವೆ. ಮಾಧ್ಯಮಗಳು ಹೀಗೆ ಮಾಡಲು ವ್ಯಾಪಾರಿ ಕಾರಣಗಳು ಇದ್ದಂತಿವೆ. ”
ಡಬ್ಬಿಂಗ್ ಮೇಲಿನ ತಡೆಯಿಂದಾಗಿ ಮೂಲ ಭಾಷೆಯಲ್ಲೇ ತೆಲುಗು ಚಿತ್ರಗಳನ್ನು ನೋಡಿ ನೋಡಿ ಅಲ್ಲಿನ ಯುವಕರು ತೆಲುಗು ಕಲಿತಿರುವುದು ಅಲ್ಲದೇ ಕನ್ನಡ ಚಿತ್ರನಟರಿಗಿಂತ ಅವರೇ ಹೆಚ್ಚು ಜನಪ್ರಿಯರು ಅನ್ನುವ ಸ್ಥಿತಿ ನಿರ್ಮಾಣವಾಗಿದೆ. ಇನ್ನೊಂದು ಕಡೆ ಡಬ್ಬಿಂಗ್ ಬ್ಯಾನ್ ಮಾಡಿ, ರಿಮೇಕು, ರಿಮಿಕ್ಸು ತರದ ಸಿನೆಮಾಗಳನ್ನೇ ಮಾಡಿ ಮಾಡಿ ಕನ್ನಡಿಗರು ಕನ್ನಡ ಚಿತ್ರಗಳಿಂದಲೇ ದೂರ ಸರಿದು ಪರ ಭಾಷೆಯತ್ತ ವಲಸೆ ಹೋಗುವಂತೆಯೂ ನಮ್ಮ ಉದ್ಯಮ ನೋಡಿಕೊಂಡಿದೆ. ಹೊಸ ಕತೆ, ಹೊಸ ಐಡಿಯಾ ಇಟ್ಕೊಂಡು ಉದ್ಯಮಕ್ಕೆ ಬಂದವರಿಗೆ ಇಲ್ಲಿನ ಕಾರ್ಟೆಲ್ ಗಳನ್ನು ಮೀರಿ ಬೆಳೆಯುವ ಅವಕಾಶವೇ ಇಲ್ಲದಿದ್ದರಿಂದ ಹೊಸ ಪ್ರತಿಭೆಗಳೂ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡ ಚಿತ್ರೋದ್ಯಮಕ್ಕೆ ಬರಲೂ ಇಲ್ಲ, ಬಂದವರು ಕೆಲಸವಿಲ್ಲದೇ ಕೊರಗುತ್ತಿರುವ, ಇಲ್ಲವೇ ಹೊಟ್ಟೆಪಾಡಿಗೆ ಅದೇ ರಿಮೇಕ್, ರಿಮಿಕ್ಸ್ ಸಿನೆಮಾ ಒಪ್ಪಿಕೊಂಡ ಹಲವು ಉದಾಹರಣೆಗಳಿವೆ. ಇವೆಲ್ಲ ಒಟ್ಟಾಗಿ ಈಗ ಏನಾಗುತ್ತಿದೆ ಅಂದರೆ ಪರಭಾಷೆಯ ಸಿನೆಮಾವೊಂದು ಕರ್ನಾಟಕದ ಇರುವ ಆರು ನೂರು ಚಿತ್ರಮಂದಿರಗಳಲ್ಲಿ ಇನ್ನೂರು ಚಿತ್ರಮಂದಿರವನ್ನು ಕಿತ್ತುಕೊಂಡು ರಂಗೀತರಂಗ ತರದ ಅಪರೂಪದ ಚಿತ್ರವನ್ನು ಓಡಿಸುವ ಹಂತಕ್ಕೆ ತಲುಪುತ್ತಿದೆ. ಇಷ್ಟಾದರೂ ಇನ್ನೂ ಉದ್ಯಮವನ್ನು ಒಂದು ಪ್ರೊಫೆಶನಲ್ ಆದ ಉದ್ದಿಮೆಯಾಗದಂತೆ ತಡೆಯುತ್ತಿರುವ ಡಬ್ಬಿಂಗ್ ಬ್ಯಾನ್ ಬಗ್ಗೆ ಉದ್ಯಮದ ಮಂದಿಯ ನಿಲುವು ಬದಲಾಗಿಲ್ಲ. ದಿನೇ ದಿನೇ ಕನ್ನಡಿಗರು ಕನ್ನಡ ಚಿತ್ರಗಳಿಂದಲೇ ದೂರ ಸರಿದರೆ ಕನ್ನಡ ಚಿತ್ರೋದ್ಯಮ ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನುವ ಸ್ಥಿತಿ ತಲುಪಲು ಹೆಚ್ಚು ದಿನ ಬೇಕಾಗದು.
ಡಬ್ಬಿಂಗ್ ಬ್ಯಾನ್ ಒಮ್ಮೆ ಹೋದರೆ ಜಿಡ್ಡುಗಟ್ಟಿರುವ ಉದ್ಯಮದ ಒಂದಿಷ್ಟು ಕೊಳೆ ತೊಳೆದು ಕನ್ನಡ ಚಿತ್ರೋದ್ಯಮ ಸ್ವಚ್ಛವಾಗುವ ಸಾಧ್ಯತೆ ಇದೆ. ಅದು ಸ್ಪರ್ಧೆಗೂ, ಹೊಸ ಬಗೆಯ ಕತೆಗಳಿಗೂ, ಹೊಸ ಪ್ರತಿಭೆಗಳಿಗೂ ಅವಕಾಶ ಮಾಡಿಕೊಡುವ ಸುಧಾರಣೆಯಾಗಬಹುದು. ಅದೊಂದೇ ಉಳಿದಿರುವ ಹಾದಿ. #RemoveDubbingBan